ಭಾಗ-೨: ವಚನ ಚಳುವಳಿಯ ಪುನರುತ್ಥಾನ ಇಂದಿನ ತುರ್ತು ಅಗತ್ಯ
~ ಡಾ. ಜೆ ಎಸ್ ಪಾಟೀಲ.
ವೈದಿಕ ಆರ್ಯರ ನೆಲಮೂಲ ಸಂಸ್ಕೃತಿ ನಾಶ ಕೃತ್ಯದ ಹೊರತಾಗಿಯೂ ಜನಮಾನಸದಲ್ಲಿ ಇನ್ನೂ ಅಸ್ತಿತ್ವದಲ್ಲಿದ್ದ ಜನಪದೀಯ ಅಸ್ಮಿತೆಗೆ ಶರಣರು ಹೊಸ ಜೀವ ನೀಡಿದರು. ರಾಜಾಶ್ರಯದ ಹಂಗಿನಲ್ಲಿ ಅರಮನೆಯ ಗಿಳಿಯಾಗಿದ್ದ ಸೈರಿಯಾ ಮೂಲದ ಸಂಸ್ಕ್ರತವೆಂಬ ವೈದಿಕರ ಹೊಟ್ಚೆಪಾಡಿನ ಗ್ರಾಂಥಿಕ ಭಾಷೆಯನ್ನು ದಿಕ್ಕರಿಸಿ ಶರಣರು ಜನಸಾಮಾನ್ಯರ ಆಡು ಭಾಷೆಯಾದ ಕನ್ನಡಕ್ಕೆ ಮನ್ನಣೆಯನ್ನಿತ್ತು ಬಹುಜನರೊಂದಿಗೆ ಪರಿಣಾಮಕಾರಿ ಸಂವಹನ ಸಾಧಿಸಿದ್ದರು. ಶತಮಾನಗಳಿಂದ ಅಕ್ಷರ ವಂಚಿತ ಸಮುದಾಗಳನ್ನು ಸಂಘಟಿಸಿ ಬಸವಣ್ಣನವರು ತಾಯ ಭಾಷೆಯಲ್ಲಿ ವಚನ ಚಳುವಳಿ ಕಟ್ಟಿದರು. ಈ ಘಟನೆಯು ಜಗತ್ತಿನ ಇತಿಹಾಸದಲ್ಲಿ ಒಂದು ಮಹತ್ತರ ವೈಲಿಗಲ್ಲಾಗಿ ಗುರುತಿಸಿಕೊಂಡಿತು. ಶರಣರು ಅಂದಿನ ವಿಷಮ ಸಾಮಾಜಿಕ ಅವ್ಯವಸ್ಥೆಯನ್ನು ವಿಡಂಬಿಸಿˌ ವಿರೋಧಿಸಿˌ ನೆಲಮೂಲದ ಭಾಷೆˌ ಸಾಹಿತ್ಯˌ ಸಂಸ್ಕ್ರತಿಗೆ ಮರು ಜೀವ ನೀಡಿದರು.

ಅರ್ಚಕರ ಭಾಷೆಯಾಗಿದ್ದ ಸಂಸ್ಕ್ರತವನ್ನು ದಿಕ್ಕರಿಸಿದ ಶರಣರು ಕನ್ನಡ ಭಾಷೆಯನ್ನು ವಿಶ್ವ ಮನ್ನಣೆಗೆ ಅಣಿಗೊಳಿಸಿದರು. ಶರಣರಿಗೆ ಜನರ ಮಾತುೃನುಡಿಯ ಕುರಿತು ಸಮಗ್ರವಾದ ಜ್ಞಾನವಿತ್ತು. ಪರಾವಲಂಬಿ ವೈದಿಕರ ಪ್ರಗತಿವಿರೋಧಿ ಹುನ್ನಾರಗಳ ಮಾಧ್ಯಮವಾಗಿದ್ದ ಸಂಸ್ಕ್ರತ ಭಾಷೆಯ ಬಲೆಯೊಳಗಿಂದ ಬಿಡಿಸಿಕೊಂಡು ನಮ್ಮ ನೆಲಮೂಲ ಸಂಸ್ಕೃತಿ, ಲೋಕದೃಷ್ಟಿ, ವೈವಿಧ್ಯತೆಗಳು ಮತ್ತು ನಮ್ಮ ಮಾತುೃನುಡಿ ಕನ್ನಡದ ಅಸ್ತಿತ್ವವನ್ನು ಕಳೆದುಕೊಳ್ಳುವ ಅಜಾಗೂರುಕತೆಯ ಸೂಕ್ಷ್ಮ ಸಂದರ್ಭದಲ್ಲಿ ಶರಣರು ಕನ್ನಡಕ್ಕೆ ಮನ್ನಣೆಯನಿತ್ತು ಸ್ಥಳೀಯ ಭಾಷಾ ವಿದ್ವಾಂಸರಾಗುವ ಆಸ್ಮಿತೆಯ ಗ್ರಹಿಕೆಯನ್ನು ಕಂಡುಕೊಂಡರು. ಹಾಗೆ ಮಾಡುವ ಮೂಲಕ ಅನುತ್ಪಾದಕ ಮಡಿವಂತರ ಉಪಜೀವನದ ಭಾಷೆಯನ್ನು ದಿಕ್ಕರಿಸಿ ಉತ್ಪಾದಕ ವರ್ಗದ ಆಡುಭಾಷೆಯನ್ನು ಪುನರುಜ್ಜೀವನಗೊಳಿಸಿ ಜನಪದೀಯ ಜೀವನಧಾರೆಯ ಮುಖ್ಯವಾಹಿನಿಯಲ್ಲಿ ನಿಲ್ಲಿಸಿದರು.
