• Home
  • About Us
  • ಕರ್ನಾಟಕ
Friday, September 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ

ನಾ ದಿವಾಕರ by ನಾ ದಿವಾಕರ
September 3, 2025
in Top Story, ದೇಶ, ರಾಜಕೀಯ
0
ಅಸ್ಮಿತೆಗಳ ಆಧಿಪತ್ಯದಲ್ಲಿ  ಮಹಿಳೆಯ ಸ್ಥಾನಮಾನ
Share on WhatsAppShare on FacebookShare on Telegram

ಭಾರತೀಯ ಸಮಾಜದಲ್ಲಿ ಮಹಿಳೆ ಎರಡು ಬದಿಗಳಿಂದಲೂ ಘಾಸಿಗೊಳಗಾಗುವುದು ಸಾಮಾನ್ಯ

ADVERTISEMENT

ನಾ ದಿವಾಕರ

 ಭಾರತೀಯ ಸಮಾಜದಲ್ಲಿ ಮಹಿಳೆ, ಎಲ್ಲ ಸಂದರ್ಭಗಳಲ್ಲೂ ಎರಡು ಮಜಲುಗಳಿಂದ ದಾಳಿ ಎದುರಿಸುವುದು, ಸಾರ್ವಕಾಲಿಕ  ಸತ್ಯ , ಸಾರ್ವತ್ರಿಕ ವಾಸ್ತವ. ಮಹಿಳಾ ಘನತೆ, ಗೌರವ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸ್ಥಾನಮಾನಗಳನ್ನು ನಿರ್ಧರಿಸುವ, ನಿರ್ವಚಿಸುವ ಮತ್ತು ಸಾಂಸ್ಥಿಕವಾಗಿ ನಿರ್ಬಂಧಿಸಿ ನಿರ್ದೇಶಿಸುವ ಹಕ್ಕನ್ನೂ ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳು ತಮಗೆ ತಾವೇ ವಹಿಸಿಕೊಂಡಿರುವುದರಿಂದ, ಮಹಿಳೆ ತನ್ನದೇ ಆದ  ʼ ಸ್ವತಂತ್ರ ಮಹಿಳಾ ಅಸ್ಮಿತೆ ʼಯನ್ನು ( Free Womenʼs Identity) ಪಡೆದುಕೊಳ್ಳಲು ನಿರಂತರ ಸಂಘರ್ಷ ನಡೆಸಬೇಕಾಗುತ್ತದೆ. ಇದು ಯಾವುದೇ ಸಾಂಪ್ರದಾಯಿಕ ಸಮಾಜದಲ್ಲಿ, ಧಾರ್ಮಿಕತೆಗೆ ಆತುಕೊಂಡಿರುವ ಸಮಾಜಗಳಲ್ಲಿ ಸಹಜವಾದರೂ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ, ಸಾಂಸ್ಥಿಕ ಧರ್ಮಗಳ ಪಾರಮ್ಯ ಮತ್ತು ಇವೆರಡನ್ನೂ ನಿರ್ದೇಶಿಸುವ ಪಿತೃಪ್ರಧಾನ-ಊಳಿಗಮಾನ್ಯ ಪದ್ದತಿಗಳು, ಭಾರತೀಯ ಮಹಿಳೆಗೆ ಈ ಸ್ವಾಯತ್ತ ಅಸ್ಮಿತೆಯನ್ನು (Autonomous Identity) ಕಲ್ಪಿಸಲು ಅಡ್ಡಿಯಾಗುತ್ತವೆ.

ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸಾಂಪ್ರದಾಯಿಕ ಧಾರ್ಮಿಕತೆ ಮತ್ತು ಧರ್ಮಾಧಾರಿತ ಸಂಹಿತೆಗಳು ನಿಯಂತ್ರಿಸುವ ಸಮಾಜದಲ್ಲಿ, ಕೆಳಸ್ತರ ಜಾತಿಗಳು ದೌರ್ಜನ್ಯಕ್ಕೊಳಗಾಗುವುದು ಚಾರಿತ್ರಿಕವಾಗಿ ಕಾಣಬಹುದಾದ ವಿದ್ಯಮಾನ. ಸಾಮಾಜಿಕವಾಗಿ ಹಾಗೂ ಆರ್ಥಿಕ ನೆಲೆಯಲ್ಲಿ ಪಿತೃಪ್ರಧಾನ ಮೌಲ್ಯಗಳು ಸಂಪತ್ತು-ಉತ್ಪಾದನೆಯ ಮೂಲಗಳನ್ನು ಆವರಿಸಿದಾಗ, ಅಲ್ಲಿ ಅಸಮಾನತೆ, ತಾರತಮ್ಯಗಳೊಂದಿಗೆ ದೌರ್ಜನ್ಯಗಳೂ ಸ್ವಾಭಾವಿಕ ಪ್ರಕ್ರಿಯೆಗಳಾಗುತ್ತವೆ. ಈ ವಾತಾವರಣದಲ್ಲಿ ಮಹಿಳೆ, ಜಾತಿ-ಧರ್ಮ-ಸಮುದಾಯಗಳ ಗೆರೆಗಳನ್ನು ಮೀರಿ ದೌರ್ಜನ್ಯ, ಕಿರುಕುಳ, ತಾರತಮ್ಯಗಳನ್ನು ಎದುರಿಸುತ್ತಾಳೆ. ಧಾರ್ಮಿಕ ಕಟ್ಟಳೆಗಳು, ಸಾಂಸ್ಕೃತಿಕ ಕಟ್ಟುಪಾಡುಗಳು ಹಾಗೂ ಜಾತಿ ಕೇಂದ್ರಿತ ಜೀವನ ಮೌಲ್ಯಗಳು ಪುರುಷ ಸಮಾಜವನ್ನು ನಿಯಂತ್ರಿಸಿದರೂ , ಮಹಿಳಾ ಸಂಕುಲವನ್ನು ಇನ್ನೂ ಹೆಚ್ಚು ತೀವ್ರವಾಗಿ ನಿರ್ಬಂಧಿಸುತ್ತವೆ. ಹಾಗಾಗಿಯೇ ಇಂತಹ ಸಮಾಜಗಳಲ್ಲಿ ಮಹಿಳೆ ಒಂದೆಡೆ ಲಿಂಗಾಧಾರಿತ ಮತ್ತೊಂದೆಡೆ ಜಾತಿ-ಧರ್ಮಾಧಾರಿತ ತಾರತಮ್ಯಗಳನ್ನು ಎದುರಿಸಬೇಕಾಗುತ್ತದೆ.

