ದೇಶದಲ್ಲಿ ಕರೋನಾ ಕಿಚ್ಚು ಅತಿರೇಕಕ್ಕೆ ಹೋಗುವ ಮುನ್ನವೇ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಯಿತು. ಆರಂಭದಲ್ಲಿ ಗ್ರಾಮೀಣ ಮಟ್ಟದಲ್ಲೂ ರಜೆ ನೀಡಬೇಕಿತ್ತಾ? ಅನ್ನೋ ಪ್ರಶ್ನೆ ಎದುರಾಗಿದ್ದರೂ ನಂತರದ ದಿನಗಳಲ್ಲಿ ಲಾಕ್ಡೌನ್ ಘೊಷಣೆಯಾಗುತ್ತಿದ್ದಂತೆ ಇದರ ಅನಿವಾರ್ಯತೆ ಎಲ್ಲರಿಗೂ ಅರಿವಾಗಿದೆ. ಆದ್ದರಿಂದ ಕಳೆದ ಮಾರ್ಚ್ ತಿಂಗಳ ಅರ್ಧದಿಂದ ಶಾಲಾ ಕಾಲೇಜುಗಳು ಮುಚ್ಚಿದ ಸ್ಥಿತಿಯಲ್ಲಿಯೇ ಇದೆ. ದ್ವಿತೀಯ ಪಿಯುವಿನ ಒಂದು ಸಬ್ಜೆಕ್ಟ್ ಹಾಗೂ ಎಸ್ಎಸ್ಎಲ್ಸಿ ಯ ಅಂತಿಮ ಪರೀಕ್ಷೆಗಳು ಇನ್ನೂ ನಡೆದಿಲ್ಲ. 1ರಿಂದ 9ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿದೆ. ಆದರೆ ಪದವಿ, ಸ್ನಾತಕೋತ್ತರ ಪದವಿ ತರಗತಿಗಳ ಪರೀಕ್ಷೆಗಳು ಬಿಡಿ, ಇನ್ನೂ ತರಗತಿಗಳೇ ಮುಗಿದಿಲ್ಲ.
ಅಂತಹದ್ದರಲ್ಲಿ ಈ ಕರೋನಾ ಎಲ್ಲವನ್ನೂ ಮುಚ್ಚಿಸಿ ಬಿಟ್ಟಿದ್ದಾವೆ. ಇನ್ನು ಮುಂದಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ (ವಿಶೇಷವಾಗಿ ವಿಜ್ಞಾನ ವಿಭಾಗದವರು) ತೇರ್ಗಡೆ ಹೊಂದಿದವರೂ ಈಗಿಂದೀಗಲೇ ಮುಂದಿನ ಶೈಕ್ಷಣಿಕ ವರುಷದ ಪಠ್ಯ ಚಟುವಟಿಕೆಗೆ ಕೋಚಿಂಗ್ ಇಲ್ಲವೇ ಕಾಲೇಜಿಗೆ ಹಾಜರಾಗಿ ತರಗತಿ ಪಡೆಯಬೇಕಿತ್ತು. ಆದರೆ ಕರೋನಾ ಅದ್ಯಾವುದಕ್ಕೂ ಕೊಂಚವೂ ಅವಕಾಶ ನೀಡಿಲ್ಲ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳು ಇದೀಗ ಡಿಜಿಟಲ್ ಕ್ಷೇತ್ರವನ್ನ ಪ್ರವೇಶಿಸಿದೆ. ಆನ್ಲೈನ್ ಮೂಲಕವೇ ಮುಖಾಮುಖಿ ತರಬೇತಿ ಕೂಡಾ ನೀಡುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಯಶಸ್ವಿಯಾಗಿದೆ.

