ಬೆಂಗಳೂರು : ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ”ವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿರುವ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ 2026 ನ್ನು ಉದ್ಘಾಟಿಸಿರುವುದು ನನಗೆ ಅತೀವ ಸಂತಸ ತಂದಿದೆ. ಬೆಂಗಳೂರು ನಗರವು ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನೆಯ ತವರೂರು. ಅಣೆಕಟ್ಟು ಸುರಕ್ಷತೆ ಮತ್ತು ಸ್ಥಿರತೆ ಕುರಿತ ಚರ್ಚೆಗೆ ಇದು ಅತ್ಯಂತ ಸೂಕ್ತವಾದ ಸ್ಥಳವಾಗಿದೆ ಎಂದು ಹೇಳಿದ್ದಾರೆ.
ಈ ಸಮ್ಮೇಳನವು ಜಾಗತಿಕ ಚೇತನವನ್ನು ಪ್ರತಿಬಿಂಬಿಸುತ್ತದೆ. ವಿವಿಧ ದೇಶಗಳ ತಜ್ಞರು, ನೀತಿ ನಿರೂಪಕರು ಹಾಗೂ ಅಭ್ಯಾಸಿಗಳು ಇಲ್ಲಿ ಒಟ್ಟುಗೂಡಿ ಅಣೆಕಟ್ಟು ಸುರಕ್ಷತೆ ಮತ್ತು ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಯ ಜವಾಬ್ದಾರಿ ಕುರಿತು ಚರ್ಚಿಸುತ್ತಿದ್ದೇವೆ. ಸುರಕ್ಷಿತ ಮತ್ತು ಭದ್ರವಾದ ಅಣೆಕಟ್ಟುಗಳು” ಎಂಬ ವಿಷಯದಡಿ ಸಮ್ಮೇಳನ ಜರುಗುತ್ತಿದ್ದು, ಅಣೆಕಟ್ಟು ಸುರಕ್ಷತೆ ಮತ್ತು ಸ್ಥಿರತೆಗೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ನೇರವಾಗಿ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ.

ಅಣೆಕಟ್ಟುಗಳು ಕೇವಲ ಕಾಂಕ್ರೀಟ್ ಮತ್ತು ಉಕ್ಕಿನ ರಚನೆಗಳಲ್ಲ. ಭಾರತದ ಮೊದಲ ದೂರದರ್ಶಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು “ಆಧುನಿಕ ಭಾರತದ ದೇವಾಲಯಗಳು” ಎಂದು ಕರೆದಿದ್ದರು. ಇವು ನಮ್ಮ ಸಾಮೂಹಿಕ ಆಕಾಂಕ್ಷೆಗಳ ಸಂಕೇತಗಳು. ಕೃಷಿ ಸಮೃದ್ಧಿ ಮತ್ತು ಕೈಗಾರಿಕಾ ಪ್ರಗತಿಯ ಜೀವಾಳವೂ ಆಗಿವೆ ಎಂದು ಒತ್ತಿ ಹೇಳಿದ್ದಾರೆ.
ಭಾರತದಲ್ಲಿ ಇಂದು 6,628 ನಿರ್ದಿಷ್ಟ ಅಣೆಕಟ್ಟುಗಳಿವೆ. ಈ ಮೂಲಕ ನಾವು ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳನ್ನು ಹೊಂದಿರುವ ರಾಷ್ಟ್ರವಾಗಿದ್ದೇವೆ. ಕರ್ನಾಟಕದಲ್ಲಿ 231 ನಿರ್ದಿಷ್ಟ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾನದಲ್ಲಿದೆ. ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್, ಬರಡು ಪ್ರದೇಶಗಳನ್ನು ಫಲವತ್ತಾದ ಬಯಲುಗಳಾಗಿ ಪರಿವರ್ತಿಸಿದ ನೀರಾವರಿ ಕಾಮಗಾರಿಗಳಿಗೆ ನೆರವು ಒದಗಿಸಲು ಅಸಾಧಾರಣ ದೂರದೃಷ್ಟಿಯನ್ನು ತೋರಿದರು ಎಂದು ಸ್ಮರಿಸಿದ್ದಾರೆ.
