ಮೈಸೂರು: ರತದಲ್ಲಿ ಅನೇಕ ಅವತಾರ ಪುರುಷರು ಜನಿಸಿದ್ದಾರೆ. ಅದರಲ್ಲೂ ಕನ್ನಡ ನಾಡಿನಲ್ಲಿ ಅನೇಕ ಸಿದ್ಧಿ ಪುರುಷರು ಕಾಲಜ್ಞಾನಿಗಳು ಜನ್ಮ ತಾಳಿ ಅನೇಕ ಸಂದೇಶಗಳನ್ನು ಸಾರಿದ್ದಾರೆ. 110 ವರ್ಷಗಳ ಕಾಲ ಬದುಕಿದ್ದ ಕೈವಾರ ತಾತಯ್ಯನವರು ಇದಕ್ಕೆ ಉತ್ತಮ ಸಾಕ್ಷಿ ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ ರವರು ತಿಳಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ, ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಾಡಿನ ಮನುಕುಲವು ನೆನೆಯುವಂತಹ ಕಾಲಜ್ಞಾನಿ, ಮಹಾಸಿದ್ಧಿ ಹಾಗೂ ಅವತಾರ ಪುರುಷರೆನಿಸಿರುವ ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿಯನ್ನು ಕೇವಲ ಜಾತಿಯವರೇ ಆಚರಿಸುತ್ತಿರುವುದು ಅಜ್ಞಾನವೇ ಸರಿ ಎಂದರು.
ಕಾಯಕ ಮಾಡುವ ಸಮುದಾಯಗಳೆಲ್ಲವೂ ನನ್ನ ಸಮುದಾಯಗಳೇ. ಪ್ರತಿಯೊಂದು ಸಮಾಜವೂ ಮತ್ತೊಂದು ಸಮಾಜದ ಮೇಲೆ ಅವಲಂಬಿತವಾಗಿದೆ ಮತ್ತು ಪೂರಕವಾಗಿದೆ. ಕಾಯಕ ಸಮುದಾಯಗಳೇ ನಿಜವಾದ ಸಮಾಜ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊ. ಆರ್ ಶಿವಪ್ಪ ರವರು ಮಾತನಾಡಿ, ಕಾಲಜ್ಞಾನಿ ಕೈವಾರ ತಾತಯ್ಯನವರ ಜಯಂತಿಯಂತಹ ಗುಣಾತ್ಮಕ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು. 200 ವರ್ಷಗಳ ಹಿಂದೆಯೇ ದೇಶ ಆಳುವವರೇ ದೇಶದ್ರೋಹಿಗಳಾಗುತ್ತಾರೆ, ಆಹಾರವಿದ್ದರೂ ಉಣ್ಣಲಾಗುವುದಿಲ್ಲ, ದುಬಾರಿ ಜಗತ್ತಲ್ಲಿ ಒಂದು ವಿಚಿತ್ರ ಬರಗಾಲ ಬರುತ್ತದೆ ಎಂದು ನುಡಿದಿದ್ದ ಕೈವಾರ ತಾತಯ್ಯನವರ ಮಾತುಗಳು ಪ್ರಸ್ತುತ ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಿದೆ ಎಂದರು.
ಹಿಂದೆ ನಡೆದಿದ್ದನ್ನು ಆಧಾರವಾಗಿಟ್ಟುಕೊಂಡು ಅವುಗಳ ತಳಹದಿಯ ಮೇಲೆ ಪ್ರಸ್ತುತ ನಡೆಯುತ್ತಿರುವುದನ್ನ ಅರ್ಥೈಸಿ ಭವಿಷ್ಯವನ್ನು ಅಂದಾಜು ಮಾಡುತ್ತಿದ್ದ ಕೈವಾರ ತಾತಯ್ಯನವರು ರಾಜ ಇಲ್ಲ ರಾಜ್ಯವಿರುತ್ತದೆ, ಭೂಮಿಯ ಭಾರ ಹೆಚ್ಚುತ್ತದೆ, ಪಾಪ ಕೃತ್ಯಗಳು ಹೆಚ್ಚಾಗುತ್ತವೆ, ಪ್ರಕೃತಿ ಸಂಪತ್ತನ್ನು ಮನುಷ್ಯ ನಾಶ ಮಾಡುತ್ತಾನೆ, ಸರ್ಕಾರಗಳು ವಿಫಲವಾಗುತ್ತವೆ ಹಾಗೂ ನೈತಿಕತೆಯಿದ್ದ ಸಮಾಜ ಪತನವಾಗುತ್ತದೆ ಎಂದು ಸಾರುವುದರ ಮೂಲಕ ಅವರು ವೈಚಾರಿಕತೆಯ ಆಳವನ್ನ ಪರಿಚಯಿಸಿದ್ದಾರೆ ಎಂದು ತಿಳಿಸಿದರು.
1726 ರಲ್ಲಿ ಜನಿಸಿದ ಕೈವಾರ ತಾತಯ್ಯನವರ ಬಾಲ್ಯದ ಹೆಸರು ನಾರೇಯಣ. ಕನ್ನಡ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಕೈವಾರ ತಾತಯ್ಯನವರನ್ನು ವರ್ಷಗಳು ಕಳೆದರೂ ನಾಡು ನೆನೆಯುತ್ತಿದೆ. ಸ್ವಯಂ ಸಿದ್ಧಿ ಹಾಗೂ ಸ್ವಯಂ ಯೋಗ ವಿದ್ಯೆಯನ್ನು ಕಲಿತ ತಾತಯ್ಯನವರು ಜಾತಿ ಹೀನನ ಮನೆಯ ಜ್ಯೋತಿ ಹೀನವೇ ಎಂಬುದರ ಮೂಲಕ ಜಾತೀಯತೆ ಹಾಗೂ ಮೂಢನಂಬಿಕೆಯ ವಿರುದ್ಧ ಧ್ವನಿ ಎತ್ತಿದವರು ಎಂದು ತಿಳಿಸಿದರು.
ಅಜ್ಞಾನ ಹಾಗೂ ಮೂಢನಂಬಿಕೆಯನ್ನು ತೊಲಗಿಸುವಲ್ಲಿ ವಿಚಾರವುಳ್ಳವರಾಗಿದ್ದ ಹಾಗೂ ಸಮಚಿತ್ತ ಸಾಧಿಸಿದ ಕೈವಾರ ತಾತಯ್ಯನವರು ಜ್ಞಾನದ ಪಕ್ಷಪಾತಿ. ಇಹಪರ ಅರಿತವರಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಮಾಜಿ ಅಧ್ಯಕ್ಷರಾದ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕರಾದ ಡಾ.ಎಂ ಡಿ ಸುದರ್ಶನ್, ಮೀನಾ ತೂಗುದೀಪ್ ಶ್ರೀನಿವಾಸ್ ಸಮಾಜದ ಮುಖಂಡರುಗಳಾದ ಯತಿರಾಜ್, ನಾರಾಯಣ್ ಹಾಗೂ ಇತರರು ಉಪಸ್ಥಿತರಿದ್ದರು.






