ಬೆಂಗಳೂರು : ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಭೂಮಿಯೊಳಗಿನ ಜ್ವಾಲಾಮುಖಿಯಂತೆ ಒಳಗೊಳಗೆ ಕುದಿಯುತ್ತಿದೆ. ಇತ್ತ ಸೋಟವೂ ಇಲ್ಲ, ಅತ್ತ ಕುದಿಯೂ ಕಡಿಮೆಯಾಗುತ್ತಿಲ್ಲ. ಸಂಪೂರ್ಣವಾಗಿ ನಾಯಕತ್ವ ಬದಲಾವಣೆಯು ಗೊಂದಲದ ಗೂಡಾಗಿ ಪರಿಣಮಿಸಿದೆ.

ಈ ನಡುವೆಯೇ ಕಾಂಗ್ರೆಸ್ ನಾಯಕರು ನಡೆಸಿರುವ ಎರಡು ಪ್ರತ್ಯೇಕ ಸಭೆಗಳು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಂಶವನ್ನು ಮತ್ತೊಮ್ಮೆ ಬಯಲು ಮಾಡಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ-ರಾಮ್ಜಿ ಕಾಯ್ದೆ ವಿರೋಧಿಸಿ ವಿಶೇಷ ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲಿಯೇ ದಲಿತ ಹಾಗೂ ಲಿಂಗಾಯತ ಶಾಸಕರು, ಸಚಿವರ ಸಭೆಗಳು ನಡೆದಿರುವುದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.
ಪ್ರಮುಖವಾಗಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸಂಪುಟ ವಿಸ್ತರಣೆಯಾದರೆ ಸಮುದಾಯಕ್ಕೆ ಇನ್ನಷ್ಟು ಅವಕಾಶಗಳನ್ನು ನೀಡಬೇಕು. ಲಿಂಗಾಯತ ಸಮುದಾಯಕ್ಕೆ ಬಜೆಟ್ನಲ್ಲಿ ಹೆಚ್ಚು ಅನುದಾನದ ಬಗ್ಗೆಯೂ ಚರ್ಚೆಯಾಗಿದೆ ಎನ್ನಲಾಗಿದೆ. ಇಷ್ಟೇ ಇಲ್ಲದೆ ಇನ್ನೂ ಪ್ರಮುಖವಾದ ವಿಚಾರಗಳು ಈ ರಹಸ್ಯ ಸಭೆಯಲ್ಲಿ ಚರ್ಚೆಯಾಗಿದ್ದು, ಆದರೆ ಮೇಲ್ನೋಟಕ್ಕೆ ಯಾವುದೇ ರೀತಿಯ ಚರ್ಚೆಯಾಗಿಲ್ಲ, ಇದು ಸಹಜವಾದ ಭೇಟಿಯಾಗಿದೆ ಎಂದು ನಾಯಕರು ಸಭೆಯ ಇನ್ಸೈಡ್ ಅಜೆಂಡಾ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ : Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್ಗೆ ಜಾರಕಿಹೊಳಿ ಕ್ಲೀನ್ ಬೋಲ್ಡ್…!
ಇನ್ನೊಂದೆಡೆ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ಕೈಗೊಂಡರೆ ಆಗ ದಲಿತ ಸಿಎಂ ಬೇಡಿಕೆಯನ್ನು ಮುಂದಿಡುವ ಬಗ್ಗೆ ದಲಿತ ನಾಯಕರು ನಡೆಸಿರುವ ರಹಸ್ಯ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಮುದಾಯದ ಏಳ್ಗೆಗೆ ಸಂಬಂಧಿಸಿದಂತೆ ಹಾಗೂ ಅನುದಾನದ ಬಗ್ಗೆಯೂ ಚರ್ಚೆ ನಡೆಸಿರುವ ಬಗ್ಗೆ ನಾಯಕರು ಹೇಳುತ್ತಿದ್ದಾರೆ. ಆದರೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ರಹಸ್ಯ ಸಭೆಯಲ್ಲಿ ದಲಿತ ನಾಯಕರು ರಾಜಕೀಯವಾಗಿ ಯಾವೆಲ್ಲ ಹೊಸ ದಾಳಗಳನ್ನು ಉರುಳಿಸಬೇಕು ಎನ್ನುವುದರ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅಲ್ಲದೆ ಮುಖ್ಯವಾಗಿ ಮುಂಬರುವ ಬಜೆಟ್ನಲ್ಲಿ ದಲಿತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಬೇಡಿಕೆ ಇಡಲು ತೀರ್ಮಾನಿಸಿದ್ದಾರೆ. ಸಚಿವರಾದ ಡಾ.ಹೆಚ್.ಸಿ, ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ೨೦ಕ್ಕೂ ಅಧಿಕ ಜನರು ಸಭೆಯಲ್ಲಿ ಭಾಗಿಯಾಗಿ ಚರ್ಚಿಸಿದ್ದಾರೆ.