DK Shivakumar: ಸಾಕ್ಷಿಗುಡ್ಡೆ ಅಂದಿದ್ದಕ್ಕೆ ಡಿಕೆಶಿ ನಗುತ್ತಾ ಏನಂದ್ರು ನೋಡಿ #pratidhvani

 ಸಮಕಾಲೀನ ಮಹಿಳಾ ಆಂದೋಲನಗಳು ಈ ಸೂಕ್ಷ್ಮ ಸಾಮಾಜಿಕ ಲಕ್ಷಣವನ್ನು ಸ್ಪಷ್ಟವಾಗಿ ಗುರುತಿಸಿರುವುದರಿಂದಲೇ ಎಲ್ಲ ವರ್ಗದ ಮಹಿಳೆಯರು ಎದುರಿಸುವ ಸವಾಲುಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಲು ಸಜ್ಜಾಗಿ ನಿಂತಿವೆ.  ಆದರೆ ಪುರುಷಾಧಿಪತ್ಯಕ್ಕೆ ಒಳಗಾಗಿರುವ ಸಾಂಘಿಕ ನೆಲೆಗಳಲ್ಲಿ, ರಾಜಕೀಯ ಪಕ್ಷಗಳಲ್ಲಿ, ಸಂಘಟನೆಗಳಲ್ಲಿ ಇರುವ ಜಾತಿ ಅಸ್ಮಿತೆ ಮತ್ತು ಧಾರ್ಮಿಕ ಅಸ್ಮಿತೆಗಳು ಮಹಿಳಾ ಸಮಸ್ಯೆಗಳನ್ನೂ ಸಹ, ತಮ್ಮ ತಾತ್ವಿಕ ನಿಲುವುಗಳಿಗೆ ಅನುಸಾರವಾಗಿ ನೋಡುವ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಮಹಿಳೆಯರು ಹಾಗೂ ಮುಂದುವರೆದ ಸಮಾಜದ ಹಿತವಲಯದಲ್ಲಿರುವ ಮಹಿಳೆಯರು ಎದುರಿಸುವ ಸಮಸ್ಯೆಗಳು ಸಹಜವಾಗಿಯೇ ಭಿನ್ನವಾಗಿರುತ್ತವೆ. ಆದರೆ ವಿಶಾಲ ಚೌಕಟ್ಟಿನಲ್ಲಿ ತಾರತಮ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ, ಕೌಟುಂಬಿಕ ಹಿಂಸೆ ಮೊದಲಾದ ಮಹಿಳಾ ದೌರ್ಜನ್ಯಗಳನ್ನು ಗಮನಿಸಿದಾಗ , ಪಿತೃಪ್ರಧಾನ ವ್ಯವಸ್ಥೆಯ ಯಜಮಾನಿಕೆಯ ಸಮಾನ ಎಳೆಯೊಂದನ್ನು ಗುರುತಿಸಬಹುದು.

