ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಪತ್ನಿ ಸ್ಪರ್ಧೆಗೆ ವೇದಿಕೆ ಸಿದ್ಧವಾಗ್ತಿದೆ. ಕುಮಾರಸ್ವಾಮಿ ಭವಾನಿ ರೇವಣ್ಣ ಸ್ಪರ್ಧೆ ಇಲ್ಲ ಎಂದು ಬಹಿರಂಗವಾಗಿ ಹೇಳಿದರೂ ಅಂತಿಮವಾಗಿ ಭವಾನಿ ರೇವಣ್ಣನೇ ಸ್ಪರ್ಧೆ ಮಾಡ್ತಾರೆ ಎಂದು ಹೇಳಲಾಗ್ತಿದೆ. ಇಷ್ಟೆಲ್ಲಾ ಗೊಂದಲಗಳ ನಡುವೆ ಇಂದು ಹಾಸನ ಜಿಲ್ಲೆಗೆ ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆ ಪ್ರವೇಶ ಪಡೆಯುತ್ತಿದೆ. ಜೆಡಿಎಸ್ ತವರು ಜಿಲ್ಲೆ ಎಂದು ಗುರುತಿಸಿಕೊಳ್ಳುವ ಹಾಸನಕ್ಕೆ ಪಂಚರತ್ನ ಯಾತ್ರೆ ಬರುತ್ತಿದ್ದು, ಇಂದು ಬೇಲೂರು ಮೂಲಕ ಪ್ರತಿಯೊಂದು ಮತಕ್ಷೇತ್ರಕ್ಕೂ ಕುಮಾರಸ್ವಾಮಿ ಯಾತ್ರೆ ಮೂಲಕ ಸಂಚಾರ ಮಾಡಲಿದ್ದಾರೆ. ಈ ನಡುವೆ ಗೊಂದಲ ಇರಬಾರದು ಅನ್ನೋ ಕಾರಣಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಹಾಸನ ಆಕಾಂಕ್ಷಿ ಜೊತೆಗೆ ರೇವಣ್ಣ ಗುಟ್ಟಿನ ಮಾತು..!
ಇಂದು ಬೇಲೂರು ಮೂಲಕ ಹಾಸನ ಜಿಲ್ಲೆಗೆ ಪ್ರವೇಶ ಪಡೆಯುವ ಪಂಚರತ್ನ ಯಾತ್ರೆ ವೇಳೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದು ಅನ್ನೋ ಕಾರಣಕ್ಕೆ ಮಾರ್ಚ್ 09 ಮತ್ತು 10 ರಂದು ಬೇಲೂರು, ಮಾರ್ಚ್ 13 ಚನ್ನರಾಯಪಟ್ಟಣ, ಮಾರ್ಚ್ 14 ಅರಸೀಕೆರೆ, ಮಾರ್ಚ್ 15 ಹೊಳೆನರಸೀಪುರ, ಮಾರ್ಚ್ 16 ಅರಕಲಗೂಡು, ಮಾರ್ಚ್ 17 ಸಕಲೇಶಪುರದಲ್ಲಿ ಯಾತ್ರೆ ಸಾಗಲಿದೆ ಎನ್ನಲಾಗಿದೆ. ಅಷ್ಟರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ಬಗೆಹರಿದರೆ ಮಾತ್ರ ಹಾಸನ ಕ್ಷೇತ್ರದಲ್ಲಿ ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ಹಾಸನಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಮಾಜಿ ಸಚಿವ ಹೆಚ್. ಡಿ ರೇವಣ್ಣ, ಟಿಕೆಟ್ ಆಕಾಂಕ್ಷಿ H.P ಸ್ವರೂಪ್ ಜೊತೆಗೆ ಸಂಧಾನ ಸಭೆ ಮಾಡಿದ್ದಾರೆ. ಟಿಕೆಟ್ ವಿಚಾರವಾಗಿ ತಕರಾರು ತೆಗೆಯದಂತೆ ಬೆಂಬಲಿಗರಿಗೂ ಸಮಾಧಾನ ಮಾಡುವಂತೆ ಒತ್ತಡ ತಂತ್ರ ಅನುಸರಿಸಿದ್ದಾರೆ.