ನಮ್ಮ ಸಮಸ್ಯೆಗಳನ್ನು ಕೇಳೋರಾರು..?
ಇನ್ನೂ ದಿಲ್ಲಿಯ ಕಾಂಗ್ರೆಸ್ ಪಕ್ಷದ ವರಿಷ್ಠರು ರಾಜ್ಯ ನಾಯಕತ್ವದ ವಿಚಾರದಲ್ಲಿ ಯಾವುದೇ ಸ್ಪಷ್ಟತೆಯನ್ನು ನೀಡದಿರುವ ಕಾರಣಕ್ಕೆ ಕಾಂಗ್ರೆಸ್ ಶಾಸಕರು ಗೊಂದಲದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈ ಇಬ್ಬರ ನಾಯಕರ ಬಳಿ ಹೋಗುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಬಣ ರಾಜಕೀಯದ ಚರ್ಚೆ ನಡೆಯುತ್ತಿರುವಾಗಲೇ ಅನುದಾನಕ್ಕಾಗಿ ಅಥವಾ ಇನ್ನಿತರ ಕಾರ್ಯಗಳಿಗಾಗಿ ಯಾರ ಬಳಿ ಹೋಗುವುದು ಎನ್ನುವುದೇ ಶಾಸಕರ ಚಿಂತೆಯಾಗಿದೆ. ಸಿಎಂ ಬಳಿ ಹೋದರೆ ಡಿಸಿಎಂ ಕೆಂಗಣ್ಣಿಗೆ ಗುರಿಯಾಗ್ತೀವಿ, ಇತ್ತ ಸಿಎಂ ಭೇಟಿ ಮಾಡಿದರೆ ಡಿಸಿಎಂ ಟೀನಲ್ಲಿ ಅಸಮಾಧಾನವಾಗುತ್ತದೆ ಎನ್ನುವುದು ಬಹುತೇಕ ಕೈ ಶಾಸಕರ ಅಳಲಾಗಿದೆ.

ಹೈಕಮಾಂಡ್ ನಾಯಕರು ಈ ವಿಚಾರದಲ್ಲಿ ಒಂದು ಸ್ಪಷ್ಟತೆ ನೀಡಿದರೆ ಸೂಕ್ತವಾಗುತ್ತದೆ. ಹೀಗೆ ಮುಂದುವರೆದರೆ ನಮ್ಮ ಸಮಸ್ಯೆಗಳನ್ನು ಕೇಳುವವರು ಯಾರು..? ನಮ್ಮ ಮನೆಯಲ್ಲಿಯೇ ನಾವು ಈ ರೀತಿಯ ಗೊಂದಲದಲ್ಲಿದ್ದೇವೆ, ಇದು ಯಾವಾಗ ಸರಿಹೋಗುತ್ತದೆ ಎಂಬ ಚರ್ಚೆಗಳು, ಬೇಸರ ಶಾಸಕರದ್ದಾಗಿದೆ. ಈ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಜೆಟ್ ಸುತ್ತ ನಿರೀಕ್ಷೆಗಳು ಎಲ್ಲ ವಲಯಗಳಲ್ಲೂ ಅಧಿಕವಾಗಿದೆ.
ಈ ಎಲ್ಲ ಗೊಂದಲಗಳ ಮಧ್ಯೆಯೇ ಕೈ ಪಾಳಯದಲ್ಲಿ ಎರಡೆರಡು ರಹಸ್ಯ ಸಭೆಗಳು ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಎಸ್ಸಿಪಿ/ಟಿಎಸ್ಪಿ ಅನುದಾನಕ್ಕೆ ಯಾವುದೇ ಧಕ್ಕೆಯಾಗಬಾರದು, ಆ ಹಣದ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಇತ್ತ ಸಚಿವ ಎಂ.ಬಿ. ಪಾಟೀಲ್, ನಮ್ಮ ಸಭೆಯಲ್ಲಿ ಸಾಮಾನ್ಯವಾದ ಚರ್ಚೆಯನ್ನೇ ಮಾಡಿದ್ದೀವಿ, ಜನರಲ್ ವಿಚಾರಗಳನ್ನು ಮಾತನಾಡಿದ್ದೇವೆ ಎನ್ನುವ ಮೂಲಕ ಇಬ್ಬರೂ ಮಂತ್ರಿಗಳು ಸಭೆಯ ಅಸಲಿತ್ತನ್ನು, ಒಳಗುಟ್ಟನ್ನು ಬಿಟ್ಟುಕೊಡದಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.






