
ತಮಿಳುನಾಡಿಗೆ ಹರಿಬಿಡುತ್ತಿರುವ ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ಗೆ ಅಭೂತಪೂರ್ವ ಬೆಂಬಲ ಸಿಕ್ಕಿರುವ ಬೆನ್ನಲ್ಲೇ ಇದೀಗ ನಾಳೆ(ಸೆಪ್ಟೆಂಬರ್ 29) ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ. ಹೀಗಾಗಿ, ನಾಳೆ ಏನಿರುತ್ತೆ ಏನಿರಲ್ಲ? ಕರ್ನಾಟಕದ ಬಂದ್ ಎಷ್ಟು ಗಂಟೆಯಿಂದ ಎಷ್ಟು ತನಕ ಇರಲಿದೆ ಎನ್ನುವ ಸಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು: ತಮಿಳುನಾಡಿಗೆ (Tamil Nadu) ಹರಿಬಿಡುತ್ತಿರುವ ಕಾವೇರಿ ನೀರಿನ(Cauvery Water Dispute) ಬಗ್ಗೆ ಕನ್ನಡಿಗರಲ್ಲಿ (Kannadigas) ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಇದೇ ಮಂಗಳವಾರ ನೀಡಿದ್ದ ಬೆಂಗಳೂರು ಬಂದ್ಗೆ ಅಭೂತಪೂರ್ವ ಬೆಂಬಲ ಸಿಕ್ಕಿರುವ ಬೆನ್ನಲ್ಲೇ ಇದೀಗ ನಾಳೆ(ಸೆಪ್ಟೆಂಬರ್ 29) ಅಖಂಡ ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಲಾಗಿದೆ. ನಾಳೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಸಿಗುವುದು ಅನುಮಾನವಾಗಿದೆ. ಹಾಗಾದ್ರೆ, ಕರ್ನಾಟಕ ಬಂದ್ ಎಷ್ಟು ಗಂಟೆಯಿಂದ ಎಷ್ಟು ಗಂಟೆ ತನಕ ಇರಲಿದೆ? ಈ ವೇಳೆ ಏನಿರುತ್ತೆ ಏನಿರಲ್ಲ ಎನ್ನುವ ಸಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ನಾಳಿನ ಕರ್ನಾಟಕ ಬಂದ್ಗೆ ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಉಬರ್ ಸಂಘ, ಆದರ್ಶ್ ಆಟೋ ಚಾಲಕರ ಸಂಘ ಬೆಂಬಲಿಸಿದೆ. ಖಾಸಗಿ ಶಾಲಾ ವಾಹನ ಚಾಲಕರು ನೈತಿಕ ಬೆಂಬಲ ನೀಡಿದ್ದಾರೆ. ಗೂಡ್ಸ್ ವಾಹನ, ಖಾಸಗಿ ವಾಹನ ಮಾಲೀಕರು, ಲಾರಿ ಮಾಲೀಕರು ಹಾಗೂ ಚಾಲಕರು ಸೇರಿ ಹಲವರು ಬೆಂಬಲ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಸಂಪೂರ್ಣ ಬಂದ್ ಇರಲಿದೆ. ಶುಕ್ರವಾರ ಬೆಳಗ್ಗೆ ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೆ ಱಲಿ ಹಮ್ಮಿಕೊಂಡಿರೋ ಕನ್ನಡ ಪರ ಹೋರಾಟಗಾರರು, ಟೋಲ್ಗಳಿಗೆ ಮುತ್ತಿಗೆ ಹಾಕಿ ರೈಲು, ಹೆದ್ದಾರಿ ತಡೆಯೋದಕ್ಕೂ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣಗಳಿಗೆ ಮುತ್ತಿಗೆ ಹಾಕೋದಾಗಿ ವಾಟಾಳ್ ನಾಗರಾಜ್ ಹೇಳಿದ್ದಾರೆ. ಅಲ್ಲದೇ, ಬೀದರ್ನಿಂದ ಚಾಮರಾಜನಗರವರೆಗೆ, ಕೋಲಾರದಿಂದ ಮಂಗಳೂರಿನವರೆಗೆ ಜಿಲ್ಲೆ ಜಿಲ್ಲೆಯಲ್ಲೂ ಕರ್ನಾಟಕ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕರವೇ ನಾರಾಯಣಗೌಡ ಮಹಿಳಾ ಘಟಕ ಬೃಹತ್ ಪ್ರತಿಭಟನೆ
ನಾಳೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕದ ಪರವಾಗಿ ಸಂಘಟಿತ ಹೋರಾಟ ನಡೆಸದ ರಾಜ್ಯದ ಸಂಸದರ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಮಹಿಳೆಯರು ಗಾಂಧಿನಗರದ ಕರವೇ ಕಚೇರಿಯಿಂದ ಫ್ರೀಡಂ ಪಾರ್ಕ್ವರೆಗೆ ಬೃಹತ್ ರ್ಯಾಲಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.