ಅಂದು ಸಾಹಿತ್ಯ ಎಂದರೆ ಸಂಸ್ಕೃತದಲ್ಲಿನ ಹೊಗಳು ಪುರಾಣವೆಂದು ತಿಳಿದಿದ್ದ ಕಾಲಘಟ್ಟದಲ್ಲಿ
ಶರಣರು ನಮ್ಮ ದೈನಂದಿನ ತಾಯ್ನುಡಿಯನ್ನು ಅಳಿವಿನಂಚಿನಿಂದ ಪಾರುಮಾಡುವ ಗ್ರಹಿಕೆ ಕಂಡುಕೊಂಡರು. ಬಹುಜನರ ನುಡಿಯು ಒಂದು ಕಸುವು ಎಂತಲುˌ ಅದು ಲೋಕದೃಷ್ಟಿಯನ್ನು ಕಟ್ಟಿಕೊಡುವ ಅಭಿವ್ಯಕ್ತಿ ಮಾಧ್ಯಮ, ಹಾಗು ಸಾಂಸ್ಕೃತಿಕ ನೆನಪುಗಳನ್ನು ಕಾಪಿಟ್ಟುಕೊಳ್ಳುವ ಸಾಧನವೆಂದು ಶರಣರು ಭಾವಿಸಿದರು. ಪ್ರಭುತ್ವದ ಬಲದಿಂದ ಮಡಿವಂತರ ಗ್ರಾಂಥಿಕ ಭಾಷೆಯಾದ ಸಂಸ್ಕ್ರತವನ್ನು ಮೆರೆಸುವ ಭರದಲ್ಲಿ ನೆಲಮೂಲ ಸಮುದಾಯ ಪ್ರಜ್ಞೆಯ ಬಲವಂತದ ಪಲ್ಲಟಗಳಿಂದ ಪ್ರಾಂತೀಯ ನುಡಿಗಳು ಅಳಿಯುತ್ತಿದ್ದವು. ಹಾಗೆ ಸಂಸ್ಕೃತದ ಪ್ರಭಾವ ಮತ್ತು ಪ್ರಹಾರಕ್ಕೆ ಸಿಲುಕಿ ಅಳಿದು ಹೋಗುತ್ತಿದ್ದ ಕನ್ನಡ ಪ್ರಜ್ಞೆಯನ್ನು ಶರಣರು ಬಹಳ ಜಾಗೂರಕತೆಯಿಂದ ರಕ್ಷಿಸಿದರು.
