2 ದಿನಗಳ ಜಿ 20 ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಕೆನಡಾಗೆ ಹಿಂತಿರುಗುವ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಭಾನುವಾರ (ಸೆಪ್ಟೆಂಬರ್ 11) ರಾತ್ರಿ ದೆಹಲಿಯಲ್ಲೇ ಉಳಿಯುವಂತಾಗಿದೆ.
ಜಿ 20 ಶೃಂಗಸಭೆ ಮುಗಿಸಿ ಕೆನಡಾ ಪ್ರಧಾನಿ ಜಸ್ಟಿನ್ ಹೊರಡಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಈ ಕಾರಣದಿಂದ ಭಾನುವಾರ ರಾತ್ರಿ ಟ್ರುಡೊ ದೆಹಲಿಯಲ್ಲಿಯೇ ಉಳಿದುಕೊಂಡರು. ರಾತ್ರಿ 8 ಗಂಟೆಗೆ ಹೊರಡಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು.
“ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಪ್ರಯಾಣಿಸಬೇಕಿದ್ದ CFC001 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಕೆನಡಾದ ಸಶಸ್ತ್ರ ಪಡೆಯಿಂದ ತಿಳಿದು ಬಂದಿತು. ವಿಮಾನದಲ್ಲಿನ ದೋಷವನ್ನು ರಾತ್ರಿಯೇ ಸರಿಪಡಿಸಲಾಗುವುದಿಲ್ಲ, ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನಮ್ಮ ನಿಯೋಗವು ಭಾರತದಲ್ಲಿಯೇ ಇರುತ್ತದೆ” ಎಂದು ಕೆನಡಾ ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶುಕ್ರವಾರ ದೆಹಲಿಗೆ ಆಗಮಿಸಿದ್ದರು. ಜಿ20 ಶೃಂಗಸಭೆ ನಡುವೆಯೇ ಟ್ರುಡೋ ಪ್ರದಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.