ಮಹತ್ವದ ಕಾರ್ಯದ ಮೂಲಕ ಮಾದರಿಯಾಗಿರುವ ನಟ .

ಕೋಲಾರ ಮೂಲದ ಎ.ವಿ.ರವಿ, ಜಿಮ್ ರವಿ ಎಂದೇ ಖ್ಯಾತಿ ಪಡೆದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟುವಾಗಿ ದೇಶ ಹಾಗೂ ವಿದೇಶಗಳಲ್ಲೂ ಪ್ರಸಿದ್ದರಾಗಿರುವ ಜಿಮ್ ರವಿ, ಮಿಸ್ಟರ್ ಇಂಡಿಯಾ ಹಾಗೂ ಕರ್ನಾಟಕದ ಏಕಲವ್ಯ ಪ್ರಶಸ್ತಿ ವಿಜೇತರು ಕೂಡ. ಇತ್ತೀಚೆಗೆ “ಪುರುಷೋತ್ತಮ” ಎಂಬ ಚಿತ್ರದಲ್ಲಿ ನಾಯಕನಾಗೂ ರವಿ ನಟಿಸಿದ್ದರು. ಇದೆಲ್ಲಾ ಒಂದು ಕಡೆಯಾದರೆ, ರವಿ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಹೆಸರುವಾಸಿ. ಆದರೆ ಒಂದು ದಿನ ಆದರೆ ತಾವು ಮಾಡುವ ಸಾಮಾಜಿಕ ಕೆಲಸದ ಬಗ್ಗೆ ಒಂದು ದಿನವೂ ಪ್ರಚಾರ ಬಯಸಿದವರಲ್ಲಾ.
ಆದರೆ ಎ.ವಿ ರವಿ ಅವರು ಈಗ ಅನೇಕ ಜನರಿಗೆ ಆದರ್ಶವಾಗುವಂತಹ ಮಹತ್ತರ ಕಾರ್ಯ ಮಾಡಿದ್ದಾರೆ. ರವಿ ಅವರ ತಂದೆಗೆ ಕಾಶಿಯಾತ್ರೆ ಮಾಡುವ ಆಸೆ ಇತ್ತಂತೆ. ಆದರೆ ಕಾರಾಣಾಂತರದಿಂದ ಅದು ಸಾಧ್ಯವಾಗಿರಲಿಲ್ಲ. ತಂದೆಗೆ ಕಾಶಿಯಾತ್ರೆ ಮಾಡಿಸಲಿಲ್ಲ. ಎಂಬ ಕೊರಗು ರವಿ ಅವರನ್ನು ಸದಾ ಕಾಡುತ್ತಿತ್ತಂತೆ. ಹಾಗಾಗಿ ರವಿ ಅವರು ಹದಿನಾಲ್ಕು ವರ್ಷಗಳ ಹಿಂದೆಯೇ ಒಂದು ಸಂಕಲ್ಪ ಮಾಡಿದರಂತೆ. ನಮ್ಮ ಅಪ್ಪನ ಹೆಸರಿನಲ್ಲಿ ಕೈಲಾದಷ್ಟು ಜನ ಅಶಕ್ತರಿಗೆ ಕಾಶಿಯಾತ್ರೆ ಮಾಡಿಸುತ್ತೇನೆ ಅಂತ. ಅಂದುಕೊಂಡ ಹಾಗೆ ಎ.ವಿ.ರವಿ ಮಾಡಿದ್ದಾರೆ. ಐದಲ್ಲ, ಹತ್ತಲ್ಲ.. ಬರೋಬರಿ 101 ಜನರಿಗೆ ವಿಮಾನದ ಮೂಲಕ ಕಾಶಿಯಾತ್ರೆ ಮಾಡಿಸಿಕೊಂಡು ಬಂದಿದ್ದಾರೆ.

