ಡಾ. ಜೆ ಎಸ್ ಪಾಟೀಲ.
ಕೊರೋನ ಸಾಂಕ್ರಮಿಕ ಸಂದರ್ಭದಲ್ಲಿ ಸಂಭವಿಸಿದ ಅಸಂಖ್ಯಾತ ಜನರ ಸಾವು ಮತ್ತು ಶವಗಳ ಅಂತ್ಯಕ್ರಿಯೆಯ ಚಿತೆಯ ಬೆಳಕಿನಲ್ಲಿ ಪೌರಾಣಿಕ ದೇವತೆ ಭೈವರನ ಸತ್ಯ ಸಂಗತಿಗಳ ಚಿಂತನೆ ಎನ್ನುವ ಶಿರ್ಷಿಕೆಯಲ್ಲಿ ಹಿರಿಯ ಅಂಕಣಕಾರ ದೇವದತ್ತ ಪಟ್ನಾಯಕ್ ಅವರು ಸ್ಕ್ರೋಲ್.ಇನ್ ವೆಬ್ ಮಾಧ್ಯಮದಲ್ಲಿ ಒಂದು ಅರ್ಥಪೂರ್ಣ ಲೇಖನವನ್ನು ಬರೆದಿದ್ದರು. ಹಿಂದೂ ಪುರಾಣಗಳು ಮತ್ತು ಹಿಂದೂಗಳ ಅಂತ್ಯಕ್ರಿಯೆ ಪದ್ದತಿಯ ಕುರಿತು ಪಟ್ನಾಯಿಕ್ ಅವರು ಒಂದು ಅರ್ಥಪೂರ್ಣ ಚಿಂತನೆಯನ್ನು ಮಂಡಿಸಿದ್ದರು. ಸರಕಾರದ ವೈಪಲ್ಯದಿಂದ ಕೊರೋನ ಉಲ್ಬಣಿಸಿ ಜನರು ಸಾವಿಗೀಡಾದಾಗ ಭಾರತದಲ್ಲಿ ಸ್ಮಶಾನಗಳ ಕೊರತೆಯಿಂದ ಅಂತ್ಯಕ್ರಿಯೆಗೆ ಸ್ಥಳಾಭಾವ ತಲೆದೋರಿ, ಶವಗಳನ್ನು ಜನರು ಗಂಗಾ ನದಿಯಲ್ಲಿ ಎಸೆದಿದ್ದರು. ವಿದೇಶಿ ಮಾಧ್ಯಮಗಳು ಗಂಗಾ ನದಿಯಲ್ಲಿ ಶವಗಳು ತೇಲಿದ್ದು ಹಾಗು ಭಾರತ ಕೊರೋನ ನಿರ್ವಹಣೆಯಲ್ಲಿ ವಿಫಲವಾದ ಸಂಗತಿ ಚರ್ಚಿಸಿದ್ದವು. ಅದರಿಂದ ಕಂಗಾಲಾದ ಸರಕಾರದ ಸಮರ್ಥಕರು ವಿದೇಶಿ ಮಾಧ್ಯಮಗಳನ್ನು ನಿಂದಿಸಲಾರಂಭಿಸಿದ್ದರು.
