ಬೆಂಗಳೂರು : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಬಾಂಗ್ಲಾದ ಆಟಗಾರ ಕೆಕೆಆರ್ ತಂಡದ ಮುಸ್ತಾಫಿಜುರ್ ರೆಹಮಾನ್ ಪಂದ್ಯಾವಳಿಯಿಂದ ಹೊರಹಾಕುವಂತೆ ಬಿಸಿಸಿಐ ಆದೇಶ ಮಾಡಿದೆ. ಅದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ ಸರ್ಕಾರ 2026ರ ಐಪಿಎಲ್ ಪಂದ್ಯದ ಪ್ರಸಾರವನ್ನು ನಿಷೇಧಿಸಿದೆ.

ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಗಿಡುವ ನಿರ್ಧಾರಕ್ಕೆ ಯಾವುದೇ ಕಾರಣವನ್ನು ತಿಳಿಸಲಾಗಿಲ್ಲ. ಈ ಬೆಳವಣಿಗೆ ಬಾಂಗ್ಲಾದೇಶದ ಜನರಲ್ಲಿ ದುಖಃಕ್ಕೆ ಕಾರಣವಾಗಿದೆ ಎಂದು ಬಾಂಗ್ಲಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆ ತಿಳಿಸಿದೆ. ಹೀಗಾಗಿಯೇ ಸಾರ್ವಜನಿಕ ಹಿತಾಸಕ್ತಿಗಾಗಿ ಐಪಿಎಲ್ ಪ್ರಸಾರ ಬ್ಯಾನ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿಕೊಂಡಿದೆ.

2008 ರಿಂದಲೂ ಬಾಂಗ್ಲಾದೇಶದಲ್ಲಿ ಟಿವಿ ಚಾನೆಲ್ಗಳು ಮತ್ತು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಐಪಿಎಲ್ ಅನ್ನು ಪ್ರಸಾರ ಮಾಡಿವೆ. ಬಾಂಗ್ಲಾದೇಶ ಸರ್ಕಾರವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಪ್ರಸಾರವನ್ನು ನಿಷೇಧಿಸಿದ್ದು ಇದೇ ಮೊದಲು. ಡಿಸೆಂಬರ್ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮುಸ್ತಾಫಿಜುರ್ನನ್ನು ಖರೀದಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಬಿಸಿಸಿಐ ಆದೇಶದ ಅನುಸಾರ ಆಟಗಾರನಿಗೆ ಕೊಕ್ ನೀಡಿದೆ.

ಕಳೆದ ಕೆಲವು ದಿನಗಳಿಂದ, ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿವೆ., ಭಾರತೀಯ ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕರು ಕೆಕೆಆರ್ ಮತ್ತು ಅದರ ಮಾಲೀಕ ಶಾರುಖ್ ಖಾನ್ ಅವರನ್ನು ಗುರಿಯಾಗಿಸಿ ಮುಸ್ತಾಫಿಜುರ್ನನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಕ್ಕಾಗಿ ಟೀಕಿಸಿದ್ದರು. ಅಂದಿನಿಂದ ಎರಡೂ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿವೆ. ಬಾಂಗ್ಲಾದೇಶವು ತಮ್ಮ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಇತರ ದೇಶಗಳಲ್ಲಿ ಸ್ಥಳಾಂತರಿಸುವಂತೆ ಐಸಿಸಿಗೆ ಈಗಾಗಲೇ ಮನವಿ ಸಲ್ಲಿಸಿದೆ . ಆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಮೂಲ ವೇಳಾಪಟ್ಟಿಯ ಪ್ರಕಾರ, ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶ ತನ್ನ ಪಂದ್ಯ ನಡೆಯಲಿದೆ.