ಅಲ್ಲದೇ ಇದಕ್ಕಾಗಿಯೇ ಹಲವು ಶೈಕ್ಷಣಿಕ ಸಂಸ್ಥೆಗಳು ಆನ್ಲೈನ್ ತರಗತಿಗೆ ಬೇಕಾದ ವ್ಯವಸ್ಥೆಗಳನ್ನ ಮಾಡಿದ್ದಾವೆ. ಕಾಲೇಜು ತರಗತಿಯಲ್ಲಿ ಅನುಪಸ್ಥಿತಿ ಹೊರತುಪಡಿಸಿದರೆ, ಮಿಕ್ಕೆಲ್ಲವೂ ಫೇಸ್-ಟು-ಫೇಸ್ ಇರುತ್ತವೆ. ಆದರೆ ಭಾರತದಂತಹ ದೇಶದಲ್ಲಿ ಇದೊಂದು ರೀತಿಯ ಸವಾಲು ಕೂಡಾ. ಏಕೆಂದರೆ ಗ್ರಾಮೀಣ ಭಾಗಗಳಲ್ಲಿ ಕಾಣಸಿಗುವ ಇಂಟರ್ ನೆಟ್ ಸಿಗ್ನಲ್ ಸಮಸ್ಯೆ, ವಿದುಚ್ಛಕ್ತಿ ಸಮಸ್ಯೆ ಅದೆಲ್ಲಕ್ಕೂ ಜಾಸ್ತಿ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್/ಲ್ಯಾಪ್ ಟ್ಯಾಪ್ ನ ಲಭ್ಯತೆಗಳೂ ಕೂಡಾ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತದೆ. ಸ್ಮಾರ್ಟ್ ಫೊನ್ ಇದ್ದರೂ ಅದಕ್ಕೆ ಪೂರಕವಾದ ಇಂಟರ್ ನೆಟ್ ಅಂತೂ ಇದುವರೆಗೂ ಸಮರ್ಪಕವಾಗಿ ಒದಗಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಇಂದಿಗೂ ʼವರ್ಕ್ ಫ್ರಂ ಹೋಮ್ʼ ಇದ್ದರೂ, ಗ್ರಾಮೀಣ, ಮಲೆನಾಡಿನಲ್ಲಿರುವ ತನ್ನ ಮನೆಗೆ ಹೋಗದೆ ಬೆಂಗಳೂರಿನಂತಹ ನಗರದಲ್ಲೇ ಉಳಿದುಕೊಂಡು ಕೆಲಸ ನಿರ್ವಹಿಸುತ್ತಿರುವ ಯುವಕರಿದ್ದಾರೆ.
ʼಡಿಜಿಟಲ್ ಶಿಕ್ಷಣʼ ಅನ್ನೋದು ಕೇಳಲಷ್ಟೇ ಚೆಂದ. ಆದರೆ ಅದರೊಳಗಿನ ಇತಿಮಿತಿಗಳು ಬಹಳಷ್ಟಿದ್ದಾವೆ. ಕಾರಣ ಇಂಟರ್ನೆಟ್ ಕನೆಕ್ಷನ್ಗೂ, ಲ್ಯಾಪ್ ಟ್ಯಾಪ್/ ಡೆಸ್ಕ್ ಟಾಪ್ಗೂ ವಿದುಚ್ಛಕ್ತಿ ಅನ್ನೋದು ಬೇಕೇ ಬೇಕು. ದೇಶದಲ್ಲಿ ʼಸೌಭಾಗ್ಯ ಯೋಜನೆʼಯಡಿ ಶೇಕಡಾ 99.9 ರಷ್ಟು ಮನೆಗಳಿಗೆ ವಿದ್ಯುಚ್ಛಕ್ತಿ ಪೂರೈಸಲಾಗಿದೆ. ಆದರೆ ಅದರ ಗುಣಮಟ್ಟ, ಲಭ್ಯತೆ ಬಗ್ಗೆ ಒಂದು ರೀತಿ ಜಿಜ್ಞಾಸೆ ಇದ್ದೇ ಇದೆ.