ಗುಟ್ಟು ಬಿಟ್ಟು ಕೊಡದ ಜೆಡಿಎಸ್ ಕಟ್ಟಾಳು ಸ್ವರೂಪ್..!
ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣಗಿಂತಲೂ ಸ್ವರೂಪ್ಗೆ ಜನಬೆಂಬಲ ಹೆಚ್ಚಾಗಿ ಎನ್ನುವುದು ಕೇಲಿ ಬರುತ್ತಿರುವ ಮಾತು. ಆದರೂ ಈ ಹಿಂದೆ ದರ್ಪದಲ್ಲಿ ಮಾತನಾಡಿದ್ದ ಬಿಜೆಪಿ ಶಾಸಕ ಪ್ರೀತಂಗೌಡನನ್ನು ನಾವೇ ಸೋಲಿಸಬೇಕು ಅನ್ನೋ ಹಠಕ್ಕೆ ಬಿದ್ದಿರುವ ರೇವಣ್ಣ ಕುಟುಂಬ ಹಾಸನದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದೆ ಎನ್ನಲಾಗ್ತಿದೆ. ಒಂದು ವೇಳೆ ಸ್ವರೂಪ್ನನ್ನು ಧಿಕ್ಕರಿಸಿ ಸ್ಪರ್ಧೆ ಮಾಡಿದರೆ ರೇವಣ್ಣ ಕುಟುಂಬಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸ್ವರೂಪ್ನ ಮನವೊಲಿಸುವ ಕಸರತ್ತು ಮಾಡಿದ್ದಾರೆ. ಹೆಚ್.ಪಿ ಸ್ವರೂಪ್ ಕೂಡ ರೇವಣ್ಣ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ರೇವಣ್ಣ ನಮ್ಮ ಪಕ್ಷದ ವರಿಷ್ಠರು, ಅವರನ್ನು ಭೇಟಿ ಮಾಡಿ ಸಾಕಷ್ಟು ದಿನಗಳು ಆಗಿದ್ದವು. ಹಾಗಾಗಿ ಭೇಟಿ ಮಾಡಿಲು ಬಂದಿದ್ದೆ. ಟಿಕೆಟ್ ವಿಚಾರವಾಗಿ ಯಾವುದೇ ಚರ್ಚೆ ಮಾಡಿಲ್ಲ, ಪಂಚರತ್ನ ಯಾತ್ರೆ ಬಗ್ಗೆ ಮಾತನಾಡೋಣ ಎಂದಿದ್ದಾರೆ ಎಂದಷ್ಟೇ ಹೇಳಿದ್ದಾರೆ.

ಪಕ್ಷ ಬಿಟ್ಟು ಹೋದವರಿಗೆ ಪಾಠ ಕಲಿಸಲು ತಯಾರಿ..!
