ಮಧುರಾಂತಕಂ ಕ್ಷೇತ್ರದ ಶಾಸಕ ಮರಗತಂ ಕುಮಾರ್ವೇಲ್ , ಪೆರುಂದುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂ ಕ್ಷೇತ್ರದ ಶಾಸಕಿ ಸತ್ಯಭಾಮಾ ಅವರು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ ಪ್ರಭಾಕರ್ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ.
ಎಐಎಡಿಎಂಕೆ ಪಕ್ಷದ ಎಸ್ ಪಿ ವೇಲುಮಣಿ ಹಾಗೂ ಸಿ.ವಿ ಷಣ್ಮುಗಂ ಬಣದ ಈ ಮೂವರು ಶಾಸಕರು ರಾಜೀನಾಮೆ ನೀಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಇತ್ತೀಚಿಗಷ್ಟೇ ಎಐಎಡಿಎಂಕೆ ಪಕ್ಷದಲ್ಲಿ ಬಿರುಕು ಉಂಟಾಗಿ ವೇಲುಮಣಿ ಹಾಗೂ ಷಣ್ಮುಗಂ ಬಣದ 30 ಶಾಸಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ನಾಯಕತ್ವದ ವಿರುದ್ಧ ಬಂಡಾಯವೆದ್ದು ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ : ಗೃಹ ಲಕ್ಷ್ಮಿಯರಿಗೆ ಕೊಕ್ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
ಆದರೆ ಇದೇ ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ನಾಯಕತ್ವವು ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೀಗಾಗಿ ಅನರ್ಹತೆಯ ಭೀತಿಯಿಂದ ಹಾಗೂ ಕಾನೂನು ಕ್ರಮ ಎದುರಿಸುವ ಮೊದಲೇ ಎಚ್ಚೆತ್ತುಕೊಂಡಿರುವ ಈ ಮೂವರು ಶಾಸಕರು, ಈಗ ತಾವಾಗಿಯೇ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಸದ್ಯ ಈ ಬೆಳವಣಿಗೆಯಿಂದ ತಮಿಳುನಾಡಿನ ವಿಧಾನಸಭೆಯಲ್ಲಿ ಮೂರು ಶಾಸಕ ಸ್ಥಾನಗಳು ಖಾಲಿಯಾಗಿದ್ದು, ಅಲ್ಲದೆ ಸಿಎಂ ವಿಜಯ್ ಅವರಿಂದ ತೆರವಾಗಿರುವ ತಿರುಚ್ಚಿ ಪೂರ್ವ ಕ್ಷೇತ್ರವೂ ಒಂದಾಗಿದೆ. ಈಗ ಒಟ್ಟು ನಾಲ್ಕು ಶಾಸಕ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.