ಬೆಂಗಳೂರು : ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ರಾಮಯ್ಯನವರ ಅಂತ್ಯಸಂಸ್ಕಾರವನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವುದಾಗಿ ಘೋಷಣೆ ಮಾಡಿದ್ದ ಸಿಎಂ ಮಾತಿನಂತೆ ನಡೆದುಕೊಂಡಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಈಜಿಪ್ಟ್ ಸಮಾಧಿಯೊಳಗೆ ಭಾರತೀಯರ ಹೊಸ ವಿಷಯ ಬಹಿರಂಗ!
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರ್ಕಾರಿ ಗೌರವಕ್ಕೆ ತಗುಲಿದ ಖರ್ಚು ವೆಚ್ಚ ಪಾವತಿಸುವಂತೆ ದಿವಂಗತ ರಾಮಯ್ಯನವರ ಕುಟುಂಬಕ್ಕೆ ಬಿಲ್ ಕಳುಹಿಸಿರುವ ಘಟನೆ ನಾಡಿನ ಹಿರಿಯ ಪತ್ರಕರ್ತರಿಗೆ ಮಾಡಿರುವ ಅಪಮಾನದ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವ ಮಟ್ಟಕ್ಕೆ ದಿವಾಳಿ ಆಗಿದೆ, ಎಷ್ಟು ಲಜ್ಜೆಗೆಟ್ಟ ಸ್ಥಿತಿಗೆ ತಲುಪಿದೆ ಎನ್ನುವುದಕ್ಕೆ ಮತ್ತೊಂದು ತಾಜಾ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
https://x.com/RAshokaBJP/status/2022611564222959738?s=20

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರೇ, ರಾಮಯ್ಯನವರ ಅಂತ್ಯಸಂಸ್ಕಾರದ ವೇಳೆ ಗಣ್ಯ ವ್ಯಕ್ತಿಗಳ ಭೇಟಿಗೆ ನಡೆಸಿದ ಸಿದ್ಧತೆಗಳು, ಬ್ಯಾರಿಕೇಡ್ ಅಳವಡಿಕೆ, ಭದ್ರತಾ ವ್ಯವಸ್ಥೆ, ಮತ್ತು ಇತರ ಲಾಜಿಸ್ಟಿಕ್ ಸಿದ್ಧತೆಗಳಿಗೆ ಹಣ ಪಾವತಿಸುವಂತೆ ನಿಮ್ಮ ಪೊಲೀಸ್ ಇಲಾಖೆ ಓರ್ವ ವ್ಯಾಪಾರಿಯ ಮೂಲಕ ರಾಮಯ್ಯನವರ ಕುಟುಂಬಸ್ಥರಿಗೆ ಬಿಲ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ನಿಜವೇ ಆದರೆ, ನಿಮ್ಮ ಕಾಂಗ್ರೆಸ್ ಸರ್ಕಾರದಂತಹ ಲಜ್ಜೆಗೇಡಿ ಸರ್ಕಾರ ಮತ್ತೊಂದಿಲ್ಲ ಎಂದು ಆರ್.ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.






