ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿಯಾಗಿಯೇ ತೀರುತ್ತೇನೆಂಬಂತೆ ಸಚಿನ್ ಪೈಲಟ್ ಹಠಕ್ಕೆ ಬಿದ್ದಿದ್ದಾರೆ. ಸರಣಿ ವಿದ್ಯಮಾನಗಳನ್ನು ಗಮನಿಸಿದರೆ ಸಚಿನ್ ಪೈಲಟ್ರಿಗೂ ಕಾಂಗ್ರೆಸ್ ಬಿಟ್ಟು ತೆರಳಲು ಮನಸ್ಸಿಲ್ಲ. ಅದೇ ವೇಳೆ ಮುಖ್ಯಮಂತ್ರಿ ಗದ್ದುಗೆಯ ಮೇಲಿನ ಆಕಾಂಕ್ಷೆಯೊಂದಿಗೂ ರಾಜಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ತೃತೀಯ ರಂಗ ಕಟ್ಟುತ್ತೇನೆಂದು ಬೆದರಿಸುತ್ತಿರುವ ಸಚಿನ್ ಪೈಲಟ್ ಬಳಿ ಮೊದಲಿನಷ್ಟು ಆತ್ಮವಿಶ್ವಾಸ ಈಗ ಇದ್ದಂತೆ ಕಾಣುತ್ತಿಲ್ಲ. ಸಚಿನ್ರ ಬೆದರಿಕೆಗೆ ಮಣಿಯದ ಗೆಹ್ಲೋಟ್ ನೇತೃತ್ವದ ಸರ್ಕಾರ ಸಚಿನ್ ಹಾಗೂ ಬೆಂಬಲಿಗ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಯಾವ ಮುಲಾಜು ತೋರಿಸಿಲ್ಲ. ಅಂದರೆ ಗೆಹ್ಲೋಟ್ಗೆ ಸಚಿನ್ ಪೈಲಟ್ರ ಅನುಪಸ್ಥಿತಿಯಲ್ಲಿಯೂ ಸರ್ಕಾರ ಮುಂದುವರೆಸಿಕೊಂಡು ಹೋಗಬಹುದೆಂಬ ಧೈರ್ಯ ಬಂದಂತಿದೆ.
ಇದೇ ಧೈರ್ಯದಲ್ಲಿ ಸಚಿನ್ ಪೈಲಟ್ ತಂಡದ ಎರಡು ಶಾಸಕರ ಶಾಸಕತ್ವ ಹುದ್ದೆಯನ್ನು ಅನರ್ಹಗೊಳಿಸಿದೆ, ಸಚಿನ್ ಪೈಲಟ್ರ ಪಕ್ಷದ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಪಟ್ಟವನ್ನು ರದ್ದು ಗೊಳಿಸಿದೆ, ಇನ್ನೂ ಇಬ್ಬರು ಸಚಿವರನ್ನು ಸಚಿವ ಸಂಪುಟದಿಂದ ಕಿತ್ತೆಸೆದಿದೆ. ಅಲ್ಲದೆ ಬಂಡಾಯ ಶಾಸಕರೆಲ್ಲರಿಗೂ ಪಕ್ಷವಿರೋಧಿ ಚಟುವಟಿಕೆಗೆ ಸಂಬಂಧಿಸಿದಂತೆ ನೋಟೀಸ್ ಕಳುಹಿಸಿ, ಸ್ಪಷ್ಟೀಕರಣ ಕೇಳಿದೆ. ತಪ್ಪಿದ್ದಲ್ಲಿ ಶಾಸಕ ಸ್ಥಾನದಿಂದ ವಜಾಗೊಳಿಸುವುದಾಗಿಯೂ ಎಚ್ಚರಿಸಿದೆ.
ಸದ್ಯ ರಾಜ್ಯ ಕಾಂಗ್ರೆಸ್ನ ಈ ಕ್ರಮವನ್ನು ಪ್ರಶ್ನಿಸಿ ಸಚಿನ್ ಪೈಲಟ್ ನೇತೃತ್ವದ ತಂಡ ಹೈಕೋರ್ಟ್ ಮೆಟ್ಟಿಲೇರಿದೆ. ಅನರ್ಹಗೊಳಿಸುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯನ್ನೂ ಪಡೆದುಕೊಂಡಿದೆ. ಇದಾಗ್ಯೂ ಸಚಿನ್ ಪೈಲಟ್ ತಂಡ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ತನ್ನ ಬೇಡಿಕೆಯನ್ನು ಮುಂದಿಡುತ್ತಲೇ ಇದ್ದಾರೆ. ಹಠಮಾರಿ ಮಗುವಿನಂತೆ ರಚ್ಚೆ ಹಿಡಿದು ಕೂತಿದ್ದಾರೆ.
