
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದು, ಕಾಂಗ್ರೆಸ್ನಿಂದ ಯೋಗೇಶ್ವರ್ ಅಖಾಡಕ್ಕೆ ಧುಮುಕಿದ್ದಾರೆ. ಸದ್ಯದ ಪರಿಸ್ಥಿತಿ ಅವಲೋಕಿಸಿದಾಗ ಇಬ್ಬರಿಗೂ ಗೆಲುವು ಅನ್ನೋದು ತೂಗುಯ್ಯಾಲೆಯಲ್ಲಿದೆ. ನಾಮಪತ್ರ ಸಲ್ಲಿಕೆ ದಿನ ಸಿಕ್ಕ ಜನಬೆಂಬಲ ಆಧರಿಸಿ ಹೇಳುವುದಾದರೆ ನಿಖಿಲ್ ಕುಮಾರಸ್ವಾಮಿಗೇ ಕೊಂಚ ಹೆಚ್ಚು ಜನಬೆಂಬಲ ಹೆಚ್ಚಿದೆ ಎನ್ನುವಂತೆ ಕಾಣ್ತಿದೆ. ಆದರೆ ಎಲ್ಲವೂ ಮತಗಳಾಗಿ ಪರಿವರ್ತನೆ ಆಗುತ್ತಾ..? ಅನ್ನೋದನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಇನ್ನು ಡಿ.ಕೆ ಶಿವಕುಮಾರ್ ಅಂಡ್ ಬ್ರದರ್ ಕ್ಷೇತ್ರವನ್ನು ಗೆಲ್ಲಲೇಬೇಕು ಅನ್ನೋ ಹಠಕ್ಕೆ ಬಿದ್ದಿದ್ದು, ಲೋಕಸಭಾ ಸೋಲಿನ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ಯೋಗೇಶ್ವರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗ್ತಿದೆ.
ಈಗಾಗಲೇ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ 2019ರಲ್ಲಿ ಸೋಲುಂಡಿದ್ದ ನಿಖಿಲ್ ಕುಮಾರಸ್ವಾಮಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸೋಲುಂಡಿದ್ದರು. ಇದೀಗ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಅದೂ ಅಲ್ಲದೆ ನಿಖಿಲ್ ಚುನಾವಣೆಗೆ ಬಯಸಿ ಸ್ಪರ್ಧೆ ಮಾಡಿದ್ದಲ್ಲ. ಬದಲಿಗೆ ಯೋಗೇಶ್ವರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆದ ಕಾರಣ ಸೃಷ್ಟಿಯಾದ ಅನಿವಾರ್ಯತೆ ಕಾರಣಕ್ಕೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ನಿಖಿಲ್ ಕುಮಾರಸ್ವಾಮಿ ಎರಡು ಬಾರಿ ಸೋತಿರುವುದು ಜನರ ಮನಸ್ಸಲ್ಲಿ ಅನುಕಂಪದ ಭಾವನೆ ಸೃಷ್ಟಿಯಾಗಿದೆ ಎನ್ನಲಾಗ್ತಿದೆ. ಅದರೂ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಎಂದು ಹೇಳುತ್ತಿರುವ ಮಹಿಳೆಯರೇ ನಿಖಿಲ್ ಬಗ್ಗೆ ‘ಅಯ್ಯೋ ಪಾಪ’ ಎಂದು ಮಾತನಾಡುತ್ತಿರುವುದು ಜೆಡಿಎಸ್ ಗೆಲುವಿಗೆ ಸಹಕಾರಿ ಆಗುವ ಮಾತುಗಳಿಗೆ. ಇದು ಕಾಂಗ್ರೆಸ್ ನಾಯಕರಿಗೂ ಟೆನ್ಷನ್ ತರಿಸಿದ್ದು, ಯೋಗೇಶ್ವರ್ ಕೂಡ ಎರಡು ಬಾರಿ ಸೋತಿದ್ದಾರೆ. ಯೋಗೇಶ್ವರ್ ಮನೆ ಮಗ, ಯೋಗೇಶ್ವರ್ ಗೆಲ್ಲಿಸಿ ಎಂದು ಕೌಂಟರ್ ಅಟ್ಯಾಕ್ ಮಾಡುವ ಕೆಲಸ ನಡೀತಿದೆ. ಆದರೆ ಜನರು ಒಮ್ಮೆ ಅಯ್ಯೋ ಪಾಪ ಅನ್ನೋ ಅಲೆಯಲ್ಲಿ ಮನಸ್ಸು ಮಾಡಿದರೆ ನಿಖಿಲ್ ಕುಮಾರಸ್ವಾಮಿ ಗೆಲುವು ಶತಸಿದ್ದ.

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಡಾ ಮಂಜುನಾಥ್ ಅವರನ್ನು ಕರೆತಂದಿದ್ದ ಬಿಜೆಪಿ ನಾಯಕರು, ಘಟಾನುಘಟಿ ನಾಯಕ ಡಿ.ಕೆ ಸುರೇಶ್ ವಿರುದ್ದ ಭಾವನಾತ್ಮಕ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಹೃದಯವಂತ ಅನ್ನೋ ಟ್ಯಾಗ್ಲೈನ್ನಲ್ಲಿ ಪ್ರಚಾರ ಮಾಡಲಾಗಿತ್ತು. ಡಿ.ಕೆ ಸುರೇಶ್ ಹಾಗು ಡಿ.ಕೆ ಶಿವಕುಮಾರ್ ಕಡೇ ಕ್ಷಣದಲ್ಲಿ ರಾಜಕೀಯದಲ್ಲಿ ಮತಗಳನ್ನು ಬದಲು ಮಾಡುತ್ತಾರೆ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಆದರೆ ಹೃದಯವಂತ ಅನ್ನೋ ಘೋಷ ವಾಕ್ಯ ಡಾ ಮಂಜುನಾಥ್ಗೆ ಭರ್ಜರಿ ಜಯ ತಂದುಕೊಟ್ಟಿತ್ತು. ಈ ಬಾರಿಯೂ ಅಯ್ಯೋ ಪಾಪ ಎನ್ನುವ ಮಾತುಗಳು ಜನರಲ್ಲಿ ಮನೆ ಮಾಡಿದರೆ ಯಾವುದೇ ತಂತ್ರಗಾರಿಕೆ ನಡೆಯುವುದಿಲ್ಲ. ನಿಖಿಲ್ ಗೆದ್ದು ಬಿಡ್ತಾರೆ ಎನ್ನಲಾಗ್ತಿದೆ.