ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಂಪರ್ ಗೇಮ್ ಮಾಡಿದ್ದ ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆದ್ದು ಪುನರ್ ಜನ್ಮ ಪಡೆದಿತ್ತು. ಇದರಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡು ಹಾಗು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರ ಎರಡೂ ಕಡೆ ಗೆಲ್ಲುವ ಮೂಲಕ ಚುನಾವಣೆಗಳಲ್ಲಿ ಸೊರಗಿದ್ದ ಕಾಂಗ್ರೆಸ್ ಪಾಲಿಗೆ ಟಾನಿಕ್ ಆಗಿದ್ದರು. ಇದೀಗ ಎರಡಲ್ಲಿ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಮತ್ತೊಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಲೇಬೇಕಿದೆ. ನಿನ್ನೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿ ಉಳಿಸಿಕೊಂಡು ಕೇರಳದ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಮಾಡಲಾಗಿದೆ. ಈ ನಿರ್ಧಾರದ ಹಿಂದೆ ಎರಡು ಪ್ರಮುಖ ಕಾರಣಗಳು ಕಾಣುತ್ತಿವೆ..
ಗಾಂಧಿ ಕುಟುಂಬದ ಭದ್ರಕೋಟೆ ಆಗಿರುವ ರಾಯ್ಬರೇಲಿ ಕ್ಷೇತ್ರವನ್ನ ರಾಹುಲ್ ಗಾಂಧಿ ಉಳಿಸಿಕೊಳ್ಳುವ ಮೂಲಕ ಗಾಂಧಿ ಕುಟುಂಬದ ಮುಂದಿನ ವಾರಸುದಾರನಾಗಿ ರಾಹುಲ್ ಮೇಲ್ಪಂಕ್ತಿ ಹಾಕುವುದಕ್ಕೆ ನಿರ್ಧಾರ ಮಾಡಿದ್ದಾರೆ. ಪಂಡಿತ್ ಜವಾಹರ ಲಾಲ್ ನೆಹರು ಅವರಿಂದ ಶುರುವಾದ ರಾಜಕಾರಣ ಆ ನಂತರ ಫಿರೋಜ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೀಗೇ ನಾಲ್ಕನೇ ತಲೆಮಾರುಗಳಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಲೇ ಬಂದಿದ್ದಾರೆ. ಇನ್ನು ಈ ಕ್ಷೇತ್ರದಲ್ಲೇ ಗೆಲುವು ಸಾಧಿಸಿ ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. ಇದೀಗ ರಾಹುಲ್ ಗಾಂಧಿ ಕೂಡ ಅದೇ ಅದೃಷ್ಟದ ಲೆಕ್ಕಾಚಾರದಲ್ಲಿ ರಾಯ್ ಬರೇಲಿ ಉಳಿಸಿಕೊಂಡಿದ್ದಾರೆ. ಇದು ಮೊದಲ ಕಾರಣ.
2019ರಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲುಂಡಿದ್ದ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಬಂದಿದ್ದರು. ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದ ವಯನಾಡು ಲೋಕಸಭಾ ಕ್ಷೇತ್ರದ ಜನರನ್ನು ಕೈಬಿಟ್ಟು ರಾಯ್ ಬರೇಲಿ ಆರಿಸಿಕೊಳ್ತಿದ್ದಾರೆ. ಇಂದು ರಾಜೀನಾಮೆ ನೀಡಲಿದ್ದು ವಯನಾಡಿನ ಜನರಿಗೆ ಬೇಸರದ ಸಂಗತಿ ಹೌದು. ಆದರೆ ತನ್ನ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನು ವಯನಾಡು ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಸುತ್ತಾರೆ ಅನ್ನುವುದು ಖಚಿತವಾಗಿದೆ. ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ಗೆಲುವು ಸಾಧಿಸಿದ್ರೆ ಗಾಂಧಿ ಕುಟುಂಬದ ಮೂವರು ಒಟ್ಟಿಗೆ ಸಂಸತ್ನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇನ್ನು ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು ತೊರೆಯಲು 2ನೇ ಕಾರಣ ಎಂದರೆ..
ಕೇರಳದಲ್ಲಿ ಭಾರತೀಯ ಜನತಾ ಪಾರ್ಟಿ ಪ್ರಭಾವ ಅಷ್ಟೊಂದು ಉತ್ತಮವಾಗಿಲ್ಲ. ಎಂದೂ ಖಾತೆಯನ್ನೇ ತೆರೆಯದ ಕೇಸರಿ ಪಕ್ಷ ಈ ಬಾರಿ ಮೊದಲ ಬಾರಿಗೆ ಒಂದು ಕ್ಷೇತ್ರದಲ್ಲಿ ಜಯಗಳಿದೆ. ಸಂಸದ ಸುರೇಶ್ ಗೋಪಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿಯೂ ಅಧಿಕಾರ ಹಿಡಿದಿದ್ದಾರೆ. ಆದರೂ ವಯನಾಡು ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಪ್ರಭಾವ ಬೀರುವಂತಹ ಕ್ಷೇತ್ರ ಎಂದೇ ಹೇಳಬಹುದು. ಇನ್ನು 2019ರಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದಾಗ 4,31,770ಮ ಮತಗಳ ಅಂತರದಿಂದ ಜಯ ದಾಖಲಿಸಿದ್ರು. ಇದೀಗ 2024ರಲ್ಲಿ ರಾಹುಲ್ ಗಾಂಧಿ ಬರೋಬ್ಬರಿ 3,64,422 ಮತಗಳ ಅಂತರದಿಂದ ಗೆಲುವು ದಕ್ಕಿಸಿಕೊಂಡಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ವಯನಾಡುವಿನಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಎನ್ನುವುದು ಗಾಂಧಿ ಕುಟುಂಬ ಹಾಗು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಚೊಚ್ಚಲ ಸ್ಪರ್ಧೆಯಲ್ಲಿ ಯಾವುದೇ ಮುಖಭಂಗ ಆಗದಂತೆ ತಡೆಯಲು ವಯನಾಡು ಉತ್ತಮ ಕ್ಷೇತ್ರ ಎನ್ನುವ ಆಶಯದೊಂದಿಗೆ ರಾಯ್ ಬರೇಲಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಬಹುದು.
ಕೃಷ್ಣಮಣಿ