ಸಚಿವ ಸಂಪುಟದಲ್ಲಿರುವ ತನ್ನ ಸ್ಥಾನ ಹಾಗೂ ಪಕ್ಷದೊಳಗಿನ ತನ್ನ ಹುದ್ದೆ ಕಳೆದುಕೊಂಡ ಬಳಿಕ ಪ್ರಿಯಾಂಕ ಗಾಂಧಿಯೊಂದಿಗೆ ದೀರ್ಘ ಫೋನ್ ಕರೆಯಲ್ಲಿ ಚರ್ಚೆ ನಡೆಸಿದ ಸಚಿನ್ ಪೈಲಟ್ ಸಚಿನ್ ತನ್ನನ್ನು ಮುಂದಿನ ಒಂದು ವರ್ಷದೊಳಗೆ ಮುಖ್ಯಮಂತ್ರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪ್ರಿಯಾಂಕ ಆಪ್ತ ಮೂಲಗಳು ತಿಳಿಸಿವೆ ಎಂದು ಆಂಗ್ಲ ವೆಬ್ ಮೀಡಿಯಾ NDTV ವರದಿ ಮಾಡಿದೆ.
ತನ್ನ ಮುಖ್ಯಮಂತ್ರಿ ಬೇಡಿಕೆ ಈಡೇರಿಸುವುದಿಲ್ಲವಾದರೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯನ್ನು ಭೇಟಿ ಮಾಡುವುದಿಲ್ಲವೆಂದು ಕಾಂಗ್ರೆಸ್ ಹೈಕಮಾಂಡಿಗೆ ಬೆನ್ನು ಹಾಕಿ ಸಚಿನ್ ಕೂತಿದ್ದಾರೆ. ತನ್ನ ಬೇಡಿಕೆ ಸಕರಾತ್ಮಕ ಪ್ರತಿಕ್ರಿಯೆ ಬರದಿದ್ದರೆ ಹೈಕಮಾಂಡ್ ಜೊತೆಗೆ ಮುಂದಿನ ಮಾತುಕತೆ ಮಾಡುವುದು ವ್ಯರ್ಥವೆಂದು ಪೈಲಟ್ ಭಾವಿಸಿಕೊಂಡಂತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶುಕ್ರವಾರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಸಚಿನ್ ಪೈಲಟ್ ತಂಡದ ಇಬ್ಬರು ಶಾಸಕರ ಮೇಲೆ ಸರ್ಕಾರದ ವಿರುದ್ಧ ಸಂಚಿನ ಆರೋಪದಲ್ಲಿ ಕಾಂಗ್ರೆಸ್ ದೂರು ದಾಖಲಿಸಿದೆ. ಈ ಇಬ್ಬರು ಶಾಸಕರು ಸರ್ಕಾರ ಉರುಳಿಸಲು ಬಿಜೆಪಿಯೊಂದಿಗೆ ಸೇರಿ ಸಂಚು ಹೂಡಿದ್ದಾರೆಂದು ಕಾಂಗ್ರೆಸ್ ಆರೋಪ. ತನ್ನ ಆರೋಪಕ್ಕೆ ಪೂರಕವೆಂಬಂತೆ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ ಬಿಜೆಪಿ ನೇತಾರರೊಂದಿಗೆ ಮಾಡಿದ ಸಂಭಾಷಣೆಯ ತುಣುಕು ಎಂದು ಆಡಿಯೋ ಟೇಪನ್ನು ಬಿಡುಗಡೆಗೊಳಿಸಿದೆ. ಈ ಸಂಬಂಧ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಸರನ್ನೂ FIR ನಲ್ಲಿ ದಾಖಲಿಸಲಾಗಿದೆ.
