ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಸಮಾಧಿ ಬಳಿ ಮೂರನೇ ದಿನದ ಹಾಲು-ತುಪ್ಪ ಕಾರ್ಯದ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು. ಕಳೆದ ಒಂದೂವರೆ ವರ್ಷಗಳಿಂದ ತಾಯಿ ಅನುಭವಿಸಿದ ಮಾನಸಿಕ ಹಾಗೂ ದೈಹಿಕ ನೋವನ್ನು ನೆನೆದು ಕಣ್ಣೀರಿಟ್ಟ ಅವರು, ಕುಟುಂಬದಲ್ಲಿ ನಡೆದ ಕೆಲವು ಘಟನೆಗಳು ತಾಯಿಗೆ ತೀವ್ರ ಆಘಾತ ಉಂಟುಮಾಡಿದ್ದವು ಎಂದು ಹೇಳಿದರು.
ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ಅವನನ್ನು ಯಾವಾಗ ಕರೆದುಕೊಂಡು ಬರ್ತೀಯಪ್ಪ?” ಎಂದು ತಾಯಿ ಪದೇ ಪದೇ ಕೇಳುತ್ತಿದ್ದರು. ಆ ಪ್ರಶ್ನೆ ಇಂದಿಗೂ ತಮ್ಮ ಮನಸ್ಸನ್ನು ಕಾಡುತ್ತಿದೆ ಎಂದು ಭಾವುಕರಾದರು.

“ತಾಯಿ ಕಳೆದ ಒಂದೂವರೆ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ನೆನಪಿನ ಶಕ್ತಿ ಕುಂದಿ, ಯಾರನ್ನೂ ಸರಿಯಾಗಿ ಗುರುತಿಸಲಾಗದ ಸ್ಥಿತಿಯಲ್ಲಿದ್ದರು. ಆದರೂ ಮನೆಗೆ ಬಂದ ಪ್ರತಿಯೊಬ್ಬರಿಗೂ ‘ಊಟ ಮಾಡಿದೀರಾ? ಊಟ ಮಾಡಿ’ ಎನ್ನುವುದು ಅವರ ಬಾಯಿಂದ ಹೊರಬರುವ ಮೊದಲ ಮಾತಾಗಿತ್ತು. ಅಷ್ಟೇ ಅಲ್ಲ, ನನ್ನನ್ನು ಮತ್ತು ನನ್ನ ಇಬ್ಬರು ತಂಗಿಯರನ್ನು ಮಾತ್ರ ಅವರು ಕೊನೆಯವರೆಗೂ ಗುರುತಿಸುತ್ತಿದ್ದರು,” ಎಂದು ನೆನಪಿಸಿಕೊಂಡರು.

ಕುಟುಂಬದ ಸಂಕಷ್ಟದ ದಿನಗಳಲ್ಲೂ ತಾಯಿ ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ತಾಯಿಯ ಆಶೀರ್ವಾದ ಮತ್ತು ಅವರು ಬೋಧಿಸಿದ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಜನಸೇವೆ ಮುಂದುವರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಚೆನ್ನಮ್ಮ ಅವರ ಸಮಾಧಿ ಬಳಿ ವೇದಮಂತ್ರಗಳ ನಡುವೆ ಹಾಲು-ತುಪ್ಪ ಕಾರ್ಯ ನೆರವೇರಿತು. ದೇವೇಗೌಡ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಜೆಡಿಎಸ್ ಮುಖಂಡರು ಪೂಜೆಯಲ್ಲಿ ಭಾಗವಹಿಸಿ ಅವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.






