ಹಂಸಲೇಖ
ಆಗಷ್ಟೇ `ಪ್ರೇಮಲೋಕ’ ಸಿನಿಮಾ ತೆರೆಕಂಡಿತ್ತು. ಆರಂಭದಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯೇನೂ ಸಿಕ್ಕಿರಲಿಲ್ಲ. ಯಾವಾಗ ಚಿತ್ರದ ಹಾಡುಗಳು ಟೀವಿ, ರೇಡಿಯೋದಲ್ಲಿ ಪ್ರಸಾರವಾದವೋ, ಮ್ಯಾಜಿಕ್ ನಡೆದುಹೋಯ್ತು! ಪರಿಣಾಮ, `ಪ್ರೇಮಲೋಕ’ ಬ್ಲಾಕ್ ಬಸ್ಟರ್ ಎನಿಸಿಕೊಂಡಿತು. ನಾನು, ರವಿಚಂದ್ರನ್ ಹಾಗೂ ಚಿತ್ರದ ಮತ್ತಿತರೆ ತಂತ್ರಜ್ಞರು ಈ ಯಶಸ್ಸಿನ ಸಂಭ್ರಮದಲ್ಲಿದ್ದೆವು. ಅದಾದ ಕೆಲವೇ ದಿನಗಳಿಗೆ ನಿರ್ಮಾಪಕ ವೀರಾಸ್ವಾಮಿಯವರು `ರಣಧೀರ’ ಸಿನಿಮಾ ಮಾಡುವುದೆಂದು ನಿರ್ಧರಿಸಿದರು.
`ಇದು ಹಿಂದಿ ಸಿನಿಮಾ ರಿಮೇಕು. ಅಲ್ಲಿ ಲಕ್ಷ್ಮಿಕಾಂತ್ – ಪ್ಯಾರೇಲಾಲ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅದೇ ಟ್ರ್ಯಾಕ್ ಬಳಸೋಣ. ನೀವು ಚಿತ್ರಕ್ಕೆ ಸಂಭಾಷಣೆ ಬರೀರಿ..’ ಎಂದು ವೀರಾಸ್ವಾಮಿಯರು ನನಗೆ ಹೇಳಿದರು. ಇದನ್ನು ನಾನು ಒಪ್ಪಲಿಲ್ಲ. `ಆಗೋಲ್ಲ ಸಾರ್, ಹಿಂದಿ ಟ್ರ್ಯಾಕ್ ಹಾಕೋಲ್ಲ. ನಾನೇ ಮ್ಯೂಸಿಕ್ ಮಾಡ್ತೀನಿ’ ಎಂದೆ. ಕೊನೆಗೆ ಚಿತ್ರಕ್ಕೆ ಹೊಸ ಹಾಡುಗಳನ್ನು ಮಾಡುವುದೆಂದು ನಿರ್ಧಾರವಾಯ್ತು. ಉತ್ಸಾಹದಿಂದ ಮದರಾಸಿಗೆ ಹೋದ ನಾನು ಮತ್ತು ರವಿಚಂದ್ರನ್ `ಯಾರೀ ಹಮ್ಮೀರ..’ ಎಂದು ಆರಂಭವಾಗುವ ಟ್ಯೂನ್ ಹಾಕಿದೆವು. ಗಾಯಕಿ ಜಾನಕಿ ಅವರಿಂದ ಹಾಡಿಸಿಕೊಂಡು ಬೆಂಗಳೂರಿಗೆ ಮರಳಿದೆವು.

