ನವದೆಹಲಿ: ಜಾರಿ ನಿರ್ದೇಶನಾಲಯದ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ಹಾಜರಾಗುವುದಿಲ್ಲ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷ ಸಡ್ಡು ಹೊಡೆದಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣ ಕುರಿತಂತೆ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರು ನವೆಂಬರ್ 2 ಮತ್ತು ಡಿಸೆಂಬರ್ 21ರಂದು ನೀಡಿರುವ ಹಿಂದಿನ ಎರಡು ಸಮನ್ಸ್ಗಳಿಗೂ ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ನಿರಾಕರಿಸಿದ ನಂತರ ಮೂರನೇ ನೋಟಿಸ್ ಜಾರಿ ಮಾಡಲಾಗಿತ್ತು.
ಇಡಿ ನೀಡಿರುವ ಸಮನ್ಸ್ಗಳು ಕಾನೂನುಬಾಹಿರವಾಗಿದ್ದು, ಕೇಜ್ರಿವಾಲ್ ಅವರನ್ನು ಬಂಧಿಸುವುದೊಂದೇ ಅವರ ಗುರಿ ಎಂದು ಆರೋಪಿಸಿರುವ ಆಪ್, ಕೇಜ್ರಿವಾಲ್ ಅವರು ತನಿಖಾ ಸಂಸ್ಥೆಯೊಂದಿಗೆ ಸಹಕರಿಸಲು ಸಿದ್ಧರಿದ್ದಾರೆ. ಆದರೆ, ಇಡಿ ಸಮನ್ಸ್ ಕಾನೂನುಬಾಹಿರವಾಗಿದ್ದು, ಅವರನ್ನು ಬಂಧಿಸುವ ಉದ್ದೇಶದಿಂದ ಕಳುಹಿಸಲಾಗಿದೆ ಎಂದು ದೂರಿದೆ.
ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಿಂದ ತಡೆಯುವ ಪ್ರಯತ್ನವಾಗಿದ್ದು, ಚುನಾವಣೆಗೆ ಮುಂಚೆಯೇ ನೋಟಿಸ್ ಏಕೆ ಕಳುಹಿಸಲಾಗಿದೆ? ಎಂದು ಪ್ರಶ್ನಿಸಿರುವ ಆಪ್ , ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥರನ್ನು ಕೇಂದ್ರ ತನಿಖಾ ದಳವು ಏಪ್ರಿಲ್ನಲ್ಲಿ ವಿಚಾರಣೆ ನಡೆಸಿತ್ತು. ಆದರೆ, ಇಡಿ ಅವರನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ.
ಜಾರಿ ನಿರ್ದೇಶನಾಲಯದಿಂದ ಮೊದಲ ಸಮನ್ಸ್ ಜಾರಿಯಾದಾಗಿನಿಂದಲೂ, ದೆಹಲಿ ಮುಖ್ಯಮಂತ್ರಿಯನ್ನು ಅವರ ವಿಚಾರಣೆಯ ನಂತರ ಸಂಸ್ಥೆಯು ಬಂಧಿಸುತ್ತದೆ ಎಂಬ ತೀವ್ರ ಊಹಾಪೋಹಗಳು ಇದ್ದವು. ಎಎಪಿಯ ಹಲವು ನಾಯಕರು ಕೂಡ ಇದೇ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.
ಡಿಸೆಂಬರ್ 22ರಂದು ಇಡಿಗೆ ಪತ್ರ ಬರೆದಿದ್ದ ಕೇಜ್ರಿವಾಲ್, ಕಾನೂನಿಗೆ ಅನುಸಾರವಾಗಿ ನೀಡಲಾದ ಯಾವುದೇ ಸಮನ್ಸ್ಗಳನ್ನು ಅನುಸರಿಸುವುದರಿಂದ ನಾನು ದೂರ ಸರಿಯುವುದಿಲ್ಲ. ಆದರೆ, ನಿಮ್ಮ ಸಮನ್ಸ್ಗಳು ಕಾನೂನಿಗೆ ಅನುಗುಣವಾಗಿಲ್ಲ. ನೀವು ಉದ್ದೇಶಪೂರ್ವಕವಾಗಿ, ಯಾವುದೇ ಕಾರಣ ಮತ್ತು ತನಿಖೆಯ ಅಗತ್ಯವನ್ನು ನಿರ್ದಿಷ್ಟಪಡಿಸದೆ ವೈಯಕ್ತಿಕವಾಗಿ ನನ್ನ ಪಾತ್ರವನ್ನು ಮಾತ್ರ ಹುಡುಕಿದ್ದೀರಿ. ನಿಮ್ಮ ಸಮನ್ಸ್ ನನಗೆ ಕಿರುಕುಳ ಮತ್ತು ಮುಜುಗರವನ್ನು ಉಂಟುಮಾಡುವ ಉದ್ದೇಶವನ್ನು ಸೂಚಿಸುತ್ತದೆ ಎಂದು ಹೇಳಿದ್ದರು.
ಅಬಕಾರಿ ನೀತಿಯನ್ನು ಅಂತಿಮಗೊಳಿಸಲು ಎಎಪಿ 100 ಕೋಟಿ ಕಿಕ್ಬ್ಯಾಕ್ ಪಡೆದಿದೆ ಮತ್ತು ಇದರ ಭಾಗವನ್ನು ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ. ಹಣವನ್ನು ಸೌತ್ ಗ್ರೂಪ್ ನಿಂದ ಸ್ವೀಕರಿಸಲಾಗಿದ್ದು, ಆರೋಪಿಗಳಾದ ಅಭಿಷೇಕ್ ಬೋಯಿನ್ಪಲ್ಲಿ ಮತ್ತು ದಿನೇಶ್ ಅರೋರಾ ಅವರ ಸಹಾಯದಿಂದ ಮಾಜಿ ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ಗೆ ವರ್ಗಾಯಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಪ್ರಚಾರದ ಸಮಯದಲ್ಲಿ ಎಎಪಿ ಸ್ವಯಂಸೇವಕರಿಗೆ ನಗದು ರೂಪದಲ್ಲಿ ಹಣ ನೀಡಿದೆ ಎಂದು ಇಡಿ ಆರೋಪಿಸಿದೆ.
ಕೇಜ್ರಿವಾಲ್ ಅವರನ್ನು ಬಂಧಿಸಿದರೆ ರಾಜೀನಾಮೆ ನೀಡಬೇಕೆ ಅಥವಾ ಜೈಲಿನಿಂದ ಸರ್ಕಾರವನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಎಎಪಿ ಸಾರ್ವಜನಿಕ ಪ್ರತಿಕ್ರಿಯೆಯನ್ನು ಕೇಳುತ್ತಿದೆ. ಎಎಪಿಯನ್ನು ದುರ್ಬಲಗೊಳಿಸಲು ಕೇಜ್ರಿವಾಲ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಪಿತೂರಿ ನಡೆಸುತ್ತಿದೆ ಎಂದು ಆಪ್ ಆರೋಪಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿಯಲ್ಲಿ ಬಂಧಿಸಲಾಯಿತು. ನಂತರ, ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಅಕ್ಟೋಬರ್ನಲ್ಲಿ ಬಂಧಿಸಲಾಗಿದೆ.