ಬೀದರ್ ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿದೆ. ಮುಂಬೈ, ಪುಣೆ, ಹೈದರಾಬಾದ್, ಕೊಲ್ಲಾಪುರ, ಸೊಲ್ಲಾಪುರ, ನಾಂದೇಡ್ನಂತಹ ಪ್ರಮುಖ ನಗರಗಳೊಂದಿಗೆ ವಾಣಿಜ್ಯ ವಹಿವಾಟು ಹೊಂದಿದೆ.
ಗಾಂಜಾ ಸಾಗಾಟದ ಪ್ರಮುಖ ರಹದಾರಿ ಕೂಡ ಜಿಲ್ಲೆ ಆಗಿತ್ತು. ಆದರೆ, ಚನ್ನಬಸವಣ್ಣ ಅವರು ಜಿಲ್ಲೆಗೆ ಎಸ್ಪಿ ಆಗಿ ಬಂದ ನಂತರ ಮೊದಲು ಕೈ ಹಾಕಿದ್ದೆ ಇದರೊಳಗೆ. ಗಡಿ ಭಾಗದಲ್ಲಿ ಸಿಬ್ಬಂದಿ ನೇಮಿಸಿ, ಗಸ್ತು ಹೆಚ್ಚಿಸಿ, ನೆರೆ ಜಿಲ್ಲೆಗಳೊಂದಿಗೆ ಸಂಪರ್ಕ ಸಾಧಿಸಿ ಗಾಂಜಾ ಸಾಗಾಟ, ಮಾರಾಟವನ್ನು ಬಹುತೇಕ ಇಲ್ಲವಾಗಿಸಿದರು. ಇವರ ಒಂದೂವರೆ ವರ್ಷದ ಅವಧಿಯಲ್ಲಿ ₹40 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಜಪ್ತಿ ಮಾಡಿರುವುದೇ ಇದಕ್ಕೆ ಸಾಕ್ಷಿ.
ಗಾಂಜಾ ನಂತರದ ಸ್ಥಾನ ಗುಟ್ಕಾದ್ದು. ಜಿಲ್ಲೆಯಲ್ಲಿ ಅಕ್ರಮವಾಗಿ ಗುಟ್ಕಾ ತಯಾರಿಸಿ ಸರ್ಕಾರಕ್ಕೆ ತೆರಿಗೆ ಕಟ್ಟದೇ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿತ್ತು. ಅದರ ತಯಾರಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಅದಕ್ಕೆ ಕಡಿವಾಣ ಹಾಕಿದ್ದರು. ಡ್ರಗ್ಸ್ ವಿರುದ್ಧ ಶಾಲಾ,ಕಾಲೇಜುಗಳಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಅದರ ಮೂಲ ಬೇರು ಕಿತ್ತು ಹಾಕಲು ಪ್ರಯತ್ನಿಸಿದ್ದರು. ಆಗಲೇ ಚನ್ನಬಸವಣ್ಣ ಅಕ್ರಮ ಗಾಂಜಾ ಹಾಗೂ ಗುಟ್ಕಾ ದಂದೆಯಲ್ಲಿ ತೊಡಗಿಕೊಂಡವರ ಕೆಂಗಣ್ಣಿಗೆ ಗುರಿಯಾಗಿದ್ದರು.