ದೇವರಾಜ ಅರಸು ಅವರಿಂದ ಮೊದಲುಗೊಂಡು ನಂತರದಲ್ಲಿ ಬಂದ ಆಡಳಿತವು, ಸಮಾನ ಪ್ರಾದೇಶಿಕ ಅಭಿವೃದ್ಧಿಗಾಗಿ ನೀರಾವರಿ ವ್ಯವಸ್ಥೆಯನ್ನು ವಿಸ್ತರಿಸಿದರು. ಅಣೆಕಟ್ಟುಗಳು ಕರ್ನಾಟಕವನ್ನು ಸಾಮಾಜಿಕ, ಆರ್ಥಿಕ ಸ್ಥಿತಿಯನ್ನಲ್ಲದೆ ಪರಿಸರವನ್ನೂ ಮಾರ್ಪಡಿಸಿವೆ. ಮುಂಗಾರಿನ ಅನಿಶ್ಚಿತತೆಯನ್ನು ಲಕ್ಷಾಂತರ ಜನರಿಗೆ ಭರವಸೆಯ ಜೀವಾಳವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ
ಜಲವಿದ್ಯುತ್ ಮತ್ತು ಬಹುಪಯೋಗಿ ಜಲಾಶಯಗಳು ಅಪಾರ ಶಕ್ತಿ ಮತ್ತು ನೀರಿನ ಭದ್ರತೆಯನ್ನು ಒದಗಿಸುತ್ತಿವೆ. ಕರ್ನಾಟಕದ ಸ್ಥಾಪಿತ ಜಲವಿದ್ಯುತ್ ಸಾಮರ್ಥ್ಯ ಸುಮಾರು 4,800 ಮೆಗಾವ್ಯಾಟ್. ರಾಜ್ಯದ ಜಲಾಶಯಗಳಲ್ಲಿ ನೂರಾರು ಟಿಎಂಸಿ ಅಡಿ ನೀರನ್ನು ಸಂಗ್ರಹಿಸಬಹುದಾಗಿದೆ. ಇದು ನೀರಾವರಿ ಮತ್ತು ನಗರಗಳ ನೀರಿನ ಅಗತ್ಯವನ್ನು ಪೂರೈಸುತ್ತಿದೆ.
ಕೃಷ್ಣಾ, ಕಾವೇರಿ ಮತ್ತಿತರ ನದಿಗಳ ಬಳಿ ನಿರ್ಮಿತವಾದ ಜಲಾಶಯ ಯೋಜನೆಗಳು, ಅಲ್ಲಿನ ಜಿಲ್ಲೆಗಳಲ್ಲಿ ಕೃಷಿ , ನೀರಿನ ಅಗತ್ಯಗಳು ಮತ್ತು ಜನಜೀವನವನ್ನು ಸುಸ್ಥಿರಗೊಳಿಸಿವೆ ಎಂದು ತಿಳಿಸಿದ್ದಾರೆ.
ಈ ಲಾಭಗಳು ವ್ಯವಸ್ಥಿತ ಅಣೆಕಟ್ಟು ಸುರಕ್ಷತೆ, ಪುನರುಜ್ಜೀವನ ಮತ್ತು ಆಧುನಿಕ ಕಾರ್ಯಾಚರಣೆಗಳು ಆಯ್ಕೆಗಳಾಗಿರದೆ ಸುಸ್ಥಿರ ರಾಷ್ಟ್ರದ ಅಭಿವೃದ್ಧಿಗೆ ಅವಶ್ಯಕತೆಗಳಾಗಿವೆ ಎಂದು ಒತ್ತಿ ಹೇಳುತ್ತದೆ. ಶೇಕಡಾ 70ರಷ್ಟು ಅಣೆಕಟ್ಟುಗಳು 25 ವರ್ಷಗಳಿಗೂ ಮೇಲ್ಪಟ್ಟು ಹಳೆಯದಾಗಿದ್ದು, ಇವುಗಳ ವ್ಯವಸ್ಥಿತ ಸುರಕ್ಷತಾ ಮೌಲ್ಯಮಾಪನ ಆಧುನೀಕರಣ ಮತ್ತು ಅಪಾಯ ಮುನ್ಸೂಚನೆಗಳನ್ನು ಒಳಗೊಂಡ ಕಾರ್ಯಾಚರಣೆಯನ್ನು ಕೈಗೊಳ್ಳುವ ತುರ್ತು ಇದೆ ಅಂತ ಸಾರುತ್ತಿವೆ ಎಂದಿದ್ದಾರೆ.
