
ಬೆಂಗಳೂರು :ಕರ್ನಾಟಕ ಸರ್ಕಾರದ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 47 ಪುಟಗಳ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಇಂದೇ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.ಸಿಎಂ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್ ನಾಯಕರು, ಹಿರಿಯ ವಕೀಲರು ಆಗಿರುವ ಕಪಿಲ್ ಸಿಬಲ್ ಹಾಗು ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಪರವಾಗಿ ಸಲ್ಲಿಕೆ ಆಗಿರುವ ಅರ್ಜಿಯಲ್ಲಿ ಏನು ಹೇಳಲಾಗಿದೆ ಅನ್ನೋದನ್ನು ನೋಡೋದಾದರೆ ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.ಸಂವಿಧಾನ 163 ನೇ ವಿಧಿಯಂತೆ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕಿತ್ತು.ಅನುಮತಿ ನೀಡುವ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಆರೋಪಿಸಲಾಗಿದೆ.ಇಂದೇ ತುರ್ತು ವಿಚಾರಣೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಪರ ವಕೀಲರಾದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಇಬ್ಬರು ದೂರುದಾರರು ಹೈಕೋರ್ಟ್ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದು, ಅವರಿಗೂ ಮಾಹಿತಿ ನೀಡಲಾಗಿದೆ. ರಾಜ್ಯಪಾಲರ ಕಚೇರಿಗೂ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ ಎಂದು ಹೈಕೋರ್ಟ್ಗೆ ಸಿಎಂ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಮನವಿ ಸಲ್ಲಿಸಿದ್ದಾರೆ.ಆ ಬಳಿಕ ಮಧ್ಯಾಹ್ನ 2.30 ಕ್ಕೆ ವಿಚಾರಣೆ ನಿಗದಿಪಡಿಸಲು ಹೈಕೋರ್ಟ್ ಒಪ್ಪಿಗೆ ಕೊಟ್ಟಿದೆ.ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಲಾಗಿದೆ. ತುರ್ತು ವಿಚಾರಣೆಯ ಅಗತ್ಯವಿದೆ ಎಂದು ವಾದ ಮಂಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪರವಾಗಿ ಸಲ್ಲಿಕೆ ಆಗಿರುವ ಅರ್ಜಿಯಲ್ಲಿ ಪ್ರಮುಖವಾಗಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ರದ್ದು ಮಾಡಬೇಕು ಎಂದು ಕೋರಲಾಗಿದೆ. ದೂರುದಾರರು ರಾಜ್ಯಪಾಲರಿಗೆ ಅರ್ಜಿ ಕೊಟ್ಟ ಬಳಿಕ ಶೋಕಾಸ್ ನೋಟಿಸ್ ಕೊಟ್ಟಿದ್ದು, ಸಮಂಜಸ ಉತ್ತರ ಕೊಡಲಾಗಿದೆ. ರಾಜ್ಯಪಾಲರಿಗೆ ಸೂಕ್ತ ಉತ್ತರ ಕೊಟ್ಟರೂ ಆಗಸ್ಟ್ 16 ರಂದು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಲಾಗಿದೆ.ಈ ಆದೇಶವನ್ನು ರದ್ದು ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪರ ಅರ್ಜಿಯಲ್ಲಿ ಕೋರಲಾಗಿದೆ.

ಮುಖ್ಯಮಂತ್ರಿಗಳ ಅರ್ಜಿಯಲ್ಲಿ ಮಗದೊಂದು ಮನವಿ ಮಾಡಿಕೊಂಡಿದ್ದು, ಆಗಸ್ಟ್ 16ರಂದು ಮಾಡಿರುವ ಆದೇಶಕ್ಕೆ ಮೊದಲು ತಡೆ ನೀಡಬೇಕು. ಯಾವುದೇ ಪ್ರಕ್ರಿಯೆ ಆರಂಭ ಆಗದಂತೆ ತಡೆ ಕೊಡಬೇಕು ಎಂದು ಮಧ್ಯಂತರ ಆದೇಶಕ್ಕೂ ಮನವಿ ಮಾಡಲಾಗಿದೆ. ಶಾಸನಬದ್ಧ ಆದೇಶಗಳನ್ನು ಉಲ್ಲಂಘಿಸಿ, ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿ, ಮಂಜೂರಾತಿ ಆದೇಶವನ್ನು ನೀಡಲಾಗಿದೆ.
ಗೌರವಾನ್ವಿತ ರಾಜ್ಯಪಾಲರ ನಿರ್ಧಾರವು ಕಾನೂನು ಬದ್ಧವಾಗಿ ಸಮರ್ಥನೀಯವಲ್ಲ..ಅವರ ಆದೇಶ ಅಥವಾ ಕಾರ್ಯ ವಿಧಾನದ ದೋಷಪೂರಿತವಾಗಿದೆ.ಬಾಹ್ಯ ಪ್ರೇರಣೆಯಿಂದ ಪ್ರೇರೇಪಿಸಲಾಗಿದೆ ಈ ರಿಟ್-ಅರ್ಜಿಯನ್ನು ಪರಿಗಣಿಸಿ ರಾಜ್ಯಪಾಲರ ಆದೇಶವನ್ನ ರದ್ದುಗೊಳಿಸಲು ಕೋರಿಕೊಂಡಿದ್ದಾರೆ.