ವಿದೇಶಿ ಮಾಧ್ಯಮಗಳ ವಿರುದ್ಧದ ಮೋದಿ ಭಕ್ತರ ಈ ನಿಂದನೆಯು ಸಮಸ್ತ ಹಿಂದೂಗಳ ಪರವಾಗಿ ಅಲ್ಲದೆ ಅದು ಹಿಂದುತ್ವವಾದಿಗಳ ಹತಾಷೆಯ ನಿಂದನೆ ಎಂದು ಪಟ್ನಾಯಕ್ ವಿವರಿಸುತ್ತಾರೆ. ಭಾರತದಲ್ಲಿ ನಡೆದ ಸತ್ಯ ಸಂಗತಿಯನ್ನು ತೋರಿಸಿದ ವಿದೇಶಿ ಮಾಧ್ಯಮಗಳು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಲಿಲ್ಲ, ಬದಲಿಗೆ ಹಿಂದುತ್ವವಾದಿಗಳ ಸಿಟ್ಟಿಗೆ ಗುರಿಯಾದವು ಎನ್ನುವ ಪಟ್ನಾಯಕ್ ಅವರು ಹಿಂದೂ ಮತ್ತು ಹಿಂದುತ್ವವಾದದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ತಮ್ಮ ಲೇಖನದಲ್ಲಿ ಅರುಹಿದ್ದಾರೆ. ಕೊರೋನ ಸಾಂಕ್ರಮಿಕ ಸೋಂಕಿನ ಎರಡನೇ ಅಲೆಯು ಭಾರತಿಯರನ್ನು ದೊಡ್ಡ ಮಟ್ಟದಲ್ಲಿ ಬಲಿ ತೆಗೆದುಕೊಂಡಿತ್ತು. ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕಾದ ಸರಕಾರ ಸರಣಿ ಚುನಾವಣಾ ಸಭೆಗಳನ್ನು ಆಯೋಜಿಸಿ ಸೋಂಕು ವೇಗವಾಗಿ ಹರಡಲು ಬಹುದೊಡ್ಡ ಕಾಣಿಕೆಯನ್ನು ನೀಡಿತು. ಅದಷ್ಟೇ ಅಲ್ಲದೆ ಧಾರ್ಮಿಕ ಉನ್ಮಾದಿಗಳು ಕುಂಭ ಮೇಳ ಆಯೋಜಿಸಿ ಲಕ್ಷಾಂತರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ರೋಗ ಹರಡಲು ಬಹುದೊಡ್ಡ ಕಾಣಿಕೆಯನ್ನು ನೀಡಿದವು.

ಆರೋಗ್ಯ ಕ್ಷೇತ್ರದ ಸೌಲಭ್ಯಗಳು ಹೆಚ್ಚಿಸುವ ಮುಂದಾಲೋಚನೆಯ ಕಾರ್ಯಗಳ ಕೊರತೆಯೂ ಅಪಾರ ಸಾವುನೋವಿಗೆ ಎಡೆಮಾಡಿಕೊಟ್ಟಿತು. ಹೆಣಗಳು ಅಂತ್ಯಸಂಸ್ಕಾರ ಮಾಡಲಾಗದೆ ಗಂಗಾ ನದಿಯಲ್ಲಿ ಎಸೆಯಲ್ಪಟ್ಟವು. ರಾಶಿ ರಾಶಿ ಹೆಣಗಳು ತುಂಬಿದ ಸ್ಮಶಾನಗಳಲ್ಲಿ ಸಾಮಾಹಿಕ ಅಂತ್ಯಕ್ರಿಯೆ ಮತ್ತು ಗಂಗಾನದಿಯಲ್ಲಿ ಹೆಣಗಳ ಸಾಲು ಸಾಲು ತೇಲುವಿಕೆ ವಿದೇಶಿ ಮಾಧ್ಯಮಗಳಲ್ಲಿ ಬಹು ದೊಡ್ಡ ಸುದ್ದಿಯನ್ನೆ ಮಾಡಿದವು. ಪಟ್ನಾಯಕ್ ಅವರು ಹಿಂದುತ್ವವು ೧೯ ನೇ ಶತಮಾನದ ರಾಜಕೀಯ ಸಿದ್ಧಾಂತವಾಗಿದ್ದು, ಅದು ತನ್ನನ್ನು ತಾನು ಹಿಂದೂ ಧರ್ಮದ ರಕ್ಷಕನೆಂದು ಘೋಷಿಸಿಕೊಳ್ಳುತ್ತದೆ ಎನ್ನುತ್ತಾರೆ. ಕೊರೋನ ಸೋಂಕಿನಿಂದ ಭಾರತವು ಜಗತ್ತಿಗೆ ಭಯಭೀತ ಸನ್ನಿವೇಶವನ್ನು ಪ್ರದರ್ಶಿಸಿತ್ತು. ಸೋಂಕಿನಿಂದ ಸತ್ತವರ ನೂರಾರು ಶವಗಳು ಗಂಗಾ ನದಿಯಲ್ಲಿ ತೇಲಿ ಹೋಗಿದ್ದವು ಮತ್ತು ಸಾವಿರಾರು ಶವಗಳನ್ನು ಸಾಮೂಹಿಕವಾಗಿ ಎಲ್ಲೆಂದರಲ್ಲಿ ಅಂತ್ಯಕ್ರಿಯೆಗೆ ಒಳಪಡಿಸಲಾಗಿತ್ತು.
