ಈ ಕರೋನಾ ಲಾಕ್ ಡೌನ್ ನಡುವೆಯೇ ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆಯ ಕುರಿತ ಚರ್ಚೆಗಳು, ಕಾಳಜಿಗಳು ಮುನ್ನೆಲೆಗೆ ಬಂದಿರುವಾಗ, ಭಾರತದಲ್ಲಿ ಮಾತ್ರ ಲಕ್ಷಾಂತರ ಎಕರೆ ಅರಣ್ಯವನ್ನು ಖಾಸಗೀ ಕಾರ್ಪೊರೇಟ್ ಕಂಪನಿಗಳ ಉದ್ಯಮ ಚಟುವಟಿಕೆಗೆ ಪರಭಾರೆ ಮಾಡಲಾಗುತ್ತಿದೆ.
ಹೀಗೆ ಕೆಲವೇ ಪ್ರಭಾವಿಗಳ ಲಾಬಿಗೆ ಅಪಾರ ಪ್ರಮಾಣದ ಅರಣ್ಯವನ್ನು ಬಲಿಕೊಡುವ ಎರಡು ಬೃಹತ್ ಯೋಜನೆಗಳು ರಾಜ್ಯದಲ್ಲಿ ಸದ್ದಿಲ್ಲದೆ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಬೇಕಿದ್ದ ಪ್ರತಿಭಟಿಸಬೇಕಿದ್ದ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಗಳು ಪರೋಕ್ಷವಾಗಿ ಪರಿಸರ ದ್ರೋಹಿ ನಡೆಯನ್ನೇ ಅನುಸರಿಸುತ್ತಿವೆ. ಪರಿಸರ ಹಿತ ಕಾಯುವ ಉದ್ದೇಶದಿಂದಲೇ ರಚನೆಯಾಗಿರುವ ಮತ್ತು ಸಾರ್ವಜನಿಕ ತೆರಿಗೆ ಹಣದಲ್ಲಿ ಸ್ಥಾನಮಾನ, ಸೌಲಭ್ಯ ಅನುಭವಿಸುತ್ತಿರುವ ಈ ಉಭಯ ಮಂಡಳಿಗಳ ಮುಖ್ಯಸ್ಥರು ಮತ್ತು ಸದಸ್ಯರ ಈ ನಡೆ, ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಹಿನ್ನೆಲೆಯಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಪಶ್ಚಿಮಘಟ್ಟ ಪರಿಸರದ ಪಾಲಿಗೆ ಜೀವಕಂಟಕವಾಗಿರುವ ಆ ಎರಡು ಯೋಜನೆಗಳು; ಶರಾವತಿ ನದಿ ಕೊಳ್ಳದಲ್ಲಿ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆ ಮತ್ತು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ. ಈ ಎರಡೂ ಯೋಜನೆಗಳು ಬಹಳ ತರಾತುರಿಯಲ್ಲಿ ಜಾರಿಗೆ ಬರುತ್ತಿವೆ ಮತ್ತು ಆ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು, ರಾಜ್ಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಗಳು ವನ್ಯಜೀವಿ ಮತ್ತು ಅರಣ್ಯ ಕಾನೂನುಗಳನ್ನ ಗಾಳಿಗೆ ತೂರಿ ಅನುಮೋದನೆ ನೀಡಿವೆ. ಎರಡೂ ಯೋಜನೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ಪ್ರಭಾವಿ ಲಾಬಿಗಳು ಹಣ ಮಾಡುವ ದೊಡ್ಡ ಅವಕಾಶವಾಗಿ ಬಳಸಿಕೊಳ್ಳುವ ಸಂಚಿನಲ್ಲಿವೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ಕೇಳಿಬರುತ್ತಿವೆ.
ಇಂತಹ ಆರೋಪಗಳಿಗೆ ಕಾರಣವಾಗಿರುವುದು ಸ್ವತಃ ಆ ಮಂಡಳಿಗಳ ನಡೆ. ಸಾಮಾನ್ಯವಾಗಿ ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಬಗೆಯ ಅರಣ್ಯ ಕಾನೂನು ಉಲ್ಲಂಘನೆ, ವನ್ಯಜೀವಿ ಕಾಯ್ದೆ ಉಲ್ಲಂಘನೆಯಂತಹ ಚಟುವಟಿಕೆಗಳು ನಡೆದರೆ, ಅದರಲ್ಲೂ ಮುಖ್ಯವಾಗಿ ಪ್ರಭಾವಿಗಳಲ್ಲದ ರೈತರು, ಕೆಳವರ್ಗದ ಜನರು ಅಂತಹ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಇನ್ನಿಲ್ಲದ ಪರಿಸರ ಕಾಳಜಿ ಮೆರೆಯುವ, ಅಂತಹ ಕೃತ್ಯಗಳ ಬಗ್ಗೆ ನಾಡಿನ ಉದ್ದಗಲಕ್ಕೆ ಬೊಬ್ಬೆ ಹೊಡೆದುಕೊಂಡು ಓಡಾಡುವ ಈ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರು, ಒಂದೇ ಏಟಿಗೆ ಅಭಯಾರಣ್ಯದ ಒಡಲಿನ ಲಕ್ಷಾಂತರ ಮರಗಳನ್ನು, ಸಾವಿರಾರು ಎಕರೆ ಕಾಡನ್ನು ನುಂಗಿ ಹಾಕುವ ಬೃಹತ್ ಯೋಜನೆಗಳ ವಿಷಯದಲ್ಲಿ ಮಾತ್ರ ಮೌನಕ್ಕೆ ಶರಣಾಗಿರುವುದು, ಮಾಧ್ಯಮಗಳ ಪ್ರಶ್ನೆಗಳಿಂದ ನುಣಚಿಕೊಳ್ಳುತ್ತಿರುವುದು ಸಹಜವಾಗೇ ಶಂಕೆಗೆ ಕಾರಣವಾಗಿದೆ.
ಲಾಕ್ ಡೌನ್ ನಡುವೆಯೇ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಮಿತಿ ಸಭೆಯಲ್ಲಿ ವಿಷಯ ಮಂಡನೆಗೆ ಯೋಜನೆಯ ಪ್ರಸ್ತಾಪವನ್ನು ಸ್ವೀಕರಿಸಿದೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಶರಾವತಿ ಕೊಳ್ಳದ ದುರ್ಗಮ ಅರಣ್ಯದೊಳಗೆ ಬೃಹತ್ ಯಂತ್ರಗಳ ಬಂದಿಳಿದಿವೆ. ಭೂಗರ್ಭ ಯೋಜನೆಯ ಅನುಷ್ಟಾನದ ಮೊದಲ ಹಂತವಾಗಿ ಭೂ ರಚನೆಯ ಸಮೀಕ್ಷೆಯ ಭಾಗವಾಗಿ ಮಾನವ ಹಸ್ತಕ್ಷೇಪವೇ ಇರದ ಶರಾವತಿ ಕೊಳ್ಳದ ಸುಮಾರು 300 ಎಕರೆ ದಟ್ಟ ಕಾಡಿನ ನಡುವೆ ಈಗಾಗಲೇ ಸುಮಾರು 15 ಕೊಳವೆ ಬಾವಿ ಕೊರೆಯಲು ಕೆಲಸ ಆರಂಭಿಸಲಾಗಿದೆ.
