ಬೆಂಗಳೂರು: ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ ಬೆನ್ನಲ್ಲೇ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಮೆಕ್ಕೆಜೋಳ ಖರೀದಿಯ ವಿಷಯದಲ್ಲಿ ಕರ್ನಾಟಕ ಸರ್ಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ, ಆದರೆ ಈ ದಿಸೆಯಲ್ಲಿ ತಕ್ಷಣವಾಗಿ ಕೈಗೊಳ್ಳಬೇಕಾದ ಕಾರ್ಯವನ್ನು ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ. ಅಲ್ಲದೇ ಕೆಲವು ಮುಖ್ಯವಾದ ಅಂಶಗಳನ್ನು ಉಲ್ಲೇಖಿಸಿದ್ದಾರೆ.
1. ಎಥೆನಾಲ್ (Ethanol) ಉತ್ಪಾದನೆಗಾಗಿ ಮೆಕ್ಕೆಜೋಳದ ಖಾತರಿ ಖರೀದಿಗೆ ಎನ್ಸಿಸಿಎಫ್ (NCCF) ಅಥವಾ ನಾಫೆಡ್ (NAFED) ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ರಾಜ್ಯದ ಡಿಸ್ಟಿಲರಿಗಳಿಗೆ (distilleries) ರಾಜ್ಯ ಸರಕಾರ (ಸಿದ್ದರಾಮಯ್ಯನವರೇ ನೀವು) ಏಕೆ ಸೂಚನೆ ನೀಡಿಲ್ಲ?
ರಾಜ್ಯ ಸರ್ಕಾರದಿಂದಲೇ ಪರವಾನಗಿ ಪಡೆದ ಈ ಡಿಸ್ಟಿಲರಿಗಳಿಗೆ, ಖಚಿತ ಖರೀದಿಗಾಗಿ ಎನ್ಸಿಸಿಎಫ್ ಅಥವ ನಾಫೆಡ್ನೊಂದಿಗೆ ಅಧಿಕೃತ ಒಪ್ಪಂದ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕಿತ್ತು. ಆದರೆ ಅದು ನಡೆದಿಲ್ಲ. ಈ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು (SOP) ಈಗಾಗಲೇ ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ.
2. ಕನಿಷ್ಠ ಬೆಂಬಲ ಬೆಲೆ (MSP) ಜಾರಿ ಬಗ್ಗೆ ಕೇಂದ್ರದ ಕಡೆಗೆ ಬೆರಳು ತೋರಿಸುವ ಮುನ್ನ ರಾಜ್ಯ ಸರ್ಕಾರ ಈ ಪ್ರಶ್ನೆಗೆ ಉತ್ತರಿಸಬೇಕು:
ಡಿಸ್ಟಿಲರಿಗಳು ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿಯೇ (MSP) ಮೆಕ್ಕೆಜೋಳವನ್ನು ಖರೀದಿಸಬೇಕೆಂದು ಕರ್ನಾಟಕ ಸರ್ಕಾರ ಏಕೆ ಕಡ್ಡಾಯಗೊಳಿಸಿಲ್ಲ? ಸ್ಥಳೀಯ ಖರೀದಿ ನಿಯಮಗಳನ್ನು ಜಾರಿಗೊಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರದ ಬಳಿ ಇದೆ.
ಒಂದು ವೇಳೆ ಡಿಸ್ಟಿಲರಿಗಳು ಎಂ.ಎಸ್.ಪಿ ಗಿಂತ ಕಡಿಮೆ ದರದಲ್ಲಿ ಖರೀದಿಸುತ್ತಿದ್ದರೆ, ಅದಕ್ಕೆ ರಾಜ್ಯ ಸರ್ಕಾರವು ಸೂಕ್ತ ಆದೇಶ ನೀಡದಿರುವುದೇ ಮುಖ್ಯ ಕಾರಣ.ಡಿಸ್ಟಲರಿಗಳು ಬೇಡಿಕೆಯನ್ನು ನೀಡಬೇಕು ಎಂದು SoP ಎಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ ಈ ಎಲ್ಲ ಡಿಸ್ಟಾಲರಿಗಳು ಕಾರ್ಯನಿರ್ವಹಿಸುವುದು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ಅಡಿಯಲ್ಲಿ, ಸರ್ಕಾರದ ಈ ನಿಷ್ಕ್ರಿಯತೆಗೆ ಇಂದು ರೈತರು ಬೆಲೆ ತೆರುತ್ತಿದ್ದಾರೆ. ಇದಕ್ಕೆ ಮೂಲ ತಮ್ಮ ಆಡಳಿತದ ವೈಫಲ್ಯತೆ.

3. “70 LMT ಆಮದು” ಎಂಬ ಹಸಿ ಸುಳ್ಳು.
ಭಾರತ ಸರ್ಕಾರವು ಈ ವರ್ಷ 70 ಎಲ್.ಎಂ.ಟಿ (LMT) ಮೆಕ್ಕೆಜೋಳ ಆಮದು ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ಸರ್ಕಾರದ ಆರೋಪವು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು.
2025-26ರ ನೈಜ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ:
ಆಮದು (Imports): ಕೇವಲ ~0.5 LMT ಮಾತ್ರ.
ರಫ್ತು (Exports): ~2.52 LMT.
4. ಇನ್ನೊಂದೆಡೆ, ಮೆಕ್ಕೆಜೋಳದ ಆಮದು ಸುಂಕವು (Import Duty) ಶೇ. 50 ರಷ್ಟಿದ್ದು, ಇದು ಆಮದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಸುಳ್ಳು ಅಂಕಿಅಂಶಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ, ನಿಖರತೆಯೇ ಮುಖ್ಯ. ಬ್ಲೇಮ್ ಗೇಮನ್ನೇ ತಮ್ಮ ಆಡಳಿತದ ಮೂಲ ಮಂತ್ರವನ್ನಾಗಿಸಿಕೊಂಡಿದ್ದೆ ಇದಕ್ಕೆ ಕಾರಣವಲ್ಲವೇ?
5. ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಹಂಚಿಕೆಯಲ್ಲಿ ಭಾರಿ ಹೆಚ್ಚಳ ಮಾಡಲಾಗಿರುವದನ್ನು
ರಾಜ್ಯ ಸರ್ಕಾರ ಮರೆಮಾಚುತ್ತಿರುವ ಸತ್ಯವೇನೆಂದರೆ, ಎಥೆನಾಲ್ ಮತ್ತು ಕೈಗಾರಿಕಾ ಬಳಕೆಗೆ ಹಂಚಿಕೆ ಮಾಡಲಾದ ಮೆಕ್ಕೆಜೋಳದ ಪ್ರಮಾಣದಲ್ಲಿ ಅಧಿಕ ಏರಿಕೆಯಾಗಿದೆ:
2022-23: 8.29 LMT
2023-24: 75.38 LMT
2024-25: 125.75 LMT
ಇದು 2022-23 ಕ್ಕೆ ಹೋಲಿಸಿದರೆ 1,417% ರಷ್ಟು ಹೆಚ್ಚಳವಾಗಿದೆ ಮತ್ತು ಕಳೆದ ವರ್ಷಕ್ಕಿಂತ 66% ರಷ್ಟು ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು (Demand) ಸ್ಪಷ್ಟವಾಗಿ ಹೆಚ್ಚಿಸಿದೆ, ಆದರೆ ರಾಜ್ಯ ಸರ್ಕಾರವು ಇದರ ಲಾಭ ರೈತರಿಗೆ ಸಿಗುವಂತೆ ನೋಡಿಕೊಳ್ಳುವಲ್ಲಿ ಸೋತಿದೆ. ನಮ್ಮ ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರತಿ ಬಾರಿಯೂ ಕೇಂದ್ರದತ್ತ ಬೆರಳು ಮಾಡಿ ದೂಷಿಸುವ ಬದಲು, ರೈತರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರವು ಕೂಡಲೇ ತಾನು ಮಾಡಬೇಕಾದ ಕರ್ತವ್ಯಗಳನ್ನೂ ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ನೆರವೇರಿಸುವುದು ಅತ್ಯಾವಶ್ಯಕವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.









