ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಹೆಚ್ಚಾಗಿದ್ದು ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ಕೆಲವು ಭಾಗದಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಕೆಲವೆಡೆ ಜಲಪ್ರವಾಹ, ಮನೆ, ರಸ್ತೆಗಳ ಮೇಲೆ ಮರ ಬೀಳುತ್ತಿವೆ. 50ಕ್ಕೂ ಹೆಚ್ಚು ಮನೆಗಳ ಮೇಲೆ ಮರಗಳು ಬಿದ್ದಿರುವ ವರದಿಯಾಗಿದೆ.. 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.. ಹಲವಾರು ಗ್ರಾಮದ ಜನರು ಕತ್ತಲಲ್ಲಿ ಕಾಲ ಕಳೆಯುತ್ತಿದ್ದು, ಭಯದಲ್ಲಿ ಜೀವನ ಮಾಡುವಂತಾಗಿದೆ. ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ತೀರದ ಜನರನ್ನು ಆತಂಕಕ್ಕೆ ತಳ್ಳಿದೆ.
ಬೆಳಗಾವಿ ಜಿಲ್ಲೆ ಮುನವಳ್ಳಿ ಬಳಿ ಇರುವ ನವಿಲು ತೀರ್ಥ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯ ಬಹುತೇಕ ಭರ್ತಿಯಾದ ಹಿನ್ನೆಲೆಹಯಲ್ಲಿ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. 37 ಟಿಎಂಸಿ ಸಾಮರ್ಥ್ಯದ ಮಲಪ್ರಭಾ ಡ್ಯಾಂನಲ್ಲಿ 28 ಟಿಎಂಸಿ ನೀರು ಸಂಗ್ರಹವಾಗಿದೆ. 2079 ಅಡಿ ಎತ್ತರದ ಡ್ಯಾಂನಲ್ಲಿ 2072 ಅಡಿಯಷ್ಟು ನೀರು ಸಂಗ್ರಹವಾಗಿದೆ. ಡ್ಯಾಂ ಭರ್ತಿಗೆ ಕೇವಲ 7 ಅಡಿ ಬಾಕಿ ಇದೆ. ನದಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಮದುರ್ಗ ಹಾಗೂ ಗ್ರಾಮೀಣ ಭಾಗದಲ್ಲಿ ನದಿಪಾತ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಇತ್ತ ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆ ನಡೆದು 15 ದಿನಗಳು ಆಗುತ್ತಾ ಬಂದರೂ ನಾಪತ್ತೆ ಆಗಿರುವ ಲಾರಿ ಸುಳಿವು ಮಾತ್ರ ಸಿಕ್ಕಿಲ್ಲ.. ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ನದಿಯಲ್ಲಿ ಕಾರ್ಯಾಚರಣೆ ನಡೆಸಲಾಯ್ತು. ಅಂಡರ್ ಗ್ರೌಂಡ್ ಡ್ರೋನ್ ಆಬ್ಜೆಕ್ಟ್ ತಂತ್ರ ಡಿಟೆಕ್ಟ್ ಮಾಡಿದ 3 ಜಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದ್ರೆ ಲಾರಿಯ ಸುಳಿವು ಮಾತ್ರ ಸಿಗಲಿಲ್ಲ. ಕಲ್ಲು ಬಂಡೆಗಳ ರಾಶಿ, ಮಣ್ಣಿನ ರಾಶಿ ಮಾತ್ರ ಸಿಕ್ಕಿದೆ
ಶಿರೂರು ಗುಡ್ಡ ಕುಸಿತದ ಕಾರ್ಯಾಚರಣೆ ಇಂದು ಕೂಡ ಮುಂದುವರಿಯಲಿದೆ. ಇಂದು ಕೊನೆಯ ಹಂತದ ಕಾರ್ಯಾಚರಣೆ ನಡೆಯಲಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ರೆಸ್ಕ್ಯೂ ಆಪರೇಷನ್ ಟೀಂ ಹುಡುಕಾಟ ನಡೆಸಲಿದೆ. ಕಾರವಾರ ಅಂಕೋಲ ಶಾಸಕ ಸತೀಶ್ ಸೈಲ್ ಸ್ಥಳದಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಮಾತನಾಡಿ, ಭಾನುವಾರ ಕೊನೆಯ ಹಂತದ ಕಾರ್ಯಾಚರಣೆ ನಡೆಯಲಿದೆ. ಲಾರಿ ಹಾಗು ಮೃತದೇಹ ಪತ್ತೆಯಾಗದಿದ್ರೆ, ಮುಂದಿನ ಯೋಜನೆ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.
ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಕಾರ್ಯಾಚರಣೆ ವೇಳೆ ಮುಳುಗು ತಜ್ಞರ ಈಶ್ವರ ಮಲ್ಪೆ ತಂಡದ ಓರ್ವ ಸದಸ್ಯನಿಗೆ ಗಾಯವಾಗಿದೆ. ಕಾರ್ಯಾಚರಣೆ ವೇಳೆ ಕಾಲು ಜಾರಿ ಬಿದ್ದು ದೀಪು ಎಂಬುವರು ಗಾಯಗೊಂಡಿದ್ದಾರೆ. ತಕ್ಷಣವೇ ದೀಪುನನ್ನು ಌಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಮಳೆಯ ಪ್ರಮಾಣ ಇನ್ನೂ ಜಾಸ್ತಿಯಾಗಿದ್ದು, ಕಾರ್ಯಾಚರಣೆಗೂ ಅಡ್ಡಿಯಾಗುವ ಸಾಧ್ಯತೆ ಎದುರಾಗಿದೆ.