ಬೆಂಗಳೂರು (Bengaluru): ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಇದೀಗ ರಾಜ್ಯಪಾಲರ ಅಂಗಳಕ್ಕೆ ತಲುಪಿದೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಮಸೂದೆಗೆ ಅಂಕಿತ ಹಾಕುವರೇ ? ಎಂಬ ಕುತೂಹಲ ಮೂಡಿದೆ.
ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ (RamalingaReddy) ಅವರು ಗುರುವಾರ ವಿಧೇಯಕ ಮಂಡಿಸಿ, ಮತ್ತೊಮ್ಮೆ ಪರ್ಯಾಲೋಚನೆ ಮಾಡಿ ಅಂಗೀಕಾರ ನೀಡುವಂತೆ ಕೋರಿದರು. ಈ ವೇಳೆ ಪ್ರತಿಪಕ್ಷದವರು ಸಭಾತ್ಯಾಗ ಮಾಡಿದ್ದರಿಂದ ಕೇವಲ ಆಡಳಿತ ಶಾಸಕರು ಮಾತ್ರ ಸದನದಲ್ಲಿದ್ದರು. ಸ್ಪೀಕರ್ ಯು.ಟಿ.ಖಾದರ್ (UTKhader) ಅವರು ಮತಕ್ಕೆ ಹಾಕಿದಾಗ, ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್ ಸರ್ಕಾರ, ಈ ತಿದ್ದುಪಡಿ ಮಸೂದೆಗೆ ಗುರುವಾರ ಎರಡನೇ ಬಾರಿ ಅಂಗೀಕಾರ ಪಡೆದುಕೊಂಡಿದೆ. ಈಗ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗಿದ್ದು, ರಾಜ್ಯಪಾಲರು ಸಹಿ ಹಾಕಿದ ನಂತರ ಅದು ಕಾನೂನಾಗಿ ಜಾರಿಗೆ ಬರುತ್ತದೆ.
ವಿಧಾನ ಪರಿಷತ್ನಲ್ಲಿ ಬಹುಮತ ಹೊಂದಿರುವ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರೋಧದಿಂದಾಗಿ ಈ ವಿಧೇಯಕ ಕಳೆದ ವಾರ ತಿರಸ್ಕೃತಗೊಂಡಿತ್ತು. ಗುರುವಾರ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗಿದೆ. ಸಂಸದೀಯ ನಿಯಮಾವಳಿಗಳಂತೆ ತಿರಸ್ಕೃತ ವಿಧೇಯಕ ಮತ್ತೆ ವಿಧಾನಸಭೆಯಲ್ಲಿ ಅಂಗೀಕಾರಗೊಂಡರೆ ಅದಕ್ಕೆ ಪರಿಷತ್ ನಲ್ಲಿ ಅಂಗೀಕಾರ ಪಡೆಯುವ ಅಗತ್ಯ ಇಲ್ಲ. ಅದನ್ನು ನೇರವಾಗಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ.
ವಾರ್ಷಿಕ ಒಂದು ಕೋಟಿ ರೂ.ಗಳ ಆದಾಯ ಮೀರುವ ಹಿಂದೂ ದೇಗುಲಗಳು ತಮ್ಮ ಈ ಆದಾಯದ ಶೇ.10 ರಷ್ಟನ್ನು ಸರ್ಕಾರಕ್ಕೆ ಕೊಡಬೇಕು. ಹತ್ತು ಲಕ್ಷ ರೂ.ಗಳಿಂದ ಒಂದು ಕೋಟಿ ರೂ. ಒಳಗಿನ ಆದಾಯ ಹೊಂದಿರುವ ದೇಗುಲಗಳು ಶೇ.5ರಷ್ಟನ್ನು ನೀಡಬೇಕು ಎಂಬುದು ತಿದ್ದುಪಡಿ ವಿಧೇಯಕದ ಮುಖ್ಯಾಂಶ. ಆದ್ದರಿಂದಲೇ ಇದಕ್ಕೆ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
#Karnataka #bengaluru #templebill #ThawarChandGehlot #congressgovt