ವಾಸ್ತವವಾಗಿ ಕೇಂದ್ರ ವನ್ಯಜೀವಿ ಮಂಡಳಿ ಈವರೆಗೆ ಕೊಳವೆ ಬಾವಿ ಕೊರೆಯಲು ಅನುಮೋದನೆ ನೀಡಿಯೇ ಇಲ್ಲ. ಅದು ಮುಂದಿನ ಸಭೆಯಲ್ಲಿ ಮಂಡನೆಗೆ ಪ್ರಸ್ತಾವನೆ ಸ್ವೀಕರಿಸಿದೆ ಅಷ್ಟೇ. ಅಷ್ಟರಲ್ಲೇ ರಾಜ್ಯ ಅರಣ್ಯ ಇಲಾಖೆ ಸೂಕ್ಷ್ಮ ಜೀವಪರಿಸರದ ಸಿಂಗಳೀಕ ಸಂರಕ್ಷಣಾ ವಲಯದಲ್ಲಿ ಸುಮಾರು ಅರ್ಧ ಕಿ.ಮೀ ಆಳದ 15 ಕೊಳವೆ ಕೊರೆಯಲು ಅನುಮತಿ ನೀಡಿರುವುದು ಕೂಡ ಕಾನೂನುಬಾಹಿರವೇ. ಜೊತೆಗೆ ನಾಮಕಾವಸ್ಥೆಗೆ ಮಳೆಗಾಲದಲ್ಲಿ ಕೊರೆಯಬಾರದು, ವಾಹನ ಸಂಚಾರ ಅವಕಾಶವಿಲ್ಲ, ಅರಣ್ಯ ಸಿಬ್ಬಂದಿ ಉಪಸ್ಥಿತಿಯಲ್ಲೆ ಕೊಳವೆ ಕೊರೆಯಬೇಕು ಎಂಬಂತಹ ಷರತ್ತುಗಳನ್ನು ಹಾಕಿ ಇಲಾಖೆ ಅನುಮತಿ ನೀಡಿದೆ. ಆದರೆ, ಶರಾವತಿ ಕಣಿವೆಯಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಬೃಹತ್ ಯಂತ್ರಗಳನ್ನು ವಾಹನದ ನೆರವಿಲ್ಲದೆ ಕಾಡಿನೊಳಗೆ ಒಯ್ಯಲಾಗುವುದಿಲ್ಲ. ಇದೆಲ್ಲಾ ವಾಸ್ತವಾಂಶ ಗೊತ್ತಿದ್ದರೂ ಉನ್ನತ ಅಧಿಕಾರಿಗಳು ಒತ್ತಡ ಮತ್ತು ಬೃಹತ್ ಯೋಜನೆಯ ಲಾಬಿಗೆ ಮಣಿದು ಅನುಮತಿ ನೀಡಿದ್ದಾರೆ. ಈ ಭಾಗದ ಜನರು ಕಳೆದ ಎರಡು ವರ್ಷಗಳಿಂದ ಯೋಜನೆ ವಿರೋಧಿಸಿ ಹೋರಾಟ ನಡೆಸಿದ್ದರೂ ಸರ್ಕಾರ ಮತ್ತು ಇಲಾಖೆಗಳು ಗಮನಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಪಶ್ಚಿಮಘಟ್ಟಕ್ಕೇ ಕಂಟಕವಾಗಿರುವ ಯೋಜನೆ ವಿರುದ್ಧ ಕಾನೂನು ಹೋರಾಟವೊಂದೇ ನಮಗಿರುವ ಭರವಸೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳುತ್ತಾರೆ.
ಶರಾವತಿ ಕಣಿವೆಯ ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕಣ್ಣಳತೆ ದೂರದಲ್ಲಿ ಬರೋಬ್ಬರಿ 800 ಎಕರೆಯಷ್ಟು ದಟ್ಟ ಕಾನನದ ನಡುವೆ ಈ ಶರಾವತಿ ಭೂಗರ್ಭ ವಿದ್ಯುದಾಗಾರ ಯೋಜನೆ ತಲೆ ಎತ್ತಲಿದೆ. ವಾಸ್ತವವಾಗಿ ಇದು ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ)ಯ ಯೋಜನೆ. ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಬೃಹತ್ ಭೂಗತ ವಿದ್ಯುದಾಗಾರ ನಿರ್ಮಾಣ ಯೋಜನೆ ಇದು. ಸ್ವತಃ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಳೆದ ಅಕ್ಟೋಬರಿನಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಯೋಜನೆಯ ಸಮೀಕ್ಷೆಗೆ ರಾಜ್ಯದ ಪ್ರಮುಖ ವನ್ಯಜೀವಿ ತಜ್ಞರ ಉಪಸ್ಥಿತಿಯಲ್ಲಿಯೇ ಅನುಮೋದನೆ ನೀಡಲಾಗಿತ್ತು. ಕಣಿವೆಯ ತಲಕಳಲೆ ಮತ್ತು ಗೇರುಸೊಪ್ಫಾ ಜಲಾಶಯಗಳ ನಡುವಿನ ದಟ್ಟ ಕಾಡಿನ ನಡುವೆ ನೆಲಮಟ್ಟದಿಂದ ಸುಮಾರು 300 ಆಳದಲ್ಲಿ ಜಲವಿದ್ಯುದಾಗರ ನಿರ್ಮಾಣದ ಯೋಜನೆಗೆ ಸುಮಾರು 6,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಗಳ ವಿಶ್ವಾಸಾರ್ಹತೆಯನ್ನು ಮೂರು ಕಾಸಿಗೆ ಹರಾಜುಹಾಕಿರುವ ಮತ್ತೊಂದು ಪರಿಸರ ಮಾರಕ ಯೋಜನೆ ಹುಬ್ಬಳಿ- ಅಂಕೋಲ ರೈಲು ಮಾರ್ಗ ನಿರ್ಮಾಣ ಯೋಜನೆ. ಕಳೆದ ಕೆಲವು ದಶಕಗಳಿಂದ ವಿವಾದಕ್ಕೆ ಎಡೆಯಾಗಿದ್ದ ಮತ್ತು ಪರಿಸರವಾದಿಗಳ ತೀವ್ರ ವಿರೋಧದ ಕಾರಣದಿಂದಾಗಿ ನೆನಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ವನ್ಯಜೀವಿ ಮಂಡಳಿಯ ಅಧಿಕೃತ ಸದಸ್ಯರ, ಪರಿಸರ ತಜ್ಞರ ಅಭಿಪ್ರಾಯಗಳನ್ನೆಲ್ಲಾ ಗಾಳಿಗೆ ತೂರಿ, ಯೋಜನೆಯಲ್ಲಿ ಹಿತಾಸಕ್ತಿ ಹೊಂದಿರುವ ಪ್ರಭಾವಿ ಸಚಿವರು ಮತ್ತು ಶಾಸಕರುಗಳೇ ತಮಗೆ ಬೇಕಾದಂತೆ ಮಂಡಳಿಯ ಅನುಮೋದನೆ ಪಡೆದ ನಾಚಿಕೆಗೇಡಿನ ರೀತಿರಿವಾಜಿಗೆ ಈ ಯೋಜನೆ ಸಾಕ್ಷಿಯಾಗಿದೆ.