ಸಂಸ್ಕೃತಿ-ರಾಜಕಾರಣ ಮತ್ತು ಪ್ರಾತಿನಿಧ್ಯ

 ಇದರ ಒಂದು ಆಯಾಮವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ಸಾಮಾಜಿಕ ಹೋರಾಟಗಳ. ಪ್ರಗತಿಪರರನ್ನೂ ಸೇರಿದಂತೆ, ಸಭೆ ವಿಚಾರ ಸಂಕಿರಣ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಗಮನಿಸಬಹುದು. ಮುಖ್ಯವಾಗಿ ಇದು ಮಹಿಳಾ ಪ್ರಾತಿನಿಧ್ಯದ ನೆಲೆಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಅಂಬೇಡ್ಕರ್‌ ಜಯಂತಿಯ ಸಂದರ್ಭದಲ್ಲಿ ನಡೆಯುವ ವಿಚಾರ ಸಂಕಿರಣಗಳು, ಎಡಪಂಥೀಯ ವಿಚಾರ ಮಂಥನದ ಸಭೆಗಳು, ಕಾರ್ಮಿಕ ಸಂಘಟನೆಗಳ ಸಮಾವೇಶಗಳು, ಸಾಹಿತ್ಯ ವಲಯದ ಸಾರ್ವಜನಿಕ ಸಭೆಗಳು, ಸಾಂಸ್ಕೃತಿಕ ಸಂಸ್ಥೆಗಳ ಸಮಾವೇಶಗಳು, ಈ ಎಲ್ಲ ಸಂದರ್ಭಗಳಲ್ಲೂ ಉಪನ್ಯಾಸಕರಾಗಿ, ಭಾಷಣಕಾರರಾಗಿ ವೇದಿಕೆಗಳ ಮೇಲೆ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿಯೇ ಕಾಣುತ್ತದೆ. ಮೈಸೂರಿನಂತಹ ಸಾಂಸ್ಕೃತಿಕ ನಗರದಲ್ಲೂ ಈ ವ್ಯತ್ಯಯವನ್ನು ಧಾರಾಳವಾಗಿ ಗುರುತಿಸಬಹುದು.

 ಇದರ ವಿಶಾಲ ಆಯಾಮವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುತಿಸಬಹುದು. ಈವರೆಗೆ ನಡೆದಿರುವ 87 ಸಮ್ಮೇಳನಗಳಲ್ಲಿ ನಾಲ್ಕು ಬಾರಿ ಮಾತ್ರ ಮಹಿಳಾ ಅಧ್ಯಕ್ಷರನ್ನು ಕಾಣಬಹುದು. 88ನೆ ಸಮ್ಮೇಳನಕ್ಕೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ವಿವಾದಾಸ್ಪದವಾಗಿರುವ ದಸರಾ ಉತ್ಸವದ ಉದ್ಘಾಟನೆಗೆ ಆಹ್ವಾನಿತರಾಗಿರುವ ಬಾನು ಮುಷ್ತಾಕ್‌, ಐದನೆಯ ಮಹಿಳೆಯಾಗಿದ್ದಾರೆ. ಕರ್ನಾಟಕವು 12ನೆ ಶತಮಾನದಿಂದಲೇ ಲಿಂಗ ಸಮಾನತೆಯ ದನಿಗೆ ಸಾಕ್ಷಿಯಾಗಿದ್ದರೂ, ಕಳೆದ ಏಳು ದಶಕಗಳಲ್ಲಿ ಈ ರಾಜ್ಯ ಮಹಿಳಾ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯವಾಗಿಲ್ಲ. ಪಂಚಾಯತ್‌ ರಾಜ್‌ ಮಸೂದೆಯು ಸಾಂವಿಧಾನಿಕ ತಿದ್ದುಪಡಿಯ ಮೂಲಕ ಜಾರಿಯಾಗದೆ ಇದ್ದಿದ್ದರೆ, ಕೆಳಹಂತದ ಆಳ್ವಿಕೆಯಲ್ಲೂ ಸಹ ಮಹಿಳಾ ಪ್ರಾತಿನಿಧ್ಯ ನಿರ್ಲಕ್ಷ್ಯಕ್ಕೊಳಗಾಗುತ್ತಿತ್ತು. ಈಗಲೂ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಸದಸ್ಯರಿದ್ದರೂ, ತೆರೆಮರೆಯಲ್ಲಿ ನಿಂತು ಯಜಮಾನಿಕೆ ವಹಿಸುವ ಪುರುಷ ಸಮಾಜವನ್ನು ಕಾಣುತ್ತಲೇ ಬಂದಿದ್ದೇವೆ.