ಹಾಗಾಗಿ ವಚನ ಚಳುವಳಿಯನ್ನು ಕನ್ನಡದ ಮೊಟ್ಟಮೊದಲ ಭಾಷಾ ಚಳುವಳಿಯಾಗಿಯೂ ಬಸವಣ್ಣನವರನ್ನು ಮೊದಲ ಕನ್ನಡ ಚಳುವಳಿಯ ನಾಯಕನಾಗಿ ಪ್ರಾಜ್ಞರು ಗುರುತಿಸುವಂತಾಯಿತು. ಶೇಕ್ಸ್ ಪಿಯರ್ ಪ್ರತಿಪಾದಿಸಿದ ಹೊಸ ನುಡಿಯಿಂದ ಪ್ರಭಾವಿತರಾದ ಆದಿವಾಸಿ ಕ್ಯಾಲಿಬನ್ ಸಮುದಾಯವು ತನ್ನ ಮೂಲ ನುಡಿ ಮರೆತಿದ್ದ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ. ಕಾಲಕಾಲಕ್ಕೆ ನಮ್ಮ ಪ್ರಾಂತೀಯ ಸಮುದಾಯಗಳು ಅಧಿಕಾರ ಭಾಷೆ ಹಾಗು ಸಾಮ್ರಾಜ್ಯಶಾಹಿ/ಪುರೋಹಿತಶಾಹಿ ಭಾಷೆಗಳಿಗೆ ಮರುಳಾಗಿ ತಮ್ಮ ಮೂಲ ನುಡಿ ಕಳೆದುಕೊಳ್ಳುತ್ತವೆ ಎಂಬುದನ್ನು ಬಹುಶಃ ಶರಣ ಚಳುವಳಿಯ ನೇತೃತ್ವವಹಿಸಿದ್ದ ಬಸವಣ್ಣನವರು ಸೂಕ್ಷ್ಮವಾಗಿ ಗ್ರಹಿಸಿದ್ದಿರಬಹುದು. ಹಾಗಾಗಿ ವಚನ ಚಳುವಳಿಯು ಒಂದು ಭಾಷಾ ಚಳುವಳಿಯೂ ಹೌದು. ಬಸವಾದಿ ಶರಣರು ಕೇವಲ ಚಳುವಳಿಗಾರರಷ್ಟೇ ಆಗಿರದೆ ವಿದ್ವತ್ ಪೂರ್ಣ ಚಿಂತಕರೂ ಆಗಿದ್ದರು ಎನ್ನುವುದನ್ನು ನಾವು ಮರೆಯಬಾರದು.
ಪುರೋಹಿತಶಾಹಿಗಳು ಜನಸಾಮಾನ್ಯರನ್ನು ಅಕ್ಷರ ಸಂಸ್ಕೃತಿಯಿಂದ ವಂಚಿಸುತ್ತಿದ್ದ ಸಂದರ್ಭದಲ್ಲಿ ಬಸವಾದಿ ಶರಣರು ಅರಿವಿನ ಪಲ್ಲಟಕ್ಕೆ ಕೊಟ್ಟ ಕೊಡುಗೆ ಅನನ್ಯ. ನಮ್ಮ ಜನಪದ ನುಡಿಗಳುˌ ಹಾಗೂ ಪ್ರಾಂತೀಯ ರಿವಾಜುಗಳುˌ ಅಳಿವಿನ ಅಂಚಿಗೆ ಜಾರುತ್ತಿದ್ದ ಸಂಕ್ರಮಣ ಸಂದರ್ಭದಲ್ಲಿ ಜನರನ್ನು ಸಂಘಟಿಸಿ ಹೊಸದೊಂದು ಜನಪರ ಚಳುವಳಿ ರೂಪಿಸುವ ಮೂಲಕ ಶರಣರು ಈ ನೆಲಮೂಲದ ಬಹುತ್ವ ಮತ್ತು ಬಹುಮುಖಿ ಚಿಂತನೆಗಳ ಕುರಿತಾದ ಅಳಿವು-ಉಳಿವಿನ ಹೊಸತೊಂದು ವ್ಯಾಖ್ಯಾನದ ಪರಿಧಿಗೆ ತಮ್ಮ ವಚನ ಚಳುವಳಿಯನ್ನು ತಂದು ನಿಲ್ಲಿಸಿತ್ತಾರೆ. ಶರಣರು ಹುಟ್ಟುಹಾಕಿದ ವಚನ ಚಳುವಳಿ ಜಗತ್ತಿನಲ್ಲಿ ಪ್ರಥಮವಾಗಿ ಪ್ರಜಾಪ್ರಭುತ್ವ ಪರಿಕಲ್ಪನೆಯ ಬೀಜಾಂಕುರಕ್ಕೆ ಹಾಗು ಅಧುನಿಕ ಸಂವಿಧಾನ ಪರಿಕಲ್ಪನೆಗೆ ನಾಂದಿ ಹಾಡಿತು. ಅದರ ಫಲಿತಾಂಶದಿಂದ ಅನುಭವ ಮಂಟಪವೆಂದ ಅಧುನಿಕ ಸಂಸದೀಯ ವ್ಯವಸ್ಥೆಯ ಉದಯಕ್ಕೆ ಇಂಬುಗೊಟ್ಟಿತು.
ಶರಣರ ವಚನಗಳು ಜನತಂತ್ರ ಪದ್ದತಿಯ ವಾಗ್ವಾದಕ್ಕೆ ತೆರೆದಿಟ್ಟ ಮಾರ್ಗವಾಗಿ ಕಾರ್ಯಮಾಡಿದವು. ವಚನ ಚಳುವಳಿಯು ಅದೊಂದು ಅಪೂರ್ಣ ಕ್ರಾಂತಿ ಎಂದು ಅನೇಕ ಇತಿಹಾಸಕಾರರುˌ ವಿದ್ವಾಂಸರು ಮತ್ತು ಪ್ರಾಜ್ಞರು ಅಭಿಪ್ರಾಯ ಪಟ್ಟರೂ ಕೂಡ ಅದು ಇಂದಿನ ತಲೆಮಾರಿನ ವೈಚಾರಿಕ ಮತ್ತು ಪ್ರಗತಿಪರರು ಬಯಸುತ್ತಿರುವ ಬಹುತ್ವ ಚಿಂತನೆಯ ಮಹತ್ವವನ್ನು ಕಾಪಾಡುವ ಸೃಜನಶೀಲ ಚಿಂತನೆಗೆ ಪ್ರಚೋದನೆ ನೀಡುತ್ತದೆ ಎನ್ನುವುದನ್ನು ಅಲ್ಲಗಳೆಯಲಾಗದು. ಆ ಮೂಲಕ ವಚನ ಚಳುವಳಿಯ ಪ್ರಭಾವವು ಈ ನೆಲದ ಬಹುಮುಖಿ ಸಂಸ್ಕ್ರತಿಯ ಉಳಿವಿಗಾಗಿ ಪರಿಹಾರವನ್ನು ಕಂಡುಕೊಳ್ಳುವ ನಿರೀಕ್ಷೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬಲ್ಲದು ಎನ್ನುವ ವಿಶ್ವಾಸ ನಮಗಿದೆ. ಹಾಗಾಗಿ ಇಂದು ಕೋಮುವಾದಿಗಳಿಂದ ವಿಷಮಗೊಂಡಿರುವ ಭಾರತದ ಜೀವನಧಾರೆಗೆ ಸೂಕ್ತ ಔಷಧಿಯನ್ನು ಒದಗಿಸುವ ಎಲ್ಲಾ ಗುಣಗಳು ವಚನ ಚಳುವಳಿಗಿದೆ.
ಹೀಗಾಗಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ವಿಚಾರಧಾರೆಯು ಈ ದೇಶದಲ್ಲಿ ಪ್ರಥಮ ಬಾರಿಗೆ ಸ್ಥಾನೀಯ ಭಾಷೆಯ ಉಳಿವಿಗಾಗಿˌ ಶೋಷಿತರ ಶೈಕ್ಷಣಿಕˌ ಧಾರ್ಮಿಕˌ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿˌ ಸಮಸಮಾಜದ ನಿರ್ಮಾಣಕ್ಕಾಗಿˌ ಸ್ತ್ರೀ-ಪುರುಷವೆಂಬ ಲಿಂಗಭೇದವನ್ನು ಅಳಿಸಿಹಾಕುವ ಮತ್ತು ಈ ನೆಲದ ಬಹುತ್ವ ಚಿಂತನೆಯ ಉಳಿವಿಗಾಗಿ ಹಾಗೂ ಇನ್ನೂ ಅನೇಕ ಜ್ವಲಂತ ಸಮಸ್ಯೆಗಳ ವಿರುದ್ಧ ಸಮರ ಸಾರಿ ಮುಂದಿನ ಪೀಳಿಗೆಗೆ ವೈಚಾರಿಕ ಚಿಂತನೆಯ ಪ್ರೇರಣೆಯನ್ನು ನೀಡಿಹೋಗಿದೆ. ಆದ್ದರಿಂದ ಇಂದು ಭಾರತದ ಬಹುತ್ವ ಚಿಂತನೆಯು ಕೋಮುವಾದಿ ವಿಷಜಂತುಗಳ ಕದಂಬಬಾಹುಗಳಲ್ಲಿ ಸಿಲುಕಿ ಉಸಿರುಗಟ್ಟಿದೆ. ಅದರಿಂದ ಬಿಡುಗಡೆಗೆ ಇರುವ ಏಕೈಕ ಪರ್ಯಾಯವೆಂದರೆ ಇಲ್ಲಿ ಇನ್ನೊಮ್ಮೆ ವಚನ ಚಳುವಳಿ ಮಾದರಿಯ ಬಹುಜನ ಕೇಂದ್ರಿತ ಲಿಂಗಾಯತ ವಿಚಾರಧಾರೆಯ ಪ್ರಯೋಗ ಮಾತ್ರ ಯಶಸ್ಸು ನೀಡಬಲ್ಲುದು ಎಂದು ಆತ್ಮವಿಶ್ವಾಸದಿಂದ ಹೇಳಬಹುದಾಗಿದೆ.
~ಡಾ. ಜೆ ಎಸ್ ಪಾಟೀಲ.