ಆ ಮೊದಲು ನಿರಂತರ ಮೂರು ಸಭೆಗಳಲ್ಲಿ(11, 12 ಮತ್ತು 13ನೇ ಸಭೆಗಳಲ್ಲಿ) ಸದಸ್ಯರ ವಿರೋಧದ ಕಾರಣಕ್ಕೆ ಬದಿಗೆ ಸರಿದಿದ್ದ ಈ ಯೋಜನೆಗೆ ಅನುಮೋದನೆ ಪಡೆಯಲೆಂದೇ ಮಾರ್ಚ್ 20ರಂದು ನಡೆದ 14ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಮಂಡಳಿಯ ಸದಸ್ಯರಲ್ಲದ ನಾಲ್ವರಿಗೆ ಆಹ್ವಾನಿತರಾಗಿ ಅವಕಾಶ ನೀಡಲಾಗಿತ್ತು. ಮಂಡಳಿಯ ಅಧ್ಯಕ್ಷರಾಗಿ ಸಿಎಂ ಸ್ವತಃ ಹಾಜರಿದ್ದರೂ ಆರಂಭದಲ್ಲಿ ಸಿಎಂ ಪ್ರಸ್ತಾವನೆಯ ಬಗ್ಗೆ ಸಕಾರಾತ್ಮಕವಾಗಿರಲಿಲ್ಲ ಎನ್ನಲಾಗಿದೆ. ಆದರೆ, ರಾಜ್ಯ ಮುಖ್ಯ ಕಾರ್ಯದರ್ಶಿ, ಹಿರಿಯ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಮತ್ತು ಯೋಜನೆ ಹಾದುಹೋಗುವ ಪ್ರದೇಶದ ಶಾಸಕರೂ ಆದ ಶಿವರಾಮ್ ಹೆಬ್ಬಾರ್ ಹಾಗೂ 1996-97ರಿಂದ ಯೋಜನೆಗಾಗಿ ತೀವ್ರ ಲಾಬಿ ನಡೆಸುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರುಗಳು ತಮ್ಮ ವ್ಯಾಪ್ತಿ ಮೀರಿ, ಮಂಡಳಿಯ ನಿಯಮಗಳಪ್ರಕಾರ ಅವಕಾಶವೇ ಇಲ್ಲದಿದ್ದರೂ ಯೋಜನೆ ಜಾರಿಗೆ ಅನುಮೋದನೆ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಯೋಜನೆಗೆ ಅನುಮೋದನೆ ನೀಡುವ ಬಗ್ಗೆ ಸಹಮತವಿರದ ಹಿನ್ನೆಲೆಯಲ್ಲಿ ಸ್ವತಃ ಅರಣ್ಯ ಸಚಿವರು ಕೂಡ ಆ ಸಭೆಗೆ ಗೈರಾಗಿದ್ದರು ಮತ್ತು ಅವರನ್ನೇ ಅನುಸರಿಸಿ ಹಲವು ಸದಸ್ಯರು ಕೂಡ ಗೈರಾಗಿದ್ದರು. ಜೊತೆಗೆ ಹಾಜರಿದ್ದ ಐವರು ಸದಸ್ಯರ ಪೈಕಿ ಬಹುತೇಕ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಎಲ್ಲಾ ನಿಯಮಗಳನ್ನು, ಸಲಹೆಗಳನ್ನೂ ಗಾಳಿಗೆ ತೂರಿ ಲಾಬಿಗಳ ಪರ ಏಕಪಕ್ಷೀಯ ನಿರ್ಧಾರ ಕೈಗೊಂಡ ಸರ್ಕಾರದ ನಿರ್ಧಾರ ಸುಮಾರು ನಾಲ್ಕು ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಯ ಹಿಂದಿನ ಹಣಕಾಸು ಲಾಭನಷ್ಟ ಮತ್ತು ಕಿಕ್ ಬ್ಯಾಕ್ ಕುರಿತು ಹಲವು ಅನುಮಾನಗಳಿಗೆ ಎಡೆಮಾಡಿದೆ. ಜೊತೆಗೆ ತಮ್ಮ ವಿರೋಧದ ಹೊರತಾಗಿಯೂ ತಮ್ಮದೇ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ಸಭೆಯಲ್ಲಿ ಅನ್ಯರಿಗೆ ಅವಕಾಶ ನೀಡಿ, ಅವರಿಗೆ ಬೇಕಾದಂತೆ ನಿರ್ಧಾರ ಕೈಗೊಂಡರೂ, ಮಂಡಳಿಯ ಸದಸ್ಯರು ಯಾಕೆ ಸಾರ್ವಜನಿಕವಾಗಿ ಆ ಬಗ್ಗೆ ದನಿ ಎತ್ತಿಲ್ಲ? ಯಾಕೆ ತಮ್ಮನ್ನು ನಿರ್ಲಕ್ಷಿಸುವ ಮೂಲಕ ತಮ್ಮ ಸ್ವಾಭಿಮಾನ ಹರಾಜು ಮಾಡಿದ ಸರ್ಕಾರದ ನಿಲುವನ್ನು ಅವರು ಪ್ರಶ್ನಿಸುತ್ತಿಲ್ಲ? ಎಂಬ ಪ್ರಶ್ನೆಗಳು ಕೂಡ ಅವರ ವಿರೋಧ ನಿಜಕ್ಕೂ ಪರಿಸರ ಕಾಳಜಿಯ ಕಾರಣಕ್ಕೆ ವ್ಯಕ್ತವಾದದ್ದೇ ಅಥವಾ ಅತ್ತ ಯೋಜನೆಯೂ ಜಾರಿಯಾಗಿ, ಇತ್ತ ತಮ್ಮ ವರ್ಚಸ್ಸಿಗೂ ಧಕ್ಕೆಯಾಗದೇ ಇರಲಿ ಎಂಬ ಚಾಣಾಕ್ಷ ನಡೆಯೇ ಎಂಬ ಅನುಮಾನಗಳನ್ನು ಪರಿಸರ ಹೋರಾಟಗಾರರ ನಡುವೆ ಹುಟ್ಟುಹಾಕಿದೆ.
