ಹೊಸದಿಲ್ಲಿ(,New Delhi):ಹೈದರಾಬಾದ್ನಲ್ಲಿ ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಐಆರ್ಎಸ್ ಅಧಿಕಾರಿ ಮುಕ್ಕಾಟಿರ ಪುನಿತ್ ಕುಟ್ಟಯ್ಯ ಅವರು ರೂ. ೩,೦೦೦ ಕೋಟಿ( IRS officer Mukkathira Punit Kuttayya said Rs. 3,000 crore)ವಂಚನೆಯನ್ನು ಪತ್ತೆ ಹಚ್ಚಿದ ತಂಡದ ಭಾಗವಾಗಿದ್ದಕ್ಕಾಗಿ ಕೇಂದ್ರ ಸರ್ಕಾರದಿಂದ ಶ್ರೇಷ್ಠತೆಯ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ಆಗಸ್ಟ್ ೨೨ ರಂದು ನವದೆಹಲಿಯಲ್ಲಿ ನಡೆದ ೧೬೫ ನೇ ಆದಾಯ ತೆರಿಗೆ ದಿನಾಚರಣೆಯ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಹಣಕಾಸು ಸಚಿವಾಲಯದ ಪ್ರಕಾರ, ಕುಟ್ಟಯ್ಯ ಅವರ ನೇತೃತ್ವದ ಆದಾಯ ತೆರಿಗೆ ಅಧಿಕಾರಿಗಳ ತಂಡವು ಆಂಧ್ರ ಪ್ರದೇಶದಲ್ಲಿ ಅಂದಾಜು ರೂ. ೩,೦೦೦ ಕೋಟಿ ಮೊತ್ತದ ತೆರಿಗೆ ವಂಚನೆಯನ್ನು ಪತ್ತೆ ಹಚ್ಚುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಈ ಸಾಧನೆಯ ಮೂಲಕ ದೇಶದಲ್ಲಿ ಆರ್ಥಿಕ ಅವ್ಯವಹಾರವನ್ನು ತಡೆಯುವ ಪ್ರಯತ್ನದಲ್ಲಿ ಮಹತ್ತರ ಹೆಜ್ಜೆ ಎಂದು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
ಮುಕ್ಕಾಟಿರ ಪುನಿತ್ ಕುಟ್ಟಯ್ಯ ಅವರು ೨೦೧೭ ರಲ್ಲಿ ಯುಪಿಎಸ್ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ೩೨೪ ನೇ ರ್ಯಾಂಕ್ ಪಡೆದು ನಾಗರಿಕ ಸೇವೆಗೆ ಆಯ್ಕೆಗೊಂಡರು. ಅವರು ೨೦೧೭ ರಿಂದಲೂ ಹೈದರಾಬಾದ್ ನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತಿದ್ದಾರೆ.
ಇವರು ಅಮ್ಮತ್ತಿ ಗುಡ್ಶೆಫರ್ಡ್ಸ್ ಕಾನ್ವೆಂಟ್ ಮತ್ತು ಕೂರ್ಗ್ ಪಬ್ಲಿಕ್ ಸ್ಕೂಲ್ನಲ್ಲಿ ಓದಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಶೇ.೯೦ ಹಾಗೂ ಪಿಯುಸಿಯಲ್ಲಿ ಶೇ.೯೨ ಅಂಕ ಗಳಿಸಿದ್ದ ಇವರು ೨೦೧೫ ರಲ್ಲಿ ಯುಪಿಎಸ್ಸಿ ಯ ಪರೀಕ್ಷೆಯಲ್ಲಿ (ಆಖಿಲ ಭಾರತ) ೮ನೇ ರ್ಯಾಂಕ್ ಪಡೆದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಎಸ್ಪಿ ಆಗಿ ಆಯ್ಕೆಯಾದರು. ನಂತರ ೨೦೧೬ ರಲ್ಲಿ, ಅವರು ಮತ್ತೆ ಸಿವಿಲ್ ಸರ್ವೀಸಸ್ ಪರೀಕ್ಷೆಗಳಿಗೆ ಹಾಜರಾಗಿ ಅಖಿಲ ಭಾರತ ೫೦೧ ನೇ ರ್ಯಾಂಕ್ ಗಳಿಸಿದರು.೨೦೧೭ ರಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ೩೨೪ ನೇ ಸ್ಥಾನ ಗಳಿಸಿದರು.ಇವರು ಕೊಡಗಿನ ಬೈರಂಬಾಡ ಗ್ರಾಮದ ಕಾಫಿ ಬೆಳೆಗಾರ ಮುಕ್ಕಾಟಿರ (ದೇವಣಗೇರಿ) ಪ್ರಕಾಶ್ ಬೆಳ್ಳಿಯಪ್ಪ ಮತ್ತು ಜಮುನಾ ಅಚ್ಚಮ್ಮ (ತಾಮನೆ:ಬಡುವಂಡ) ದಂಪತಿಯ ಪುತ್ರ.