ಚಾಲೆಂಜಿಂಗ್ ಸ್ಟಾರ್.. ಬಾಕ್ಸ್ ಆಫೀಸ್ ಸುಲ್ತಾನ.. ಗಲ್ಲಾ ಪೆಟ್ಟಿಗೆ ಬೇಟೆಗಾರ ಅನ್ನೋ ಹಲವಾರು ಬಿರುದಾಂಕಿತ ನಟ ದರ್ಶನ್, ಕೊಲೆ ಕೇಸ್ನಲ್ಲಿ ಜೈಲು ಸೇರಿ ತಿಂಗಳು ಕಳೆದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಸಂದೇಶ ಕಳುಹಿಸಿದ್ದ ಅನ್ನೋ ಕಾರಣಕ್ಕೆ ಪಟ್ಟಣಗೆರೆ ಶೆಡ್ಗೆ ಕರೆದು ಹಲ್ಲೆ ಮಾಡಿದ್ರು. ಹಲ್ಲೆ ಬಳಿಕ ನೋವು ತಾಳಲಾರದೆ ಸಾವನ್ನಪ್ಪಿದ್ದು, ಬರೋಬ್ಬರಿ 17 ಜನರನ್ನು ಪೊಲೀಸ್ರು ಬಂಧನ ಮಾಡಿದ್ದಾರೆ. ಅದರಲ್ಲಿ ದರ್ಶನ್ ಆಪ್ತ ಗೆಳತಿ ಪವಿತ್ರಾ ಗೌಡ A1 ಆರೋಪಿ ಆದರೆ ನಟ ದರ್ಶನ್ A2 ಆರೋಪಿ. ಆದರೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಪರ ಯಾಕಿನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಎನ್ನುವ ಗುಮಾನಿ ದರ್ಶನ್ ಅಭಿಮಾನಿಗಳು ಹಾಗು ದರ್ಶನ್ ಆಪ್ತವಲಯದಲ್ಲಿ ಮೂಡಿರುವ ಅನುಮಾನ.
ಜಾಮೀನು ಅರ್ಜಿ ಸಲ್ಲಿಕೆಗೂ ಮುನ್ನ ಇಂದು ಹೈಕೋರ್ಟ್ನಲ್ಲಿ ನಟ ದರ್ಶನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆದಿದೆ. ನಟ ದರ್ಶನ್ ಪರ ವಕೀಲ ಕೆ.ಎನ್ ಫಣೀಂದ್ರ ಹಾಜರಾಗಿದ್ದರು. ಈ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ SPP ಪ್ರಸನ್ನಕುಮಾರ್, ಆಕ್ಷೇಪಣೆ ಸಲ್ಲಿಕೆ ಮಾಡಿ ಸೋಮವಾರಕ್ಕೆ ವಾದ ಮಾಡಲು ಅವಕಾಶ ಕೇಳಿದ್ರು. ಇದಕ್ಕೆ ದರ್ಶನ್ ಪರ ವಕೀಲರು ವಿರೋಧ ವ್ಯಕ್ತಪಡಿಸಿ, ಇಂದೇ ವಾದ ಮಾಡುವಂತೆ ಕೋರ್ಟ್ಗೆ ಕೋರಿದ್ರು. ಆದರೆ ಕೋರ್ಟ್ ಸೋಮವಾರದ ಬದಲು ನಾಳೆ ನಿಮ್ಮ ವಾದ ಮಂಡಿಸಿ, ನಾಳೆ ವಿಚಾರಣೆ ಮುಂದುವರಿಸೋಣ ಎಂದರು. ಇದೇ ವೇಳೆ ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ನೋಡೋಣ ಅಂತಾ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಕುಮಾರ್ ಪೀಠ ಹೇಳಿದ್ದು, ಶುಕ್ರವಾರಕ್ಕೆ ಅರ್ಜಿ ಮುಂದೂಡಿಕೆ ಮಾಡಿದೆ.
ಈ ನಡುವೆ ಜಾಮೀನು ಅರ್ಜಿ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ ನಾಗೇಶ್ ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಆದರೆ ಇನ್ನೂ ವಿಚಾರಣೆ ಹಂತದಲ್ಲಿ ಇರುವಾಗ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತದೆ. ಇನ್ನೂ ವಿಚಾರಣೆ ನಡೆಯುವಾಗ ಆರೋಪಿಗಳು ಜಾಮೀನು ಮೇಲೆ ಬಿಡುಗಡೆ ಆದರೆ ಸಾಕ್ಷಿಗಳಿಗೆ ಬೆದರಿಕೆ ಹಾಕಿಸುತ್ತಾರೆ. ವಿಚಾರಣೆ ಅಡ್ಡಿಯಾಗುತ್ತಾರೆ. ಪ್ರಕರಣ ಗಂಭೀರವಾಗಿದ್ದು ಆರೋಪಿಗಳು ಕೂಡ ಪ್ರಭಾವಿಗಳಾಗಿದ್ದಾರೆ. ಆರೋಪಿಗಳು ತಾವೇ ಸಾಕ್ಷಿಗಳನ್ನು ಬೆದರಿಸಬೇಕು ಎಂದೇನಿಲ್ಲ. ಕೇವಲ ಕಣ್ಣಲ್ಲಿ ತೋರಿಸಿದರೆ ಸಾಕ್ಷಿಗಳನ್ನು ಬೆದರಿಸುತ್ತಾರೆ. ಕಾನೂನು ಕಣ್ಣಿಗೆ ಬೇರೆ ರೀತಿ ಕಾಣುತ್ತದೆ. ಅದರ ಉದ್ದೇಶ ಇದೇ ಪ್ರಕರಣ ಆಗಿರುತ್ತದೆ ಎಂದು ವಾದಿಸಿದರೆ ಖಂಡಿತವಾಗಿಯೂ ಜಾಮೀನು ಸಿಗುವುದಿಲ್ಲ.
ಜಮೀನು ಸಿಗುವುದಿಲ್ಲ ಅನ್ನೋದ್ರ ಜೊತೆಗೆ ಅರ್ಜಿ ವಜಾ ಆಗುತ್ತದೆ. ಮುಂದೆ ಆರೋಪ ಪಟ್ಟಿ ಕೋರ್ಟ್ಗೆ ಸಲ್ಲಿಕೆ ಆದ ಬಳಿಕ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಜಾಮೀನು ಪಡೆದುಕೊಳ್ಳುವುದು ಸುಲಭ ಎನ್ನುವುದು ದರ್ಶನ್ ಪರ ವಕೀಲರ ನಿಲುವು. ಈಗಲೇ ಒಮ್ಮೆ ಅರ್ಜಿ ಹಾಕಿ ಜಾಮೀನು ಸಿಗದೆ ಒದ್ದಾಡುವ ಬದಲು, ಆರೋಪ ಪಟ್ಟಿ ಸಲ್ಲಿಕೆ ಆದ ಬಳಿಕ ಕೆಳ ನ್ಯಾಯಾಲದಲ್ಲೇ ನಿಖರ ವಾದ ಮಂಡಿಸಿ ಜಾಮೀನು ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಹೈಕೋರ್ಟ್ಗೆ ಹೋಗಬೇಕಾಗಿ ಬರಬಹುದು ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ. ಇನ್ನು ಪೊಲೀಸರು ಅಷ್ಟೆ, ಕೊಲೆ ಪ್ರಕರಣದ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು 90 ದಿನಗಳ ಕಾಲಾವಕಾಶವಿದೆ. ಚಾರ್ಜ್ಶೀಟ್ ಸಲ್ಲಿಕೆ ಆದರೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಕಾನೂನು ಪ್ರಕಾರ ಇರುವ ಅವಕಾಶವನ್ನು ಪೊಲೀಸರೂ ಬಳಸಿಕೊಳ್ತಿದ್ದಾರೆ ಅಷ್ಟೆ ಎನ್ನುವುದು ಕಾನೂನು ಪರಿಣಿತರ ಅಭಿಪ್ರಾಯ.
ಕೃಷ್ಣಮಣಿ