ಸಿದ್ದರಾಮಯ್ಯ (Siddaramaiah) ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ. ಅಪ್ಪಿತಪ್ಪಿಯೂ ಕರ್ನಾಟಕವನ್ನ ಡಿಕೆ ಶಿವಕುಮಾರ್ (DK Shivakumar) ಕೈಗೆ ಕೊಡಬೇಡಿ ಮಾರಿಬಿಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basavana gouda patilm yathnal) ಹೇಳಿದರು.

ಕಾಂಗ್ರೆಸ್ನಲ್ಲಿ ಎಲ್ಲಾ ಶಾಸಕರು ರೊಚ್ಚಿಗೆದ್ದಿದ್ದಾರೆ. ಸದ್ಯ ರಾಜ್ಯದ ಮಂತ್ರಿಗಳು ಲೂಟಿಗೆ ಇಳಿದಿದ್ದಾರೆ. ಸಿಎಂ ಡೀಲಿಂಗ್ನ್ನು ಅವರ ಮಗ ಮಾಡ್ತಿದ್ದಾನೆ, ಬೈರತಿ ಸುರೇಶ್ (Byrathi Suresh) ಡೀಲಿಂಗ್ ಮಾಡುತ್ತಾರೆ. ಇಬ್ಬರು ಅಣ್ಣ, ತಮ್ಮ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಅಷ್ಟರಲ್ಲಿ ನಾವು ಹಣ ಮಾಡಿಕೊಂಡು ಪಾರಾಗಬೇಕು ಎಂದು ಎಲ್ಲಾ ಮಂತ್ರಿಗಳಿಗೂ ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಗಳ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ (Dr G Parameshwar) ಬಾದಾಮಿಯಲ್ಲಿ, ನಾವು ಬಾದಾಮಿಯ ಸಂಪೂರ್ಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನಮ್ಮ ಹತ್ತಿರ ದುಡ್ಡಿಲ್ಲ, ನರೇಂದ್ರ ಮೋದಿ ಅವರು ಕೊಡಬೇಕು ಎಂದಿದ್ದಾರೆ. ಕಾಂಗ್ರೆಸ್ನವರು ಗ್ಯಾರಂಟಿ ಹೆಸರಲ್ಲಿ ಪುಕ್ಕಟೆ ಹಂಚುತ್ತಾ ಹೋಗುತ್ತಾರೆ. ಗ್ಯಾರಂಟಿ ಒಂದು ನೆಪ ಅಷ್ಟೇ, ಇವರು ಲೂಟಿ ಮಾಡುತ್ತಿದ್ದಾರೆ. ಬಡವರಿಗೆ ಅಷ್ಟು ಕೊಟ್ಟಿದ್ದೇವೆ, ಇಷ್ಟು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಗ್ಯಾರಂಟಿ ಬಿಟ್ಟು ಅಭಿವೃದ್ಧಿ ಮಾಡಬಹುದು. ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಬಡವರಿಗೆ ಕೊಡುವುದನ್ನು ಕೊಟ್ಟು, ಬಳಿಕ ಬೇರೆ ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.

ಇನ್ನೂ ಸಿದ್ದರಾಮಯ್ಯ ಅವರಿಗೆ ಗುರಿ ಇಲ್ಲ, ದಿನೇ ದಿನೇ ಕಾಂಗ್ರೆಸ್ನ ಶಾಸಕರು ಜಾಗೃತರಾಗುತ್ತಿದ್ದಾರೆ. ಎಲ್ಲವನ್ನು ಅಲ್ಪಸಂಖ್ಯಾತರಿಗೆ ಕೊಟ್ಟರೆ ಹೇಗೆ ಎನ್ನುತ್ತಿದ್ದಾರೆ. ಇದರಿಂದ ಸಿಎಂಗೆ ತಲೆನೋವಾಗಿದೆ. ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ. ಕರ್ನಾಟಕವನ್ನ ಡಿಕೆಶಿ ಕೈಗೆ ಕೊಡಬೇಡಿ. ನೀವು ಸ್ವಲ್ಪ ಲೂಟಿ ಮಾಡಿದ್ದೀರಾ, ಡಿಕೆಶಿ ಕೈಯಲ್ಲಿ ಕೊಟ್ರೆ ಇಡೀ ಕರ್ನಾಟಕವನ್ನೇ ಮಾರಿಕೊಂಡು ಹೋಗುತ್ತಾರೆ.