ಚಿಕ್ಕಮಗಳೂರು : ಜೆಡಿಎಸ್ನಿಂದ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಮಾಜಿ ಸಚಿವ ವೈ.ಎಸ್ವಿ ದತ್ತಾ ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೇ ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಆದರೆ ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬಳಿಕ ಬೆಂಬಲಿಗರ ಜೊತೆ ಇಂದು ಸಭೆ ನಡೆಸಿದ ದತ್ತಾ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಧುಮುಕುವ ಬಗ್ಗೆ ಇಂದು ಘೋಷಣೆ ಮಾಡಿದ್ದಾರೆ.

ಸ್ವಾಭಿಮಾನದ ಸಭೆ ಎಂಬ ಹೆಸರಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿದ ವೈಎಸ್ವಿ ದತ್ತಾ ಸಭೆ ಮುಕ್ತಾಯದ ಬಳಿಕ ತಾವು ಕಡೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಘೋಷಣೆ ಮಾಡಿದ್ದಾರೆ. ಟವಲ್ ನನ್ನ ಚಿಹ್ನೆ, ನಾನು ಜನರೆದುರು ಟವಲ್ ಹಿಡಿದು ಮತ ಬೇಡುತ್ತೇನೆ ಎಂದು ಹೆಗಲ ಮೇಲೆ ಹಾಗಿದ ಟವಲ್ ಹಿಡಿದು ಬೇಡಿದ್ದಾರೆ. ಅಲ್ಲದೇ ನನಗೆ ಚುನಾವಣಾ ಕಾರ್ಯಕ್ಕೆ ಹಣ ಬೇಕಿದೆ ಸಭೆಯಲ್ಲಿ ಟವಲ್ ಹಿಡಿದು ಭಿಕ್ಷೆ ಬೇಡಿದ ದತ್ತಾಗೆ ಅಭಿಮಾನಿಗಳು 50 ಸಾವಿರ ರೂಪಾಯಿಗಳಿಂದ ಹಿಡಿದು 2 ಲಕ್ಷ ರೂಪಾಯಿಗಳವರೆಗಿನ ಚೆಕ್ ನೀಡಿದ್ದಾರೆ.
ಕಡೂರಿನಲ್ಲಿ ನಡೆದ ಸಭೆಯಲ್ಲಿ ಬೆಂಬಲಿಗರ ಜೊತೆ ಮಾತನಾಡಿದ ದತ್ತಾ, ನನ್ನ ಬಳಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಹಣವಿಲ್ಲ, ನನ್ನ ಬಳಿ ಜಾತಿ ಬಲವೂ ಇಲ್ಲ. ಆದರೆ ನನಗೆ ಜನ ಬಲವಿದೆ . ನಾನು ಕರೆದರೆ 10 ಸಾವಿರ ಜನರ ಬರ್ತಾರೆ . ಜನರೇ ನನ್ನ ಆಸ್ತಿ ಎಂದಿದ್ದಾರೆ.