ಕೃಷಿ ಕಾರ್ಯಕ್ಕೆ ಎತ್ತುಗಳಿಲ್ಲದೆ ಜಮೀನಿನಲ್ಲಿ ದೈಹಿಕ ಶ್ರಮದಲ್ಲಿ ಉಳುಮೆ ಮಾಡುತ್ತಿದ್ದ ತಾಲೂಕಿನ ತುಮರಿಕೊಪ್ಪ ಗ್ರಾಮದ ರೈತನಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ (Santhosh Lad) ಅವರು ಜೋಡಿ ಎತ್ತು ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಸಚಿವರ ಈ ಕಾಳಜಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದ್ದು, ನೇಗಿಲ ಯೋಗಿಯ ಕಷ್ಟಕ್ಕೆ ಮಿಡಿದದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.

ತುಮರಿಕೊಪ್ಪದ 62 ವರ್ಷದ ಜಂಬುಲಿಂಗ ಬಸವಣ್ಣೆಪ್ಪ ಅಂಗಡಿ ಹಾಗೂ ಅವರ ಪತ್ನಿ ಸಂಗವ್ವ ಅಂಗಡಿ ಅವರು ಕಳೆದ ಐದಾರು ವರ್ಷಗಳಿಂದ ಎತ್ತುಗಳಿಲ್ಲದ ಕಾರಣ ದೈಹಿಕ ಶ್ರಮ ಬಳಸಿ ಎಡೆಕುಂಟೆ ಹೊಡೆಯುತ್ತಿದ್ದರು. ಇತ್ತೀಚೆಗೆ ಗೋವಿನ ಜೋಳದ ಹೊಲದಲ್ಲಿ ಕೈಗಳಿಂದ ಎಡೆಕುಂಟೆ ಹೊಡೆಯುತ್ತಿದ್ದುದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಈ ವಿಷಯ ಸಚಿವ ಸಂತೋಷ್ ಲಾಡ್ ಅವರಿಗೆ ತಿಳಿದಿದ್ದೇ ತಡ ಕಲಘಟಗಿಯ ಜಾನುವಾರು ಸಂತೆಯಲ್ಲಿ ಹಳ್ಳಿಕಾರ್ ತಳಿಯ ಜೋಡಿ ಎತ್ತು ಖರೀದಿಸಿ ಜಂಬುಲಿಂಗ ಅವರಿಗೆ ಕೊಡಿಸಿದರು. ಈ ಎತ್ತಿಗಳ ಬೆಲೆ ಬರೋಬ್ಬರಿ ರೂ. 1.50 ಲಕ್ಷ.

ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ರೈತ
ಸಚಿವ ಲಾಡ್ ಅವರು ಎತ್ತುಗಳನ್ನು ಕೊಡಿಸಿದ್ದಕ್ಕೆ ರೈತ ಜಂಬುಲಿಂಗ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಬಡವನ ಕಷ್ಟ ಅರಿತ ಸಚಿವರು ನಮ್ಮ ನೋವಿಗೆ ಸ್ಪಂದಿಸಿದ್ದಾರೆ. ನಾವು ಕಷ್ಟ ಪಡುತ್ತಿದ್ದರೂ ಯಾರೂ ನೆರವಾಗಿರಲಿಲ್ಲ. ಇದೀಗ ಎತ್ತುಗಳನ್ನು ಕೊಡಿಸಿ ಕೃಷಿ ಕಾರ್ಯಕ್ಕೆ ನೆರವಾಗಿದ್ದಾರೆ. ಸಚಿವರನ್ನು ನಾವು ಜೀವ ಇರುವವರಿಗೆ ಸ್ಮರಿಸುತ್ತೇವೆ ಎಂದು ಹೇಳಿದ್ದಾರೆ.