 ಈ ಪ್ರಾತಿನಿಧ್ಯ ತಾರತಮ್ಯವನ್ನು ದಲಿತ ಸಂಘಟನೆಗಳಲ್ಲೂ, ಕಮ್ಯುನಿಸ್ಟ್‌ ಪಕ್ಷಗಳಲ್ಲೂ, ಎಡಪಂಥೀಯ ಕಾರ್ಮಿಕ ಸಂಘಟನೆಗಳಲ್ಲೂ ಸಹ ಕಾಣಬಹುದು. ಯಾವುದೇ ದಲಿತ ಸಂಘಟನೆಯ ಮುಂದಾಳತ್ವವನ್ನು ಮಹಿಳೆಗೆ ನೀಡಲಾಗಿಲ್ಲ ಎನ್ನುವುದು, ಅಂಬೇಡ್ಕರ್‌ ಚಿಂತನೆಗಳ ನೆಲೆಯಲ್ಲಿ ನಿಂತು ನೋಡಿದಾಗ, ತಲೆತಗ್ಗಿಸುವ ವಿದ್ಯಮಾನ ಆಗಿದೆ. ಒಂದು ಸಮಾಜವನ್ನು ನಿಯಂತ್ರಿಸುವ ರಾಜಕಾರಣ, ಸಾಂಸ್ಕೃತಿಕ ಸಂಸ್ಥೆಗಳು, ಸಾಹಿತ್ಯಕ ಸಂಘಟನೆಗಳು ಮತ್ತು ಅಧಿಕಾರ ಕೇಂದ್ರಗಳು ಪಿತೃಪ್ರಧಾನ ಮೌಲ್ಯಗಳಿಂದ ಪ್ರಭಾವಿತವಾದಾಗ, ಹೀಗೆ ಸಮಾಜದ ಎಲ್ಲ ವಲಯಗಳಲ್ಲೂ ಸಹ ಮಹಿಳೆ ನಿರ್ಲಕ್ಷಿಸಲ್ಪಡುತ್ತಾಳೆ ಅಥವಾ ಅಲಂಕಾರಿಕವಾಗಿ ನಿಯೋಜಿಸಲ್ಪಡುತ್ತಾಳೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ವರ್ತಮಾನದ ಡಿಜಿಟಲ್‌ ಯುಗದಲ್ಲೂ, ಧಾರ್ಮಿಕ-ಸಾಂಸ್ಕೃತಿಕ ಚಿಂತನೆಗಳು ಲಿಂಗ ಸೂಕ್ಷ್ಮತೆ-ಸಂವೇದನೆಯನ್ನು ರೂಢಿಸಿಕೊಳ್ಳದಿರುವುದರಿಂದ, ಆಚರಣಾತ್ಮಕ ನೆಲೆಯಲ್ಲಿ ಮಹಿಳೆಯ ಭಾಗವಹಿಸುವಿಕೆಯೇ , ಪುರುಷ ಸಮಾಜದ ಒದಗಿಸಬೇಕಾದ ಒಂದು ಅವಕಾಶವಾಗಿ ಪರಿಣಮಿಸುತ್ತದೆ. 2025ರ ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಉದ್ಭವಿಸಿರುವ ಸಂಘರ್ಷ ಮತ್ತು ವಿವಾದವನ್ನು ಈ ದೃಷ್ಟಿಯಿಂದಲೂ ನೋಡಬಹುದಾಗಿದೆ.

 ದಸರಾ ವಿವಾದದ ಎರಡು ಮಜಲುಗಳು

 ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಹಬ್ಬ, 2025ರ ದಸರಾ ಉತ್ಸವವನ್ನು ಉದ್ಘಾಟಿಸಲು , ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ನಾಯಕರು ಬಲವಾಗಿ ವಿರೋಧಿಸುತ್ತಿರುವುದು ಮೇಲ್ನೋಟಕ್ಕೆ ಆಕೆಯ ಮುಸ್ಲಿಂ ಅಸ್ಮಿತೆಯ ಕಾರಣಕ್ಕಾಗಿ ಎನಿಸಿದರೂ, ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ʼ ಮಹಿಳೆ ʼ ಪ್ರಧಾನವಾಗಿ ಕಾಣುತ್ತಾಳೆ.                “ ದನ ತಿನ್ನುವ ಹೆಣ್ಣು ದಸರಾ ಉದ್ಭಾಟಿಸುವುದು ಬೇಡ ”,  “ ಮುಸ್ಲಿಂ ಮಹಿಳೆ ಚಾಮುಂಡಿ ಬೆಟ್ಟ ಹತ್ತಕೂಡದು ”, “ ಬಾನು ಮುಷ್ತಾಕ್‌ ಕುಂಕುಮ ಬಳೆ ಧರಿಸಿ ಸೀರೆಯುಟ್ಟು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಸಾಧ್ಯವೇ ” ಈ ಹೇಳಿಕೆಗಳಲ್ಲಿ ಹೆಣ್ಣು ಎಂಬ ಪದವನ್ನು ವಿಶಾಲಾರ್ಥದಲ್ಲಿ ಕಾಣಬೇಕಿದೆ. ಇಲ್ಲಿ ಬಾನು ಮುಷ್ತಾಕ್‌ ಎರಡು ರೀತಿಯ ದಾಳಿ ಎದುರಿಸುತ್ತಾರೆ. ಧಾರ್ಮಿಕ ಯಜಮಾನಿಕೆಯು ಧರ್ಮಕೇಂದ್ರಿತ ಅಸ್ಮಿತೆಯನ್ನು ಮುನ್ನಲೆಗೆ ತಂದರೆ, ಪುರುಷಾಧಿಪತ್ಯದ ವಾರಸುದಾರಿಕೆಯು ಆಕೆಯ ಲಿಂಗತ್ವ ಅಸ್ಮಿತೆಯನ್ನು ಮುಖ್ಯವಾಗಿ ಪರಿಗಣಿಸುತ್ತದೆ. ಅನ್ಯ ಧರ್ಮೀಯರೇ ಆದರೂ ಮುಸ್ಲಿಂ ಪುರುಷರ ಮೇಲೆ ಹೇರದ ಷರತ್ತುಗಳನ್ನು, ನಿಬಂಧನೆಗಳನ್ನು, ಮುಸ್ಲಿಂ ಮಹಿಳೆಯ ಮೇಲೆ ಹೇರುವುದು ಈ ಅಂಶವನ್ನು ಸಾಬೀತುಪಡಿಸುತ್ತದೆ.

 ಸಾಂಪ್ರದಾಯಿಕ ಸಮಾಜದಲ್ಲಿ ಹೆಣ್ಣಿನ ಘನತೆ, ಗೌರವ ಮತ್ತು ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧರಿಸಲು, ಧಾರ್ಮಿಕ ಸಂಹಿತೆಗಳ ಮೂಲಕ ಹೇರಲ್ಪಡುವ ಅಲಂಕಾರಿಕ ಸಾಧನಗಳನ್ನೇ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಹಿಂದೂ ಮಹಿಳೆಯರಲ್ಲೂ ಕುಂಕುಮ-ಬಳೆ ಧರಿಸಿದ್ದರೂ, ಸಹ ಪೂಜಾಸ್ಥಳಗಳಿಗೆ, ಧಾರ್ಮಿಕ ಆಚರಣೆಗಳಿಗೆ ಮತ್ತು ಆರಾಧನೆಗಳಿಗೆ ಅವರ ಪ್ರವೇಶವನ್ನು ನಿರ್ಬಂದಿಸುವ ನಿದರ್ಶನಗಳು ಹೇರಳವಾಗಿವೆ       ಅಲ್ಲವೇ ? ಮುಟ್ಟಾದ ಹೆಣ್ಣುಮಕ್ಕಳು, ಪತಿಯನ್ನು ಕಳೆದುಕೊಂಡಿರುವ ಮಹಿಳೆಯರು, ಕೆಲವೊಮ್ಮೆ ಮಕ್ಕಳಾಗದಿರುವವರು ಇವರನ್ನೂ ಸಹ ಆಚರಣೆಗಳಿಂದ ದೂರ ಇರಿಸುವ ಪರಂಪರೆ ಸಂಪ್ರದಾಯವಾದಿ ಕುಟುಂಬಗಳಲ್ಲಿರುವುದನ್ನು ಗಮನಿಸಬೇಕಿದೆ. ಈ ಪ್ರಾಚೀನ ನಂಬಿಕೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಮತ್ತು ಇವುಗಳನ್ನು ರಕ್ಷಿಸಲು ಸಂಕಲ್ಪ ಮಾಡಿರುವ ಪುರುಷಾಧಿಪತ್ಯದ ನೆಲೆಗಳೇ, ಸಮಾಜದ ಎಲ್ಲವರ್ಗಗಳನ್ನೂ ನಿರ್ದೇಶಿಸುವುದರಿಂದ, ಭಾರತೀಯ ಸಮಾಜ ಡಿಜಿಟಲ್‌ ಯುಗದಲ್ಲೂ ಪ್ರಾಚೀನ ನಡವಳಿಕೆಗಳ ಸಂಕೋಲೆಗಳಲ್ಲಿ ಬಂಧಿತವಾಗಿದೆ.

ಈ ವರ್ಗದ ಮಹಿಳೆಯರಿಗೆ ʼಹಿಂದೂʼ ಎಂಬ ಕಾರಣಕ್ಕಾಗಲೀ ಅಥವಾ ʼ ಮೇಲ್ಜಾತಿ ʼಯ ನೆಪದಲ್ಲಾಗಲೀ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎನ್ನುವುದೂ ಗಮನಿಸಬೇಕಾದ ಅಂಶ. ವಸುದೈವ ಕುಟುಂಬಕಂ ಎಂಬ ಉದಾತ್ತ ಆದರ್ಶವನ್ನು ಇಂದಿಗೂ ನಮ್ಮದೆಂದು ಹೇಳಿಕೊಳ್ಳುವ ಸಮಾಜದಲ್ಲೇ, ಒಂದು ಕುಟುಂಬದ ನಾಲ್ಕು ಗೋಡೆಗಳ ನಡುವೆಯೇ, ಮಹಿಳೆ ಈ ತಾರತಮ್ಯಗಳನ್ನು ಎದುರಿಸುತ್ತಲೇ ಬಂದಿದ್ದಾಳೆ. ಈ ನಿಟ್ಟಿನಲ್ಲಿ ಅನೇಕ ಸಮಾಜ ಸುಧಾರಕರು, ದಾರ್ಶನಿಕರು ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಅಪಾರ ಶ್ರಮ ಪಟ್ಟಿದ್ದಾರೆ. ಇದು ಫಲಕಾರಿಯಾಗಿರುವುದೂ ಹೌದು. ಆದರೆ ಈ ಸುಧಾರಣೆಯ ಹೆಜ್ಜೆಗಳು ಭವಿಷ್ಯದ ಹಾದಿಯನ್ನು ಕ್ರಮಿಸುತ್ತಾ ಹೋದಂತೆ, ಇನ್ನೂ ಹೆಚ್ಚಿನ ಸುಧಾರಣೆಗಳಿಗೆ ತೆರೆದುಕೊಳ್ಳುವುದು ನಾಗರಿಕತೆಯ ಲಕ್ಷಣವಾಗುತ್ತದೆ. ದುರದೃಷ್ಟವಶಾತ್‌ ಭಾರತೀಯ ಸಮಾಜದಲ್ಲಿ ಇದು ಸಾಧ್ಯವಾಗಿಲ್ಲ. ಇವುಗಳನ್ನು ಪ್ರಶ್ನಿಸುವುದೇ ಅಪರಾಧ ಎನ್ನುವ ಒಂದು ಮನೋಭಾವವೂ ಸಹ ಆಳವಾಗಿ ಬೇರೂರಿದೆ. ಈ ವಿದ್ಯಮಾನ ಕೇವಲ ಮೇಲ್ಜಾತಿಗಳಿಗೆ ಸೀಮಿತವಾಗಿಲ್ಲ. ತಳಸ್ತರದ ಜಾತಿಗಳಲ್ಲೂ ಸಹ ಚಾಲ್ತಿಯಲ್ಲಿದೆ. ಇಸ್ಲಾಂ ಅನುಯಾಯಿಗಳಲ್ಲಿ ಇದೇ ರೀತಿಯ ʼ ಹೊರಗಿಡುವಿಕೆಯʼ (Exclusionary) ಧೋರಣೆ ಭಿನ್ನ ರೂಪಗಳಲ್ಲಿ ಕಂಡುಬರುತ್ತದೆ.