ವನ್ಯಜೀವಿ ಮತ್ತು ಜೀವವೈವಿಧ್ಯ ಮಂಡಳಿಗಳಿಗೆ ನೇಮಕವಾಗುವುದು ಇತರೆ ಎಲ್ಲಾ ನಿಗಮ ಮಂಡಳಿಗಳಂತೆಯೇ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರು ಅಥವಾ ಸೈದ್ಧಾಂತಿಕ ಕಾರಣಕ್ಕೆ ಬೆಂಬಲಿಗರೇ ಆಗಿರುತ್ತಾರೆ. ಹಾಗಾಗಿ ಚೇಲಾಗಿರಿ, ವಸೂಲಿಭಾಜಿ ವರಸೆಗಳು ಇಲ್ಲೂ ಇವೆ. ಪರಿಸರವಾದಿಗಳು, ಪರಿಸರ ತಜ್ಞರ ಮುಖವಾಡದಲ್ಲಿ ಜನಸಾಮಾನ್ಯರ ಮೇಲೆ ಪ್ರಹಾರ ಮಾಡುವ ಮಂದಿ, ಬಹುಕೋಟಿ ಬಂಡವಾಳದ ಕಾರ್ಪೊರೇಟ್ ಯೋಜನೆಗಳ ವಿಷಯದಲ್ಲಿ ಮಾತ್ರ ಹೀಗೆ ಮುಗುಮ್ಮಾಗಿ ಇರುವುದು ಹೊಸದೇನಲ್ಲ. ಇಂತಹ ರಾಜಸೇವಾಸಕ್ತ ಪರಿಸರವಾದಿಗಳಿಂದ ಎಂಥ ಅಪಾಯ ಎದುರಾಗಬಹುದು ಎಂಬುದಕ್ಕೆ ಹುಬ್ಬಳಿ-ಅಂಕೋಲ ರೈಲು ಮತ್ತು ಶರಾವತಿ ಕೊಳ್ಳದ ಜಲವಿದ್ಯುತ್ ಯೋಜನೆಗಳೇ ಉದಾಹರಣೆ. ಇಂತಹ ಸಂದರ್ಭದಲ್ಲಿಯೇ ಮಹಾನ್ ತಜ್ಞರು, ಪರಿಸರವಾದಿಗಳೆಂದುಕೊಂಡವರ ನಿಜವಾದ ಬಣ್ಣ ಬಯಲಾಗುವುದು. ಹಾಗಾಗಿ ಇಂತಹ ಊಸರವಳ್ಳಿ ಪರಿಸರವಾದಿಗಳಿಂದ ಸಾರ್ವಜನಿಕ ಹಣದಲ್ಲಿ ಮೋಜುಮಸ್ತಿ ಮಾಡುವುದನ್ನು ನಿರೀಕ್ಷಿಸಬಹುದೇ ವಿನಃ ಪರಿಸರ ಪರವಾದ ಗಟ್ಟಿ ನಿಲುವನ್ನಲ್ಲ ಎಂದು ಪರಿಸರ ಹೋರಾಟಗಾರ ಎಚ್ ಬಿ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಟ್ಟು 168 ಕಿ.ಮೀ ಉದ್ದದ ಹುಬ್ಬಳ್ಳಿ ಮತ್ತು ಅಂಕೋಲ ನಡುವಿನ ಈ ರೈಲು ಮಾರ್ಗದಿಂದ ರಾಜ್ಯದ ಉತ್ತರಕರ್ನಾಟಕ ಮತ್ತು ಮಧ್ಯಕರ್ನಾಟಕ ಭಾಗಕ್ಕೆ ಕರಾವಳಿ ಪ್ರದೇಶದ ಬಂದರುಗಳ ನೇರ ಸಂಪರ್ಕ ಸಾಧ್ಯವಾಗಲಿದ್ದು, ಅದು ಆ ಭಾಗದ ಉದ್ಯಮ- ವ್ಯವಹಾರ- ಕೃಷಿ ಸೇರಿದಂತೆ ಒಟ್ಟಾರೆ ಅಭಿವೃದ್ಧಿಗೆ ಪೂರಕ ಎಂಬುದು ಯೋಜನೆಗಾಗಿ ಲಾಬಿ ಮಾಡುತ್ತಿರುವವರ ವಾದ. ಆದರೆ, ಸುಮಾರು 3750 ಕೋಟಿ ರೂ. ಮೊತ್ತದ ಭಾರೀ ಯೋಜನೆಯ ಹಿಂದೆ ಗುತ್ತಿಗೆದಾರರ ಸ್ವಹಿತಾಸಕ್ತಿ, ಬರೋಬ್ಬರಿ ಎರಡು ಲಕ್ಷ ಸಂಖ್ಯೆಯ ಸಾವಿರಾರು ಕೋಟಿ ಮೌಲ್ಯದ ಮರ ಕಬಳಿಕೆಯ ಹುನ್ನಾರ ಸೇರಿದಂತೆ ಹತ್ತು ಹಲವು ಸ್ವಾರ್ಥದ, ವೈಯಕ್ತಿಕ ಲಾಭದ ಮತ್ತು ರಾಜ್ಯದ ಸಂಪತ್ತು ಲೂಟಿಯ ಲೆಕ್ಕಾಚಾರಗಳು ಇವೆ ಎಂಬುದು ಪರಿಸರವಾದಿಗಳ ಆತಂಕ.
ಆದರೆ, ಈ ಎರಡೂ ಯೋಜನೆಗಳು ಲಾಕ್ ಡೌನ್ ಅವಕಾಶವನ್ನು ಬಳಸಿಕೊಂಡು ಹೀಗೆ ದಿಢೀರನೇ ಜಾರಿಗೆ ಬರುತ್ತಿರುವ ಹೊತ್ತಿನಲ್ಲೂ ತಮ್ಮ ಹೊಣೆಗಾರಿಕೆ ಮೆರೆಯದೆ, ಮುಗುಮ್ಮಾಗಿ ಉಳಿದಿರುವ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಯ ಮುಖ್ಯಸ್ಥರು ಮತ್ತು ಸದಸ್ಯರ ಅಸಲೀತನವಂತೂ ಸದ್ಯಕ್ಕೆ ಬಟಾಬಯಲಾಗಿದೆ. ಜನರ ತೆರಿಗೆ ಹಣದಲ್ಲಿ ವಿವಿಧ ಭತ್ಯೆ, ಸವಲತ್ತುಗಳನ್ನು ಅನುಭವಿಸುವ ಮಂದಿ ಕನಿಷ್ಟ ಆ ಋಣದ ಕಾರಣಕ್ಕಾದರೂ ಪಶ್ಚಿಮಘಟ್ಟದ ಜನ ಮತ್ತು ಪರಿಸರದ ಹಿತ ಕಾಯುವ ಬದ್ಧತೆ ತೋರಬೇಕಿತ್ತು. ತಮ್ಮ ಮಾತು ಮೀರಿ ನಡೆದುಕೊಂಡ ಸರ್ಕಾರದ ವರಸೆಯನ್ನು ಪ್ರಶ್ನಿಸಿ ಬಹಿರಂಗ ಪ್ರತಿಭಟನೆ ವ್ಯಕ್ತಪಡಿಸಬೇಕಿತ್ತು. ಕನಿಷ್ಟ ಆ ಯೋಜನೆಯ ವಿರುದ್ಧ ಬೀದಿ ಹೋರಾಟಕ್ಕೆ ಕರೆ ಕೊಡಬೇಕಿತ್ತು. ವಾಸ್ತವಾಂಶಗಳನ್ನು ಜನರ ಮುಂದಿಟ್ಟು ತಮ್ಮ ಪರಿಸರ ಕಾಳಜಿ ಮೆರೆಯಬೇಕಿತ್ತು. ಆದರೆ, ಅದಾವುದೂ ಆಗಲೇ ಇಲ್ಲ!ಈ ಕರೋನಾ ಲಾಕ್ ಡೌನ್ ನಡುವೆಯೇ ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆಯ ಕುರಿತ ಚರ್ಚೆಗಳು, ಕಾಳಜಿಗಳು ಮುನ್ನೆಲೆಗೆ ಬಂದಿರುವಾಗ, ಭಾರತದಲ್ಲಿ ಮಾತ್ರ ಲಕ್ಷಾಂತರ ಎಕರೆ ಅರಣ್ಯವನ್ನು ಖಾಸಗೀ ಕಾರ್ಪೊರೇಟ್ ಕಂಪನಿಗಳ ಉದ್ಯಮ ಚಟುವಟಿಕೆಗೆ ಪರಭಾರೆ ಮಾಡಲಾಗುತ್ತಿದೆ.
