ರಮೇಶ್ ಜಾರಕಿಹೊಳಿ ಪ್ರಭಾವಿ ರಾಜಕಾರಣಿ ಅನ್ನೋದು ಎಲ್ಲರಿಗೂ ಗೊತ್ತಿರೋ ಸಂಗತಿ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳವಣಿಗೆಗೆ ರಮೇಶ್ ಜಾರಕಿಹೊಳಿ ಅಡ್ಡಿಯಾದ್ರು ಅನ್ನೋ ಕಾರಣಕ್ಕೆ ಡಿ.ಕೆ ಶಿವಕುಮಾರ್ ಕೆಂಗಣ್ಣಿಗೆ ಗುರಿಯಾದ್ರು ಅನ್ನೋ ಮಾತು ರಾಜಕಾರಣದಲ್ಲಿ ಮುಚ್ಚಿಟ್ಟುಕೊಂಡಿರುವ ಸತ್ಯ. ಇದೀಗ ಬಿಜೆಪಿ ಸೇರಿ ರಾಜಕಾರಣ ಮಾಡುತ್ತಿರುವ ರಮೇಶ್ ಜಾರಕಿಹೊಳಿಗೆ ಅಲ್ಲಿನ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಿಸಿದೆ. ನಾನು ಅಂದುಕೊಂಡಿದ್ದು ಬಿಜೆಪಿಯಲ್ಲಿ ಆಗ್ತಿಲ್ಲ ಅನ್ನೋ ಅರಿವಾಗಿದ್ದು, ಡಿ.ಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಮೂಲಕವೇ ಅಸ್ತ್ರ ಪ್ರಯೋಗ ಮಾಡುವ ಕೆಲಸ ಮಾಡಿದ್ದಾರೆ. ತನ್ನದೇ ಸಿಡಿ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಆಗ್ರಹ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ನೇರ ಕೈವಾಡಯಿದ್ದು, ಅವರ ಕೈವಾಡ ಇಲ್ಲ ಎನ್ನುವುದು ಸಾಬೀತಾದ್ರೆ ನಾನು ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡ್ತೇನೆ ಎಂದು ಸವಾಲು ಹಾಕಿದ್ದಾರೆ.
ಸೋನಿಯಾ ಗಾಂಧಿಗೂ ಬ್ಲಾಕ್ಮೇಲ್ ಮಾಡಿದ್ರಾ ಡಿಕೆ..?
ಡಿ.ಕೆ ಶಿವಕುಮಾರ್ ತಿಹಾರ್ ಜೈಲು ಸೇರಿದ್ದಾಗ ಸೋನಿಯಾ ಗಾಂಧಿ ಜೈಲಿಗೆ ಹೋಗಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಈ ಭೇಟಿ ಹಿಂದೆಯೂ ಡಿ.ಕೆ ಶಿವಕುಮಾರ್ ಅವರ ಬ್ಲಾಕ್ ಮೇಲ್ ಕೆಲಸ ಮಾಡಿದೆ ಎನ್ನುವುದು ರಮೇಶ್ ಜಾರಕಿಹೊಳಿ ಆರೋಪ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡದಿದ್ರೆ ಐಟಿ, (ಜಾರಿ ನಿರ್ದೇಶನಾಲಯ) ED ಎದುರು ಸತ್ಯ ಹೇಳುವ ಮೂಲಕ ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸ್ತೇನೆ ಎಂದು ಬೆದರಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕುಟುಕಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ರಮೇಶ್ ಜಾರಕಿಹೊಳಿ, ಮುಂದಿನವಾರದಲ್ಲಿ ನೇರವಾಗಿಯೇ ಸಿಎಂ ಭೇಟಿ ಮಾಡಿ ಸಿಬಿಐ ತನಿಖೆಗೆ ಕೊಡುವಂತೆ ಒತ್ತಡ ಏರುತ್ತೇನೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಕೈವಾಡ ಇಲ್ಲ ಎನ್ನುವುದಾದರೆ ನಾನು ರಾಜಕೀಯದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಈ ಅಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಬಳಸಿಕೊಳ್ತಾರಾ..? ಅನ್ನೋ ಕುತೂಹಲ ಮೂಡಿಸಿದೆ.
ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟ ಡಿಕೆಶಿಗೆ ವಿಘ್ನ ಆಗುತ್ತಾ..?
