ಮೈಸೂರಿನ ಮುಡಾದಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡರೆ, ಬಿಜೆಪಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ಬೇಕು ಅಂತಾ ಒತ್ತಾಯ ಮಾಡುತ್ತಿದೆ. ಆದರೆ ಈಗ ಸಿದ್ದರಾಮಯ್ಯ ವಿರುದ್ಧ ತನಿಖೆ ಮಾಡುವುದು ಯಾರು..? ಪೊಲೀಸ್ ಠಾಣೆಯಲ್ಲಿ ಎಲ್ಲಿಯೂ ದೂರು ದಾಖಲಾಗಿಲ್ಲ. ಮೈಸೂರು ಲೋಕಾಯುಕ್ತದಲ್ಲಿ ಒಂದು ದೂರು ದಾಖಲಾಗಿದೆ ಅಷ್ಟೆ. ವಿಚಾರಣೆ ಶುರುವಾಗಿಲ್ಲ. ಎಸ್ಐಟಿ ರಚನೆ ಆಗಿಲ್ಲ. ಆದರೆ ಮೊದಲಿಗೆ ಐಎಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಎನ್ನಲಾಗಿತ್ತು. ಆ ಬಳಿಕ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಇದೀಗ ತನಿಖೆ ಮಾಡುವುದು ಯಾರು..? ಎನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.
ಸಿದ್ದರಾಮಯ್ಯ ವಿರುದ್ಧ ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ತನಿಖೆ ಮೊದಲಿಗೆ ಸ್ಥಗಿತ ಆಗುತ್ತದೆ. ಆ ಬಳಿಕ ರಾಜ್ಯಪಾಲರು ನೀಡಿರುವ ಆದೇಶದ ಪ್ರಕಾರ ಪ್ರಕರಣ ನಡೆದಿರುವ ವ್ಯಾಪ್ತಿಯ ಪ್ರಕಾರ ಮೈಸೂರು ಜಿಲ್ಲಾ ಲೋಕಾಯುಕ್ತರೇ ತನಿಖೆ ಮಾಡಲು ಮುಂದಾಗಬೇಕಿದೆ. ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊದಲು ಪ್ರಕರಣ ದಾಖಲಾಗಬೇಕು. ಆ ಬಳಿಕ ತನಿಖೆ ಶುರು ಆಗಬೇಕಿದೆ. ಇನ್ನು ಈಗಾಗಲೇ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣಕ್ಕೆ ಕೋರ್ಟ್ ಆದೇಶದಂತೆ ತನಿಖಾ ಸಂಸ್ಥೆಗೆ ಪ್ರಕರಣ ಹಸ್ತಾಂತರ ಆಗುವ ಸಾಧ್ಯತೆಯಿದೆ.
ಸಿಎಂ ವಿರುದ್ಧದ ಮುಡಾ ಪ್ರಕರಣದ ಅರ್ಜಿದಾರರು ಕೋರಿಕೆ ಮೇರೆಗೆ ಲೋಕಾಯುಕ್ತದಲ್ಲೇ ತನಿಖೆ ನಡೆಯಬಹುದು. ಆದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ಲೋಕಾಯುಕ್ತ ತನಿಖೆ ಸಾಧ್ಯ. ಇಲ್ಲದಿದ್ರೆ ಓರ್ವ ಮುಖ್ಯಮಂತ್ರಿ ವಿರುದ್ಧದ ತನಿಖೆ ಎನ್ನುವ ಕಾರಣಕ್ಕೆ ದೂರುದಾರರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಒಂದು ವೇಳೆ ದೂರುದಾರರ ಅರ್ಜಿಯನ್ನು ಮಾನ್ಯ ಮಾಡಿ, ಸಿಬಿಐ ಅಡಿಯಲ್ಲಿ ಸ್ವತಂತ್ರ ತನಿಖೆ ಆಗಲಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟರೆ ಸಿದ್ದರಾಮಯ್ಯಗೆ ಮತ್ತಷ್ಟು ಕಾನೂನು ತೊಡಕು ಆಗುವ ಸಾಧ್ಯತೆಯಿದೆ. ಆದರೆ ಲೋಕಾಯುಕ್ತ ತನಿಖೆ ಆಗಿ ವರದಿ ಬರುವ ತನಕ ಸಿದ್ದರಾಮಯ್ಯ ಕುರ್ಚಿಗೇನು ಕಂಟಕವಿಲ್ಲ ಎನ್ನಲಾಗ್ತಿದೆ.
ಸೋಮವಾರ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ರಾಜ್ಯಪಾಲರು ಅನುಮತಿ ನೀಡಿರುವುದು ಕಾರ್ಯವ್ಯಾಪ್ತಿಯಲ್ಲಿ ಬರುವುದಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೇ ಕಾನೂನು ಬಾಹಿರ ಎನ್ನುವ ಅಭಿಪ್ರಾಯ ಹೈಕೋರ್ಟ್ನಿಂದ ಬಂದರೆ ಸಿದ್ದರಾಮಯ್ಯ ಸೇಫ್. ಒಂದು ವೇಳೆ ರಾಜ್ಯಪಾಲರಿಗೆ ಅಧಿಕಾರ ಇದೆ. ಸಂವಿಧಾನದತ್ತವಾದ ಅಧಿಕಾರ ಚಲಾಯಿಸಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲ. ರಾಜ್ಯಪಾಲರ ತನಿಖೆಗೆ ಕೊಟ್ಟಿರುವ ಅನುಮತಿಯನ್ನು ನಾವು ತಡೆಯುವುದಿಲ್ಲ ಎಂದಾಗ ಸಿದ್ದರಾಮಯ್ಯಗೆ ಕಾನೂನು ಕಂಟಕ ಖಚಿತ ಎನ್ನಬಹುದು.
ಕೃಷ್ಣಮಣಿ