ಕರ್ನಾಟಕ ಸೇರಿದಂತೆ ಆಂದ್ರ ಹಾಗೂ ತಮಿಳುನಾಡಿನಿಂದ ಸುಮಾರು 101 ಜನ ಈವರೆಗೂ ಕಾಶಿಯಾತ್ರೆ ಮಾಡದ ಅಶಕ್ತರನ್ನು ಆಯ್ಕೆ ಮಾಡಿ ಯಾವುದೇ ತೊಂದರೆ ಬಾರದ ಹಾಗೆ ಕಾಶಿಯಾತ್ರೆಯನ್ನು ಅದ್ದೂರಿಯಾಗಿ ಮಾಡಿಸಿದ್ದಾರೆ. ಅವರವರ ಊರುಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲು ವಾಹನದ ವ್ಯವಸ್ಥೆ ಮಾಡಿ, ವಿಮಾನ ನಿಲ್ದಾಣದಲ್ಲಿ ಉಪಹಾರ ಮುಗಿಸಿ ನೇರವಾಗಿ ಅಯೋಧ್ಯೆಗೆ ತೆರಳಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಎಲ್ಲರಿಗೂ ಲಘು ಉಪಾಹಾರ ಹಾಗೂ ನೀರಿನ ಬಾಟಲ್ ನೀಡಲಾಯಿತು ಹಾಗೂ ದೇವರ ದರ್ಶನಕ್ಕಾಗಿ ಮಹಿಳೆಯರಿಗೆ ಎರಡು ಹೊಸ ಸೀರೆ, ಪುರುಷರಿಗೆ ಎರಡು ಹೊಸ ಪಂಚೆ ಉಡುಗೊರೆಯಾಗಿ ಕೊಡಲಾಯಿತು. ಅಯೋಧ್ಯೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡದವರಾದ ಚೆನ್ನಪ್ಪ ಅವರು ಇಷ್ಟು ಜನರಿಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಿಸಿದ್ದರು. ಪೊಲೀಸ್ ಸಿಬ್ಬಂದಿಗಳು ಸಹ ಇವರೆಲ್ಲರು ಸುಲಭವಾಗಿ ದೇವರ ದರ್ಶನ ಮಾಡಲು ಸಹಕಾರ ನೀಡಿದ್ದಾರೆ. ಅಲ್ಲಿಂದ ವಿಶೇಷ ಬಸ್ ಮೂಲಕ ಕಾಶಿಗೆ ಬಂದ 101 ಜನರ ತಂಡಕ್ಕೆ ಪ್ರಸಿದ್ದ ಜಂಗಮವಾಡಿ ಮಠದಲ್ಲಿ 45 AC room ಗಳನ್ನು ವಾಸ್ತವ್ಯಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲೇ ಉಪಹಾರ ಹಾಗೂ ಭೋಜನದ ವ್ಯವಸ್ಥೆ ಕೂಡ ಆಯೋಜಿಸಲಾಗಿತ್ತು. ಕಾಶಿ ವಿಶ್ವನಾಥನ ಮಂದಿರದ ಹತ್ತಿರವಿರುವ ಕರ್ನಾಟಕದ ಈ ಮಠ, ಶಿಸ್ತು, ಸಂಯಮಕ್ಕೆ ಹೆಸರುವಾಸಿ. ಅಲ್ಲಿನ ಆತಿಥ್ಯ ಬಹು ಚೆಂದ. ಮಠದಲ್ಲಿ ಉಳಿದುಕೊಂಡ ಯಾತ್ರಾರ್ಥಿಗಳ ತಂಡವನ್ನು ಕಾಶಿಯಲ್ಲೂ ಸಹ ಚೆನ್ನಪ್ಪ ಅವರ ಸಹಕಾರದಿಂದ ವಿಶೇಷ ದರ್ಶನ ಮಾಡಿಸಲಾಯಿತು. ಸಂಜೆ ನಡೆಯುವ ಗಂಗಾರತಿಯಲ್ಲೂ ಭಾಗವಹಿಸಲಾಯಿತು. ಕಾಶಿಯಲ್ಲಿರುವ ಅನ್ನಪೂರ್ಣ ಮಂದಿರ ಸೇರಿದಂತೆ ವಿವಿಧ ಮಂದಿಗಳಿಗೆ ಭೇಟಿ ನೀಡಲಾಯಿತು. ಗಂಗೆಯ ತಟದಲ್ಲೇ ಯಾತ್ರಾರ್ಥಿಗಳಿಂದ ತೀರ್ಥವಿಧಿ(ಪಿಂಡಪ್ರದಾನ) ಸಹ ಮಾಡಿಸಲಾಯಿತು. ಮಾರನೇ ದಿವಸ ವಿಶ್ರಾಂತಿಯ ದಿವಸವಾಗಿದ್ದು, ಅಂದು ರವಿ ಮತ್ತು ತಂಡದವರು ಯಾತ್ರಾರ್ಥಿಗಳನ್ನು ಶುಶ್ರೂಷೆ ಮಾಡಿದರು. ಆನಂತರ ಶಾಪಿಂಗ್ ಗೆ ಕರೆದುಕೊಂಡು ಹೋಗಲಾಯಿತು. ಶಾಪಿಂಗ್ ಖರ್ಚಿಗೂ ಸ್ವಲ್ಪ ಹಣವನ್ನು ರವಿ ಅವರೆ ನೀಡಿದ್ದರು. ಈ ಸುಸ್ಸಜಿತ ವ್ಯವಸ್ಥೆಯನ್ನು ಕಂಡು ಭಾವುಕರಾದ ಯಾತ್ರಾರ್ಥಿಗಳು ಆನಂದಭಾಷ್ಪ ಸುರಿಸಿದರು. ರವಿ ಹಾಗೂ ಕಟುಂಬದವರಿಗೆ ತುಂಬು ಹೃದಯದಿಂದ ಆಶೀರ್ವಾದ ಮಾಡಿದರು. ರವಿ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಯಾತ್ರಾರ್ಥಿಗಳು ಎಲ್ಲಾ ಕಡೆ ಓಡಾಡಲು ಎಸಿ ವಾಹನದ ವ್ಯವಸ್ಥೆಯನ್ನೇ ಮಾಡಲಾಗಿತ್ತು. ಪುನಃ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮೇಲೂ ಅವರವರ ಊರುಗಳಿಗೆ ತೆರಳಲು ಅನುಕೂಲವಿರುವ ವಾಹನ ವ್ಯವಸ್ಥೆ ಮಾಡಲಾಗಿತ್ತು. ದೇವರ ದಯೆಯಿಂದ ಇಷ್ಟು ದೊಡ್ಡ ತಂಡದ ಪ್ರಯಾಣದಲ್ಲಿ ಯಾರೊಬ್ಬರಿಗೂ ಆರೋಗ್ಯ ಸೇರಿದಂತೆ ಯಾವುದೇ ತೊಂದರೆ ಆಗಿಲ್ಲ.

ತಂದೆಯ ಆಸೆಯನ್ನು ಈಡೇರಿಸಿ, ಎಲ್ಲರ ಆಶೀರ್ವಾದದಿಂದ ಬಹಳ ಭಾವುಕರಾದ ಎ.ವಿ.ರವಿ ಅವರು ಯಾತ್ರೆ ಸುಸಜ್ಜಿತವಾಗಿ ಮುಗಿಯಲು ಸಹಕಾರ ನೀಡಿದ income tax ಕಮೀಷನರ್ ಜನಾರ್ದನ್, ಅಯೋಧ್ಯೆಯಲ್ಲಿ ಸಹಕಾರ ಸುಲಲಿತವಾಗಿ ದರ್ಶನದ ವ್ಯವಸ್ಥೆ ಮಾಡಿದ ಸೋಮಣ್ಣ (V Somanna) ಅವರಿಗೆ, ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ, ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕರಾದ ಮಸಾಲೆ ಜಯರಾಮ್ (Masala jayaram) ಅವರಿಗೆ, ನವರತನ್ ಪ್ಯಾಲೆಸ್ ಮದನ್ ಅವರಿಗೆ, ಚಸ್ಕಾಂ ಎಂ.ಡಿ ಶಿಲಾ ಅವರಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
101 ಜನರ ಅತೀ ದೊಡ್ಡ ತಂಡವನ್ನು ಕಾಶಿಯಾತ್ರೆ ಮಾಡಿಸಿರುವುದು ಇದೇ ಮೊದಲು. ಈವರೆಗೂ ಕರ್ನಾಟಕದಲ್ಲಾಗಲಿ ಅಥವಾ ಭಾರತದಲ್ಲಾಗಲಿ ಈ ರೀತಿ ಯಾರು ಈ ಪ್ರಯತ್ನ ಮಾಡಿಲ್ಲ ಎನ್ನಬಹುದು. ಜಿಮ್ ರವಿ ಅವರ ಈ ಕಾರ್ಯ ಎಲ್ಲರಿಗೂ ಆದರ್ಶ.