ಹೀಗೆ ಕೆಲವೇ ಪ್ರಭಾವಿಗಳ ಲಾಬಿಗೆ ಅಪಾರ ಪ್ರಮಾಣದ ಅರಣ್ಯವನ್ನು ಬಲಿಕೊಡುವ ಎರಡು ಬೃಹತ್ ಯೋಜನೆಗಳು ರಾಜ್ಯದಲ್ಲಿ ಸದ್ದಿಲ್ಲದೆ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಬೇಕಿದ್ದ ಪ್ರತಿಭಟಿಸಬೇಕಿದ್ದ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಗಳು ಪರೋಕ್ಷವಾಗಿ ಪರಿಸರ ದ್ರೋಹಿ ನಡೆಯನ್ನೇ ಅನುಸರಿಸುತ್ತಿವೆ. ಪರಿಸರ ಹಿತ ಕಾಯುವ ಉದ್ದೇಶದಿಂದಲೇ ರಚನೆಯಾಗಿರುವ ಮತ್ತು ಸಾರ್ವಜನಿಕ ತೆರಿಗೆ ಹಣದಲ್ಲಿ ಸ್ಥಾನಮಾನ, ಸೌಲಭ್ಯ ಅನುಭವಿಸುತ್ತಿರುವ ಈ ಉಭಯ ಮಂಡಳಿಗಳ ಮುಖ್ಯಸ್ಥರು ಮತ್ತು ಸದಸ್ಯರ ಈ ನಡೆ, ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳ ಹಿನ್ನೆಲೆಯಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಪಶ್ಚಿಮಘಟ್ಟ ಪರಿಸರದ ಪಾಲಿಗೆ ಜೀವಕಂಟಕವಾಗಿರುವ ಆ ಎರಡು ಯೋಜನೆಗಳು; ಶರಾವತಿ ನದಿ ಕೊಳ್ಳದಲ್ಲಿ ಶರಾವತಿ ಭೂಗರ್ಭ ಜಲವಿದ್ಯುತ್ ಯೋಜನೆ ಮತ್ತು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ. ಈ ಎರಡೂ ಯೋಜನೆಗಳು ಬಹಳ ತರಾತುರಿಯಲ್ಲಿ ಜಾರಿಗೆ ಬರುತ್ತಿವೆ ಮತ್ತು ಆ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು, ರಾಜ್ಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಗಳು ವನ್ಯಜೀವಿ ಮತ್ತು ಅರಣ್ಯ ಕಾನೂನುಗಳನ್ನ ಗಾಳಿಗೆ ತೂರಿ ಅನುಮೋದನೆ ನೀಡಿವೆ. ಎರಡೂ ಯೋಜನೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ಪ್ರಭಾವಿ ಲಾಬಿಗಳು ಹಣ ಮಾಡುವ ದೊಡ್ಡ ಅವಕಾಶವಾಗಿ ಬಳಸಿಕೊಳ್ಳುವ ಸಂಚಿನಲ್ಲಿವೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ಕೇಳಿಬರುತ್ತಿವೆ.
ಇಂತಹ ಆರೋಪಗಳಿಗೆ ಕಾರಣವಾಗಿರುವುದು ಸ್ವತಃ ಆ ಮಂಡಳಿಗಳ ನಡೆ. ಸಾಮಾನ್ಯವಾಗಿ ರಾಜ್ಯದ ಯಾವುದೇ ಮೂಲೆಯಲ್ಲಿ ಯಾವುದೇ ಬಗೆಯ ಅರಣ್ಯ ಕಾನೂನು ಉಲ್ಲಂಘನೆ, ವನ್ಯಜೀವಿ ಕಾಯ್ದೆ ಉಲ್ಲಂಘನೆಯಂತಹ ಚಟುವಟಿಕೆಗಳು ನಡೆದರೆ, ಅದರಲ್ಲೂ ಮುಖ್ಯವಾಗಿ ಪ್ರಭಾವಿಗಳಲ್ಲದ ರೈತರು, ಕೆಳವರ್ಗದ ಜನರು ಅಂತಹ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಇನ್ನಿಲ್ಲದ ಪರಿಸರ ಕಾಳಜಿ ಮೆರೆಯುವ, ಅಂತಹ ಕೃತ್ಯಗಳ ಬಗ್ಗೆ ನಾಡಿನ ಉದ್ದಗಲಕ್ಕೆ ಬೊಬ್ಬೆ ಹೊಡೆದುಕೊಂಡು ಓಡಾಡುವ ಈ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರು, ಒಂದೇ ಏಟಿಗೆ ಅಭಯಾರಣ್ಯದ ಒಡಲಿನ ಲಕ್ಷಾಂತರ ಮರಗಳನ್ನು, ಸಾವಿರಾರು ಎಕರೆ ಕಾಡನ್ನು ನುಂಗಿ ಹಾಕುವ ಬೃಹತ್ ಯೋಜನೆಗಳ ವಿಷಯದಲ್ಲಿ ಮಾತ್ರ ಮೌನಕ್ಕೆ ಶರಣಾಗಿರುವುದು, ಮಾಧ್ಯಮಗಳ ಪ್ರಶ್ನೆಗಳಿಂದ ನುಣಚಿಕೊಳ್ಳುತ್ತಿರುವುದು ಸಹಜವಾಗೇ ಶಂಕೆಗೆ ಕಾರಣವಾಗಿದೆ.
ಲಾಕ್ ಡೌನ್ ನಡುವೆಯೇ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ತಮ್ಮ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಮಿತಿ ಸಭೆಯಲ್ಲಿ ವಿಷಯ ಮಂಡನೆಗೆ ಯೋಜನೆಯ ಪ್ರಸ್ತಾಪವನ್ನು ಸ್ವೀಕರಿಸಿದೆ ಎಂದು ಟ್ವೀಟ್ ಮಾಡಿದ ಬೆನ್ನಲ್ಲೇ ಶರಾವತಿ ಕೊಳ್ಳದ ದುರ್ಗಮ ಅರಣ್ಯದೊಳಗೆ ಬೃಹತ್ ಯಂತ್ರಗಳ ಬಂದಿಳಿದಿವೆ. ಭೂಗರ್ಭ ಯೋಜನೆಯ ಅನುಷ್ಟಾನದ ಮೊದಲ ಹಂತವಾಗಿ ಭೂ ರಚನೆಯ ಸಮೀಕ್ಷೆಯ ಭಾಗವಾಗಿ ಮಾನವ ಹಸ್ತಕ್ಷೇಪವೇ ಇರದ ಶರಾವತಿ ಕೊಳ್ಳದ ಸುಮಾರು 300 ಎಕರೆ ದಟ್ಟ ಕಾಡಿನ ನಡುವೆ ಈಗಾಗಲೇ ಸುಮಾರು 15 ಕೊಳವೆ ಬಾವಿ ಕೊರೆಯಲು ಕೆಲಸ ಆರಂಭಿಸಲಾಗಿದೆ.