ನಾವಿಬ್ಬರೂ ಎಂತಹ ಹಾಡು ತಂದಿರಬಹುದು ಎಂದು ವೀರಾಸ್ವಾಮಿಯವರು ಇಲ್ಲಿ ಕಾತರದಿಂದ ಕಾಯುತ್ತಿದ್ದರು. ಬೆಳಗ್ಗೆ ಅವರ ಕಚೇರಿಯಲ್ಲಿ ಟ್ರ್ಯಾಕ್ ಹಾಕಿ ಕೇಳಿಸಿದೆವು. ಹಾಡು ಕೇಳಿದ ವೀರಾಸ್ವಾಮಿಯವರು ತಕ್ಷಣ ಏನೂ ಮಾತನಾಡಲಿಲ್ಲ. ಇಬ್ಬರಿಗೂ ಕಾಫಿ ತರಿಸಿದರು. ಆನಂತರ ಅಲ್ಲೇ ಇದ್ದ ಮತ್ತೊಂದು ಟೇಪ್ ರೆಕಾರ್ಡರ್ನಲ್ಲಿ `ಪ್ರೇಮಲೋಕ’ದ ಕ್ಯಾಸೆಟ್ ಹಾಕಿ ಕೇಳಿಸಿದರು! ಯಾಕೆ ಹೀಗೆ ಮಾಡುತ್ತಿದ್ದಾರಂತೆ ನಮಗಿಬ್ಬರಿಗೂ ಗೊತ್ತಾಗಲಿಲ್ಲ. `ಹಂಸಲೇಖ – ರವಿಚಂದ್ರನ್ ಹಾಡುಗಳೆಂದರೆ ಹೀಗಿರಬೇಕು ಕಣ್ರಯ್ಯಾ. ಈಗ ನೀವು ತಂದಿರುವ ಟ್ರ್ಯಾಕ್ ತುಂಬಾ ಸಾಧಾರಣವಾಗಿದೆ’ ಎಂದರು.

ನಾನು ಮತ್ತು ರವಿಚಂದ್ರನ್ ಮತ್ತೆ ಮದರಾಸಿನ ಟ್ರೈನ್ ಹತ್ತಿದೆವು. ರವಿಚಂದ್ರನ್ ಹಲವಾರು ಸಿನಿಮಾಗಳ ಆಡಿಯೋ ಸೀಡಿಗಳನ್ನು ತಂದಿದ್ದರು. ಇವುಗಳನ್ನು ಕೇಳಿ ಸ್ಫೂರ್ತಿ ಪಡೆದು ನಂತರ ಟ್ಯೂನ್ ಕಂಪೋಸ್ ಮಾಡುವುದು ರವಿ ಉದ್ದೇಶವಾಗಿತ್ತು. `ಇದೆಲ್ಲಾ ಬೇಡ, ನಮ್ಮದೇ ಒಂದು ಸ್ಟೈಲ್ ಇದೆ. ಅದು ದೃಶ್ಯವನ್ನು ಹಾಡಿನಲ್ಲಿ ಹೇಳುವ ಸ್ಟೈಲ್! ಇಲ್ಲಿಯೂ ನಾಯಕ, ನಾಯಕಿ ಪ್ರತ್ಯೇಕವಾಗಿ ಹಾಡುವ ಸನ್ನಿವೇಶಗಳಿಗೆ ಹೊಂದುವಂತೆ ಟ್ಯೂನ್ ಹಾಕೋಣ’ ಎಂದೆ ನಾನು. ಅವರಿಗೆ ಈ ಮಾದರಿ ತುಂಬಾ ಇಷ್ಟವಾಯ್ತು. ಹೀಗೆ ಇಬ್ಬರೂ ಮಾತನಾಡುತ್ತಿರುವಾಗಲೇ ಟ್ಯೂನ್ಗಳು ಸಿದ್ಧವಾದವು. ಹಾಗೆ ಮದರಾಸು ತಲುಪುವ ಹೊತ್ತಿಗೆ ಟ್ರೈನ್ನಲ್ಲೇ `ಯಾರೇ ನೀನು ಸುಂದರ ಚೆಲುವೆ…’ ಟ್ಯೂನ್ ಸಂಪೂರ್ಣವಾಗಿ ರೂಪು ತಳೆಯಿತು!

ವೀರಾಸ್ವಾಮಿ ಅವರ ಈಶ್ವರಿ ಪಿಕ್ಚರ್ಸ್ ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ. ಈ ಬ್ಯಾನರ್ನಡಿ ವಿಶಿಷ್ಠ ಸಿನಿಮಾಗಳು ತೆರೆಕಂಡಿವೆ. ತಂದೆ ಹಾಕಿಕೊಟ್ಟ ಬುನಾದಿಯೊಂದಿಗೆ ಬೆಳೆದ ರವಿ ತಮ್ಮದೇ ಆದ ಕಲ್ಪನೆ, ಕ್ರಿಯಾಶೀಲತೆಯೊಂದಿಗೆ ಸಿನಿಮಾಗಳನ್ನು ಮಾಡುತ್ತಾ ಬಂದರು. ನನ್ನ ಪಾಲಿಗೆ ಅವರು ‘ಯಜಮಾನ್ರು’. ಅವರಿಗೆ ಪ್ರೀತಿಪೂರ್ವಕ ಜನ್ಮದಿನದ ಶುಭಾಶಯಗಳು.
ಫೋಟೋ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