ಚೆನೈ : ತಮಿಳುನಾಡಿನಲ್ಲಿ ನೂತನವಾಗಿ ಸರ್ಕಾರ ರಚಿಸುವ ಹಾದಿಯಲ್ಲಿ ಸಾಗುತ್ತಿರುವ ನಟ ವಿಜಯ್ ಅವರಿಗೆ ಎದುರಾಗಿದ್ದ ಸಂಕಟಗಳು ದೂರವಾಗಿವೆ. ಆರಂಭದಲ್ಲಿ ಕಾಂಗ್ರೆಸ್ ವಿಜಯ್ ಬೆಂಬಲಕ್ಕೆ ನಿಂತಿತ್ತು, ಅದಾದ ಬಳಿಕ ಎರಡು ಎಡಪಕ್ಷಗಳೂ ಸಹ ಬೇಷರತ್ ಆಗಿ ಬೆನ್ನಿಗೆ ನಿಲ್ಲುದಾಗಿವೆ ಘೋಷಿಸಿದ್ದವು. ಆದರೆ ವಿಸಿಕೆ ಬೆಂಬಲದ ವಿಚಾರದಲ್ಲಿ ಗೊಂದಲ ಮೂಡಿತ್ತು.

ಬಳಿಕ ವಿಸಿಕೆಯು ವಿಜಯ್ಗೆ ಯಾವುದೇ ಷರತ್ತುಗಳಿಲ್ಲದೆ ಬೆಂಬಲವನ್ನು ನೀಡಿದೆ. ಆದರೆ ಆರಂಭದಲ್ಲಿ ನಾವು ವಿಜಯ್ ಬೆಂಬಲಿಸಲ್ಲ ಎಂದಿದ್ದ ಮುಸ್ಲಿಂ ಲೀಗ್ ಕೂಡ ಈಗ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದು, ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಅರ್ಳೇಕರ್ ಸೂಚನೆಯಂತೆ ಇದೀಗ ವಿಜಯ್ ಬಳಿ ಇರುವ ಶಾಸಕರ ಸಂಖ್ಯಾಬಲ 118 ರ ಬದಲು 120 ಏರಿಕೆಯಾಗಿದೆ. ಹೀಗಾಗಿ ತಮಿಳುನಾಡಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಯ ಎಲ್ಲ ಅಡ್ಡಿ ಆತಂಕಗಳು ದೂರವಾದಂತಾಗಿದೆ.
ಈ ವಾರದ ಆರಂಭದಲ್ಲಿ ನಡೆದಿದ್ದ ರಾಜಕೀಯ ಸಂಘರ್ಷ, ಸರ್ಕಾರ ರಚನೆಯ ಹಗ್ಗ- ಜಗ್ಗಾಟ ತಮಿಳುನಾಡಿನ ವಿಜಯ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಇದೀಗ ತಮಿಳುನಾಡಿನಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಾರಿ ಸುಗಮವಾಗಿದೆ.
ಟಿವಿಕೆಗೆ ಮುಸ್ಲಿಂ ಲೀಗ್ ಬೆಂಬಲದ ಪತ್ರ ಇಲ್ಲಿದೆ…
ಟಿವಿಕೆಗೆ ಬೆಂಬಲ ಘೋಷಿಸಿರುವ ಪಕ್ಷಗಳಲ್ಲಿ ವಿದುತಲೈ ಚಿರುತೈಗಲ್ ಕಚ್ಚಿ (VCK) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಎರಡೂ ಪಕ್ಷಗಳು ತಲಾ ಇಬ್ಬರು ಶಾಸಕರನ್ನು ಹೊಂದಿದ್ದು, ಈಗ ತಮಿಳಗ ವೆಟ್ರಿ ಕಳಗಂ (TVK) ಗೆ ತಮ್ಮ ಬೇಷರತ್ತಾದ ಬೆಂಬಲವನ್ನು ನೀಡಿವೆ. ಈ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ನೇತೃತ್ವದ ಒಕ್ಕೂಟದ ಬಲವು ಈಗ 120 ಕ್ಕೆ ತಲುಪಿದ್ದು, ಸರ್ಕಾರ ರಚನೆಯ ದಾರಿ ಸುಲಭವಾಗಿದೆ.
ಇದನ್ನೂ ಓದಿ : ಬಂಗಾಳದಲ್ಲಿ ಬಿಜೆಪಿ ಹೊಸ ಅಧ್ಯಾಯ : ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ
ವಿಸಿಕೆ ಬೆಂಬಲ ಪತ್ರದಲ್ಲೇನಿದೆ..?
ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸಿಕೊಳ್ಳಲು ವಿಜಯ್ ಅವರನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮ ಇಬ್ಬರು ಶಾಸಕರ ಪರವಾಗಿ ಟಿವಿಕೆ ಅಧ್ಯಕ್ಷ ಡಾ. ಥೋಲ್ ತಿರುಮಾವಲವನ್, ತಮಿಳುನಾಡು ರಾಜ್ಯದಲ್ಲಿ ಸರ್ಕಾರ ರಚಿಸುವ ಉದ್ದೇಶದಿಂದ ಅದರ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿ ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ಟಿವಿಕೆಗೆ ನಮ್ಮ ಬೆಂಬಲವನ್ನು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.
ತಮಿಳುನಾಡಿನ ಜನರಿಗೆ ಸ್ಥಿರ ಮತ್ತು ಪ್ರಜಾಪ್ರಭುತ್ವದ ಆಡಳಿತವನ್ನು ನೀಡುವ ಉದ್ದೇಶದಿಂದ ಈ ಬೆಂಬಲವನ್ನು ಘೋಷಿಸಲಾಗಿದೆ. ದಯವಿಟ್ಟು ನಮ್ಮ ಬೇಷರತ್ತಾದ ಬೆಂಬಲವನ್ನು ಸ್ವೀಕರಿಸಿಕೊಳ್ಳುವಂತೆ ನಾನು ಘನತೆವೆತ್ತ ನಿಮ್ಮನ್ನು ವಿನಂತಿಸುತ್ತೇನೆ ಎಂದು ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಸಹಿ ಮಾಡಿರುವ ಪತ್ರದಲ್ಲಿ ಹೇಳಲಾಗಿದೆ.






