ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮೊಗ, ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಶುಕ್ರವಾರ ನೆರವೇರಿದೆ. ಲಾಕ್ಡೌನ್ ಇರುವ ಕಾರಣ ಸರ್ಕಾರದ ಅನುಮತಿ ಪಡೆದು ಸರಳವಾಗಿ ಆಚರಣೆ ಮಾಡಲಾಗಿದೆ. ಈ ಮೊದಲು ರಾಮನಗರ ಚನ್ನಪಟ್ಟಣ ನಡುವಿನ ಹೆದ್ದಾರಿ ಪಕ್ಕದಲ್ಲಿ ಬೃಹತ್ ವೇದಿಕೆ ಹಾಕಿಸಿ ಲಕ್ಷಾಂತರ ಕಾರ್ಯಕರ್ತರನ್ನು ಆಹ್ವಾನ ಮಾಡಿ ಮದುವೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ಕೋವಿಡ್ – 19 ಮಾರ್ಗಸೂಚಿ ಅನ್ವಯ ಮದು ಕಾರ್ಯಕ್ರಮಗಳಿಗೆ ಅನುಮತಿ ಜೊತೆಗೆ ಸೋಷಿಯಲ್ ಡಿಸ್ಟೆನ್ಸ್ ಕಾಪಾಡುವುದು ಬಹುಮುಖ್ಯ. ಮದುವೆ ಕಾರ್ಯಕ್ರಮದಲ್ಲಿ 100 ಜನರಿಗಿಂತಾ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಈ ನಡುವೆ ಕುಮಾರಸ್ವಾಮಿ ಮಗನ ಮದುವೆ ಕಾರ್ಯಕ್ರಮದಲ್ಲಿ ಸೇರಿದ್ದ ಜನರ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಡಿಸ್ಟೆನ್ಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ವಾಗ್ದಾಳಿ ನಡೆಯುತ್ತಿದೆ. ಕನ್ನಡ, ಇಂಗ್ಲಿಷ್ ಮಾಧ್ಯಮಗಳು ದೇವೇಗೌಡರ ಕುಟುಂಬದ ವಿರುದ್ಧ ಮುಗಿಬಿದ್ದಿವೆ.
ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ದೊಡ್ಡಗೌಡರ ಕುಟುಂಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬಸ್ಥರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಕೆಲವೇ ಕೆಲವು ಚನ್ನಪಟ್ಟಣ, ರಾಮನಗರ ಕಾರ್ಯಕರ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. 49 ಕಾರುಗಳಿಗೆ ಪಾಸ್ ನೀಡಲಾಗಿತ್ತು. ಒಟ್ಟು 95 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಅಧಿಕೃತವಾಗಿ ಹೇಳಿಕೊಳ್ಳಲಾಗಿದ್ದು, 95 ಜನರು ಯಾಕೆ ಭಾಗಿಯಾಗಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಾಮಾಜಿಕ ಕಳಕಳಿ ಇಲ್ಲವೇ? ಜವಾಬ್ದಾರಿ ಇಲ್ಲದೇ 95 ಜನರು ಸೇರಿದ್ದು ಯಾಕೆ ಎಂದು ಪುಂಕಾನುಪುಂಕವಾಗಿ ದೃಶ್ಯ ಮಾಧ್ಯಮದ ಪತ್ರಕರ್ತರೂ ಕೂಡ ಗಂಟೆಗಳಲೇ ಭಾಷಣ ಬಿಗಿದಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿಯೇ ನಡೆದಿದೆ.