ಧಾರವಾಡ: ದೇಶದಾದ್ಯಂತ ವಂದೇ ಭಾರತ್ ರೈಲು (Vande Bharat Express) ಪ್ರಯಾಣಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಭಾರತೀಯ ರೈಲ್ವೆ ಇಲಾಖೆಯು (Indian Railway Department) ಗಾಂಧಿ ಜಯಂತಿ ಅಂಗವಾಗಿ ಹೊಸ ತಂತ್ರಜ್ಞಾನದೊಂದಿಗೆ ಕೇವಲ 14 ನಿಮಿಷಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸ್ವಚ್ಛಗೊಳಿಸುವ ತಂತ್ರವನ್ನು ಪರಿಚಯಿಸಿದ್ದು ಚಮತ್ಕಾರ ಮಾಡಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 20662) ರೈಲನ್ನು ಕೇವಲ 14 ನಿಮಿಷಗಳಲ್ಲಿ ಸ್ವಚ್ಛಗೊಳಿಸಿ ಪವಾಡ ಮಾಡಿದೆ.
ಭಾರತೀಯ ರೈಲ್ವೆ ಇಲಾಖೆಯು ಅಕ್ಟೋಬರ್ 1ರಿಂದ ವಂದೇ ಭಾರತ್ ರೈಲುಗಳ ‘ಸ್ವಚ್ಛತೆಗೆ 14 ನಿಮಿಷಗಳ ಚಮತ್ಕಾರ’ ಅನ್ನೋ ಪರಿಕಲ್ಪನೆಯನ್ನು ಪರಿಚಯಿಸಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಪ್ರಯತ್ನ. ದೇಶಾದ್ಯಂತ 29 ವಂದೇ ಭಾರತ್ ರೈಲುಗಳೊಂದಿಗೆ ಆಯಾ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ವೇಳೆ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ವಿಕೆ ಅಗರ್ವಾಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಎಸ್ಡಬ್ಲ್ಯೂಆರ್ ಹುಬ್ಬಳ್ಳಿ ವಿಭಾಗ) ಹರೀಶ್ ಖರೆ, ಹೆಚ್ಚುವರಿ. DRM ಸಂತೋಷ್ ಕುಮಾರ್ ವರ್ಮಾ, ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಇತರರು ಧಾರವಾಡ ರೈಲು ನಿಲ್ದಾಣದಲ್ಲಿ ಉಪಸ್ಥಿತರಿದ್ದರು.