ಪಟ್ನಾಯಕ್ ಅವರು ಇದು ಕೊರೋನ ಸಾಂಕ್ರಮಿಕ ಸೋಂಕಿನಿಂದಾದ ದುರಂತ ಎನ್ನದೆ ಸೋಂಕನ್ನು ಗಂಭೀರವಾಗಿ ತೆಗೆದುಕೊಳ್ಳದೆ ಉಡಾಫೆತನದಿಂದ ವರ್ತಿಸಿದ ಅತ್ಯಂತ ಶಕ್ತಿಶಾಲಿ ಎಂದು ಬಿಂಬಿಸಲಾದ ಮೋದಿ ಸರಕಾರದ ಅಸಮರ್ಥತೆಯನ್ನು ತೋರಿಸುತ್ತದೆ ಎಂದಿದ್ದರು. ನಮ್ಮ ಸರಕಾರವು ವೈಜ್ಞಾನಿಕವಾಗಿ ಚಿಂತಿಸಿ ಆಮ್ಲಜನಕ ಮತ್ತು ಲಸಿಕೆಗಳ ಪೂರೈಕೆ ಸೂಕ್ತ ರೀತಿಯಲ್ಲಿ ಮಾಡಿದ್ದರೆ ಈ ಸಾವುಗಳ ಸಂಖ್ಯೆಯನ್ನು ತಗ್ಗಿಸಬಹುದಾಗಿತ್ತು ಎನ್ನುವುದು ಪಟ್ನಾಯಕ್ ನಿಲುವಾಗಿತ್ತು. ಬದಲಾಗಿ, ಹಿಂದುತ್ವದ ಬೆಂಬಲಿಗರು ಈಗ ವಿದೇಶಿ ಮಾಧ್ಯಮಗಳು ತಮ್ಮ ಮುಖಪುಟಗಳಲ್ಲಿ ಕಿಕ್ಕಿರಿದ ಸ್ಮಶಾನಗಳ ಚಿತ್ರಗಳನ್ನು ತೋರಿಸುವ ಮೂಲಕ ಹಿಂದೂಗಳನ್ನು ಅವಮಾನಿಸಿದ್ದಾರೆಂದು ಗೊಣಗಿದ್ದರು. ಹಿಂದೂಗಳ ಸಾವು ಮತ್ತು ಶವ ಸಂಸ್ಕಾರಗಳ ಕುರಿತಾದ ಜಾನಪದ ಮತ್ತು ಪೌರಾಣಿಕ ನಂಬಿಕೆಗಳ ಅಧ್ಯಯನಾತ್ಮಕ ಟಿಪ್ಪಣಿಗಳ ಮೂಲಕ ಶವ ಸಂಸ್ಕಾರ ಮತ್ತು ಸಾವಿನ ಕುರಿತು ಭಾರತೀಯ ಸಂಪ್ರದಾಯಗಳನ್ನು ಪಟ್ನಾಯಕ್ ಮಾರ್ಮಿಕವಾಗಿ ವಿವರಿಸಿದ್ದಾರೆ.

ಹಿಂದೂ ಧರ್ಮ ಮತ್ತು ಹಿಂದುತ್ವಗಳನ್ನು ಬೆಸೆಯಲು ಪ್ರಯತ್ನಿಸುತ್ತಿರುವ ಕೋಮುವಾದಿಗಳ ಹುನ್ನಾರವನ್ನು ಪಟ್ನಾಯಕ್ ಆಧಾರ ಸಮೇತ ಬಿಚ್ಚಿಟ್ಟು ˌ ಎರಡಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನು ವಿವರಿಸಿದ್ದರು. ಭಾರತೀಯರ ಅಂತ್ಯಕ್ರಿಯೆಯ ಚಿತ್ರಗಳು ವಿದೇಶಿ ಮಾಧ್ಯಮಗಳ ಮುಖಪುಟದಲ್ಲಿ ಬಂದದ್ದು ಹಿಂದುತ್ವವಾದಿಗಳ ನಿದ್ದೆಗೆಡಿಸಿತ್ತು. ಪಟ್ನಾಯಕ್ ಅವರು ಭಾರತೀಯ ಪೌರಾಣಿಕ ಕಥೆಗಳ ಪ್ರಸ್ತುತತೆಯನ್ನು ಅಧುನಿಕ ಕಾಲಘಟ್ಟಕ್ಕೆ ಹೋಲಿಸಿ ಬರೆಯುವಲ್ಲಿ ನಿಪುಣರು. ಹಿಂದೂಗಳ ಅಂತ್ಯಕ್ರಿಯೆಗಳು ಶತಮಾನಗಳಿಂದ ಸಾರ್ವಜನಿಕ ಪ್ರದರ್ಶನಗಳಾಗಿವೆ. ಮಹಾತ್ಮ ಗಾಂಧಿ ಅಂತ್ಯಕ್ರಿಯೆ ಇಡೀ ಜಗತ್ತು ನೋಡಿದೆ. ಗಾಂಧಿ ಕುಟುಂಬದ ಅಂತ್ಯಕ್ರಿಯೆಗಳು ಅವರ ಹಿಂದೂ ಮೂಲವನ್ನು ಪ್ರತಿಪಾದಿಸಿವೆ. ಆದರೆ, ಕೊರೋನ ಸೋಂಕಿತರ ಶವಗಳ ಸಾಮೂಹಿಕ ಅಂತ್ಯಕ್ರಿಯೆಯ ಚಿತ್ರಗಳು ಬಹಿರಂಗಗೊಂಡದ್ದು ಹಿಂದೂತ್ವವಾದಿ ವಾಟ್ಸಾಪ್ ವಿದ್ವಾನರ ಗುಂಪು ಪಟ್ಟುಬಿಡದೆ ಪ್ರಶ್ನಿಸುತ್ತಿರುವುದನ್ನು ಪಟ್ನಾಯಕ್ ಅವರು ವಿಡಂಬಿಸಿದ್ದಾರೆ.
ಬಾಲಿವುಡ್ ಶೈಲಿಯ ಗಂಗಾ ಆರತಿ ಜರುಗುವ ಸ್ಥಳದಿಂದ ಕೇವಲ ಕೆಲವು ಮೀಟರ್ ಅಂತರದ ನದಿ ತೀರದಲ್ಲಿ ನಡೆಯುವ ಹಿಂದೂ ಅಂತ್ಯಕ್ರಿಯೆ ಆಚರಣೆಯನ್ನು ನೋಡಲು ವಾರಣಾಸಿಯ ಮಣಿಕರ್ಣಿಕಾ ಘಾಟ್ಗೆ ಪ್ರವಾಸಿಗರನ್ನು ಆಹ್ವಾನಿಸುವ ಭಾರತೀಯ ಪ್ರವಾಸೋದ್ಯಮ ವೆಬ್ಸೈಟಗಳ ಉದಾಹರಣೆಯನ್ನು ಪಟ್ನಾಯಕ್ ನೀಡುತ್ತಾ ಸಾವು ಮತ್ತು ಶವ ಸಂಸ್ಕಾರಗಳು ಭಾರತೀಯರಲ್ಲಿ ಬಹಿರಂಗ ಪ್ರದರ್ಶನದ ಸಂಪ್ರದಾಯ ಹೊಂದಿವೆ ಎಂದು ನಿರೂಪಿಸುತ್ತಾರೆ. ಸಾವನ್ನು ನಿರ್ಭಯವಾಗಿ ಎದುರಿಸುವ ಮತ್ತು ಅದನ್ನು ಸಂಭ್ರಮದಿಂದ ನಿಭಾಯಿಸುವ ಪದ್ದತಿಗಳು ದಕ್ಷಿಣ ಭಾರತದಲ್ಲಿ ಈಗಲೂ ಅನೇಕ ಸಮುದಾಯಗಳಲ್ಲಿವೆ. ಅಲಂಕರಿಸಿದ ಮಂಟಪಗಳಲ್ಲಿ ಮೃತ ದೇಹವನ್ನು ಕುಳ್ಳಿರಿಸಿ ಮೆರವಣಿಗೆಯಲ್ಲಿ ಹಾಡುತ್ತ, ವಾದ್ಯ ಬಾರಿಸುತ್ತ, ಮತ್ತು ಕೆಲವು ಕಡೆ ನೃತ್ಯ ಮಾಡುತ್ತ ಸ್ಮಶಾನಕ್ಕೆ ಒಯ್ಯುವ ಪದ್ದತಿ ಇರುವುದನ್ನು ಪಟ್ನಾಯಕ್ ಉಲ್ಲೇಖಿಸಿದ್ದಾರೆ. ಉತ್ತರ ಭಾರತದ ರಾಜಪೂತ ರಾಜ, ರಾಣಿಯರನ್ನು ಚತ್ರೀಸ್ ಎಂಬ ಭವ್ಯವಾದ ಮಂಟಪಗಳಲ್ಲಿಟ್ಟು ಅಂತ್ಯಕ್ರಿಯೆ ಮಾಡುವ ಪದ್ದತಿ ಇತ್ತು.