ವಾಸ್ತವವಾಗಿ ಕೇಂದ್ರ ವನ್ಯಜೀವಿ ಮಂಡಳಿ ಈವರೆಗೆ ಕೊಳವೆ ಬಾವಿ ಕೊರೆಯಲು ಅನುಮೋದನೆ ನೀಡಿಯೇ ಇಲ್ಲ. ಅದು ಮುಂದಿನ ಸಭೆಯಲ್ಲಿ ಮಂಡನೆಗೆ ಪ್ರಸ್ತಾವನೆ ಸ್ವೀಕರಿಸಿದೆ ಅಷ್ಟೇ. ಅಷ್ಟರಲ್ಲೇ ರಾಜ್ಯ ಅರಣ್ಯ ಇಲಾಖೆ ಸೂಕ್ಷ್ಮ ಜೀವಪರಿಸರದ ಸಿಂಗಳೀಕ ಸಂರಕ್ಷಣಾ ವಲಯದಲ್ಲಿ ಸುಮಾರು ಅರ್ಧ ಕಿ.ಮೀ ಆಳದ 15 ಕೊಳವೆ ಕೊರೆಯಲು ಅನುಮತಿ ನೀಡಿರುವುದು ಕೂಡ ಕಾನೂನುಬಾಹಿರವೇ. ಜೊತೆಗೆ ನಾಮಕಾವಸ್ಥೆಗೆ ಮಳೆಗಾಲದಲ್ಲಿ ಕೊರೆಯಬಾರದು, ವಾಹನ ಸಂಚಾರ ಅವಕಾಶವಿಲ್ಲ, ಅರಣ್ಯ ಸಿಬ್ಬಂದಿ ಉಪಸ್ಥಿತಿಯಲ್ಲೆ ಕೊಳವೆ ಕೊರೆಯಬೇಕು ಎಂಬಂತಹ ಷರತ್ತುಗಳನ್ನು ಹಾಕಿ ಇಲಾಖೆ ಅನುಮತಿ ನೀಡಿದೆ. ಆದರೆ, ಶರಾವತಿ ಕಣಿವೆಯಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಬೃಹತ್ ಯಂತ್ರಗಳನ್ನು ವಾಹನದ ನೆರವಿಲ್ಲದೆ ಕಾಡಿನೊಳಗೆ ಒಯ್ಯಲಾಗುವುದಿಲ್ಲ. ಇದೆಲ್ಲಾ ವಾಸ್ತವಾಂಶ ಗೊತ್ತಿದ್ದರೂ ಉನ್ನತ ಅಧಿಕಾರಿಗಳು ಒತ್ತಡ ಮತ್ತು ಬೃಹತ್ ಯೋಜನೆಯ ಲಾಬಿಗೆ ಮಣಿದು ಅನುಮತಿ ನೀಡಿದ್ದಾರೆ. ಈ ಭಾಗದ ಜನರು ಕಳೆದ ಎರಡು ವರ್ಷಗಳಿಂದ ಯೋಜನೆ ವಿರೋಧಿಸಿ ಹೋರಾಟ ನಡೆಸಿದ್ದರೂ ಸರ್ಕಾರ ಮತ್ತು ಇಲಾಖೆಗಳು ಗಮನಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ ಪಶ್ಚಿಮಘಟ್ಟಕ್ಕೇ ಕಂಟಕವಾಗಿರುವ ಯೋಜನೆ ವಿರುದ್ಧ ಕಾನೂನು ಹೋರಾಟವೊಂದೇ ನಮಗಿರುವ ಭರವಸೆ ಎಂದು ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಹೇಳುತ್ತಾರೆ.
ಶರಾವತಿ ಕಣಿವೆಯ ವಿಶ್ವವಿಖ್ಯಾತ ಜೋಗ ಜಲಪಾತದಿಂದ ಕಣ್ಣಳತೆ ದೂರದಲ್ಲಿ ಬರೋಬ್ಬರಿ 800 ಎಕರೆಯಷ್ಟು ದಟ್ಟ ಕಾನನದ ನಡುವೆ ಈ ಶರಾವತಿ ಭೂಗರ್ಭ ವಿದ್ಯುದಾಗಾರ ಯೋಜನೆ ತಲೆ ಎತ್ತಲಿದೆ. ವಾಸ್ತವವಾಗಿ ಇದು ಕೆಪಿಸಿ(ಕರ್ನಾಟಕ ವಿದ್ಯುತ್ ನಿಗಮ)ಯ ಯೋಜನೆ. ಸುಮಾರು 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಬೃಹತ್ ಭೂಗತ ವಿದ್ಯುದಾಗಾರ ನಿರ್ಮಾಣ ಯೋಜನೆ ಇದು. ಸ್ವತಃ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಕಳೆದ ಅಕ್ಟೋಬರಿನಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಯೋಜನೆಯ ಸಮೀಕ್ಷೆಗೆ ರಾಜ್ಯದ ಪ್ರಮುಖ ವನ್ಯಜೀವಿ ತಜ್ಞರ ಉಪಸ್ಥಿತಿಯಲ್ಲಿಯೇ ಅನುಮೋದನೆ ನೀಡಲಾಗಿತ್ತು. ಕಣಿವೆಯ ತಲಕಳಲೆ ಮತ್ತು ಗೇರುಸೊಪ್ಫಾ ಜಲಾಶಯಗಳ ನಡುವಿನ ದಟ್ಟ ಕಾಡಿನ ನಡುವೆ ನೆಲಮಟ್ಟದಿಂದ ಸುಮಾರು 300 ಆಳದಲ್ಲಿ ಜಲವಿದ್ಯುದಾಗರ ನಿರ್ಮಾಣದ ಯೋಜನೆಗೆ ಸುಮಾರು 6,000 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಗಳ ವಿಶ್ವಾಸಾರ್ಹತೆಯನ್ನು ಮೂರು ಕಾಸಿಗೆ ಹರಾಜುಹಾಕಿರುವ ಮತ್ತೊಂದು ಪರಿಸರ ಮಾರಕ ಯೋಜನೆ ಹುಬ್ಬಳಿ- ಅಂಕೋಲ ರೈಲು ಮಾರ್ಗ ನಿರ್ಮಾಣ ಯೋಜನೆ. ಕಳೆದ ಕೆಲವು ದಶಕಗಳಿಂದ ವಿವಾದಕ್ಕೆ ಎಡೆಯಾಗಿದ್ದ ಮತ್ತು ಪರಿಸರವಾದಿಗಳ ತೀವ್ರ ವಿರೋಧದ ಕಾರಣದಿಂದಾಗಿ ನೆನಗುದಿಗೆ ಬಿದ್ದಿದ್ದ ಈ ಯೋಜನೆಗೆ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ವನ್ಯಜೀವಿ ಮಂಡಳಿಯ ಅಧಿಕೃತ ಸದಸ್ಯರ, ಪರಿಸರ ತಜ್ಞರ ಅಭಿಪ್ರಾಯಗಳನ್ನೆಲ್ಲಾ ಗಾಳಿಗೆ ತೂರಿ, ಯೋಜನೆಯಲ್ಲಿ ಹಿತಾಸಕ್ತಿ ಹೊಂದಿರುವ ಪ್ರಭಾವಿ ಸಚಿವರು ಮತ್ತು ಶಾಸಕರುಗಳೇ ತಮಗೆ ಬೇಕಾದಂತೆ ಮಂಡಳಿಯ ಅನುಮೋದನೆ ಪಡೆದ ನಾಚಿಕೆಗೇಡಿನ ರೀತಿರಿವಾಜಿಗೆ ಈ ಯೋಜನೆ ಸಾಕ್ಷಿಯಾಗಿದೆ.