ʼಮಿಷನ್ ಅಂತ್ಯೋದಯʼದಡಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ನಡೆಸಿದ 2017-18ರ ಸರ್ವೇ ಪ್ರಕಾರ, ಶೇಕಡಾ 16ರಷ್ಟು ಮನೆಗಳಲ್ಲಿ ಪ್ರತಿದಿನ ಒಂದರಿಂದ ಎಂಟು ಗಂಟೆಗಳಷ್ಟೇ ವಿದ್ಯುಚ್ಛಕ್ತಿ ಲಭ್ಯತೆ ಕಾಣಬಹುದು. ಇನ್ನು 33% ಮನೆಗಳು 9 ರಿಂದ 12 ಗಂಟೆವರೆಗೆ ಹಾಗೂ 47% ವರೆಗಿನ ಮನೆಗಳು 12 ಗಂಟೆಗೂ ಅಧಿಕ ವಿದುಚ್ಛಕ್ತಿಯನ್ನ ಪಡೆಯುತ್ತಿದೆ. ಇನ್ನು ಎಲ್ಲರಲ್ಲೂ ಕೈಗೊಂದರಂತೆ ಸ್ಮಾರ್ಟ್ ಫೋನ್ ಇದೆ ಎಂದು ನಗರದಲ್ಲಿ ಕೂತು ಭಾವಿಸೋ ಮಂದಿಗೆ ದೇಶದಲ್ಲಿ ಶೇಕಡಾ 24ರಷ್ಟು ಮಂದಿ ಮಾತ್ರ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ ಅನ್ನೋದು ತಿಳಿದುಕೊಳ್ಳಬೇಕಿದೆ. ಇನ್ನು ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್, ನೋಟ್ ಬುಕ್ಸ್, ಟ್ಯಾಬ್ಲೆಟ್ಸ್ಗಳ ಸಂಖ್ಯೆ ಇನ್ನೂ ಕಡಿಮೆಯಿದ್ದು, ಅವುಗಳ ಸಂಖ್ಯೆ ಕೇವಲ ಶೇಕಡಾ 11ರಷ್ಟು ಮಾತ್ರ.
ಮಾತ್ರವಲ್ಲದೇ ನ್ಯಾಶನಲ್ ಸ್ಯಾಂಪಲ್ ಸರ್ವೇ ರಿಪೋರ್ಟ್ ಆನ್ ಎಜ್ಯುಕೇಶನ್ 2017-18ರ ವರದಿ ಪ್ರಕಾರ, ಭಾರತದ ಶೇಕಡಾ 24 ಮನೆಯಲ್ಲಷ್ಟೇ ಇಂಟರ್ನೆಟ್ ಸೌಲಭ್ಯವಿದ್ದರೆ, ಶೇಕಡಾ 66ರಷ್ಟು ಮಂದಿ ಹಳ್ಳಿಗಳಲ್ಲಿ ವಾಸಿಸುವವರಾಗಿದ್ದಾರೆ. ಅದರಲ್ಲೂ ಕೇವಲ ಶೇಕಡಾ 15 ಮನೆಗಳಿಗಷ್ಟೇ ಇಂಟರ್ನೆಟ್ ಸಿಗ್ನಲ್ ಸಿಗಲು ಸಾಧ್ಯವಾಗುತ್ತದೆ ಎನ್ನುತ್ತದೆ ವರದಿ.
ಇನ್ನು ಮನೆಯಲ್ಲಿ ಕಂಪ್ಯೂಟರ್ ಹೊಂದಿರುವ ಶೇಕಡಾವಾರು ಸಂಖ್ಯೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಕಾಣುತ್ತವೆ. ಬಿಹಾರದಲ್ಲಿ ಇದರ ಪರಿಮಾಣ ಶೇಕಡಾ 4.6 ಇದ್ದರೆ, ಕೇರಳದಲ್ಲಿ 23.5 ಹಾಗೂ ದೆಹಲಿಯಲ್ಲಿ ಶೇಕಡಾ 35 ರಷ್ಟಿದೆ. ಇನ್ನು ಇಂಟರ್ನೆಟ್ ವಿಚಾರಕ್ಕೆ ಬಂದರೆ ದೆಹಲಿ, ಕೇರಳ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್, ಉತ್ತರಾಖಂಡ ರಾಜ್ಯಗಳಲ್ಲಿ ಶೇಕಡಾ 40 ಕ್ಕೂ ಅಧಿಕ ಹಾಗೂ ಒರಿಸ್ಸಾ, ಆಂಧ್ರ ಪ್ರದೇಶ, ಅಸ್ಸಾಂ, ಬಿಹಾರ್, ಛತ್ತೀಸ್ಘಡ, ಝಾರ್ಖಂಡ್, ಮಧ್ಯ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಶೇಕಡಾ 20ಕ್ಕಿಂತ ಕಡಿಮೆ ಇಂಟರ್ನೆಟ್ ಸಂಪರ್ಕ ಕಾಣಬಹುದು.