ಇದೀಗ ಕುಮಾರಸ್ವಾಮಿ ಮಗನ ಮದುವೆ ಬಗ್ಗೆ ವಾಗ್ದಾಳಿ ಮಾಡುತ್ತಿರುವ ಎಲ್ಲಾ ಸೋಷಿಯಲ್ ಮೀಡಿಯಾ ಗೆಳಯರು, ದೃಶ್ಯ ಮಾಧ್ಯಮದ ಮಹಾನ್ ಮೇಧಾವಿ ಪತ್ರಕರ್ತರು ಈಗ ನಾವು ಹೇಳುವ ಈ ಎರಡು ಪ್ರಕರಣದ ಸಮಯದಲ್ಲಿ ಬದುಕಿದ್ದರು. ಒಮ್ಮೆ ಆ ಎರಡು ಪ್ರಕರಣಗಳನ್ನು ನಿಮ್ಮ ನೆನಪಿನ ಬುತ್ತಿಯಿಂದ ನೆನಪು ಮಾಡಿಸಿಕೊಡ್ತೀವಿ. ನಾವು ಹೇಳುವುದು ತಪ್ಪಾಗಿದ್ದರೆ ನೀವು ನಮ್ಮ ಹೇಳಿಕೆಯನ್ನು ಖಂಡತುಂಡವಾಗಿ ಖಂಡಿಸಿಬಿಡಿ. ಆದರೆ ನಾವು ಹೇಳುವ ಮಾಹಿತಿ ಸರಿಯಾಗಿದ್ದರೆ! ದೃಶ್ಯ ಮಾಧ್ಯಮದ ಮಹಾನ್ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾದ ಮೇಧಾವಿ ಪಂಡಿತ ಗೆಳಯರ ದ್ವೇಷ ಎಂತಹದ್ದು ಎಂದು ನೀವೇ ನಿರ್ಧಾರ ಮಾಡಿಕೊಳ್ಳಿ ಅಷ್ಟೇ ಸಾಕು.
ಭಾರತಕ್ಕೆ ಕರೋನಾ ಸೋಂಕು ಬಂದಿದ್ದು, ಜನವರಿ 30 ರಂದು. ಆದರೆ ಅಲ್ಲಿ ಇಲ್ಲಿ ಕರೋನಾದಿಂದ ಮೊದಲ ಸಾವು ಘೋಷಣೆಯಾಗಿದ್ದು, ಮಾರ್ಚ್ 12ರಂದು ನಮ್ಮ ಕರ್ನಾಟಕದ ಕಲಬುರಗಿಯಲ್ಲಿ. ಮೋಮಿನಪುರದ 76 ವರ್ಷ ವೃದ್ಧ ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಅದಾದ ಮಾರನೆ ದಿನ ಅಂದರೆ, ಮಾರ್ಚ್ 13ರಂದು ಕರ್ನಾಟಕ ಸರ್ಕಾರ ಒಂದು ವಾರ ಇಡೀ ರಾಜ್ಯವನ್ನು ಬಂದ್ ಮಾಡುವ ಆದೇಶ ಹೊರಡಿಸಿತ್ತು. ಕರೋನಾ ಎಮರ್ಜನ್ಸಿ ಘೋಷಣೆ ಮಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಅದ್ಧೂರಿ ಮದುವೆ ಮಾಡುವಂತಿಲ್ಲ. ಸರಳ ವಿವಾಹಕ್ಕಷ್ಟೇ ಅವಕಾಶ. ಜನ ಹೆಚ್ಚು ಸೇರಿದ್ರೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ. ನಾಮಕರಣ, ಗೃಹಪ್ರವೇಶ ಸೇರಿ ಎಲ್ಲಾ ಕಾರ್ಯಕ್ರಮಗಳಲ್ಲೂ 100 ಜನ ಮೀರಬಾರದು ಎಂದು ಆದೇಶ ಮಾಡಿದ್ದರು. ಅಂದಿನಿಂದಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಮಾರ್ಚ್ 15ರಂದು ಬೆಳಗಾವಿಯಲ್ಲಿ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರ ಮಗಳ ಮದುವೆ ಆಯೋಜನೆಯಾಗಿತ್ತು. ಈ ಮದುವೆಯಲ್ಲಿ ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಇಡೀ ಕಮಲ ಪಾಳಯವೇ ಸೇರಿತ್ತು. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದ ಬಿ.ಎಸ್ ಯಡಿಯೂರಪ್ಪ, ಬೆಳಗಾವಿಯ ಉದ್ಯಮಭಾಗದ ಶುಗುನ್ ಗಾರ್ಡನ್ನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೇಂದ್ರ ಸಚಿವ ಸುರೇಶ್ ಅಂಗಡಿ, ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಜಿ ಸೇರಿದಂತೆ 20 ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿಯಾಗಿದ್ದರು. ನೀವೆ ಮಾಡಿದ ಆದೇಶವನ್ನು ನೀವೇ ಮುರಿದು ಸಾವಿರಾರು ಜನರು ಸೇರಿರುವ ಮದುವೆಯಲ್ಲಿ ಭಾಗಿಯಾಗಿದ್ದೀರಿ ಎಂದಿದ್ದಕ್ಕೆ ಹೆಚ್ಚು ಜನರು ಸೇರದೆ ಇದ್ದರೆ ಒಳ್ಳೆಯದು ಎಂದು ಅಲ್ಲಿಂದ ತೆರಳಿದ್ದರು.