ಎರಡೂವರೆ ವರ್ಷದ ಬಳಿಕ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದು ಡಿಕೆಶಿ ಬಣದ ಶಾಸಕ ಬಸವರಾಜ್ ಶಿವಗಂಗಾ ಪದೇ ಪದೇ ಹೇಳುತ್ತಲೇ ಇದ್ದಾರೆ. ಕ್ಯಾಬಿನೆಟ್ ರಿಶೆಫಲ್ ಆಗುತ್ತಾ..? ಅನ್ನೋ ಪ್ರಶ್ನೆಗೆ ಕೇವಲ ಕ್ಯಾಬಿನೆಟ್ ಆದ್ರೆ ಸಾಕಾ ಅಂತ ಮರು ಪ್ರಶ್ನೆ ಎಸೆದಿದ್ದಾರೆ. ಅಂದರೆ ಪರೋಕ್ಷವಾಗಿ ಸಿಎಂ ಬದಲಾಗಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ. ಕ್ಯಾಬಿನೆಟ್ ಪುನಾರಚನೆ ಆಗಬೇಕು ಎಲ್ಲರಿಗೂ 20 ತಿಂಗಳು ಸಚಿವ ಸ್ಥಾನ ಸಿಗಬೇಕು ಎಂಬ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಬಗ್ಗೆ ಮಾತನಾಡಿ, ಬೇಳೂರು ಗೋಪಾಲಕೃಷ್ಣ ಪರ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಬ್ಯಾಟಿಂಗ್ ಮಾಡಿದ್ದಾರೆ. ಬೇಲೂರು ಅಣ್ಣ ಹೇಳಿರೋದು ನೂರಕ್ಕೆ ನೂರಷ್ಟು ಸರಿ ಇದೆ. ಅವಕಾಶ ಎಲ್ಲರಿಗೂ ಕೊಡಬೇಕು.. ಅವಕಾಶ ನಿಂತ ನೀರಾಗಬಾರದು. ಯಾರು ಯಾರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ ಎಲ್ಲರಿಗೂ ಸಚಿವ ಸ್ಥಾನ ಕೊಡಲಿ. ಎಲ್ಲರೂ ಉತ್ತಮ ಕೆಲಸ ಮಾಡ್ತಾರೆ ಎಂದಿದ್ದಾರೆ. ಈ ಮಾತುಗಳಿಗೆ ಒಂದೇ ಬಾಣ ಹೂಡುವ ಅವಕಾಶ ಸಿಎಂ ಸಿದ್ದರಾಮಯ್ಯ ಎದುರಿಗೆ ಇದೆ.
ಸಿ.ಡಿ ಚಿತ್ರೀಕರಣಕ್ಕೆ ಬಿಜೆಪಿಯಲ್ಲೇ ಕ್ಲೈಮ್ಯಾಕ್ಸ್..!
ಬಿಜೆಪಿ ಸರ್ಕಾರವೇ ಇತ್ತು, ಯಾಕೆ ಸಿಬಿಐಗೆ ಕೊಡಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಜಾರಕಿಹೊಳಿ, ಸಿಡಿ ವಿಚಾರದ ಕ್ಲೈಮ್ಯಾಕ್ಸ್ ನಡೆದಿದ್ದೇ ಬಿಜೆಪಿ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದ್ದು, ನಾನು ಪಕ್ಷಕ್ಕೆ ಮುಜುಗರ ಮಾಡಲು ಇಷ್ಟಪಡಲ್ಲ ಎಂದಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಈ ವಿಚಾರಕ್ಕೆ ಬಸವರಾಜ್ ಶಿವಗಂಗಾ ಮಾತನಾಡಿ, ರಮೇಶ್ ಜಾರಕಿಹೊಳಿ ಆಟ ಈ ಬಾರಿ ನಡೆಯಲ್ಲ. ರಮೇಶ್ ಜಾರಕಿಹೊಳಿ ಹೇಳಿದ್ದು ಆಗಲ್ಲ, ನಾನು ಹೇಳಿದ್ದು ಆಗುತ್ತೆ. ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದಾರೆ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ. ಆದರೆ ಸಿಬಿಐ ತನಿಖೆಗೆ ವಹಿಸುವಂತೆ ರಮೇಶ್ ಜಾರಕಿಹೊಳಿ ಮನವಿಯನ್ನು ಅಂಗೀಕರಿಸಿ ಸಿಎಂ ಸಿದ್ದರಾಮಯ್ಯ ಒಂದು ವೇಳೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಸಿಎಂ ಹುದ್ದೆಯ ಕನಸುಇ ಕಾಣುತ್ತಿರುವ ಡಿಸಿಎಂ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನುವ ಮಾತುಗಳಿವೆ. ಆದರೆ ಸಿದ್ದರಾಮಯ್ಯ ಈ ಅವಕಾಶ ಬಳಸಿಕೊಳ್ತಾರಾ..? ಅನ್ನೋದೇ ಈಗಿರುವ ಪ್ರಶ್ನೆ.