ಹಾಸನ ಜಿಲ್ಲೆ ಅರಕಲಗೂಡು ಹಾಗು ಅರಸೀಕೆರೆ ಕ್ಷೇತ್ರದಲ್ಲಿ ಎ.ಟಿ ರಾಮಸ್ವಾಮಿ ಹಾಗು ಕೆ.ಎಂ ಶಿವಲಿಂಗೇಗೌಡ ಜೆಡಿಎಸ್ ತೊರೆಯುವುದು ಖಚಿತವಾಗಿದೆ. ಶಿವಲಿಂಗೇಗೌಡ ಈಗಾಗಲೇ ಕಾಂಗ್ರೆಸ್ ನಾಯಕರ ಜೊತೆಗೆ ಸಮಾವೇಶಗಳನ್ನು ಮಾಡುತ್ತಿದ್ದು, ಎ.ಟಿ ರಾಮಸ್ವಾಮಿ ಬಿಜೆಪಿ ಸೇರ್ತಾರಾ..? ಅಥವಾ ಕಾಂಗ್ರೆಸ್ ಸೇರ್ತಾರಾ ಅನ್ನೋದು ಇನ್ನು ಖಚಿತವಾಗಿಲ್ಲ. ಈ ನಡಯುವೆ ಈಗಾಗಲೇ ಜೆಡಿಎಸ್ ಅಭ್ಯರ್ಥಿ ಹುಡುಕಿಕೊಂಡಿದ್ದು, ಅರಕಲಗೂಡಿನಲ್ಲಿ ಎ ಮಂಜು ಹಾಗು ಅರಸೀಕೆರೆಯಲ್ಲಿ ಬೇಗೂರು ಅಶೋಕ್ ಅವರಿಗೆ ಟಿಕೆಟ್ ನೀಡುವ ಸುಳಿವು ನೀಡಿದ್ದು, ಅಭ್ಯರ್ಥಿ ಘೋಷಣೆ ಆಗದಿದ್ದರೂ ಸಂಭವ್ಯ ಅಭ್ಯರ್ಥಿಗಳ ಜೊತೆಗೆ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಅಬ್ಬರಿಸಲಿದೆ.
ಶಿವಲಿಂಗೇಗೌಡ ಪಕ್ಕೆಲುಬು ಮುರಿದ ಜೆಡಿಎಸ್..!

ಅರಸೀಕೆರೆಯಿಂದ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್ ಯಡಿಯೂರಪ್ಪ ಸಂಬಂಧಿ ಸಂತೋಷ್ ಸ್ಪರ್ಧೆ ಮಾಡುತ್ತಿರುವ ಕಾರಣಕ್ಕೆ ಅಲ್ಪಸಂಖ್ಯಾತರು, ಕುರುಬರ ಮತಗಳನ್ನು ಪಡೆಯುವ ಉದ್ದೇಶದಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಇದರ ಬೆನ್ನಲ್ಲೇ ಕುರುಬ ಸಮುದಾಯಕ್ಕೆ ಸೇರಿದ ಅಶೋಕ್ ಅವರನ್ನು ಜೆಡಿಎಸ್ ಸೆಳೆದುಕೊಂಡಿದೆ. ಇನ್ನು ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಶಿವಲಿಂಗೇಗೌಡ ಎದುರು ಸೋಲುಂಡಿದ್ದ ಜಿ.ಬಿ ಶಶಿಧರ್ ಕೂಡ ಕಾಂಗ್ರೆಸ್ಗೆ ಟಾಟಾ ಬೈಬೈ ಹೇಳಿದ್ದಾರೆ. ಕಳೆದ ಬಾರಿ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಸ್ಪರ್ಧಿಸಿ ಐವತ್ತು ಸಾವಿರ ಮತಗಳನ್ನು ಪಡೆದಿದ್ದ ಜಿ.ಬಿ.ಶಶಿಧರ್, ಕಾಂಗ್ರೆಸ್ನಿಂದ ದೂರ ಆಗಿರುವುದು ಶಿವಲಿಂಗೇಗೌಡರಿಗೆ ಬಿಸಿ ತಟ್ಟುವ ಸಾಧ್ಯತೆಯಿದೆ. ಪಕ್ಷ ತೊರೆದು ಹೋದವರಿಗೆ ಸೋಲಿನ ರುಚಿ ತೋರಿಸುವ ಕಿಚ್ಚಿನಲ್ಲಿ ಜೆಡಿಎಸ್ ನಾಯಕರಿದ್ದು, ಪಂಚರತ್ನ ರಥಯಾತ್ರೆ ವೇಳೆ ಜನರ ಬೆಂಬಲ ಹೇಗೆ ವ್ಯಕ್ತವಾಗಲಿದೆ ಎನ್ನುವುದು ಫಲಿತಾಂಶಕ್ಕೆ ದಿಕ್ಸೂಚಿ ಎನ್ನಬಹುದು.






