ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತ್ತು. ಮಹಿಳೆಯರಿಗೆ ಉಚಿತ ಬಸ್ ಸೇರಿದಂತೆ ತಿಂಗಳಿಗೆ 2 ಸಾವಿರ ಹೃಹಲಕ್ಷ್ಮೀ ಯೋಜನೆ ಹಣ ಹಾಗು ಮನೆಗೆ ವಿದ್ಯುತ್ ಫ್ರೀ ಕೊಡ್ತಿರೋದು ಭಾರೀ ಖ್ಯಾತಿ ಪಡೆದುಕೊಂಡಿದೆ. ರಾಜ್ಯದಲ್ಲಿ ಜನರು ಗ್ಯಾರಂಟಿ ಯೋಜನೆಗಳ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡುತ್ತಿದ್ದಾರೆ. ಆದರೂ ಸರ್ಕಾರದಿಂದ ಲಾಭ ಪಡೆದುಕೊಂಡ ಜನರು ಕಾಂಗ್ರೆಸ್ ಬೆಂಬಲಿಸಲಿಲ್ವಾ..? ಅನ್ನೋ ಅನುಮಾನ ಶುರುವಾಗಿದೆ. ಎಲ್ಲಾ ಸಚಿವರಿಗೂ ಚುನಾವಣಾ ಉಸ್ತುವಾರಿ ಕೊಡಲಾಗಿತ್ತು. ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನೂ ನೀಡಲಾಗಿತ್ತು. ಆದರೆ ಕೊಟ್ಟ ಟಾಸ್ಕ್ ಪೂರೈಸಿದ್ದು, ಕೆಲವೇ ಕೆಲವು ಸಚಿವರು ಮಾತ್ರ.!
ಗ್ಯಾರಂಟಿಗಳ ಯೋಜನೆಗಳ ಯಶಸ್ವಿ ಜಾರಿ ಬಳಿಕವೂ ರಾಜ್ಯದಲ್ಲಿ ಕಾಂಗ್ರೆಸ್ಗೆ ಭಾರೀ ನಿರಾಸೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸೀಟ್ಗಳು ಬಾರದ ಕಾರಣ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ. ಇನ್ನು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹೊಣೆಗಾರಿಕೆ ಬಗ್ಗೆ ವಿಮರ್ಶೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಮಂತ್ರಿಮಂಡಲದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಕಳಪೆ ಸಾಧನೆ, ಆಂತರಿಕ ಕಲಹ ತೋರಿಸಿದ ಸಚಿವರಿಗೆ ಗೇಟ್ಪಾಸ್ ನೀಡಿ ಉತ್ತಮ ಪ್ರದರ್ಶನ ತೋರಿದ, ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡುವಂತೆ ಹೈಕಮಾಂಡ್ ಚಿಂತನೆ ನಡೆಸಿದೆ. ಬೆಂಗಳೂರು ಭಾಗದಲ್ಲೂ ಕಾಂಗ್ರೆಸ್ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಬೆಂಗಳೂರಿನ ಕೆಲ ಸಚಿವರ ತಲೆದಂಡಕ್ಕೂ ಚಿಂತನೆ ನಡೆಸಲಾಗ್ತಿದೆ ಎನ್ನಲಾಗಿತ್ತು.
![](https://pratidhvani.com/wp-content/uploads/2024/06/rahul-gandhi.1.2603442.jpg)
ಆದರೆ ನಿನ್ನೆ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ರಾಹುಲ್ ಗಾಂಧಿ, ಸದ್ಯಕ್ಕೆ ಕ್ಯಾಬಿನೆಟ್ ಪುನರ್ ವಿಂಗಡಣೆ ಆಗಲಿ, ಸಚಿವರನ್ನು ಕೈಬಿಡುವುದಾಗಿ ಮಾಡುವುದು ಬೇಡ. ಸದ್ಯದ ಲೆಕ್ಕಾಚಾರದಲ್ಲೊ ಲೋಕಸಭಾ ಸೀಟ್ಗಳನ್ನು ನೋಡಿದಾಗ ಕರ್ನಾಟಕದಿಂದ ಉತ್ತಮ ಸಾಧನೆಯೇ ಆಗಿದೆ. ಮುಂದಿನ ಕೆಲವು ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು, ಆ ಚುನಾವಣೆಗಳ ಕಡೆಗೆ ಗಮನ ಹರಿಸಲು ಸಜ್ಜಾಗಿ ಎಂದು ಮನವರಿಕೆ ಮಾಡಿಕೊಟ್ಟಿದ್ದಾರ ಎನ್ನಲಾಗಿದೆ. ಕಾಂಗ್ರೆಸ್ 99 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಅದರಲ್ಲಿ 9 ಮಂದಿ Loksabha ಸದಸ್ಯರು ಕರ್ನಾಟಕದಿಂದಲೇ ಆಯ್ಕೆಯಾಗಿದ್ದಾರೆ. ದೇಶಕ್ಕೆ ಹೋಲಿಸಿದಾಗ ಇದು ಒಳ್ಳೆ ನಂಬರ್ ಎಂದಿದ್ದಾರಂತೆ.
![](https://pratidhvani.com/wp-content/uploads/2024/06/1713413429-1314.jpg)
ಮಂತ್ರಿಮಂಡಲದಲ್ಲಿ ಕೂಡಿ ಕಳೆಯುವ ಲೆಕ್ಕಾಚಾರ ನಡೆಯುತ್ತಿದೆ. ಯಾರ ಯಾರ ತಲೆದಂಡ ಆಗಬಹುದು ಅನ್ನೋ ಚರ್ಚೆ ನಡುವೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಸಚಿವರಾದ ಕೆ.ಎಚ್ ಮುನಿಯಪ್ಪ, ಎನ್. ಚಲುವರಾಯಸ್ವಾಮಿ, ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಡಾ. ಎಂ.ಸಿ. ಸುಧಾಕರ್ ಅವರ ರಾಜೀನಾಮೆ ಪಡೆದುಕೊಳ್ಳಲಾಗುತ್ತದೆ ಎನ್ನಲಾಗ್ತಿತ್ತು. ಇವರ ಬದಲಿಗೆ ಉತ್ತಮ ಪ್ರದರ್ಶನ ತೋರಿಸಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡುತ್ತಾರೆ ಅನ್ನೋ ವರದಿಗಳೂ ಬಂದಿದ್ವು. ಸದ್ಯ ಹೈಕಮಾಂಡ್ ಚಿತ್ತ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಡೆಗಿದ್ದು, ಸಚಿವರ ಬದಲಾವಣೆ ಇಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.
ಕೃಷ್ಣಮಣಿ