ಭಗವಾನ್ ಬುದ್ಧನು ಸಾಯುವ ಸಮಯದಲ್ಲಿ ಮಲಗಿರುವ ಚಿತ್ರಗಳು ಬೌದ್ಧ ಕಲೆಯ ಭಾಗವಾಗಿವೆ ಎನ್ನುತ್ತಾರೆ ಪಟ್ನಾಯಕ್. ೨,೫೦೦ ವರ್ಷಗಳ ಹಿಂದೆ, ಬುದ್ದನ ಶವಸಂಸ್ಕಾರದ ನಂತರ ಸಂಗ್ರಹಿಸಿದ ಆತನ ಮೂಳೆಗಳನ್ನು ಹಲವು ರಾಜರಿಗೆ ಹಂಚಲಾಗಿತ್ತು ಮತ್ತು ದೇಶಾದ್ಯಂತ ೮೪ ಸ್ತೂಪಗಳಲ್ಲಿ ಬುದ್ಧನ ಆ ಮೂಳೆಗಳನ್ನು ಸಂಗ್ರಹಿಸಿ ಇರಿಸಲಾಗಿತ್ತು ಎನ್ನುವ ಸಂಗತಿ ವಿವರಿಸುತ್ತ ಪಟ್ನಾಯಕ್ ಅವರು ಭಾರತೀಯರಲ್ಲಿದ್ದ ಬಹಿರಂಗ ಶವ ಸಂಸ್ಕಾರ ಪದ್ದತಿಯನ್ನು ಉಲ್ಲೇಖಿಸಿದ್ದಾರೆ ಹಾಗು ಅದನ್ನು ಬಲವಾಗಿ ಸಮರ್ಥಿಸಿದ್ದಾರೆ. ಭಾರತೀಯ ಜಾನಪದ ಸಾಹಿತ್ಯ ಮತ್ತು ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ಸ್ಮಶಾನ ಹಾಗು ಶವಗಳ ದೃಶ್ಯಗಳು, ನಾಯಿಗಳು ಊಳಿಡುವುದು, ಆಕಾಶದಲ್ಲಿ ರಣಹದ್ದುಗಳು ಮತ್ತು ಕಾಗೆಗಳ ಹಾರಾಟ, ಅಳುವ ವಿಧವೆಯರು ಮತ್ತು ಶವಸಂಸ್ಕಾರದ ದೃಶ್ಯಗಳಿಂದ ತುಂಬಿರುವ ಯುದ್ಧಭೂಮಿಯನ್ನು ವರ್ಣಿಸುವ ಘೋರ ವಿವರಣೆಗಳಿವೆ ಎಂದು ಉಲ್ಲೇಖಿಸುತ್ತಾ ಶವ ಸಂಸ್ಕಾರದ ಪ್ರದರ್ಶನವನ್ನು ಸಮರ್ಥಿಸುತ್ತಾರೆ.