 ಸಾಂಸ್ಕೃತಿಕ ಆಧಿಪತ್ಯದ ಸಾರ್ವತ್ರಿಕ ರೂಪ

ವಿಡಂಬನೆ ಎಂದರೆ ಪುರುಷ ಸಮಾಜ ಇಂತಹ ಯಾವುದೇ ನಿಬಂಧನೆಗಳಿಗೆ ಒಳಪಡುವುದಿಲ್ಲ. ಕರ್ಮಠ ಸಂಪ್ರದಾಯವಾದಿಗಳು ವಿಧಿಸುವ ವಸ್ತ್ರ ಸಂಹಿತೆಯನ್ನು ಹೊರತುಪಡಿಸಿದರೆ, ಪುರುಷ ಸಮಾಜ ಅನಿರ್ಬಂಧಿತ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಸ್ವಾಭಾವಿಕ ಹಕ್ಕಿನ ರೀತಿಯಲ್ಲಿ ಅನುಭವಿಸುತ್ತದೆ. ಈ ವರ್ತನೆ ಮತ್ತು ಪ್ರಾಚೀನ ಚಿಂತನಾ ವಿಧಾನ ಇಸ್ಲಾಂ ಅನುಯಾಯಿಗಳಲ್ಲೂ ಸಮಾನವಾಗಿ ಕಾಣುತ್ತದೆ. ಸಾಂಸ್ಕೃತಿಕ ಜಗತ್ತನ್ನು ಧಾರ್ಮಿಕ ಸಂಸ್ಥೆಗಳು ಮತ್ತು ಸಂಪ್ರದಾಯವಾದಿಗಳು ಆಕ್ರಮಿಸಿಕೊಂಡಾಗ ಎಂತಹ ಅನಾಹುತವಾಗುತ್ತದೆ ಎನ್ನುವುದಕ್ಕೆ ಇತ್ತೀಚೆಗೆ ಕೊಲ್ಕತ್ತದಲ್ಲಿ ನಡೆದಿರುವ ಒಂದು ಪ್ರಸಂಗವೇ ಸಾಕ್ಷಿ :

 ಪಶ್ಚಿಮ ಬಂಗಾಲದ ಉರ್ದು ಅಕಾಡೆಮಿ ಆಗಸ್ಟ್‌ 31 ರಿಂದ ಸೆಪ್ಟಂಬರ್‌ 3ರವರೆಗೆ ಕೊಲ್ಕತ್ತಾದಲ್ಲಿ “ ಹಿಂದಿ ಸಿನಿಮಾದಲ್ಲಿ ಉರ್ದು ” ಎಂಬ ನಾಲ್ಕು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿದೆ. ಹಿಂದಿ ಸಿನಿಮಾ ರಂಗದಲ್ಲಿ ಉರ್ದು ಭಾಷೆಯ ಕೊಡುಗೆಯನ್ನು ಅರಿತವರಿಗೆ ಇದರ ಮಹತ್ವವೂ ಅರ್ಥವಾಗುತ್ತದೆ. ಒಂದು ಶ್ರೀಮಂತ ಭಾಷೆಯಾಗಿ ಉರ್ದು ಹಲವಾರು ಹಿಂದಿ ಸಿನಿಮಾಗಳನ್ನು, ಹಾಡುಗಳನ್ನು ಸಮೃದ್ಧಗೊಳಿಸಿರುವುದು ಚಾರಿತ್ರಿಕ ಸತ್ಯ. ಈ ಕಾರ್ಯಕ್ರಮಕ್ಕೆ  ಖ್ಯಾತ ಕವಿ ಮತ್ತು ಸಿನಿಮಾ ಗೀತರಚನೆಕಾರ ಜಾವೆದ್‌ ಅಖ್ತರ್‌ ಅವರನ್ನು ಆಹ್ವಾನಿಸಲಾಗಿದೆ. ಆದರೆ ಜಾವೆದ್‌ ಅವರ ಆಯ್ಕೆಯನ್ನು ವಿರೋಧಿಸಿದ ಕೆಲವು ಮೂಲಭೂತವಾದಿ ಸಂಘಟನೆಗಳು, ಕಾರ್ಯಕ್ರಮವನ್ನೇ ಮುಂದೂಡುವಂತೆ ಒತ್ತಡ ಹೇರಿದ್ದು, ಉರ್ದು ಅಕಾಡೆಮಿ ಈ ಒತ್ತಡಕ್ಕೆ ಮಣಿದು ರದ್ದುಪಡಿಸಿದೆ.