ಪ್ರಸ್ತುತ ಹವಾಮಾನ ಬದಲಾವಣೆಯಿಂದ ಉಂಟಾಗುವ ನೀರಿನ ವೈಪರೀತ್ಯಗಳನ್ನು ನಾವು ಎದುರಿಸುತ್ತಿದ್ದೇವೆ. ಭೂಕಂಪನದ ಅಪಾಯಗಳು, ಜಲಾಶಯಗಳಲ್ಲಿ ಹೂಳು ಶೇಖರಣೆ, ಹಳೆಯ ಕಟ್ಟಡಗಳ ಮೇಲಿನ ಒತ್ತಡ – ಇವೆಲ್ಲಾ ಸಂಕೀರ್ಣ ಮತ್ತು ಪರಸ್ಪರ ಸಂಬಂಧಿತ ಅಪಾಯಗಳನ್ನು ಸೃಷ್ಟಿಸಿವೆ. ಅಣೆಕಟ್ಟು ಸುರಕ್ಷತೆ ಈಗ ಕೇವಲ ತಾಂತ್ರಿಕ ವಿಚಾರವಾಗಿ ನಂತ್ರ ನೆನಪಿಸಿಕೊಳ್ಳುವ ವಿಷಯವಲ್ಲ, ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ ಎಂದು ಹೇಳಿದ್ದಾರೆ.
ಅಣೆಕಟ್ಟು ಸುರಕ್ಷತೆ ಎನ್ನುವುದು ಒಂದೇ ಇಲಾಖೆಯ ಜವಾಬ್ದಾರಿಯಲ್ಲ. ಇದು ಎಲ್ಲರೂ ಹಂಚಿಕೊಳ್ಳಬೇಕಾದ ರಾಷ್ಟ್ರೀಯ ಕರ್ತವ್ಯ. ಇದಕ್ಕೆ ಎಲ್ಲಾ ಸಂಸ್ಥೆಗಳ ಸಂಘಟಿತ ಕ್ರಮಗಳ ಅಗತ್ಯವಿದೆ. ಹವಾಮಾನ ಬದಲಾವಣೆ, ಎಂದೂ ಕಂಡರಿಯದ ಪ್ರವಾಹಗಳು, ದೀರ್ಘಕಾಲದ ಬರಗಾಲ, ಅನಿರೀಕ್ಷಿತ ನೀರಿನ ಹರಿವು – ಇವೆಲ್ಲಾ ಹಿಂದಿನ ಕಾಲದ ವಿನ್ಯಾಸದ ಅಂದಾಜುಗಳನ್ನೇ ತಿದ್ದಿ ಬರೆಯುವಂತೆ ಮಾಡಿವೆ ಎಂದು ಬೇಸರ ಹೊರಹಾಕಿದ್ದಾರೆ.