ಇದು ಮಾತ್ರವಲ್ಲದೇ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆ ವಿಚಾರವಾಗಿ ನಡೆಸಲಾದ ಅಧ್ಯಯನದಲ್ಲಿ ಇಂಟರ್ ನೆಟ್ ಬಳಕೆಯಲ್ಲೂ ಹೆಣ್ಣು ಮತ್ತು ಗಂಡಿನ ನಡುವೆ ಇರುವ ವ್ಯತ್ಯಾಸ ಕಾಣಬಹುದು. ದೇಶದಲ್ಲಿ ಶೇಕಡಾ 67ರಷ್ಟು ಪುರುಷರು ಹಾಗೂ ಕೇವಲ 33% ಮಹಿಳೆಯರು ಇಂಟರ್ನೆಟ್ ಬಳಸಿದರೆ, ಗ್ರಾಮೀಣ ಭಾಗದಲ್ಲಿ 72% ಪುರುಷರು ಹಾಗೂ 28% ಮಹಿಳೆಯರು ಇಂಟರ್ ನೆಟ್ ಬಳಕೆ ಮಾಡುವವರಾಗಿದ್ದಾರೆ.
ಇನ್ನು ಡಿಜಿಟಲ್ ಶಿಕ್ಷಣಕ್ಕೆ ಸುಧಾರಿತ ಇಂಟರ್ನೆಟ್ ನ ಅಗತ್ಯ ಕಡ್ಡಾಯವಾಗಿ ಇರಬೇಕು. ಲಾಕ್ಡೌನ್ ಸಮಯದ ʼವರ್ಕ್ ಫ್ರಂ ಹೋಮ್ʼ ಗೆ ಬ್ರಾಡ್ಬ್ಯಾಂಡ್ ಸರ್ವಿಸ್ ಒದಗಿಸುತ್ತಿರುವ ವೊಡಾಫೋನ್, ಜಿಯೋ, ಬಿಎಸ್ಎನ್ಎಲ್ ಇವುಗಳು ತಮ್ಮ ಗ್ರಾಹಕರಿಗೆ ಉಚಿತ ಹೆಚ್ಚುವರಿ ಡೇಟಾವನ್ನೂ ಒದಗಿಸಿದೆ.
ಆದರೂ ಮೊಬೈಲ್ ಇಂಟರ್ನೆಟ್ ಬಳಸುವವರಿಗೆ ಎದುರಾಗುವ ಸಿಗ್ನಲ್ ಸಮಸ್ಯೆ ಬಗೆಹರಿಸಲು ಇದುವರೆಗೂ ಸಾಧ್ಯವಾಗಿಲ್ಲ. ದೇಶದ 40.2 % ಮೊಬೈಲ್ ಬಳಕೆದಾರರು ಕಡಿಮೆ ಮಟ್ಟದ ಸಿಗ್ನಲ್ ಪಡೆಯಲು ಸಾಧ್ಯವಾದರೆ, 56.6% ಜನರು ಸಿಗ್ನಲ್ ಸಮಸ್ಯೆಗಳನ್ನ ದಿನಂಪ್ರತಿ ಅನುಭವಿಸುತ್ತಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಆಡಳಿತಾತ್ಮಕ ಕಾರಣಗಳಿಗಾಗಿಯೂ ಇಂಟರ್ ನೆಟ್ ಸೇವೆಯಿಂದ ದೂರವುಳಿಯುವಂತೆ ಆಗಿದೆ.
