ಬೆಂಗಳೂರು:
ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು ನಿಧನರಾಗಿದ್ದು, ಆ ಕೊನೆಯ ಕ್ಷಣಗಳಲ್ಲಿ ಪತ್ನಿ ಶ್ರೀವಿದ್ಯಾ ನಡೆಸಿದ ಹೋರಾಟ ಇದೀಗ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ.ದಿಲೀಪ್ ರಾಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ಆಟೋ ಚಾಲಕ ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ಭಾವುಕರಾಗಿ ವಿವರಿಸಿದ್ದಾರೆ.

“ಬೆಳಿಗ್ಗೆ ಸುಮಾರು 6.10ರ ವೇಳೆಗೆ ದಿಲೀಪ್ ಅವರ ಪತ್ನಿ ಶ್ರೀವಿದ್ಯಾ ಆತಂಕದಿಂದ ಕರೆ ಮಾಡಿದರು. ಕೂಡಲೇ ಅವರ ಮನೆಗೆ ಹೋದೆ. ನಾನು ಮತ್ತು ಮನೆಯ ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ ಕೂಡ ಮಾಡಿದ್ದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ಅವರು ದೊಡ್ಡ ಉಸಿರು ಬಿಟ್ಟರು” ಎಂದು ದೇವೇಂದ್ರ ನಾಯ್ಡು ತಿಳಿಸಿದ್ದಾರೆ.

ದಿಲೀಪ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಮೊದಲು ಜಯದೇವ ಆಸ್ಪತ್ರೆಗೆ ಹೋಗುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಸಮಯ ವ್ಯರ್ಥವಾಗಬಹುದು ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.“ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ. ಸಿಬ್ಬಂದಿ ಕೇವಲ ಬಿಪಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ನಂತರ ಕೆಆರ್ ಆಸ್ಪತ್ರೆಗೆ ಕರೆದೊಯ್ದಾಗ ಇಸಿಜಿಯಲ್ಲಿ ಯಾವುದೇ ಸ್ಪಂದನೆ ಕಾಣಿಸಲಿಲ್ಲ” ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಿಗದಿದ್ದರಿಂದ ಕೊನೆಗೆ ಕಾರಿನಲ್ಲಿ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ದಿಲೀಪ್ ರಾಜ್ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

“ಈ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿ ಶ್ರೀವಿದ್ಯಾ ಜೋರಾಗಿ ಅತ್ತರು. ಎಲ್ಲಾ ದೇವರಿಗೂ ಬೇಡಿಕೊಂಡು ಹೇಗಾದರೂ ಉಳಿಸಿಕೊಡಿ ಎಂದು ಕಣ್ಣೀರಿಟ್ಟರು. ಆದರೆ ವಿಧಿಯ ಮುಂದೆ ಎಲ್ಲರೂ ಅಸಹಾಯಕರಾದರು” ಎಂದು ದೇವೇಂದ್ರ ನಾಯ್ಡು ಕಣ್ಣೀರಿನೊಂದಿಗೆ ನೆನಪಿಸಿಕೊಂಡಿದ್ದಾರೆ. ದಿಲೀಪ್ ರಾಜ್ ಅವರು ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ‘ಹಿಟ್ಲರ್ ಕಲ್ಯಾಣ’, ‘ಕೃಷ್ಣ ರುಕ್ಕು’ ಸೇರಿದಂತೆ ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.