ಮಾರ್ಚ್ 3ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರ ಮಗಳ ಅದ್ಧೂರಿ ಮದುವೆ ಕಾರ್ಯಕ್ರಮವಿತ್ತು. ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಲಕ್ಷಾಂತರ ಜನ ಮದುವೆಯಲ್ಲಿ ಭಾಗಿಯಾಗಿದ್ದರು. ನೂರಾರು ಜನ ಅಡುಗೆ ಭಟ್ಟರು ಸೇರಿದಂತೆ ಒಟ್ಟು ಸಾವಿರಾರು ಜನ ಕಾರ್ಮಿಕರು ಮದುವೆ ಸಿದ್ಧತೆ, ಉಸ್ತುವಾರಿಯಲ್ಲಿ ತೊಗಿದ್ದರು. ಆ ವೇಳೆಯೂ ರಾಜ್ಯದಲ್ಲಿ ಕೊರೊನಾ ಅಬ್ಬರಿಸುತ್ತಿತ್ತು. ಸ್ವತಃ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರೂ ವಾರಗಟ್ಟಲೇ ಕಾಲ ಕರೋನಾ ಸೋಂಕಿನ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೆ ಮಗಳ ಮದುವೆ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.
ಇದೀಗ ಕುಮಾರಸ್ವಾಮಿ ಮಗನ ಮದುವೆಯಲ್ಲಿ 95 ಜನರು ಸೇರಿದ್ದಾರೆ ಎಂದು ಗಂಟೆಗಟ್ಟಲೆ ಮಾಧ್ಯಮಗಳು ಬೊಬ್ಬೆ ಹಾಕುತ್ತಿವೆ. ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಪುತ್ರನ ಮದುವೆಗೆ ಅನುಮತಿ ಕೊಡಲಾಗಿತ್ತು. ಅವರು ಸರಳವಾಗಿ ಮದುವೆ ಮಾಡಿದ್ದಾರೆ. ಅವರ ಕುಟುಂಬ ದೊಡ್ಡದಿದ್ದರೂ ಹೆಚ್ಚು ಜನ ಸೇರಿಸದೆ ಮದುವೆ ಕಾರ್ಯ ಮುಗಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಹೀಗಿದ್ದರೂ ಸಾಮಾಜಿಕ ಜಾಲ ತಾಣದಲ್ಲಿ ಬೇಕಾಬಿಟ್ಟಿ ಹೇಳಿಕೆಗಳು ಪ್ರಸ್ತಾಪ ಆಗುತ್ತಿವೆ. ಪರ ವಿರೋಧ ವಾಗ್ದಾಳಿಗಳು ನಡೆಯುತ್ತಿವೆ. ಆದರೆ ಇದೇ ಬಿಜೆಪಿ ನಾಯಕರು ಅದ್ಧೂರಿಯಾಗಿ ಮದುವೆ ಮಾಡಿದಾಗ ಚಕಾರ ಎತ್ತದ ಮಹಾನ್ ಮೇಧಾವಿ ಪತ್ರಕರ್ತರೂ ಈಗ ಬೊಬ್ಬೆ ಹಾಕುತ್ತಿದ್ದಾರೆ. ಒಟ್ಟಾರೆ ಮೀಡಿಯಾ ಮ್ಯಾನೇಜ್ಮೆಂಟ್ನಲ್ಲಿ ಅವರು ಗೆದ್ದಿದ್ದಾರೆ. ಇವರು ಸೋತಿದ್ದಾರೆ ಎನ್ನುವುದು ಮಾತ್ರ ಸತ್ಯ.