ಬೆಂಗಳೂರು : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ(Winter Session 2025) ಅಭಿವೃದ್ದಿಯ ಚರ್ಚೆಯ ಬಿಟ್ಟು ಕಾಂಗ್ರೆಸ್ ನಾಯಕರು ಡಿನ್ನರ್ ಮೀಟಿಂಗ್ನಲ್ಲಿ ಮುಳುಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಬ್ರೇಕ್ ಪಾಸ್ಟ್ ಮೂಲಕ ಸಿಎಂ ಸಿದ್ದರಾಮಯ್ಯ(CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DCM DK Shivkuamar )ಪರಸ್ಪರ ಸಿಎಂ ಬದಲಾವಣೆ ಗೊಂದಲ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು.

ಆದರೆ ಅದು ತಾತ್ಕಾಲಿಕವೆನ್ನುವಂತೆ ಸ್ವಲ್ಪ ಶಾಂತವಾಗಿ ಮತ್ತೆ ಗೊಂದಲ, ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿವೆ. ಇವುಗಳ ನಡುವೆಯೇ ಸಿಎಂ ಸಿದ್ದರಾಮಯ್ಯ ಬಣ ಗುರುವಾರ ರಾತ್ರಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆಸುವ ಮೂಲಕ ಹೊಸ ರಾಜಕೀಯ ದಾಳ ಉರುಳಿಸೋಕೆ ಮುಂದಾಗಿದೆ.

ಡಿ.ಕೆ ಶಿವಕುಮಾರ್ ತಮ್ಮ ಆಪ್ತರ ಜೊತೆ ಡಿನ್ನರ್ ಸಭೆ ನಡೆಸಿದ ಬಳಿಕ ಸಿಎಂ ಸಿದ್ದರಾಮಯ್ಯ, ಸಚಿವರಾದ ಜಮೀರ್ ಅಹ್ಮದ್ ಖಾನ್, ಡಾ.ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಸಿದ್ದು ಆಪ್ತರು ಈ ಮೀಟಿಂಗ್ನಲ್ಲಿ ಭಾಗಿಯಾಗಿದ್ದರು. ಪ್ರಮುಖವಾಗಿ ರಾಜ್ಯದ ನಾಯಕತ್ವವನ್ನು ಅದರಲ್ಲೂ ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ತಮ್ಮ ಕುರ್ಚಿಯನ್ನು ಡಿ.ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬಾರದು ಎಂಬ ಬಗ್ಗೆ ಮಹತ್ವದ ಚರ್ಚೆಯಾಗಿದೆ ಎನ್ನಲಾಗಿದೆ.

ಇನ್ನು ಮುಖ್ಯವಾಗಿ ಅಧಿವೇಶನದ ಬಳಿಕ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳೋಕು ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹಾರುವ ಸಾಧ್ಯತೆಗಳಿವೆ. ಹೀಗಾಗಿ ಸ್ನೇಹ ಭೋಜನದ ನೆಪದಲ್ಲಿ ಸಿದ್ದರಾಮಯ್ಯ ಬಣ ಒಂದೆಡೆ ಸೇರಿದ್ದರೂ, ಅದರಲ್ಲಿನ ಚರ್ಚೆಗಳು ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪಟ್ಟದ ಆಟಕ್ಕೆ ಮತ್ತೊಂದು ಹಂತದ ಕಸತ್ತಿಗೆ ಡಿಕೆ ಶಿವಕುಮಾರ್ ಮುಂದಾಗುವ ಲಕ್ಷಣಗಳಿದ್ದು, ಅದಕ್ಕಾಗಿ ಪೂರ್ವ ಸಿದ್ದತೆಯಲ್ಲಿ ಸಿದ್ದರಾಮಯ್ಯ ಟೀಂ ತೊಡಗಿಸಿಕೊಂಡಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೇ ಯಾವೆಲ್ಲ ರೀತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ. ಇದರಿಂದ ಅಹಿಂದ ಮತಗಳು ಪಕ್ಷದಿಂದ ದೂರವಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧೋಗತಿಗೆ ತಲುಪುವ ಎಚ್ಚರಿಕೆಯ ಬಗ್ಗೆಯೂ ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವ ಕುರಿತು ಡಿನ್ನರ್ ಮೀಟಿಂಗ್ನಲ್ಲಿ ಸಮಾಲೋಚನೆಯಾಗಿದೆ.

