ಬೆಂಗಳೂರು: ಯಾರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಪರ, ಹಿನ್ನೆಲೆ, ಸಿದ್ದಾಂತ ಏನೆಂಬುದನ್ನು ಅರಿತುಕೊಳ್ಳಬೇಕು ಎಂದು ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Karge) ಬಹಿರಂಗವಾಗಿ ಎಚ್ಚರಿಕೆ ನೀಡಿದರು.
ಜಗದೀಶ್ ಶೆಟ್ಟರ್ ಪಕ್ಷ ತೊರೆದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕೆ ಯಾರನ್ನೇ ಸೇರಿಸಿಕೊಳ್ಳಬೇಕಾದಾಗ ಯೋಚನೆ ಮಾಡಬೇಕು, ಅವರ ಹಿನ್ನೆಲೆ ಏನು ಸಿದ್ದಾಂತ ಏನು ತತ್ವ ಏನು ಎಂಬುದನ್ನು ಅರಿತುಕೊಳ್ಳಬೇಕು. ನಮ್ಮ ತತ್ವ ಸಿದ್ದಾಂತಕ್ಕೆ ಸೂಕ್ತ ಆಗುವವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಪಕ್ಷಕ್ಕೆ ನಿಷ್ಟಾವಂತರು ಮಾತ್ರ ಬರಬೇಕಿದ್ದು, ಹೀಗೆ ಬಂದ್ರು, ಹಾಗೆ ಹೋದ್ರು ಅಂತ ಆಗಬಾರದು. ಅವರ ತತ್ವಗಳ ಆಧಾರದ ಮೇಲೆ ಸೇರ್ಪಡೆ ಮಾಡಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಕಿವಿಮಾತು ಹೇಳುವ ಮೂಲಕ ಶೆಟ್ಟರ್ ಬಗ್ಗೆ ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೇ ತತ್ವ ಸಿದ್ದಾಂತ ನೋಡಿ ಪಕ್ಷಕ್ಕೆ ಸೇರಿಸಿಕೊಳ್ಳಬೇಕು, ಯಾಕಂದ್ರೆ ಇವತ್ತು ಬಂದ ನಾಳೆ ಹೋದ ಎಂಬುದು ಆಗಬಾರದು. ಜಗದೀಶ್ ಶೆಟ್ಟರ್ ವಾಪಸ್ ಹೋಗಿದ್ದು ಲೋಕಲ್ ಇಶ್ಯು, ಅದರ ಬಗ್ಗೆ ಡೀಟೇಲ್ ಆಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುತ್ತಾರೆ ಎಂದರು.