 ಇಲ್ಲಿ ಜಾವೆದ್‌ ಅಖ್ತರ್‌ ಅವರ ಉಪಸ್ಥಿತಿಗೆ ವಿರೋಧ ವ್ಯಕ್ತಪಡಿಸಿರುವುದು ಜಮಿಯತ್‌ ಉಲೇಮಾ-ಇ-ಹಿಂದ್‌ ಮತ್ತು ವಹಾಯಿನ್‌ ಫೌಂಡೇಷನ್‌ ಎಂಬ ಎರಡು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು. ಈ ಸಂಘಟನೆಗಳ ಆಗ್ರಹಕ್ಕೆ ಕಾರಣ ಜಾವೆದ್‌ ಅಖ್ತರ್‌ ನಾಸ್ತಿಕರು ಎನ್ನುವುದು ಒಂದಾದರೆ ಹಲವು ಸಂದರ್ಭಗಳಲ್ಲಿ ಇಸ್ಲಾಂ ಧರ್ಮದಲ್ಲಿ ಆಚರಣೆಯಲ್ಲಿರುವ ಪ್ರಾಚೀನ ನಂಬಿಕೆಗಳನ್ನು, ಅಂಧ ವಿಶ್ವಾಸವನ್ನು ಮತ್ತು ಧಾರ್ಮಿಕ ನಡವಳಿಕೆಗಳನ್ನು ಖಂಡಿಸಿರುವುದು ಮತ್ತೊಂದು ಕಾರಣ. ಸ್ಥಳೀಯ ಹಿಂದೂ ಸಂಘಟನೆಗಳು ಕಾರ್ಯಕ್ರಮದ ರದ್ದತಿಯನ್ನು ಖಂಡಿಸಿರುವುದು ವಿಡಂಬನೆಯಾಗಿ ಕಾಣುವುದಿಲ್ಲವೇ ? ಇಲ್ಲಿ ಗಮನಿಸಬೇಕಿರುವುದು ಈ ಅಸ್ಮಿತೆಗಳನ್ನಲ್ಲ ಬದಲಾಗಿ, ಸಾಂಸ್ಥಿಕ ಅಥವಾ ಸಾಂಸ್ಥೀಕರಣಕ್ಕೊಳಗಾದ ಯಾವುದೇ ಮತ-ಧರ್ಮಗಳ ನಿಯಂತ್ರಣವನ್ನು, ಅಲ್ಲಿನ ಸಂಪ್ರದಾಯವಾದಿ ಶಕ್ತಿಗಳು, ಕರ್ಮಠ ಮನಸ್ಥಿತಿಯ ಸಂಘಟನೆಗಳು ವಹಿಸಿಕೊಂಡಾಗ ಆಗಬಹುದಾದ ಅನಾಹುತ ಮತ್ತು ಕಾಣಬಹುದಾದ ಬೌದ್ಧಿಕ ಅಧಃಪತನ ( Intellectual Downfall) ನಮ್ಮ ಗಮನ ಸೆಳೆಯಬೇಕಿದೆ.

 ಜಾವೆದ್‌ ಅಖ್ತರ್‌ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ, ಅವರು ಪಶ್ಚಿಮ ಬಂಗಾಲವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂಬ ಈ ಮೂಲಭೂತವಾದಿಗಳ ಬೆದರಿಕೆಗೆ ತೃಣಮೂಲ ಕಾಂಗ್ರೆಸ್‌ ಸರ್ಕಾರವೂ ಮಣಿದಿರುವುದು, ಸಾಂಪ್ರದಾಯಿಕ ಸಮಾಜದ ಹಿಡಿತ, ಆಧಿಪತ್ಯ ಮತ್ತು ಪ್ರಾಬಲ್ಯವನ್ನು ತೋರಿಸುತ್ತದೆ. ಸಂಪ್ರದಾಯವಾದಿಗಳಿಗೆ, ಮೂಲಭೂತವಾದಿಗಳಿಗೆ ಮತ್ತು ಅಂಧ ಕರ್ಮಠ ವಾದಿಗಳಿಗೆ ಯಾವ ಧರ್ಮವಾದರೂ ಅಂತರವೇನೂ ಇರುವುದಿಲ್ಲ. ತಸ್ಲಿಮಾ ನಸ್ರೀನ್‌ , ಸಲ್ಮಾನ್‌ ರಷ್ದಿ ಇದನ್ನು ಅನುಭವಿಸಿದ್ದಾರೆ. ಆದರೆ ಮಹಿಳೆಯ ವಿಚಾರದಲ್ಲಿ ಸಮಾನ ಎಳೆಯೊಂದು ಎಲ್ಲರನ್ನೂ ಬಂಧಿಸುತ್ತದೆ. ಅದು ಪಿತೃಪ್ರಧಾನ ಮೌಲ್ಯ ಮತ್ತು ಪುರುಷಾಧಿಪತ್ಯ ವ್ಯವಸ್ಥೆಯು ಸೃಷ್ಟಿಸುವ ಸಂಹಿತೆಗಳು, ಆಚರಣೆಗಳು ಮತ್ತು ವಿಧಿವಿಧಾನಗಳು. ಮಹಿಳೆಯರು ಮಾತ್ರ ಒಂದೆಡೆ ಲಿಂಗ ತಾರತಮ್ಯ ಮತ್ತೊಂದೆಡೆ ಜಾತಿ-ಮತಗಳ ದೌರ್ಜನ್ಯ ಎರಡು ಅಲಗಿನ ಕತ್ತಿಯ ದಾಳಿ ಎದುರಿಸಬೇಕಾಗುತ್ತದೆ.