Also Read: ಸರ್ಕಾರ ಉರುಳಿಸಲು ಬಿಜೆಪಿ ಡೀಲ್, ಸಂಭಾಷಣೆ ವೈರಲ್; ಕೇಂದ್ರ ಸಚಿವನ ಮೇಲೆ FIR
ಅದಾಗ್ಯೂ ಕಾಂಗ್ರೆಸ್ ಆರೋಪದ ಕುರಿತು ಬಂಡಾಯ ಶಾಸಕರನ್ನು ಮುನ್ನಡೆಸುತ್ತಿರುವ ಪೈಲಟ್ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಪೈಲಟ್ರ ಆಪ್ತ ಮೂಲಗಳ ಪ್ರಕಾರ ಇದು ಗೆಹ್ಲೋಟ್ ಸರ್ಕಾರದ ಷಡ್ಯಂತ್ರ. ಇದೇ ಕಾರಣವಿಟ್ಟುಕೊಂಡು ಬಂಡಾಯವೆದ್ದಿರುವ 18 ಶಾಸಕರನ್ನೂ ಅನರ್ಹಗೊಳಿಸಿದರೆ, 200 ಸದಸ್ಯರ ವಿಧಾನಸಭೆಯ ಸದಸ್ಯ ಸ್ಥಾನ ಕುಸಿಯುತ್ತದೆ. ಅಲ್ಲಿ ಗೆಹ್ಲೋಟ್ ಸರ್ಕಾರಕ್ಕೆ ಬಹುಮತ ಪಡೆಯಲು 93 ಸದಸ್ಯ ಬಲವಿದ್ದರೆ ಸಾಕು, ಈ ಆತ್ಮ ವಿಶ್ವಾಸದಲ್ಲಿ ಗೆಹ್ಲೋಟ್ ಬಣ ಬಂಡಾಯ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಲು ಹವಣಿಸುತ್ತಿದೆ.
ಸಚಿನ್ ಪೈಲಟ್ ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲವೆಂದು ಅವರ ಆಪ್ತರು ತಿಳಿಸಿದ್ದಾರೆ. ರಾಜಸ್ಥಾನದ ಹೊರಗೆ ಬೇರೆ ಸ್ಥಾನ ನೀಡುವುದಾಗಿ ಹೇಳಿರುವ ಕಾಂಗ್ರೆಸ್ ಹೈಕಮಾಂಡಿನ ಆಮಿಷವನ್ನು ಸಚಿನ್ ಪೈಲಟ್ ನಿರಾಕರಿಸಿದ್ದಾಗಿಯೂ, ರಾಜಸ್ಥಾನ ತನ್ನ ಕರ್ಮಭೂಮಿ, ತನ್ನ ಕೆಲಸ ಇಲ್ಲಿ ಇದೆ ಎಂದು ಸಚಿನ್ ಹೈಕಮಾಂಡಿಗೆ ಸಂದೇಶ ರವಾನಿಸಿರುವುದಾಗಿಯೂ NDTV ವರದಿ ಮಾಡಿದೆ.
ಸದ್ಯ ರಾಜಸ್ಥಾನ ಹೈ ಕೋರ್ಟ್ ಮಂಗಳವಾರದ ವರೆಗೆ ಬಂಡಾಯ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳದಂತೆ ರಾಜಸ್ಥಾನ ಸಭಾಪತಿಗೆ ಆದೇಶ ನೀಡಿದೆ. ಸರ್ಕಾರದ ವಿರುದ್ಧದ ಸಂಚು ನಡೆಸಿರುವ ಪ್ರಕರಣವನ್ನು ಸೋಮವಾರದಂದು ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ. ಬಂಡಾಯ ಶಾಸಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳು ಕೋರ್ಟ್ ಅನುವು ಮಾಡಿಕೊಟ್ಟರೆ ಗೆಹ್ಲೋಟ್ ಸರ್ಕಾರ ಭದ್ರವಾಗಲಿದೆ. ಸಚಿನ್ ಪೈಲಟ್ರಿಗೆ ತೀವ್ರ ಹಿನ್ನಡೆಯಾಗಲಿದೆ.
ಇನ್ನು ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಚಿವ ರಘು ಶರ್ಮಾ, ಬಿಜೆಪಿ ಹಿಡಿದಿಟ್ಟುಕೊಂಡಿರುವ 19 ಶಾಸಕರನ್ನು ಬಿಡುಗಡೆಗೊಳಿಸಲಿ, ಅವರು ಮರಳಿ ಕಾಂಗ್ರೆಸ್ಗೆ ಸೇರಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆ ಶಾಸಕರಿಗೆ ತಾವು ಮಾರಾಟವಾದ ಬಳಿಕ ಜನರನ್ನು ಎದುರಿಸಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿದೆ ಎಂದೂ ಅವರು ಹೇಳಿದ್ದಾರೆ.
Also Read: ರಾಜಸ್ಥಾನ: ಶಾಸಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳದಂತೆ ತಾತ್ಕಾಲಿಕ ತಡೆಯಾಜ್ಞೆ