ಮೊಸಳೆಯೊಂದು ಬಾಲಕನೊಬ್ಬನನ್ನ ಬಲಿ ತೆಗೆದುಕೊಂಡ ಕಾರಣಕ್ಕೆ ಇಡೀ ಗ್ರಾಮಸ್ಥರು ಸೇರಿ ಮೊಸಳೆಯನ್ನ ಸೆರೆ ಹಿಡಿದ ನಂತರ ಕಟ್ಟಿಗೆಯಿಂದ ಬಡಿದು ಕೊಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದು, ಪ್ರಾಣಿ ಪ್ರಿಯರು ಆಕ್ರೋಶವನ್ನ ಹೊರ ಹಾಕಿದ್ದಾರೆ. ಸದ್ಯಕ್ಕೆ ಈ ಘಟನೆಯ ಬಗ್ಗೆ ಅರಣ್ಯ ಇಲಾಖೆ ತಂಡ ತನಿಖೆ ಆರಂಭಿಸಿದೆ.
ಈ ಘಟನೆ ಬಿಹಾರದ ರುಸ್ತಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಘಟನೆಗೆ ಪ್ರಮುಖ ಕಾರಣ ಅಂದ್ರೆ 14 ವರ್ಷದ ಬಾಲಕನ ಸಾವು, ಹೌದು, ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಬಾಲಕ ನೀರಿನೊಳಗೆ ಇಳಿಯುತ್ತಿದ್ದಂತೆ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿದೆ. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ.
ಈ ಘಟನೆಯಿಂದ ರೊಚ್ಚಿಗೆದ್ದ ಜನರು ನದಿಯಿಂದ ಮೊಸಳೆಯನ್ನು ಹಿಡಿದು ಹೊರ ತಂದಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಕಟ್ಟಿಗೆಯಿಂದ ಮೊಸಳೆಗೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಸಳೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂಬ ವರದಿಗಳು ಬಂದಿವೆ.
ಇನ್ನು ಮೃತ ಬಾಲಕ ಗೋಕುಲಪುರ ಗ್ರಾಮದ ಅಂಕಿತ್ ಕುಮಾರ್ (14) ಎಂದು ಗುರುತಿಸಲಾಗಿದೆ. ಅಂಕಿತ್ ತಂದೆ ಧರ್ಮೇಂದ್ರ ದಾಸ್ ಸೋಮವಾರ ಬೈಕ್ ಖರೀದಿಸಿದ್ದರು. ಮಂಗಳವಾರ ಕುಟುಂಬಸ್ಥರು ಬೈಕ್ಗೆ ಪೂಜೆ ಸಲ್ಲಿಸಲು ಖಾಲ್ಸಾ ಘಾಟ್ಗೆ ತೆರಳಿದ್ದರು. ಬೈಕ್ ಪೂಜೆಗೆ ಸಿದ್ಧತೆಗಳು ನಡೆಯುತ್ತಿದ್ದವು.
ಬಾಲಕ ನೀರು ತರಲು ಗಂಗಾ ನದಿಗೆ ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮೊಸಳೆ ಆತನ ಕಾಲನ್ನು ಹಿಡಿದು ನೀರಿನೊಳಗೆ ಎಳೆದೊಯ್ದು ಬಲಿ ಪಡೆದಿದೆ. ಗಂಗಾಜಲ ತರಲು ಹೋದ ಮಗ ಸಮಯ ಕಳೆದ್ರೂ ಬಾರದ ಹಿನ್ನೆಲೆ ಪೋಷಕರು ನದಿ ಬಳಿ ತೆರಳಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಒಟ್ಟಾರೆಯಾಗಿ ಇದೀಗ ಈ ಘಟನೆಯಿಂದ ಇಡೀ ಬಿಹಾರವೇ ಅಚ್ಚರಿಗೆ ಒಳಗಾಗಿದ್ದು, ಮೊಸಳೆಯನ್ನ ಕೊಂದ ಗ್ರಾಮಸ್ಥರ ವಿರುದ್ಧ ಒಂದಷ್ಟು ಕ್ರಮಗಳನ್ನ ತೆಗೆದುಕೊಳ್ಳಲಿದ್ದೇವೆ, ಕಾನೂನಾತ್ಮಕವಾಗಿ ಅವರಿಗೆ ಯಾವ ಶಿಕ್ಷೆ ಆಗಬೇಕೋ ಅದು ಆಗಿಯೇ ತೀರುತ್ತದೆ ಎಂಬ ಹೇಳೀಕೆಯನ್ನ ಸಾಕಷ್ಟು ಮಂದಿ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.