ಧಾರವಾಡ:ಮುಡಾ ಹಗರಣದಲ್ಲಿ ರಾಜ್ಯಪಾಲರು ಕೇಂದ್ರದ ರಾಜಕೀಯ ಟೂಲ್ ಅಗಿ ಕೆಲಸ ಮಾಡ್ತಾ ಇದ್ದಾರೆ. ರಾಜಕೀಯ ಆಯಾಮವನ್ನು ಉಪಯೋಗಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಆರೋಪಿಸಿದರು.
ಮುಡಾದಿಂದ ಸೈಟ್ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಅಸಾಂವಿಧಾನಿಕವಾಗಿ ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಧಾರವಾಡದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಹಾಗೂ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಲವಾರು ತೊಂದರೆಯಾಗಿದೆ. ಬೆಳೆನಷ್ಟವಾಗಿದೆ. ಜನರಿಗೆ ಅನಾನೂಕೂಲವಾಗಿದೆ.ದೇಶದಲ್ಲಿ ಉಗ್ರರ ದಾಳಿಯಾಗುತ್ತಿದೆ.ಆದರೆ ಇವನ್ನೆಲ್ಲ ಬಿಟ್ಟು ಬಿಜೆಪಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಂಚು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಅವರ ತೇಜೋವಧೆ ಮಾಡುವ ಉದ್ದೇಶದಿಂದ ಬಿಜೆಪಿ ಹಾಗೂ ಜೆಡಿಎಸ್ ಇಂತಹ ಪಿತೂರಿ ಮಾಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದರ ಆಧಾರದ ಮೇಲೆ ರಾಜೀನಾಮೆ ನೀಡಬೇಕು. ನಾಳೆ ಪ್ರಧಾನಿ ನರೇಂಧ್ರ ಮೋದಿ ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಿ ಅಂತ ರಾಷ್ಟ್ರಪತಿಗಳಿಗೆ ಮನವಿ ಮಾಡಿದರೆ ಮೋದಿ ಅವರ ವಿರುದ್ಧವೂ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗುತ್ತದೆಯೇ? ಪ್ರಾಸಿಕ್ಯೂಷನ್ನನ್ ನೀಡಲು ಸಹ ಶಿಷ್ಟಾಚಾರ, ಕಾನೂನು ಇದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿವೆ. ಈ ಸಂಬಂಧ ಸುಪ್ರೀಂಕೋರ್ಟ್ ಸಹ ನಿಯಮಾವಳಿ ರೂಪಿಸಿದೆ ಎಂದರು.
ಬಿಜೆಪಿ ಅವಧಿಯಲ್ಲೇ ಸೈಟ್ಗಳನ್ನು ನೀಡಿದ್ದಾರೆ. ಬಿಜೆಪಿಯವೇ ನಿರ್ಣಯ ಮಾಡಿದ್ದಾರೆ. ಇವರದೇ ಸರ್ಕಾರ ಎಲ್ಲಾ ಮಾಡಿ ಈಗ ಇವರೇ ಅಕ್ರಮ ಆಗಿದೆ ಎಂದು ಹೇಳುತ್ತಿದ್ದಾರೆ.ಅವರೇ ಜನರ ಮುಂದೆ ತಮ್ಮ ಅವಧಿಯಲ್ಲಿ ಅಕ್ರಮವಾಗಿದೆ ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಯಾಕೆ ಪಾದಯಾತ್ರೆ ಮಾಡಿದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಹಂಚಿಕೆಯಾದ ಸೈಟುಗಳು ಕಾನೂನು ಬಾಹಿರ ಎಂದು ಹೇಳಬೇಕು. ಆದರೆ ಅವರು ಈಗರೆಗೆ ಹೇಳಿಲ್ಲ. ಸಿದ್ದರಾಮಯ್ಯ ಅವರು ಅಕ್ರಮವಾಗಿ ಸೈಟುಗಳನ್ನು ಪಡೆದಿದ್ದಾರೆ ಎಂದು ಒಂದೇ ಒಂದು ದಾಖಲೆ ನೀಡಿಲ್ಲ.ಆರೋಪ ಮಾಡ್ತಾ ಇದ್ದಾರೆ. ಜನರ ಮುಂದೆ ಸುಳ್ಳು ಹೇಳ್ತಾ ಇದ್ದಾರೆ. ಅವರು ರಾಜೀನಾಮೆ ಕೇಳಲು ಯಾವುದೇ ಆಧಾರ ಇಲ್ಲ ಎಂದರು. ಬಿಜೆಪಿಯವರಿಗೆ ದೇಶ, ಸರ್ಕಾರ, ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲ. ಅವರ ಒಂದೇ ಒಂದು ಕಾರ್ಯಸೂಚಿ ಅಂದರೆ ಅವರದೇ ಸರ್ಕಾರ ಇರಬೇಕು.ಹಿಂದೂತ್ವವನ್ನು ಆಡಳಿತ ಮೂಲಕ ತರಲು ಮುಂದಾಗಿದ್ದಾರೆ ಎಂದರು. ಈ ವೇಳೆ ಶಾಸಕರಾದ ಎನ್ ಎಚ್ ಕೋನರಡ್ಡಿ, ಪ್ರಸಾದ್ ಅಬ್ಬಯ್ಯ, ಧಾರವಾಡ ಕಾಂಗ್ರೆಸ್ (ಗ್ರಾಮೀಣ) ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ಸೇರಿದಂತೆ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.