ಆ ಮೊದಲು ನಿರಂತರ ಮೂರು ಸಭೆಗಳಲ್ಲಿ(11, 12 ಮತ್ತು 13ನೇ ಸಭೆಗಳಲ್ಲಿ) ಸದಸ್ಯರ ವಿರೋಧದ ಕಾರಣಕ್ಕೆ ಬದಿಗೆ ಸರಿದಿದ್ದ ಈ ಯೋಜನೆಗೆ ಅನುಮೋದನೆ ಪಡೆಯಲೆಂದೇ ಮಾರ್ಚ್ 20ರಂದು ನಡೆದ 14ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಮಂಡಳಿಯ ಸದಸ್ಯರಲ್ಲದ ನಾಲ್ವರಿಗೆ ಆಹ್ವಾನಿತರಾಗಿ ಅವಕಾಶ ನೀಡಲಾಗಿತ್ತು. ಮಂಡಳಿಯ ಅಧ್ಯಕ್ಷರಾಗಿ ಸಿಎಂ ಸ್ವತಃ ಹಾಜರಿದ್ದರೂ ಆರಂಭದಲ್ಲಿ ಸಿಎಂ ಪ್ರಸ್ತಾವನೆಯ ಬಗ್ಗೆ ಸಕಾರಾತ್ಮಕವಾಗಿರಲಿಲ್ಲ ಎನ್ನಲಾಗಿದೆ. ಆದರೆ, ರಾಜ್ಯ ಮುಖ್ಯ ಕಾರ್ಯದರ್ಶಿ, ಹಿರಿಯ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಸಚಿವ ಮತ್ತು ಯೋಜನೆ ಹಾದುಹೋಗುವ ಪ್ರದೇಶದ ಶಾಸಕರೂ ಆದ ಶಿವರಾಮ್ ಹೆಬ್ಬಾರ್ ಹಾಗೂ 1996-97ರಿಂದ ಯೋಜನೆಗಾಗಿ ತೀವ್ರ ಲಾಬಿ ನಡೆಸುತ್ತಿರುವ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಆರ್ ವಿ ದೇಶಪಾಂಡೆ ಅವರುಗಳು ತಮ್ಮ ವ್ಯಾಪ್ತಿ ಮೀರಿ, ಮಂಡಳಿಯ ನಿಯಮಗಳಪ್ರಕಾರ ಅವಕಾಶವೇ ಇಲ್ಲದಿದ್ದರೂ ಯೋಜನೆ ಜಾರಿಗೆ ಅನುಮೋದನೆ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಯೋಜನೆಗೆ ಅನುಮೋದನೆ ನೀಡುವ ಬಗ್ಗೆ ಸಹಮತವಿರದ ಹಿನ್ನೆಲೆಯಲ್ಲಿ ಸ್ವತಃ ಅರಣ್ಯ ಸಚಿವರು ಕೂಡ ಆ ಸಭೆಗೆ ಗೈರಾಗಿದ್ದರು ಮತ್ತು ಅವರನ್ನೇ ಅನುಸರಿಸಿ ಹಲವು ಸದಸ್ಯರು ಕೂಡ ಗೈರಾಗಿದ್ದರು. ಜೊತೆಗೆ ಹಾಜರಿದ್ದ ಐವರು ಸದಸ್ಯರ ಪೈಕಿ ಬಹುತೇಕ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಎಲ್ಲಾ ನಿಯಮಗಳನ್ನು, ಸಲಹೆಗಳನ್ನೂ ಗಾಳಿಗೆ ತೂರಿ ಲಾಬಿಗಳ ಪರ ಏಕಪಕ್ಷೀಯ ನಿರ್ಧಾರ ಕೈಗೊಂಡ ಸರ್ಕಾರದ ನಿರ್ಧಾರ ಸುಮಾರು ನಾಲ್ಕು ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಯ ಹಿಂದಿನ ಹಣಕಾಸು ಲಾಭನಷ್ಟ ಮತ್ತು ಕಿಕ್ ಬ್ಯಾಕ್ ಕುರಿತು ಹಲವು ಅನುಮಾನಗಳಿಗೆ ಎಡೆಮಾಡಿದೆ. ಜೊತೆಗೆ ತಮ್ಮ ವಿರೋಧದ ಹೊರತಾಗಿಯೂ ತಮ್ಮದೇ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ಸಭೆಯಲ್ಲಿ ಅನ್ಯರಿಗೆ ಅವಕಾಶ ನೀಡಿ, ಅವರಿಗೆ ಬೇಕಾದಂತೆ ನಿರ್ಧಾರ ಕೈಗೊಂಡರೂ, ಮಂಡಳಿಯ ಸದಸ್ಯರು ಯಾಕೆ ಸಾರ್ವಜನಿಕವಾಗಿ ಆ ಬಗ್ಗೆ ದನಿ ಎತ್ತಿಲ್ಲ? ಯಾಕೆ ತಮ್ಮನ್ನು ನಿರ್ಲಕ್ಷಿಸುವ ಮೂಲಕ ತಮ್ಮ ಸ್ವಾಭಿಮಾನ ಹರಾಜು ಮಾಡಿದ ಸರ್ಕಾರದ ನಿಲುವನ್ನು ಅವರು ಪ್ರಶ್ನಿಸುತ್ತಿಲ್ಲ? ಎಂಬ ಪ್ರಶ್ನೆಗಳು ಕೂಡ ಅವರ ವಿರೋಧ ನಿಜಕ್ಕೂ ಪರಿಸರ ಕಾಳಜಿಯ ಕಾರಣಕ್ಕೆ ವ್ಯಕ್ತವಾದದ್ದೇ ಅಥವಾ ಅತ್ತ ಯೋಜನೆಯೂ ಜಾರಿಯಾಗಿ, ಇತ್ತ ತಮ್ಮ ವರ್ಚಸ್ಸಿಗೂ ಧಕ್ಕೆಯಾಗದೇ ಇರಲಿ ಎಂಬ ಚಾಣಾಕ್ಷ ನಡೆಯೇ ಎಂಬ ಅನುಮಾನಗಳನ್ನು ಪರಿಸರ ಹೋರಾಟಗಾರರ ನಡುವೆ ಹುಟ್ಟುಹಾಕಿದೆ.