ಅದಷ್ಟೇ ಅಲ್ಲದೆ, ರಣಭೂಮಿಯ ಸುತ್ತಲೂ ದೆವ್ವಗಳು, ತುಂಟ ಬೇತಾಳಗಳು ಮತ್ತು ಮೃತ್ಯು ದೇವತೆಗಳಾದ ಬೇತಾಳ, ಭೈರವ ಮತ್ತು ಚಾಮುಂಡಿ ಇರುವರಲ್ಲದೆ, ತಂತ್ರವಿದ್ಯೆಯ ಪರಿಣತರಾದ ಸಿದ್ಧರು ಸಾವನ್ನು ಎದುರಿಸುವ ಮೂಲಕ, ನಿರ್ಭಯವಾಗಿ ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಶಕ್ತಿಯನ್ನು ಕಲಿತುಕೊಳ್ಳಲು ಮತ್ತು ಸಿದ್ಧಿಸಿಕೊಳ್ಳಲು ಪ್ರಯತ್ನಿಸುವ ಪ್ರಸಂಗಗಳನ್ನು ಪಟ್ನಾಯಕ್ ರೋಮಾಂಚನಕಾರಿಯಾಗಿ ವಿವರಿಸಿದ್ದಾರೆ. ಭುವನೇಶ್ವರದಲ್ಲಿನ ೮ ನೇ ಶತಮಾನದ ಭಾರತದ ಅತ್ಯಂತ ಪ್ರಾಚೀನ ಬೇತಾಳ ದೇವಾಲಯವು ಪೌರಾಣಿಕ ಕತೆಯಲ್ಲಿ ಬರುವ ಚಂಡ ಮತ್ತು ಮುಂಡರನ್ನು ಸಂಹರಿಸಿದ ಚಾಮುಂಡಿಯ ಸನ್ನಿಧಿ ಎನ್ನಲಾಗುತ್ತದೆ. ಆ ದೇವಿಯ ಕಥೆಯು ೭ ನೇ ಶತಮಾನದ ದೇವಿ ಪುರಾಣಕ್ಕೆ ಸೇರಿದೆ ಎನ್ನಲಾಗುತ್ತದೆ. ಅವಳನ್ನು ಘೋರ ಕೋರೆಹಲ್ಲು ಮತ್ತು ಚಾಚಿಕೊಂಡಿರುವ ಕಣ್ಣುಗಳೊಂದಿಗೆ ದೃಶ್ಯೀಕರಿಸಲ್ಪಟ್ಟಿದ್ದಾರೆ. ಅವಳ ಕೊಳೆಯುತ್ತಿರುವ ಅಸ್ಥಿಪಂಜರದ ದೇಹವನ್ನು ಕಂಕಳ ಶರೀರ ಎಂದು ವಿವರಿಸಲಾಗಿಯಂತೆ.
ಆ ದೇವಿಯು ತನ್ನ ಎಡಗೈಯಿಂದ ಹಲ್ಲುಗಳನ್ನು ಕಿತ್ತುತ್ತಿರುವ ಮತ್ತು ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವ ಭಂಗಿಯಿದೆ. ಅವಳು ಯಾಕೆ ಹಲ್ಲುಗಳನ್ನು ಕಿತ್ತು ತಾನು ಸಂಹರಿಸಿದ ವ್ಯಕ್ತಿಗಳ ಮಾಂಸವನ್ನು ಭಕ್ಷಿಸುತ್ತಾಳಂತೆ. ಆಕೆಯ ಅನೇಕ ಕೈಗಳಲ್ಲಿ ಒಂದರಲ್ಲಿ ರಕ್ತದ ಮಡಿಕೆಯನ್ನು ಹಿಡಿದಿದ್ದಾಳೆ. ಕೊರಳಿಗೆ ಮಾನವನ ರುಂಡದ ಮಾಲೆಯನ್ನು ಧರಿಸಿದ್ದಾಳೆ. ಆಕೆಯ ಸುತ್ತಲೂ ದೆವ್ವ, ಮತ್ತು ಪ್ರೇತಗಳು ಇವೆ. ಎಲ್ಲೋರಾದ ಗುಹೆಗಳಲ್ಲಿ ಶವಗಳ ರಾಶಿಯ ಮೇಲೆ ಕುಳಿತಿರುವ ಅವಳ ಚಿತ್ರವನ್ನು ನಾವು ಕಾಣಬಹುದು ಎನ್ನುತ್ತಾ ಸಾವಿನ ಕುರಿತ ಭಾರತಿಯರ ನಂಬಿಕೆಗಳನ್ನು ಪಟ್ನಾಯಕ್ ವಿವರಿಸುತ್ತಾರೆ. ಗೋವಾದಲ್ಲಿ ಚಾಮುಂಡಿಯಂತೆ ಭೀಕರವಾದ ಬೇತಾಳ ದೇವಾಲಯವಿದೆ. ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಕತ್ತರಿಸಿದ ರುಂಡ. ಭಯವನ್ನು ಹುಟ್ಟಿಸುವ ಶಿವನ ಇನ್ನೊಂದು ರೂಪವಾದ ಭೈರವ ಇದೆನ್ನುತ್ತಾರೆ ಪಟ್ನಾಯಕ್. ಶವಸಂಸ್ಕಾರದ ಚಿತೆಯ ಬೆಳಕಿನಲ್ಲಿ ತನ್ನನ್ನು ಸುತ್ತುವರೆದ ಯೋಗಿನಿಯರೊಂದಿಗೆ ಚಾಮುಂಡಿಯಂತೆ ಭೀಕರ ರೂಪ ಈ ಭೈರವನದ್ದು.
ಮುಂದುವರೆಯುವುದು…