ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಪ್ರಚಾರ ಭಾಗವಾಗಿ ನಡೆದ ಪ್ರೆಸ್ ಮೀಟ್ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು. ವಿಶೇಷವಾಗಿ ‘ಸೆರಗ ಸರ್ಸೆ’ ಹಾಡಿನ ವಿವಾದದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.ಈ ವೇಳೆ ಸುದೀಪ್, “ಪ್ರೇಮ್ ಅವರು ಹಿಂದೆ ಎಷ್ಟು ಉತ್ತಮ ಹಾಡುಗಳನ್ನು ಬರೆದಿದ್ದಾರೆ. ತಾಯಿ, ಭಾವನೆಗಳ ಬಗ್ಗೆ ಅವರ ಹಾಡುಗಳು ಜನರನ್ನು ಕಣ್ಣೀರಾಗಿಸಿದವು.

ನಾವು ಎಲ್ಲರೂ ಆ ಹಾಡುಗಳನ್ನು ಮತ್ತೆ ಮತ್ತೆ ಕೇಳಿದ್ದೇವೆ. ಅಂತಹ ವ್ಯಕ್ತಿಯ ಒಂದು ಹಾಡಿನ ಬಗ್ಗೆ ಇಷ್ಟು ಕಠಿಣವಾಗಿ ಮಾತನಾಡೋದು ಸರಿಯೇ?” ಎಂದು ಪ್ರಶ್ನಿಸಿದರು.ವಿವಾದದ ಕುರಿತು ಮಾತನಾಡಿದ ಅವರು, “ತಪ್ಪು ಮಾಡಿದ್ದಾರೆ ಅಂತ ನಾನು ಹೇಳೋದಿಲ್ಲ. ಕೆಲವೊಮ್ಮೆ ಕೆಲವು ಕೆಲಸಗಳು ಕೆಲಸ ಮಾಡೋದಿಲ್ಲ. ಇವತ್ತು ಸೋಷಿಯಲ್ ಮೀಡಿಯಾ ಜಾಸ್ತಿ ಬೆಳೆದಿದೆ. ಒಪಿನಿಯನ್ಸ್ ಬೇಗ ಎಲ್ಲೆಡೆ ತಲುಪುತ್ತವೆ. ಏನೋ ಆಗಿರಬಹುದು,” ಎಂದರು.ಇದರ ಜೊತೆಗೆ, “ನಮ್ಮವರನ್ನೇ ನಾವು ಇಷ್ಟು ಹಾರ್ಶ್ ಆಗಿ ಟೀಕಿಸೋದು ಸರಿಯಲ್ಲ.

ಕನ್ನಡದ ಒಬ್ಬ ನಿರ್ದೇಶಕರು, ಸಾಹಿತಿಯ ಬಗ್ಗೆ ನಾವು ಹೀಗೆ ಮಾತನಾಡೋದು ಬೇಸರ ಉಂಟುಮಾಡುತ್ತದೆ. ಸಲಹೆ ನೀಡಬಹುದು, ಆದರೆ ವ್ಯಕ್ತಿಯನ್ನು ಸಣ್ಣದಾಗಿ ಕಾಣುವಂತಾಗಬಾರದು,” ಎಂದು ಹೇಳಿದರು.“ನಾವು ಹೇಳಬಹುದು – ‘ಹೇ ಪ್ರೇಮ್ ಸರ್, ಈ ಸಾಂಗ್ ಅಷ್ಟು ವರ್ಕ್ ಆಗಲಿಲ್ಲ, ಬೇರೆ ಮಾಡಬಹುದು’ ಅಂತ. ಆದರೆ ಒಬ್ಬ ವ್ಯಕ್ತಿಯ ಸಂಪೂರ್ಣ ಸಾಧನೆಯನ್ನು ಮರೆಯಬಾರದು. ಹೊರ ರಾಜ್ಯದವರು ಏನು ಹೇಳಿದರೂ, ನಾವು ನಮ್ಮವರನ್ನು ಕಾಪಾಡಿಕೊಳ್ಳಬೇಕು,” ಎಂದು ಅವರು ಮನವಿ ಮಾಡಿದರು.

ಇನ್ನು ‘ಕೆಡಿ’ ಸಿನಿಮಾದ ವಿಷಯಕ್ಕೆ ಬಂದರೆ, ಧ್ರುವ ಸರ್ಜಾ ಅಭಿನಯಿಸಿರುವ ಈ ಚಿತ್ರಕ್ಕೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚುತ್ತಿದೆ. ಆರಂಭದಲ್ಲಿ ಹೆಚ್ಚಿನ ಚರ್ಚೆಯಾಗದಿದ್ದರೂ, ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ ಪ್ರಚಾರ ಗಟ್ಟಿಯಾಗುತ್ತಿದೆ.ಏಪ್ರಿಲ್ 30ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು KVN ಪ್ರೋಡ್ಶನ್ ಭರ್ಜರಿಯಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಸಿನಿಮಾದಲ್ಲಿ ಸಂಜಯ್ ದತ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮತ್ತು ವಿ ರವಿಚಂದ್ರನ್ ಸೇರಿದಂತೆ ಅನೇಕ ತಾರಾಗಣ ನಟಿಸಿದ್ದಾರೆ. ‘ಕೆಡಿ’ ಪ್ರೆಸ್ ಮೀಟ್ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸುವುದರ ಜೊತೆಗೆ, ಸೆರಗ ಸರ್ಸೆ ಹಾಡಿನ ವಿವಾದದ ಬಗ್ಗೆ ಸಮತೋಲನದ ಸಂದೇಶ ನೀಡುವ ವೇದಿಕೆಯಾಗಿದೆ.





