ಕರೋನಾ ಸಂಕಷ್ಟದಿಂದ ಜಗತ್ತು ಪರಿತಪಿಸುತ್ತಿದೆ. ಲಸಿಕೆ ಸಿಗದೆ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಮುಂಬೈ ನಗರ ನರಕ ಸದೃಶ್ಯವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಲಕ್ಷಾಂತರ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಭಾರತ ಸರ್ಕಾರ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಇಡೀ ಕನ್ನಡಿಗ ಕಾರ್ಮಿಕ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಕೆಲಸವೂ ಇಲ್ಲದೆ ಕಾರ್ಮಿಕರು ಪರದಾಡುತ್ತಿದ್ದರೆ, ಇತ್ತ ಹಳ್ಳಿಗಳಲ್ಲಿ ಅವರ ಕುಟುಂಬ ವರ್ಗ ಜೀವನ ನಿರ್ವಹಣೆ ಮಾಡಲು ಹಣಕಾಸಿನ ನೆರವಿಲ್ಲದೆ ಪರಿತಪಿಸುತ್ತಿದೆ. ಈ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಗಮನ ಹರಿಸಲು ಸಾಧ್ಯವಿಲ್ಲ. ಕಾರ್ಮಿಕರ ಸಚಿವರಾದರೂ ಈ ಬಗ್ಗೆ ಗಮನ ಹರಿಸಿ ಕನ್ನಡಿಗರನ್ನು ಕರ್ನಾಟಕಕ್ಕೆ ಕರೆತಂದು ಕ್ವಾರಂಟೈನ್ಗೆ ವ್ಯವಸ್ಥೆ ಮಾಡಿ ಆ ಬಳಿಕ ಬಿಡುಗಡೆ ಮಾಡಬೇಕು ಎಂದು ಪ್ರತಿಧ್ವನಿ ದನಿ ಎತ್ತಿತ್ತು.
Also Read: ಕರ್ತವ್ಯ ಮರೆತರೇ ಕರ್ನಾಟಕದ ಕಾರ್ಮಿಕ ಸಚಿವ?
ಮುಂಬೈ ನಗರದಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡು ಕನ್ನಡಿಗರ ಸಂಘ ಕಟ್ಟಿಕೊಂಡು ರಾಜಕೀಯವಾಗಿ ಬೆಳೆದ ಸಚಿವ ನಾರಾಯಣಗೌಡರು ಈ ಬಗ್ಗೆ ಗಮನಹರಿಸಿ ಕನ್ನಡಿಗರನ್ನು ವಾಪಸ್ ಕರೆತರಲು ಶ್ರಮಿಸಬೇಕು ಎಂದು ಆಗ್ರಹ ಮಾಡಲಾಗಿತ್ತು. ಆದರೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹಾಗೂ ರೇಷ್ಮೆ ಸಚಿವ ನಾರಾಯಣಗೌಡ ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣಿಸಿಲ್ಲ. ಆದರೆ, ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಮ್ಮ ಪ್ರತಿಧ್ವನಿಯ ಸಣ್ಣ ದನಿಗೆ ಧ್ವನಿಗೂಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೇರವಾಗಿ ಪತ್ರ ಬರೆದಿದ್ದು, ಮುಂಬೈ ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆದುಕೊಂಡು ಬರಲು ಕ್ರಮ ಕೈಗೊಳ್ಳಿ ಎಂದು ಆಗ್ರಹ ಮಾಡಿದ್ದಾರೆ.
ಮುಂಬೈ ಕನ್ನಡಿಗರ ರಕ್ಷಣೆ ಕೋರಿ ಪತ್ರ ಬರೆದಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕನ್ನಡಿಗರು ಮುಂಬೈ ಸೇರಿದಂತೆ ರಾಷ್ಟ್ರಾದ್ಯಂತ ಇದ್ದಾರೆ. ಇದೀಗ ಲಾಕ್ಡೌನ್ಸಮಯದಲ್ಲಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ಸಾರೆ. ಅವರ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಅವರ ಅಹವಾಲು ಕೇಳಲು ಟೋಲ್ ಫ್ರೀ ಸಂಖ್ಯೆ ಸ್ಥಾಪಿಸಿ, ಬಂದ ದೂರುಗಳ ಗಮನಿಸಿ, ಆಯಾ ರಾಜ್ಯಗಳ ವ್ಯಾಪ್ತಿಯ ಜಿಲ್ಲಾಧಿಕಾರಿಗೆ ಸೂಚನೆಯನ್ನಾದರೂ ನೀಡಬೇಕು. ಸಂತ್ರಸ್ತರಿಗೆ ತುರ್ತು ಆಹಾರ ಸಾಮಾಗ್ರಿಗಳು, ಔಷಧಿಗಳು ಮತ್ತು ಭದ್ರತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಗರ್ಭಿಣಿ ಮತ್ತು ಹೆತ್ತವರಿಂದ ದೂರವಿರುವ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಮಾಡಿ, ಅಗತ್ಯ ತುರ್ತು ಕ್ರಮ ಕೈಗೊಳ್ಳಿ ಎಂದು ತಮ್ಮದೇ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಮೂಲಕ ಅಂತರಾಜ್ಯ ಗಡಿ, ಭದ್ರತೆ ಗಮನದಲ್ಲಿಟ್ಟುಕೊಂಡು ಕನ್ನಡಿಗರಿಗೆ ರಕ್ಷಣೆ ಕೊಡಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಆಗ್ರಹ ಮಾಡಿದ್ದಾರೆ.ಮುಜರಾಯಿ ಹಾಗೂ ಮೀನುಗಾರಿಕೆ ಸಚಿವರಾಗಿರುವ ಕೋಟಾ ಶ್ರೀನಿವಾಸ ಪೂಜಾರಿ ಮುಂಬೈ ಕನ್ನಡಿಗರು ಸೇರಿದಂತೆ ದೇಶಾದ್ಯಂತ ಇರುವ ಕನ್ನಡಿಗರ ರಕ್ಷಣೆಗೆ ಮನವಿ ಮಾಡಿದ್ದ ಪ್ರತಿಧ್ವನಿಗೆ ಸ್ಪಂಧಿಸಿದ್ದಾರೆ. ಒಟ್ಟಾರೆ, ಕನ್ನಡಿಗರು ದೇಶದ ನಾನಾ ಕಡೆ ಅತ್ಯುತ್ತಮ ಕಾರ್ಮಿಕರಾಗಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇದೀಗ ಕರೋನಾ ಸೋಂಕು ಆವರಿಸಿದ್ದು, ಕರ್ನಾಟಕದಲ್ಲಿರುವ ಕಾರ್ಮಿಕ ಕುಟುಂಬಗಳು ಕಣ್ಣೀರು ಹಾಕುತ್ತಿವೆ.
ಅತ್ತ ಕಾರ್ಮಿಕರು ಕೂಲಿಯೂ ಇಲ್ಲದೆ, ಮನೆಯಿಂದ ಹೊರಕ್ಕೂ ಬಾರಲಾಗದೆ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದಾರೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂಬೈ ಸೇರಿದಂತೆ ದೇಶದ ಇತರ ಕಡೆಗಳಲ್ಲಿ ಸಿಲುಕಿರುವ ಕನ್ನಡಿಗ ಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕಿದೆ.