ಬೆಂಗಳೂರು: ಏ. 23ರಂದು ನಡೆದಿದ್ದ ಬೆಂಗಳೂರು ಕರಗದ ವೇಳೆ ಯುವಕರ ಮಧ್ಯೆ ಮಾರಾಮಾರಿ ನಡೆದು, ಗಾಯಗೊಂಡು ಆಸ್ಪತ್ರೆ ಸೇರಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕರಗ ಮಹೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಯುವಕರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ಅಣ್ಣಮ್ಮ ದೇಗುಲದ ಹತ್ತಿರ ಕರಗದ ವೇಳೆ ಏ. 23ರಂದು ಈ ಗಲಾಟೆ ನಡೆದಿತ್ತು. ಆದರೆ, ಗಲಾಟೆಯಲ್ಲಿ ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಯುವಕ ಡಿ. ಸಾರಥಿ ಸಾವನ್ನಪ್ಪಿದ್ದಾರೆ.
ಮೃತ ಸಾರಧಿ, ಶೇಷಾದ್ರಿಪುರಂನ ವಿವಿ ಗಿರಿಯ ನಿವಾಸಿ. ಡ್ಯಾನ್ಸ್ ಮಾಡುವಾಗ ಸ್ಪರ್ಶಿಸಿದ ಎಂಬ ಕಾರಣಕ್ಕೆ ಸಾರಥಿ ಹಾಗೂ ಇನ್ನೊಂದು ಗುಂಪಿನ ಮಧ್ಯೆ ಗಲಾಟೆ ನಡೆದಿತ್ತು. ಆರೋಪಿಗಳು ಸಾರಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸ್ಥಳದಲ್ಲಿದ್ದವರು ಕೂಡಲೇ ಸಾರಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾರಥಿ ಇಂದು ಸಾವನ್ನಪ್ಪಿದ್ದಾರೆ. ಈ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.