ಕಳೆದ ಮೂರು ನಾಲ್ಕು ದಿನಗಳಿಂದ ಕೆಲ ವಲಸಿಗ ಬಿಜೆಪಿ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಇದಕ್ಕೆ ಪೂರಕ ಎನ್ನುವ ಹಾಗೆ ಕೆಲ ಬಿಜೆಪಿಯ ಶಾಸಕರುಗಳು ಕೂಡ ಕಾಂಗ್ರೆಸ್ನ ನಾಯಕರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಹೀಗಾಗಿ ಕೆಲ ವಲಸಿಗ ಬಿಜೆಪಿಯ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಈ ವಿಚಾರವನ್ನು ಗಮನಿಸಿದ ಕೆಲ ಬಿಜೆಪಿ ನಾಯಕರು ಅಸಮಾಧಾನಿತ ವಲಸಿಗ ಬಿಜೆಪಿಗರನ್ನು ಸಮಾಧಾನಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ಇದು ಪ್ರಯೋಜನ ಆಗುವುದಿಲ್ಲ ಎಂಬುದು ಬಿಜೆಪಿಯ ಮುಂಚೂಣಿಯ ಕೆಲ ನಾಯಕರಿಗೆ ಅರ್ಥವಾಗಿದೆ ಹೀಗಾಗಿ ಈಗ ಈ ವಿಚಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಂಗಳಕ್ಕೆ ತಲುಪಿದೆ, ಹೀಗಾಗಿ ವಲಸಿಗ ಬಿಜೆಪಿಗಳನ್ನ ಯಡಿಯೂರಪ್ಪನವರು ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತದೆ.
ಹೀಗಾಗಿ ಇದರ ಜವಾಬ್ದಾರಿಯನ್ನ ನಿಭಾಯಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸೂಚನೆಯನ್ನು ನೀಡಿದ್ದಾರೆ ಅಂತ ಹೇಳಲಾಗುತ್ತದೆ ಇದಕ್ಕೆ ಪೂರಕ ಎಂಬಂತೆ ಕೆಲ ವಲಸಿಗ ಬಿಜೆಪಿಗಳನ್ನು ಕರೆಯಿಸಿ ಸಭೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಸಮಾಧಾನಿತ ವಲಸಿಗ ಬಿಜೆಪಿ ನಾಯಕರನ್ನು ಪಕ್ಷ ತೊರೆದಂತೆ ಮನವಿಯನ್ನು ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಇನ್ನು ಇಷ್ಟಾದರೂ ಕೂಡ ಕೆಲ ಕಾಂಗ್ರೆಸ್ ಸಂಪರ್ಕದಲ್ಲಿ ಇರುವ ವಲಸಿಗ ಬಿಜೆಪಿಗರು ತಮ್ಮ ಸಂಕಷ್ಟವನ್ನು, ಬೇಸರವನ್ನು ಕಾಂಗ್ರೆಸ್ನ ಪ್ರಮುಖ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಉದ್ಯಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ ; ವಿಡಿಯೊ
“ಬಿಜೆಪಿ ಪಕ್ಷ ತಮ್ಮನ್ನ ಬೇಕಾಬಿಟ್ಟಿಯಾಗಿ ಬಳಸಿಕೊಂಡಿದೆ ಹೀಗಾಗಿ ಈಗ ನಮಗೆ ಯಾವುದೇ ರೀತಿಯಾದ ಸ್ಥಾನಮಾನಗಳು ಬಿಜೆಪಿಯಲ್ಲಿ ಸಿಗುತ್ತಿಲ್ಲ ಈ ಹಿಂದೆ ನಾವು ಯೆಡಿಯೂರಪ್ಪನವರ ಮುಖ ನೋಡಿಕೊಂಡು ಬಿಜೆಪಿಗೆ ಹೋಗಿದ್ದೆವು. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪನವರು ಮೂಲೆಗುಂಪು ಆಗುತ್ತಿದ್ದ ಹಾಗೆ ನಮ್ಮನ್ನು ಕೂಡ ಪಕ್ಷದಲ್ಲಿ ಕಡೆಗಣನೆ ಮಾಡುತ್ತಿದ್ದಾರೆ ಈ ಬಗ್ಗೆ ಯಾರೂ ಕೂಡ ಸರಿಯಾದ ರೀತಿಯ ಮಾತನ್ನು ಆಡುತ್ತಿಲ್ಲ ಯಡಿಯೂರಪ್ಪನವರು ಈಗ ನಮಗೆ ಭರವಸೆ ಕೊಡುವ ಯಾವ ನಂಬಿಕೆಯೂ ಇಲ್ಲ” ಎಂದು ಕಾಂಗ್ರೆಸ್ ನಾಯಕರ ಬಳಿ ಬಿಜೆಪಿಯ ಕೆಲ ವಲಸಿಗ ಶಾಸಕರು ಹೇಳಿಕೆಯನ್ನು ನೀಡಿದ್ದಾರೆ ಎನ್ನಲಾಗುತ್ತದೆ.
ಒಟ್ಟಾರೆಯಾಗಿ ಈಗ ಲೋಕಸಭೆ ಚುನಾವಣೆಗೆ ತಯಾರಿಯನ್ನು ನಡೆಸುತ್ತಿರುವ ಕಾಂಗ್ರೆಸ್ ವಲಸಿಗ ಬಿಜೆಪಿ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದು ಮುಂಬರುವ ಲೋಕಸಭೆ ಚುನಾವಣೆಗೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅದರಲ್ಲೂ ಪ್ರಮುಖವಾಗಿ ಅಸಮಾಧಾನಿತ ವಲಸಿಗ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಲೋಕಸಭೆ ಚುನಾವಣೆಯನ್ನು ಎದುರಿಸುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.