ಹೂಳು ಶೇಖರಣೆ, ಪರಿಸರದ ಅವನತಿ, ಜಲಾಶಯಗಳಿಂದ ಉಂಟಾಗುವ ಪರಿಸರ ಬದಲಾವಣೆಗಳು – ಇವು ದೀರ್ಘಾವಧಿಯ ನೀರು ಸಂಗ್ರಹ ಸಾಮರ್ಥ್ಯಕ್ಕೆ ಮತ್ತು ನದಿಗಳ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತಿವೆ. ಅಣೆಕಟ್ಟುಗಳು ಈಗ ಡಿಜಿಟಲ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಸೈಬರ್ ಸುರಕ್ಷತೆ ಮತ್ತು ತಾಂತ್ರಿಕ ವಿಧ್ವಂಸಕತೆಯಿಂದ ರಕ್ಷಣೆ ಒದಗಿಸುವುದು ರಾಷ್ಟ್ರೀಯ ಮೂಲಸೌಕರ್ಯ ಭದ್ರತೆಯ ಪ್ರಮುಖ ಅಂಶಗಳಾಗಿ ಪರಿಗಣಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ನೀರಿನ ನಿರ್ಣಾಯಕ ಮೂಲಸೌಕರ್ಯಗಳು, ಭಯೋತ್ಪಾದನೆ ಮತ್ತು ಕಾರ್ಯತಂತ್ರದ ವಿಧ್ವಂಸಕತೆಗೆ ತುತ್ತಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಸಂಘಟಿತ ಗುಪ್ತಚರ ಕಾರ್ಯವಿಧಾನಗಳ ಅಗತ್ಯವಿದೆ. ಅಣೆಕಟ್ಟುಗಳು ಈಗ ಡಿಜಿಟಲ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ಸೈಬರ್ ಸುರಕ್ಷತೆ ಮತ್ತು ತಾಂತ್ರಿಕ ವಿಧ್ವಂಸಕತೆಯಿಂದ ರಕ್ಷಣೆ ಮಾಡುವುದು ರಾಷ್ಟ್ರೀಯ ಮೂಲಸೌಕರ್ಯ ಭದ್ರತೆಯ ಪ್ರಮುಖ ಅಂಶಗಳಾಗಿ ಪರಿಗಣಿಸಬೇಕಾಗಿದೆ ಎಂಧು ಸಿಎಂ ಎಚ್ಚರಿಸಿದ್ದಾರೆ.

ನೀರಿನ ಪ್ರಮುಖ ಮೂಲಸೌಕರ್ಯಗಳು ಭಯೋತ್ಪಾದನೆ ಮತ್ತು ಕುತಂತ್ರಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇದನ್ನು ತಡೆಯಲು ನಿರಂತರ ಎಚ್ಚರಿಕೆ ಮತ್ತು ಗುಪ್ತಚರ ವ್ಯವಸ್ಥೆಗಳ ಅಗತ್ಯವಿದೆ. ಜಲಾಶಯಗಳಿಂದ ಮೀಥೇನ್ ಅನಿಲ ಹೊರಬರುತ್ತಿರುವುದನ್ನು ಗಮನಿಸಿ, ಸುಸ್ಥಿರ ಮತ್ತು ಪರಿಸರ ಹಾನಿಯಾಗದಂತಹ ಜವಾಬ್ದಾರಿಯುತ ವ್ಯವಸ್ಥೆಯನ್ನು ಭವಿಷ್ಯದ ಅಣೆಕಟ್ಟು ಯೋಜನೆಗಳಲ್ಲಿ ಅಗತ್ಯವಾಗಿ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೃಹತ್ ಯೋಜನೆಗಳಿಂದಾಗಿ ಜನರ ಸ್ಥಳಾಂತರ ಅನಿವಾರ್ಯವಾದ ಕಾರಣ, ಸಾಮಾಜಿಕ ಸಮಾನತೆಯನ್ನು ಆಧರಿಸಿದ ಪಾರದರ್ಶಕ, ಮಾನವೀಯ ಮತ್ತು ನ್ಯಾಯಯುತವಾದ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಪ್ರಪಂಚದೆಲ್ಲೆಡೆ ನೀರಿನ ಕೊರತೆ ಹೆಚ್ಚಿರುವ ಸಂದರ್ಭದಲ್ಲಿ, ಅಂತರ್ ರಾಜ್ಯ ಮತ್ತು ಅಂತರ್ ದೇಶೀಯ ನದಿ ನಿರ್ವಹಣೆಯಲ್ಲಿ ಸಹಕಾರ, ಮಾಹಿತಿ ಹಂಚಿಕೆ ಮತ್ತು ರಾಜತಾಂತ್ರಿಕವಾಗಿ ಪೂರಕವಾದ ಕ್ರಮಗಳು ತುಂಬಾ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ವಿವಿಧ ಆಯಾಮಗಳಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಾವು ವೈಜ್ಞಾನಿಕವಾದ, ಸಂಸ್ಥೆಗಳ ಬಲವರ್ಧನೆಯಿಂದ ರೂಪುಗೊಂಡ ಸಮಗ್ರ ಪರಿಹಾರವನ್ನು ರೂಪಿಸಬೇಕು ಮತ್ತು ಅವುಗಳು ಸುರಕ್ಷತೆ, ಸುಸ್ಥಿರತೆ ಮತ್ತು ಹಂಚಿಕೊಂಡ ಹೊಣೆಗಾರಿಕೆಯ ದೂರದೃಷ್ಟಿಯನ್ನು ಹೊಂದಿರಬೇಕು. ಮೊದಲನೆಯದಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ನಿಯಮಗಳ ಪಾಲನೆಗೆ ಸೀಮಿತವಾಗಿಸಿಕೊಳ್ಳದೇ, ನಿಯಮಿತ ತಪಾಸಣೆ, ಸುರಕ್ಷತಾ ಲೆಕ್ಕಪರಿಶೋಧನೆ, ತುರ್ತು ಕ್ರಿಯಾ ಯೋಜನೆಗಳನ್ನು ಅಪಾಯ ನಿರ್ವಹಣೆಯ ಸಾಧನಗಳಂತೆ ಬಳಸುವ ಸಮಗ್ರ ಸಂಸ್ಕೃತಿಯನ್ನು ರೂಪಿಸಬೇಕು ಎಂದಿದ್ದಾರೆ.
ಎರಡನೆಯದಾಗಿ, ನಿಯಂತ್ರಣಾ ಮತ್ತು ತಾಂತ್ರಿಕ ಸಂಸ್ಥೆಗಳು ಅಪಾಯಗಳನ್ನಾಧರಿಸಿದ ನಿರ್ಣಯಿಸುವ ವ್ಯವಸ್ಥೆಗಳನ್ನು ಸ್ಥಾಪಿಸಬೇಕು. ಉಪಕರಣಗಳ ವ್ಯವಸ್ಥೆಗಳು, ದೂರಸಂವೇದಿ ತಂತ್ರಜ್ಞಾನ, ರಚನೆಗಳ ಸ್ಥಿತಿಗಳನ್ನು ಸೂಚಿಸುವ ವ್ಯವಸ್ಥೆಗಳಿಂದ ಬರುವ ದತ್ತಾಂಶವನ್ನು ನೈಜ ಸಮಯದ ಮಾಹಿತಿ ಫಲಕಗಳಲ್ಲಿ ಅಳವಡಿಸಿಕೊಳ್ಳಬೇಕು. ಮೂರನೆಯದಾಗಿ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಸಂಯೋಜಿತ ವ್ಯವಸ್ಥೆಗಳ ಮೂಲಕ ಹವಾಮಾನ ವೈಪರೀತ್ಯ ಮತ್ತು ಹಳೆಯ ಮೂಲಸೌಕರ್ಯದಿಂದ ಉದ್ಭವಿಸುವ ಸಂಕೀರ್ಣ ಅಪಾಯಗಳನ್ನು ಮುಂಚಿತವಾಗಿಯೇ ಗುರುತಿಸಬೇಕು ಎಂದು ಹೇಳಿದ್ದಾರೆ.
ನಾಲ್ಕನೆಯದಾಗಿ, ಹಣಕಾಸು ಸಂಸ್ಥೆಗಳು ಮತ್ತು ಅಭಿವೃದ್ಧಿ ಪಾಲುದಾರರು, ಸಾಂದರ್ಭಿಕ ದುರಸ್ತಿಕಾರ್ಯ ಕೈಗೊಳ್ಳುವುದರ ಬದಲು ದೀರ್ಘಾವಧಿಯ, ಆಧುನಿಕ, ಸುಸ್ಥಿರತೆ, ಹೂಳು ನಿರ್ವಹಣೆ ಯನ್ನೊಳಗೊಂಡ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಕೊನೆಯದಾಗಿ, ಸ್ಥಳೀಯ ಆಡಳಿತಗಳು ಮತ್ತು ಸಮುದಾಯಗಳಿಗೆ ಜಾಗೃತ ಹಾಗೂ ಸನ್ನದ್ಧರಾಗಿರಲು ಶಕ್ತಿ ತುಂಬಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಇದನ್ನೂ ಓದಿ : ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್ : ಕಿಡಿಗೇಡಿಗಳ ವಿರುದ್ಧ ಕೇಸ್ ದಾಖಲು..