ವನ್ಯಜೀವಿ ಮತ್ತು ಜೀವವೈವಿಧ್ಯ ಮಂಡಳಿಗಳಿಗೆ ನೇಮಕವಾಗುವುದು ಇತರೆ ಎಲ್ಲಾ ನಿಗಮ ಮಂಡಳಿಗಳಂತೆಯೇ ಅಧಿಕಾರದಲ್ಲಿರುವ ಪಕ್ಷದ ಕಾರ್ಯಕರ್ತರು ಅಥವಾ ಸೈದ್ಧಾಂತಿಕ ಕಾರಣಕ್ಕೆ ಬೆಂಬಲಿಗರೇ ಆಗಿರುತ್ತಾರೆ. ಹಾಗಾಗಿ ಚೇಲಾಗಿರಿ, ವಸೂಲಿಭಾಜಿ ವರಸೆಗಳು ಇಲ್ಲೂ ಇವೆ. ಪರಿಸರವಾದಿಗಳು, ಪರಿಸರ ತಜ್ಞರ ಮುಖವಾಡದಲ್ಲಿ ಜನಸಾಮಾನ್ಯರ ಮೇಲೆ ಪ್ರಹಾರ ಮಾಡುವ ಮಂದಿ, ಬಹುಕೋಟಿ ಬಂಡವಾಳದ ಕಾರ್ಪೊರೇಟ್ ಯೋಜನೆಗಳ ವಿಷಯದಲ್ಲಿ ಮಾತ್ರ ಹೀಗೆ ಮುಗುಮ್ಮಾಗಿ ಇರುವುದು ಹೊಸದೇನಲ್ಲ. ಇಂತಹ ರಾಜಸೇವಾಸಕ್ತ ಪರಿಸರವಾದಿಗಳಿಂದ ಎಂಥ ಅಪಾಯ ಎದುರಾಗಬಹುದು ಎಂಬುದಕ್ಕೆ ಹುಬ್ಬಳಿ-ಅಂಕೋಲ ರೈಲು ಮತ್ತು ಶರಾವತಿ ಕೊಳ್ಳದ ಜಲವಿದ್ಯುತ್ ಯೋಜನೆಗಳೇ ಉದಾಹರಣೆ. ಇಂತಹ ಸಂದರ್ಭದಲ್ಲಿಯೇ ಮಹಾನ್ ತಜ್ಞರು, ಪರಿಸರವಾದಿಗಳೆಂದುಕೊಂಡವರ ನಿಜವಾದ ಬಣ್ಣ ಬಯಲಾಗುವುದು. ಹಾಗಾಗಿ ಇಂತಹ ಊಸರವಳ್ಳಿ ಪರಿಸರವಾದಿಗಳಿಂದ ಸಾರ್ವಜನಿಕ ಹಣದಲ್ಲಿ ಮೋಜುಮಸ್ತಿ ಮಾಡುವುದನ್ನು ನಿರೀಕ್ಷಿಸಬಹುದೇ ವಿನಃ ಪರಿಸರ ಪರವಾದ ಗಟ್ಟಿ ನಿಲುವನ್ನಲ್ಲ ಎಂದು ಪರಿಸರ ಹೋರಾಟಗಾರ ಎಚ್ ಬಿ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಟ್ಟು 168 ಕಿ.ಮೀ ಉದ್ದದ ಹುಬ್ಬಳ್ಳಿ ಮತ್ತು ಅಂಕೋಲ ನಡುವಿನ ಈ ರೈಲು ಮಾರ್ಗದಿಂದ ರಾಜ್ಯದ ಉತ್ತರಕರ್ನಾಟಕ ಮತ್ತು ಮಧ್ಯಕರ್ನಾಟಕ ಭಾಗಕ್ಕೆ ಕರಾವಳಿ ಪ್ರದೇಶದ ಬಂದರುಗಳ ನೇರ ಸಂಪರ್ಕ ಸಾಧ್ಯವಾಗಲಿದ್ದು, ಅದು ಆ ಭಾಗದ ಉದ್ಯಮ- ವ್ಯವಹಾರ- ಕೃಷಿ ಸೇರಿದಂತೆ ಒಟ್ಟಾರೆ ಅಭಿವೃದ್ಧಿಗೆ ಪೂರಕ ಎಂಬುದು ಯೋಜನೆಗಾಗಿ ಲಾಬಿ ಮಾಡುತ್ತಿರುವವರ ವಾದ. ಆದರೆ, ಸುಮಾರು 3750 ಕೋಟಿ ರೂ. ಮೊತ್ತದ ಭಾರೀ ಯೋಜನೆಯ ಹಿಂದೆ ಗುತ್ತಿಗೆದಾರರ ಸ್ವಹಿತಾಸಕ್ತಿ, ಬರೋಬ್ಬರಿ ಎರಡು ಲಕ್ಷ ಸಂಖ್ಯೆಯ ಸಾವಿರಾರು ಕೋಟಿ ಮೌಲ್ಯದ ಮರ ಕಬಳಿಕೆಯ ಹುನ್ನಾರ ಸೇರಿದಂತೆ ಹತ್ತು ಹಲವು ಸ್ವಾರ್ಥದ, ವೈಯಕ್ತಿಕ ಲಾಭದ ಮತ್ತು ರಾಜ್ಯದ ಸಂಪತ್ತು ಲೂಟಿಯ ಲೆಕ್ಕಾಚಾರಗಳು ಇವೆ ಎಂಬುದು ಪರಿಸರವಾದಿಗಳ ಆತಂಕ.
ಆದರೆ, ಈ ಎರಡೂ ಯೋಜನೆಗಳು ಲಾಕ್ ಡೌನ್ ಅವಕಾಶವನ್ನು ಬಳಸಿಕೊಂಡು ಹೀಗೆ ದಿಢೀರನೇ ಜಾರಿಗೆ ಬರುತ್ತಿರುವ ಹೊತ್ತಿನಲ್ಲೂ ತಮ್ಮ ಹೊಣೆಗಾರಿಕೆ ಮೆರೆಯದೆ, ಮುಗುಮ್ಮಾಗಿ ಉಳಿದಿರುವ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಜೀವ ವೈವಿಧ್ಯ ಮಂಡಳಿಯ ಮುಖ್ಯಸ್ಥರು ಮತ್ತು ಸದಸ್ಯರ ಅಸಲೀತನವಂತೂ ಸದ್ಯಕ್ಕೆ ಬಟಾಬಯಲಾಗಿದೆ. ಜನರ ತೆರಿಗೆ ಹಣದಲ್ಲಿ ವಿವಿಧ ಭತ್ಯೆ, ಸವಲತ್ತುಗಳನ್ನು ಅನುಭವಿಸುವ ಮಂದಿ ಕನಿಷ್ಟ ಆ ಋಣದ ಕಾರಣಕ್ಕಾದರೂ ಪಶ್ಚಿಮಘಟ್ಟದ ಜನ ಮತ್ತು ಪರಿಸರದ ಹಿತ ಕಾಯುವ ಬದ್ಧತೆ ತೋರಬೇಕಿತ್ತು. ತಮ್ಮ ಮಾತು ಮೀರಿ ನಡೆದುಕೊಂಡ ಸರ್ಕಾರದ ವರಸೆಯನ್ನು ಪ್ರಶ್ನಿಸಿ ಬಹಿರಂಗ ಪ್ರತಿಭಟನೆ ವ್ಯಕ್ತಪಡಿಸಬೇಕಿತ್ತು. ಕನಿಷ್ಟ ಆ ಯೋಜನೆಯ ವಿರುದ್ಧ ಬೀದಿ ಹೋರಾಟಕ್ಕೆ ಕರೆ ಕೊಡಬೇಕಿತ್ತು. ವಾಸ್ತವಾಂಶಗಳನ್ನು ಜನರ ಮುಂದಿಟ್ಟು ತಮ್ಮ ಪರಿಸರ ಕಾಳಜಿ ಮೆರೆಯಬೇಕಿತ್ತು. ಆದರೆ, ಅದಾವುದೂ ಆಗಲೇ ಇಲ್ಲ!