ಆದರೆ ಡಿಜಿಟಲ್ ಶಿಕ್ಷಣ ಅಥವಾ ದೂರ ಶಿಕ್ಷಣಗಳು ಯಾವತ್ತೂ ಪರಿಣಾಮಕಾರಿ ಸಾಧ್ಯವಾಗದು ಅನ್ನೋ ಮಾತೂ ಇದೆ. ಇನ್ನು ಡಿಜಿಟಲ್ ಕ್ಷೇತ್ರದಲ್ಲಿ ಪಠ್ಯ ಬೋಧನೆ ಅನ್ನೋದು ತುಸು ಪ್ರಯಾಸಕಾರಿ. ಕಾರಣ, ಬಹುತೇಕ ಶಿಕ್ಷಕರು ಅದಕ್ಕೆ ಇನ್ನೂ ಹೊಂದಿಕೊಂಡಿಲ್ಲ. ಆದರೆ ಕರೋನಾ ತಂದಿಟ್ಟ ಸಂಧಿಗ್ಧ ಸ್ಥಿತಿ ಮಾತ್ರ ಇಂತಹ ಒಂದು ಅವಕಾಶವೂ ಇದೆ ಅನ್ನೋದನ್ನ ತೋರಿಸಿಕೊಟ್ಟಿವೆ. ಇನ್ನು ದೇಶದ ಶೇಕಡಾ 37ರಷ್ಟು ಮನೆಯಲ್ಲಿ ಒಂದಕ್ಕಿಂತ ಹೆಚ್ಚಿನ ಕೋಣೆಗಳಿಲ್ಲದಿರುವುದು ಕೂಡಾ ಡಿಜಿಟಲ್ ಶಿಕ್ಷಣವನ್ನ ಮಿತಿಯೊಳಗೆ ಬಂಧಿಯಾಗಿಸುತ್ತವೆ.
ಆದ್ದರಿಂದ ಡಿಜಿಟಲ್ ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನಷ್ಟು ಮಹತ್ವದ ಹೆಜ್ಜೆಯನ್ನ ಇಡಬೇಕಾಗಿದೆ ಅನ್ನೋದನ್ನ ಲಾಕ್ಡೌನ್ ತೋರಿಸಿಕೊಟ್ಟಿದೆ. 2019-20 ರಲ್ಲಿ ಡಿಜಿಟಲ್ ಇ—ಲರ್ನಿಂಗ್ ಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 604 ಕೋಟಿ ರೂಪಾಯಿ ಖರ್ಚಿ ಮಾಡಿದರೆ, ಈ ಅವಧಿಗೆ (2020-21) ಆ ಬಜೆಟ್ನ್ನ 469ಕ್ಕೆ ಇಳಿಸಿದೆ. ಒಟ್ಟಿನಲ್ಲಿ ದೇಶದಲ್ಲಿ ಇ-ಲರ್ನಿಂಗ್ ವ್ಯವಸ್ಥೆ ದೇಶದಲ್ಲಿರುವ ಅಸಮತೋಲನವನ್ನೂ ಎತ್ತಿ ತೋರಿಸಿದೆ. ಆದ್ದರಿಂದ ಭವಿಷ್ಯದಲ್ಲಿ ಪರ್ಯಾಯ ಶಿಕ್ಷಣ ವ್ಯವಸ್ಥೆ ಹುಟ್ಟುಹಾಕಬಲ್ಲ ಡಿಜಿಟಲ್ ಶಿಕ್ಷಣವು ಭಾರೀ ಅಭಿವೃದ್ಧಿಯನ್ನ ಹೊಂದಬೇಕಿರುವುದನ್ನ ಸಾರಿ ಹೇಳಿದೆ.