ನೀತಿ, ವಿಜ್ಞಾನ, ಎಂಜಿನಿಯರಿಂಗ್, ಹಣಕಾಸು ಮತ್ತು ಸಮುದಾಯದ ಪಾಲುದಾರಿಕೆಗಳು ಸಮೀಕರಿಸಿದಾಗ– ನಮ್ಮ ಅಣೆಕಟ್ಟುಗಳು ದುರ್ಬಲತೆಯ ಮೂಲಗಳಾಗಿರದೆ, ರಾಷ್ಟ್ರದ ಸಮೃದ್ಧಿ ಮತ್ತು ವಿಶ್ವಾಸಾರ್ಹ ಸ್ತಂಭಗಳಾಗಿ ಉಳಿಯುತ್ತವೆ ಎಂಬ ಭರವಸೆಯಿದೆ. ಈ ಸಮ್ಮೇಳನವು ಅಣೆಕಟ್ಟು ಸುರಕ್ಷತೆಗೆ ದೂರದೃಷ್ಟಿಯ ವಿಧಾನಗಳು ಹಾಗೂ ಭವಿಷ್ಯದ ಅಪಾಯಗಳಿಂದ ರಕ್ಷಣೆ ಒದಗಿಸುವ ಬುನಾದಿಯನ್ನು ಸ್ಥಾಪಿಸುವಂತಾಗಬೇಕು ಎಂದು ತಿಳಿಸಿದ್ದಾರೆ.
ಪ್ರಗತಿಪರ ಭಾರತ ನಿರ್ಮಿಸುವ ನಮ್ಮ ಆಶಯದತ್ತ ಮುನ್ನಡೆಯುತ್ತಾ, ಜಲ ನಿರ್ವಹಣೆಯಲ್ಲಿ ಸಹಕಾರ ನೀಡಲು ಕರ್ನಾಟಕ ಬದ್ಧವಾಗಿದೆ. ನೀರು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ ಅಂತೆಯೇ ಸುರಕ್ಷತಾ ಮಾನದಂಡಗಳೂ ಗಡಿಗಳನ್ನು ಗುರುತಿಸಬಾರದು. ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಕೇಂದ್ರ ಜಲ ಆಯೋಗ, ವಿಶ್ವ ಬ್ಯಾಂಕ್, ಐಐಎಸ್ಸಿ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ನಡುವಿನ ಇಂದಿನ ಸಹಯೋಗವು – ರಾಜಕಾರಣಕ್ಕೂ ಮೀರಿದ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಬದ್ಧತೆಯನ್ನು ಬಿಂಬಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾವೆಷ್ಟು ಎತ್ತರದ ರಚನೆಗಳನ್ನು ನಿರ್ಮಿಸಿದ್ದೇವೆ ಎಂಬುದಲ್ಲ – ನಾವು ಎಷ್ಟು ಸುರಕ್ಷಿತವಾಗಿ ಅದನ್ನು ಉಳಿಸಿಕೊಂಡಿದ್ದೇವೆ ಎಂಬುದು ಅಭಿವೃದ್ಧಿಯ ಅಳತೆಗೋಲಾಗುತ್ತದೆ. ಸುರಕ್ಷಿತ, ಭದ್ರ, ಸ್ಥಿತಿಸ್ಥಾಪಕವಾದ ನೀರಿನ ಮೂಲಸೌಕರ್ಯದತ್ತ ನಮ್ಮ ಸಾಮೂಹಿಕ ಪ್ರಯತ್ನದಲ್ಲಿ ಇದು ಒಂದು ಮೈಲಿಗಲ್ಲಾಗಲಿದೆ. ಸಮೃದ್ಧ, ಸಮಾನ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ನಮ್ಮ ಪ್ರಯಾಣದಲ್ಲಿ ಇದು ದಿಕ್ಸೂಚಿಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭಹಾರೈಸಿದ್ದಾರೆ.