ನಾಳೆ ಏನಿರಲ್ಲ?
ನಾಳೆ ಕರ್ನಾಟಕ ಬಂದ್ ದಿನ ಹೋಟೆಲ್ಗಳು ಇರಲ್ಲ, ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿರುವುದರಿಂದ ಚಿತ್ರಮಂದಿರಗಳು ಕ್ಲೋಸ್ ಆಗಿರಲಿವೆ. ಇನ್ನುಳಿದಂತೆ ಮಾಲ್ಗಳು, ಆಟೋ, ಕ್ಯಾಬ್, ಓಲಾ, ಉಬರ್ ಖಾಸಗಿ ಬಸ್ಗಳು ರಸ್ತೆಗೆ ಇಳಿಯಲ್ಲ. ಬೇಕರಿಗಳು ಕ್ಲೋಸ್ ಆಗಿರಲಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಂದ್ ಬಿಸಿ ತಟ್ಟಲಿದೆ. ಶಾಲಾ-ಕಾಲೇಜುಗಳು ಓಪನ್ ಆಗೋದು ಡೌಟ್ ಎನ್ನಲಾಗಿದೆ.
ಏನೆಲ್ಲಾ ಇರುತ್ತೆ?
ಇನ್ನು ನಾಳೆ ಏನೆಲ್ಲಾ ಇರುತ್ತೆ ಎನ್ನುವುದನ್ನು ನೋಡೋದಾದ್ರೆ ಕರ್ನಾಟಕ ಬಂದ್ ವೇಳೆ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ಗಳು, ಆಂಬುಲೆನ್ಸ್, ಹಾಲಿನ ಅಂಗಡಿ ಎಂದಿನಂತೆ ತೆರೆದಿರುತ್ತವೆ.
ಉಳಿದಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ಗಳು, ಶಾಲೆ-ಕಾಲೇಜುಗಳು, ಮತ್ತು ಮೆಟ್ರೋ ಸೇವೆ ಹಾಗೂ ಸರ್ಕಾರಿ ಕಚೇರಿಗಳ ಬಗ್ಗೆ ಈವರೆಗೂ ನಿರ್ಧಾರವಾಗಿಲ್ಲ. ಸಂಜೆ ವೇಳೆ ಎಲ್ಲಾ ತಿಳಿಯಲಿದೆ.
ಮೊನ್ನೆ ಬಂದ್ ವೇಳೆ ಬೆಂಗಳೂರು ಸಂಪೂರ್ಣ ಸ್ತಬ್ಧವಾದಂತೆ ನಾಳೆ ಕೂಡ ಕರ್ನಾಟಕ ಸಂಪೂರ್ಣವಾಗಿ ಸ್ತಬ್ಧವಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಂದ್ ಎಷ್ಟರ ಮಟ್ಟರ ಮಟ್ಟಿಗೆ ಕಾವೇರಿ ವಿಚಾರದಲ್ಲಿ ಪರಿಣಾಮ ಬೀರಲಿದೆ ಅನ್ನೋದೆ ಪ್ರಶ್ನೆ.