ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ಸಚಿವ ಸಂಪುಟ ಪುನಾರಚನೆಯ (Cabinet re shuffle) ಭರಾಟೆ ಜೋರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದಾರೆ. ಈ ಪೈಕಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಶಾಸಕ ಲಕ್ಷ್ಮಣ ಸವದಿ (Lakshmana savadi) ಕೂಡ ಒಬ್ಬರು. ಸವದಿ ಸದ್ಯ ಬಹಿರಂಗವಾಗಿಯೇ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆ ಮಾತನಾಡಿದ ಅವರು ಕರ್ನಾಟಕದಲ್ಲಿ 2028ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಾನ್ಯ ಹೆಚ್ .ಡಿ ಕುಮಾರಸ್ವಾಮಿ (HD Kumaraswamy) ಅವರು ಹಾಗೆಯೇ ಸಂಸದರಾಗಿ ಕೇಂದ್ರದಲ್ಲಿ ಇರಲಿ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಕುಟುಕಿದ್ದಾರೆ.

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಮಾಟಿಗರ್ ತಿರುಗೇಟು ನೀಡಿದ ಸವದಿ, 2028ಕ್ಕೆ ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂಬ ಹೇಳಿಕೆಗೆ, ಕುಮಾರಸ್ವಾಮಿಯವರು ಅದನ್ನೇ ಹೇಳಬೇಕು. ಪಾಪ ಅವರಿಗೆ ಬೇರೆ ಏನು ಹೇಳೋಕೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ 2028ಕ್ಕೆ ಮತ್ತೆ ನಾವೇ ಬರುತ್ತೀವಿ ಅಂತ ಕುಮಾರಸ್ವಾಮಿನೂ ಹೇಳ್ತಾರೆ.ಆದ್ರೆ ನಾವೇ ಅಧಿಕಾರಕ್ಕೆ ಬರುತ್ತೀವಿ ಅಂತ ನಾವು ಹೇಳ್ತೀವಿ. ಹೀಗಾಗಿ ಕುಮಾರಸ್ವಾಮಿ ಅವರು ನಿರಂತರವಾಗಿ ಕೇಂದ್ರದಲ್ಲಿ ಇರಲಿ. ಹೀಗಾಗಿ ರಾಜ್ಯಕ್ಕೆ ಅವರು ಬರೋದು ಬೇಡ. ನೀವು ಸಂಸದರಾಗಿಯೇ ಇರಿ ಎಂದು ಹೇಳಿದ್ದಾರೆ.