 ದಸರಾ ಉದ್ಘಾಟನೆಯ ವಿವಾದ ಮತ್ತು ಬಾನು ಮುಷ್ತಾಕ್‌ ಅವರ ಆಯ್ಕೆಯ ವಿರುದ್ಧ  ಕೇಳಿಬರುತ್ತಿರುವ ದನಿಗಳನ್ನು ಈ ಎರಡೂ ಆಯಾಮಗಳಲ್ಲಿ ವಿಶ್ಲೇಷಣೆಗೊಳಪಡಿಸಬೇಕಿದೆ. ಧರ್ಮ ಮತ್ತು ಸಂಸ್ಕೃತಿ ಎರಡೂ ಸಂಸ್ಥೆಗಳು,  ಜನಸಾಮಾನ್ಯರ ಕೈಗೆಟುಕದ ಹಾಗೆ, ಪಿತೃಪ್ರಧಾನ ವ್ಯವಸ್ಥೆಯ ಸಾಂಸ್ಥಿಕ ಚೌಕಟ್ಟುಗಳ ನಿಯಂತ್ರಣಕ್ಕೆ ಒಳಪಟ್ಟಾಗ ಈ ತಾರತಮ್ಯ, ದೌರ್ಜನ್ಯ ಮತ್ತು ಅಸಮಾನತೆಗಳು ವ್ಯವಸ್ಥೆಯ ಒಂದು ಭಾಗವಾಗಿ ಚಾಲ್ತಿಯಲ್ಲಿರುತ್ತದೆ. ಭಾರತ ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿದೆ, ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ಸ್ಥಾಪಿಸುವ ಮಟ್ಟಿಗೆ ವೈಜ್ಞಾನಿಕವಾಗಿ ಮುನ್ನಡೆದಿದೆ. ಈ ಹೆಮ್ಮೆಯೊಂದಿಗೇ, ಸಮಾಜದ ಮತ್ತೊಂದು ಬದಿಯಲ್ಲಿನ ಅಪಸವ್ಯಗಳನ್ನೂ ಗಮನಿಸಿದಾಗ, ನಾಗರಿಕತೆ ಎನ್ನುವುದೇ ಮರುನಿರ್ವಚನೆಗೊಳಪಡಬೇಕಾದ ವಿದ್ಯಮಾನವಾಗಿ ಕಾಣುತ್ತದೆ.

 ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಹೋರಾಟನಿರತವಾಗಿರುವ ಪ್ರಗತಿಪರ-ಎಡಪಂಥೀಯ-ವೈಚಾರಿಕ ಸಂಘಟನೆಗಳು ಈ ಜವಾಬ್ದಾರಿಯನ್ನು ಹೊರುವುದು ವರ್ತಮಾನದ ತುರ್ತು.

-೦-೦-೦–

Tags: about bhanu mushtaqbhanu mushtaqbhanu mushtaq booker prizebhanu mushtaq dasara 2025bhanu mushtaq dasara rowbhanu mushtaq dasara row newsbhanu mushtaq in dasarabhanu mushtaq informationbhanu mushtaq interviewbhanu mushtaq kannadabhanu mushtaq lifebhanu mushtaq newsbhanu mushtaq speechbhanu mushtaq speech in kannadabhanu mushtaq viral videobhanu mustakbhanu mustak controversyBJPCongress Partypratap simha questions bhanu mushtaqramalingareddy on bhanu mustakಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Santhosh Lad: ಕೌಶಲ್ಯ ತರಬೇತಿ ಸಂಸ್ಥೆ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ..!!

Next Post

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

Related Posts

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
0

ವೃತ್ತಿ ಜೀವನದಲ್ಲಿ ವಿರಾಮದ ನಂತರ, ವಿಶೇಷವಾಗಿ ತಾಂತ್ರಿಕ ಕರ್ತವ್ಯಗಳಲ್ಲಿ ಮಹಿಳೆಯರು ಮತ್ತೆ ಕಾರ್ಯಪಡೆಗೆ ಸೇರಲು ಸಹಾಯ ಮಾಡುವಲ್ಲಿ ಮತ್ತು ಮಹಿಳೆಯರು ಮರುಕೌಶಲ್ಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಿರುವ...

Read moreDetails
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

September 4, 2025

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

September 4, 2025

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

September 4, 2025
Next Post
ಗಡಿಯಾರ ಬದಲಾಗಬಹುದು ಕಾಲ ಅಲ್ಲ..

ಗಡಿಯಾರ ಬದಲಾಗಬಹುದು ಕಾಲ ಅಲ್ಲ..

Recent News

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ
Top Story

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

by ನಾ ದಿವಾಕರ
September 4, 2025
Top Story

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

by ಪ್ರತಿಧ್ವನಿ
September 4, 2025
Top Story

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

by ಪ್ರತಿಧ್ವನಿ
September 4, 2025
Top Story

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

by ಪ್ರತಿಧ್ವನಿ
September 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada