ಲೋಕಸಭಾ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಆಗುತ್ತಿದೆ. ಸಂಜೆ 7.15ಕ್ಕೆ ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಇದರಲ್ಲಿ ಕರ್ನಾಟಕದ ನಾಲ್ವರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳಲಿದ್ದಾರೆ. ಇದರ ನಡುವೆ ಕರ್ನಾಟಕದಲ್ಲಿ IPS ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದ ತಮಿಳುನಾಡಿನ ಅಣ್ಣಾಮಲೈ ಕೂಡ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಅನ್ನೋ ಮಾಹಿತಿ ಪ್ರತಿಧ್ವನಿಗೆ ಲಭ್ಯವಾಗಿದೆ.
ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದ Annamaiali ವೃತ್ತಿ ತೊರೆದು ತಮಿಳುನಾಡಿನ ರಾಜಕೀಯದಲ್ಲಿ ತೊಡಗಿಸಿಕೊಂಡರು. ಬಿಜೆಪಿಗೆ ಕಿಂಚಿತ್ತು ನೆಲೆಯಿಲ್ಲದ ದ್ರಾವಿಡ ನೆಲದಲ್ಲಿ ಕಮಲ ಬೇರೂರಿಸುವ ಪ್ರಯತ್ನ ಮಾಡಿದರು. ತಮಿಳುನಾಡಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿದ ಅಣ್ಣಾಮಲೈ, ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದರು. ತಮಿಳುನಾಡಿನ ಕೊಯಂಬತ್ತೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಸೋಲು ಅನುಭವಿಸಿದ ಅಣ್ಣಾಮಲೈ, ಸೋಲಿನ ಬಳಿಕ ಭಾವುಕರಾಗಿ ಕಣ್ಣೀರು ಹಾಕಿದ್ದರು.
ರಾಜಕೀಯ ನೆಲೆಯೇ ಇಲ್ಲದ ತಮಿಳುನಾಡಿನಲ್ಲಿ ಅಬ್ಬರ ಸೃಷ್ಟಿಸುವ ಪ್ರಯತ್ನ ಮಾಡಿದ್ದ ಅಣ್ಣಾಮಲೈ ಸೋಲುಂಡರೂ ತಮಿಳುನಾಡಿನಲ್ಲಿ ಭಾರತೀಯ ಜನತಾ ಪಾರ್ಟಿ ಬೀಜ ಬಿತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿ ಅಂಗಪಕ್ಷವಾಗಿದ್ದ MDMK ಒಂದು ಸ್ಥಾನದಲ್ಲಿ ಗೆಲ್ಲುವ ಮೂಲಕ ಕೇಸರಿ ಪಕ್ಷಕ್ಕೆ ಆತ್ಮವಿಶ್ವಾಸ ಮೂಡುವಂತೆ ಮಾಡಿದ್ದಾರೆ. ಇನ್ನು ರಾಜಕೀಯ ಅಖಾಡದಲ್ಲಿ ಅಣ್ಣಾಮಲೈ ಛಲದೇಕ ಮಲ್ಲನಂತೆ ಕೆಲಸ ಮಾಡುವ ಗಟ್ಟಿ ವ್ಯಕ್ತಿತ್ವ ಹೊಂದಿದ್ದಾರೆ. ಇದೇ ಕಾರಣಕ್ಕೆ ಅಣ್ಣಾಮಲೈಗೆ ಕೇಂದ್ರದಲ್ಲಿ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ.
ತಮಿಳುನಾಡಿನಲ್ಲಿ ತಳವೂರಲು ಭಾರತೀಯ ಜನತಾ ಪಾರ್ಟಿ ಸಾಕಷ್ಟು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಅದು ಸಾಧ್ಯವಾಗಿಲ್ಲ. AIADMK ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಾಗ ಮತ ಹಾಕುವ ತಮಿಳುನಾಡು ಜನರು ಮೈತ್ರಿ ಮುಗಿಯುತ್ತಿದ್ದಂತೆ ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಅವಕಾಶ ಕೊಡುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿ DMK ಹಾಗು AIADMK ಮಾತ್ರವೇ ತಮಿಳುನಾಡಿನಲ್ಲಿ ಗಟ್ಟಿಯಾಗಿ ಬೆಳೆಯಲು ಸಹಕಾರಿ ಆಗಿದೆ. ಇದೀಗ ಜಯಲಲಿತಾ ಮರಣದ ನಂತರ AIADMK ತಮಿಳುನಾಡಿನಲ್ಲಿ ನೆಲಕಚ್ಚಿದ್ದು, ಈ ಅವಕಾಶ ಬಳಸಿಕೊಂಡು ಪಕ್ಷ ಬೆಳಸಲು ಬಿಜೆಪಿ ಯತ್ನಿಸುತ್ತಿದೆ. ಇದೀಗ ಅಣ್ಣಾಮಲೈಗೆ ಸಚಿವ ಸ್ಥಾನ ಕೊಟ್ಟು ಜನರನ್ನು ಸೆಳೆಯುವ ಪ್ರಯತ್ನ ನಡೆದಿದೆ.
ಕೃಷ್ಣಮಣಿ