ರಾಜಸ್ಥಾನ ಕಾಂಗ್ರೆಸ್ ಶಾಸಕರು ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಂಡಾಯವೆದ್ದಿದ್ದು ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಲ್ಲಿದೆ. ಯುವ ನಾಯಕ ಸಚಿನ್ ಪೈಲಟ್ ನೇತೃತ್ವದ ಬಂಡಾಯ ಶಾಸಕರ ತಂಡ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ಧ ತಮ್ಮ ಅಸಹನೆ ಪ್ರದರ್ಶಿಸಿದ್ದಾರೆ.
ಈ ಕುರಿತು ಕಾಂಗ್ರೆಸ್, ತನ್ನ ಬಂಡಾಯ ಶಾಸಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಮುಂದಾಗಿತ್ತು. ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ಪ್ರಕರಣವನ್ನು ಕೋರ್ಟ್ ಆಲಿಸಲಿದೆ.
ಶಾಸಕರ ಪಕ್ಷವಿರೋಧಿ ನೀತಿಗೆ ಬಿಜೆಪಿ ಕಾರಣವೆಂದು ಆರೋಪಿಸಿರುವ ಕಾಂಗ್ರೆಸ್ ಇದರ ಹಿಂದೆ ಬಿಜೆಪಿಯ ಕೈವಾಡವಿದೆಯೆಂದು ಆರೋಪಿಸಿತ್ತು. ಅದಕ್ಕೆ ಪೂರಕವೆಂಬಂತೆ ಫೋನ್ ರೆಕಾರ್ಡ್ ಆಡಿಯೋ ರೆಕಾರ್ಡನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಅದರನ್ವಯ ಕಾಂಗ್ರೆಸ್ ಇಬ್ಬರು ಶಾಸಕರು ಸೇರಿದಂತೆ, ಕೇಂದ್ರ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ಮೇಲೆ FIR ದಾಖಲಿಸಲಾಗಿತ್ತು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೋಮವಾರ ಬೆಳಿಗ್ಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಮೇಲೆ ಅಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದಾರೆ. ಶೇಖಾವತ್ ಆಪ್ತ ಕಾರ್ಯದರ್ಶಿ ನೋಟೀಸ್ ಬಂದಿರುವುದನ್ನು ಧೃಡೀಕರಿಸಿದ್ದಾರೆ.
FIR ನಲ್ಲಿ ದಾಖಲಿಸಿರುವವರ ಮೇಲೆ IPC ಸೆಕ್ಷನ್ 120ಬಿ (ಅಪರಾಧಕ್ಕೆ ಸಂಚು) 124ಎ (ರಾಜದ್ರೋಹ)ದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜಸ್ಥಾನ್ ಎಡಿಜಿಪಿ ಅಶೋಖ್ ರಾಥೋರ್ ತಿಳಿಸಿದ್ದಾರೆ.
ತಾನು ಯಾವುದೇ ತನಿಖೆ ಎದುರಿಸಲು ಸಿದ್ದನಿದ್ದೇನೆ. ಪೋಲಿಸರು ಆಡಿಯೋ ಕ್ಲಿಪ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.