ಇಂಡಿಯಾ ಹಾಗೂ ಪಾಕಿಸ್ತಾನದ ನಡುವೆ ನಡೆದ ಏಷ್ಯಾಕಪ್ ಪಂದ್ಯಾಟದಲ್ಲಿ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭಿರ್ ಪಾಲ್ಗೊಂಡಿರುವುದು ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ.
ಕೇವಲ ಮೂರು ವಾರಗಳ ಹಿಂದೆಯಷ್ಟೇ ಪಾಕಿಸ್ತಾನದ ಜೊತೆಗೆ ಯಾವುದೇ ಕಾರಣಕ್ಕೂ ಭಾರತ ಆಟ ಆಡಬಾರದು ಎಂದು ಕರೆ ನೀಡಿದ್ದ ಗಂಭೀರ್, ಇದೀಗ ಕಾಮೆಂಟರಿ ಮಾಡಲು ಕುಳಿತುಕೊಂಡಿರುವುದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಹಣಾಹಣಿಯನ್ನು ರದ್ದುಗೊಳಿಸಬೇಕು. ಪಾಕಿಸ್ತಾನದ ಸಮಸ್ಯೆಗಳು ಬಗೆ ಹರಿಯುವವರೆಗೆ ಯಾವುದೇ ಕ್ರೀಡಾಕೂಟ ನಡೆಯಲು ಸಾಧ್ಯವಿಲ್ಲ ಎಂದು ಗಂಭೀರ್ ಹೇಳಿದ್ದರು.
“ನನ್ನನ್ನು ಪದೇ ಪದೇ ಟೀಕಿಸಬಹುದು, ಆದರೆ ಕ್ರಿಕೆಟ್ ಪಂದ್ಯ ಸೇರಿದಂತೆ ಯಾವುದೂ ಕೂಡ ನಮ್ಮ ಸೈನಿಕನ ಪ್ರಾಣಕ್ಕಿಂತ ನನಗೆ ಹೆಚ್ಚು ಮೌಲ್ಯಯುತವಾಗಿಲ್ಲ. ಕ್ರಿಕೆಟ್ ಅನ್ನು ರಾಜಕೀಯದಿಂದ ಬೇರ್ಪಡಿಸಲು ಸಾಧ್ಯವಿಲ್ಲ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಿಗೆ ಬಂದಾಗ ಎಂದು ಗಂಭೀರ ಒತ್ತಿ ಹೇಳಿದ್ದರು.
“ಎರಡೂ ದೇಶಗಳ ನಡುವಿನ ಪರಿಸ್ಥಿತಿ ಸುಧಾರಿಸುವವರೆಗೆ ಭಾರತವು ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಆಡಬೇಕು ಎಂದು ನಾನು ನಂಬುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶದ ಆಟಗಾರರೊಂದಿಗೆ ಭಾರತೀಯ ಆಟಗಾರರು ಆಡುತ್ತಾರೆ ಎಂದು ನಿರೀಕ್ಷಿಸುವುದು ಸಮಂಜಸವಲ್ಲ” ಎಂದು ಗಂಭೀರ್ ಹೇಳಿದ್ದರು.
ಆದರೆ, ಸ್ವತಃ ಅವರದೇ ಹೇಳಿಕೆಯನ್ನು ಮರೆತಂತೆ ನಟಿಸಿದ ಗೌತಮ್ ಗಂಭೀರ್ ಯಾವುದೇ ಅಳುಕಿಲ್ಲದೆ ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ರ ಭಾರತ-ಪಾಕಿಸ್ತಾನ ಪಂದ್ಯಾಟದಲ್ಲಿ ಪಾಕ್ ಮಾಜಿ ಆಟಗಾರ ವಸೀಮ್ ಅಕ್ರಮ್ ಜೊತೆಗೆ ಕಾಮೆಂಟರಿ ಬಾಕ್ಸ್ ಕುಳಿತು ಕಾಮೆಂಟರಿ ಮಾಡಿದ್ದಾರೆ.
ಮಾತ್ರವಲ್ಲ, ಪಾಕಿಸ್ತಾನದ ಬೌಲರ್ಗಳನ್ನು ಹೊಗಳಿದ ಅವರು, ಪಾಕ್ ಬೌಲರ್ಗಳ ಆಟವನ್ನು ನೋಡಲು ಇಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಗಂಭೀರ್ ಇಬ್ಬಂದಿತನದ ನಡೆಗೆ ಟ್ವಿಟರ್ ಬಳಕೆದಾರರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಅವರ ವಿರುದ್ಧ ಟ್ರೋಲ್ ಮಾಡಿದ್ದಾರೆ.
“ಇದು ಬಿಜೆಪಿ ಸಂಸದ ಗೌತಮ್ ಗಂಭೀರ್. ಕೆಲವು ವಾರಗಳ ಹಿಂದೆ, ಭಾರತವು ಪಾಕಿಸ್ತಾನದೊಂದಿಗೆ ಆಡುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ರದ್ದುಗೊಳಿಸಬೇಕು ಎಂದು ಅವರು ಹೇಳಿದ್ದರು. ಆದರೆ, ಇಂದು ಅವರು ಕಾಮೆಂಟರಿ ಬಾಕ್ಸ್ನಲ್ಲಿ ಪಾಕಿಸ್ತಾನಿ ವೇಗದ ಬೌಲರ್ಗಳ ಕಡೆಗೆ ವಿಪರೀತವಾಗಿ ಇಷ್ಟವನ್ನು ತೋರುತ್ತಿದ್ದಾರೆ. ಇಂದಿನ ಭಾರತದಲ್ಲಿರುವ ಅತ್ಯಂತ ನಾಚಿಕೆಯಿಲ್ಲದ ವ್ಯಕ್ತಿ” ಎಂದು ರೋಷನ್ ರೈ ಎಂಬವರು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮತ್ತೋರ್ವ ನೆಟ್ಟಿಗ, “ಅವತ್ತು ಮಾತನಾಡಿರುವುದು ಬಿಜೆಪಿ ರಾಜಕಾರಣಿ ಗೌತಮ್ ಗಂಭೀರ್, ಇವತ್ತಿರುವುದು ಕ್ರಿಕೆಟಿಗ ಗಂಭಿರ್” ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು ಕೆಲವರು, ಗಂಭೀರ್ ಪಾಕ್ ಜೊತೆಗಿನ ಪಂದ್ಯ ರದ್ದು ಪಡಿಸಬೇಕು ಎಂದು ಕರೆ ನೀಡಿರುವುದರ ಹಿಂದೆ ರಾಜಕೀಯದ ಅಜೆಂಡಾ ಇತ್ತು. ಕಾಮೆಂಟರಿ ಮಾಡುವುದರ ಹಿಂದೆ ಕೇವಲ ದುಡ್ಡಿನ ಅಜೆಂಡಾ ಇದೆ ಎಂದು ಟೀಕಿಸಿದ್ದಾರೆ.