ಸಿದ್ದರಾಮಯ್ಯ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದರೆ, ಅಹಿಂದ ಮತಗಳ ಜೊತೆಗೆ 2028ರ ಚುನಾವಣೆಯ ಮೇಲೂ ಪರಿಣಾಮ ಬೀರುತ್ತದೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ಗೆ ಪತ್ರ ಚಳುವಳಿ ನಡೆಸುವ ಯೋಚನೆಯನ್ನು ಸಿದ್ದು ನಿಷ್ಠರು ಮಾಡಿದ್ದಾರೆನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ಈ ಎಲ್ಲ ವಿಚಾರಗಳ ಬಗ್ಗೆ ಗಟ್ಟಿಯಾಗಿ ಅರಿವು ಮೂಡಿಸಬೇಕೆಂದು ಆಪ್ತರು ಸಿಎಂಗೆ ಸಲಹೆ ನೀಡಿದ್ದಾರೆ. ಸಾಂಪ್ರದಾಯಿಕ ಮತಗಳು ವಿಭಜನೆಯಾದರೆ ಪಕ್ಷಕ್ಕೆ ಸಾಕಷ್ಟು ಹೊಡೆತ ಬೀಳಲಿದೆ ಅನ್ನೋದನ್ನು ದಿಲ್ಲಿ ನಾಯಕರಿಗೆ ತಿಳಿಸುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

ಈಗಾಗಲೇ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಇನ್ನಷ್ಟು ಶಕ್ತಿ ನೀಡಿರುವ ದಾವಣಗೆರೆಯ ಸಿದ್ದರಾಮೋತ್ಸವದ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿಯೂ ಅಹಿಂದ ವರ್ಗದ ಸಮಾವೇಶ ನಡೆಸುವ ಪ್ಲ್ಯಾನ್ ಕುರಿತು ಚರ್ಚಿಸಲಾಗಿದೆ. ಈ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಇಡೀ ಅಹಿಂದ ವರ್ಗ ಸಿದ್ದರಾಮಯ್ಯ ಬೆನ್ನಿಗಿದೆ ಎಂಬ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಲು ಚಿಂತಿಸಲಾಗಿದೆ. ಅಲ್ಲದೆ ಜನವರಿಯಲ್ಲಿ ನಡೆಸಲು ಯೋಚಿಸಿರುವ ಈ ಸಮಾವೇಶವನ್ನು ಸರಿಯಾಗಿ ಬಳಸಿಕೊಳ್ಳೋಕೆ ಸಿದ್ದರಾಮಯ್ಯ ಬಣ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅಹಿಂದ ಪರವಾದ ನಿಲುವನ್ನು ಹೊಂದಿದ್ದಾರೆ ಎನ್ನುವುದನ್ನೂ ಸಹ ಸಮುದಾಯಕ್ಕೆ ಒತ್ತಿ ಹೇಳುವ ಆಲೋಚನೆಯಲ್ಲಿ ಸಿಎಂ ಆಪ್ತರು ಇರುವುದು ತಿಳಿದು ಬಂದಿದೆ.

ಸಾಹುಕಾರ್ಗೆ ಪಟ್ಟ ಕಟ್ಟಲು ಮಾಸ್ಟರ್ ಪ್ಲ್ಯಾನ್..!
ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿಯವರಿಗೆ ಕೆಪಿಸಿಸಿ ಅಧ್ಯಕ್ಷಗಿರಿ ಒದಗಿಸಿಕೊಡುವ ಚರ್ಚೆಗೂ ಡಿನ್ನರ್ ಮೀಟಿಂಗ್ ವೇದಿಕೆಯಾಗಿತ್ತು. ಅದರಲ್ಲಿ ಸಿಎಂ ಸ್ಥಾನ ಉಳಿಸಿಕೊಳ್ಳುವುದರ ಜೊತೆಗೆಯೇ ಪಕ್ಷದ ಅಧ್ಯಕ್ಷ ಹುದ್ದೆಯನ್ನೂ ತೆಕ್ಕೆಗೆ ಪಡೆಯಲು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಬಣ ತನ್ನ ಯಾವುದೇ ಗುಟ್ಟನ್ನು ಬಿಟ್ಟುಕೊಡದೆಯೇ ಈ ರೀತಿಯಾದ ಸಭೆಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೌಂಟರ್ ನೀಡುವ ಪ್ಲ್ಯಾನ್ ಹಾಕುತ್ತಲೇ ಬರುತ್ತಿದೆ. ಆದರೆ ಅಧಿವೇಶನದ ಬಳಿಕ ಮತ್ತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರಕ್ಕೆ ಮತ್ತೆ ಸಂಘರ್ಷ ಏರ್ಪಡುವ ಮುನ್ನವೇ ಸಿದ್ದು ಬಣ ಹೊಸದಾಗಿ ಈ ದಾಳಗಳನ್ನು ಉರುಳಿಸೋಕೆ ಮುಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.







